Home ರಾಜಕೀಯ ಡಿಕೆ-ಅದಾನಿ ಭೇಟಿ | ಕೇಂದ್ರ ಸರ್ಕಾರ ಅಂಬಾನಿ ಹಾಗೂ ಅದಾನಿಯ ಗುಲಾಮ ಎನ್ನುವ ನಿಲುವಿಗೆ ಈಗಲೂ...

ಡಿಕೆ-ಅದಾನಿ ಭೇಟಿ | ಕೇಂದ್ರ ಸರ್ಕಾರ ಅಂಬಾನಿ ಹಾಗೂ ಅದಾನಿಯ ಗುಲಾಮ ಎನ್ನುವ ನಿಲುವಿಗೆ ಈಗಲೂ ಕಾಂಗ್ರೆಸ್ ಬದ್ಧ: ಪ್ರಿಯಾಂಕ್‌ ಖರ್ಗೆ

0

ಬೆಂಗಳೂರು: ಉದ್ಯಮಿ ಗೌತಮ್ ಅದಾನಿ ಅವರೊಂದಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡೆಸಿದ ಭೇಟಿಯನ್ನು ಸಚಿವ ಪ್ರಿಯಾಂಕ್ ಖರ್ಗೆ ಸಮರ್ಥಿಸಿಕೊಂಡಿದ್ದಾರೆ. ಸರ್ಕಾರದ ಏಕೈಕ ಆದ್ಯತೆ ಕಾನೂನು ಪಾಲನೆ ಮಾಡುವುದು ಮತ್ತು ಯೋಜನೆಗಳನ್ನು ಪೂರ್ಣಗೊಳಿಸುವುದಷ್ಟೇ ಎಂದು ಅವರು ತಿಳಿಸಿದ್ದಾರೆ.

ಈ ಭೇಟಿಯ ಕುರಿತು ಎದ್ದಿರುವ ಟೀಕೆಗಳಿಗೆ ಉತ್ತರಿಸಿದ ಖರ್ಗೆ, ಅದಾನಿ ಕುರಿತು ವೈಯಕ್ತಿಕ ಅಭಿಪ್ರಾಯಗಳಲ್ಲಿ ಭಿನ್ನತೆಗಳಿರಬಹುದು, ಆದರೆ ಅದು ಸರ್ಕಾರದ ನಿರ್ಧಾರಗಳಲ್ಲಿ ಅಡ್ಡಿಯಾಗಬಾರದು ಎಂದಿದ್ದಾರೆ. ತಮ್ಮ ವಿಧಾನಸಭಾ ಕ್ಷೇತ್ರವಾದ ಚಿತ್ತಾಪುರದಲ್ಲಿರುವ ಎಸಿಸಿ ಸಿಮೆಂಟ್ ಕಾರ್ಖಾನೆಯನ್ನು ಅದಾನಿ ಸಮೂಹ ಸ್ವಾಧೀನಪಡಿಸಿಕೊಂಡಿರುವುದನ್ನು ಅವರು ಉಲ್ಲೇಖಿಸಿದ್ದು, ಇದು ಏಷ್ಯಾದ ಅತಿದೊಡ್ಡ ಕ್ಲಿಂಕರ್ ಪ್ಲಾಂಟ್‌ಗಳಲ್ಲಿ ಒಂದಾಗಿದೆ ಎಂದು ತಿಳಿಸಿದ್ದಾರೆ.

“ಭೇಟಿ ಮಾಡುವುದರಲ್ಲಿ ತಪ್ಪೇನಿದೆ? ನಮ್ಮ ಪಾಲಿಗೆ ಅವರೊಬ್ಬ ಕಾಂಟ್ರಾಕ್ಟರ್ ಅಷ್ಟೇ. ಒಂದೆರಡು ಯೋಜನೆಗಳಲ್ಲಿ ಅವರ ಸಂಸ್ಥೆ ಎಲ್-1 (L1) ಆಗಿದೆ. ಇವು ಕರ್ನಾಟಕ ಸರ್ಕಾರಕ್ಕೆ ಅತ್ಯಂತ ಪ್ರಮುಖ ಯೋಜನೆಗಳು. ನಾವು ಟೆಂಡರ್ ಪ್ರಕ್ರಿಯೆಯ ಮೇಲೆ ಯಾವುದೇ ಪ್ರಭಾವ ಬೀರಿಲ್ಲ. ಯಾರು ಬೇಕಾದರೂ ಎಲ್-1 ಆಗಿ ಹೊರಹೊಮ್ಮಬಹುದು. ನಮಗೆ ಅವರು ಒಬ್ಬ ಗುತ್ತಿಗೆದಾರರಿಗಿಂತ ಹೆಚ್ಚೇನೂ ಅಲ್ಲ,” ಎಂದು ಖರ್ಗೆ ಸ್ಪಷ್ಟಪಡಿಸಿದ್ದಾರೆ.

