ಶಿವಮೊಗ್ಗ: ನಗರದ ಆರ್ಎಂಎಲ್ ನಗರದಲ್ಲಿ (RML Nagar) ಆಗಸ್ಟ್ 24ರಂದು ಈದ್ ಮಿಲಾದ್ ಆಚರಣೆಗಾಗಿ ಅಳವಡಿಸಲಾಗುತ್ತಿದ್ದ ಬೃಹತ್ ಕಟೌಟ್ ಮೇಲೆ ಹತ್ತಿ ಪ್ಯಾಲೆಸ್ತೀನ್ ಧ್ವಜ ಪ್ರದರ್ಶಿಸಿದ ಆರೋಪದ ಮೇಲೆ ಮೂವರ ವಿರುದ್ಧ ಶಿವಮೊಗ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೊಲೀಸ್ ಎಫ್ಐಆರ್ ಪ್ರಕಾರ, ನಿಹಾಲ್ ಅಲಿಯಾಸ್ ಬೆಕ್ಕು, ಉಮರ್ ಹಾಗೂ ಅಬ್ರಹಾರ್ ಎಂಬ ಮೂವರು ಯುವಕರು ಕಟೌಟ್ ರಚನೆಯ ಮೇಲೆ ಹತ್ತಿ ಪ್ಯಾಲೆಸ್ತೀನ್ ಧ್ವಜವನ್ನು ಪ್ರದರ್ಶಿಸಿ, ಆ ದೃಶ್ಯವನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದರು. ನಂತರ ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿತ್ತು.
ಈ ಕೃತ್ಯವು ಎರಡು ಸಮುದಾಯಗಳ ನಡುವೆ ಉದ್ವಿಗ್ನತೆ ಸೃಷ್ಟಿಸುವ, ವೈಮನಸ್ಸು ಪ್ರಚೋದಿಸುವ ಹಾಗೂ ಸಾರ್ವಜನಿಕ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಸಾಧ್ಯತೆಯನ್ನು ಹೊಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 353(2), 196(1) ಮತ್ತು 197ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.