ಈ ಭೇಟಿಯ ವಿರುದ್ಧ ಬಿಜೆಪಿ ಮಾಡುತ್ತಿರುವ ಟೀಕೆಗಳಿಗೆ ಪ್ರತಿಕ್ರಿಯಿಸಿದ ಅವರು, ಅದಾನಿ ಸಮೂಹ ಮತ್ತು ಕೇಂದ್ರ ಸರ್ಕಾರದ ಕುರಿತು ಕಾಂಗ್ರೆಸ್ ಪಕ್ಷದ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದಿದ್ದಾರೆ. “ಕೇಂದ್ರ ಸರ್ಕಾರವು ಅದಾನಿ ಮತ್ತು ಅಂಬಾನಿಯ ಗುಲಾಮ ಎಂಬ ನಮ್ಮ ಪಕ್ಷದ ನಿಲುವು ಇಂದಿಗೂ ಹಾಗೆಯೇ ಇದೆ. ಆದರೆ ನಾನು ಕಾನೂನುಬದ್ಧ ಪ್ರಕ್ರಿಯೆಯನ್ನು ತಡೆಯಲು ಸಾಧ್ಯವಿಲ್ಲ,” ಎಂದು ಹೇಳಿದ್ದಾರೆ.

ಯೋಜನೆಗಳು ಯಶಸ್ವಿಯಾಗಿ ಜಾರಿಯಾಗುವುದಷ್ಟೇ ಸರ್ಕಾರದ ಆದ್ಯತೆ ಎಂದು ಪ್ರತಿಪಾದಿಸಿದ ಖರ್ಗೆ, “ಅದಾನಿ ಇರಲಿ, ಅಂಬಾನಿ ಇರಲಿ ಅಥವಾ ಅಂಬರೀಶ್ ಇರಲಿ, ನಮ್ಮ ಆದ್ಯತೆ ಕೆಲಸ ಪೂರ್ಣಗೊಳ್ಳಬೇಕು ಎಂಬುದಷ್ಟೇ. ಕಾನೂನು ಪ್ರಕ್ರಿಯೆಯ ಪ್ರಕಾರ ಅದಾನಿ ಕಂಪನಿ ಎಲ್-1 ಆಗಿದೆ. ನಾವು ಈ ಯೋಜನೆಯನ್ನು ಬೇರೆಯವರಿಗೆ ನೀಡಿದ್ದರೆ, ಮಾಧ್ಯಮಗಳೇ ಇದನ್ನು ಹಗರಣ ಎಂದು ಕರೆಯುತ್ತಿದ್ದವು,” ಎಂದಿದ್ದಾರೆ.

ಬೆಂಗಳೂರು ಸುರಂಗ ರಸ್ತೆ ಯೋಜನೆಯನ್ನು ಪ್ರಸ್ತಾಪಿಸಿ ಬಿಜೆಪಿಗೆ ತಿರುಗೇಟು ನೀಡಿದ ಅವರು, “ಈಗ ಬಿಜೆಪಿಯ ನಿಲುವೇನು? ಅದಾನಿ ಕಂಪನಿಗೆ ಟೆಂಡರ್ ಸಿಕ್ಕಿದೆ ಎಂಬ ಕಾರಣಕ್ಕೆ ಸುರಂಗ ರಸ್ತೆ ಯೋಜನೆ ಆಗಬೇಕೋ ಬೇಡವೋ ಎಂಬುದನ್ನು ಅವರು ಸ್ಪಷ್ಟಪಡಿಸಲಿ. ಈ ಯೋಜನೆಯ ವಿಚಾರವಾಗಿ ಬಿಜೆಪಿ ಸಂಸದರು ನಮ್ಮ ಮೇಲೆ ಮುಗಿಬೀಳುತ್ತಿದ್ದರು, ಈಗ ಅವರ ಸಂಬಂಧಿಕರಾದ ಅದಾನಿಗೆ ಟೆಂಡರ್ ಸಿಕ್ಕಿದೆ. ಟೆಂಡರ್‌ನಲ್ಲಿ ಭಾಗವಹಿಸದಂತೆ ಅರ್ಹ ಕಂಪನಿಗಳನ್ನು ತಡೆಯಲು ಸರ್ಕಾರಕ್ಕೆ ಸಾಧ್ಯವಿಲ್ಲ,” ಎಂದು ಹೇಳಿದ್ದಾರೆ.

You cannot copy content of this page

Exit mobile version