ಬೆಂಗಳೂರು: ರಾಜ್ಯ ಬಿಜೆಪಿಗೆ ಕೊನೆಗೂ ಅಧ್ಯಕ್ಷರನ್ನು ಕಾಣುವ ಯೋಗ ಬಂದಂತಿದೆ. ಚುನಾವಣೆ ನಂತರ ಕಲಕಿದ ನೀರಾಝ್ರಿಯಾನಂತೆ ರಾಡಿಯಾಗಿದ್ದ ಬಿಜೆಪಿ ಈಗ ತಿಳಿಯಾಗುತ್ತಿರುವಂತೆಯೇ ಕೇಂದ್ರ ನಾಯಕರು ಅಖಾಡಕ್ಕೆ ಇಳಿದು ಅಧ್ಯಕ್ಷರ ಹೆಸರನ್ನು ಘೋಷಿಸುವ ಎಲ್ಲಾ ಲಕ್ಷಣಗಳು ಕಾಣತೊಡಗಿವೆ.
ಬಿಜೆಪಿ ಅಧ್ಯಕ್ಷ ಪಟ್ಟಕ್ಕೆ ಪಕ್ಷದಲ್ಲಿ ದೊಡ್ಡ ಸ್ಪರ್ಧೆಯೇ ಇದ್ದು ಹಲವಾರು ಕುರ್ಚಿಯ ಮೇಲೆ ಕಣ್ಣಿಟ್ಟು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಆದರೆ ರಾಜ್ಯ ರಾಜಕಾರಣದಲ್ಲಿ ಇರುವ ಯಾವುದೇ ನಾಯಕನನ್ನು ಅಧ್ಯಕ್ಷನನ್ನಾಗಿ ಮಾಡಿದರು ಉಳಿದವರು ತಿರುಗಿಬೀಳುವ ಲಕ್ಷಣಗಳು ಕೂಡಾ ಇವೆ.
ಹೀಗಾಗಿಯೇ ಬಿಜೆಪಿ ಕೇಂದ್ರ ರಾಜಕಾರಣದಲ್ಲಿರುವ ಕರಂದ್ಲಾಜೆಯವರನ್ನು ಅಧ್ಯಕ್ಷರನ್ನಾಗಿ ಮಾಡುವ ಆಲೋಚನೆಯಲ್ಲಿದೆ ಎನ್ನಲಾಗುತ್ತಿದೆ. ಈ ಮೂಲಕ ಯಡಿಯೂರಪ್ಪ ಬಣವನ್ನೂ ಮೆಚ್ಚಿಸಿದಂತೆ ಆಗುತ್ತದೆ ಎನ್ನುವುದು ಹೈಕಮಾಂಡ್ ಯೋಚನೆ.
ಬಿ ವೈ ವಿಜಯೇಂದ್ರ ಬಿಜೆಪಿಯ ರಾಜ್ಯಾಧ್ಯಕ್ಷ ಪಟ್ಟದ ಆಕಾಂಕ್ಷೆ ಹೊಂದಿದ್ದರೂ ಬಿಜೆಪಿ ಮೈಸೂರು ಭಾಗದಲ್ಲಿ ಒಕ್ಕಲಿಗ ಮತದ ಮೇಲೆ ಕಣ್ಣಿಟ್ಟಿರುವುದರಿಂದಾಗಿ ಯಡಿಯೂರಪ್ಪ ಬಣದ ಶೋಭಾ ಕರಂದ್ಲಾಜೆಯವರನ್ನು ಅಧ್ಯಕ್ಷರಾಗಿ ನೇಮಿಸಲು ಹೊರಟಿದೆ ಎನ್ನಲಾಗಿದೆ. ಅಲ್ಲದೆ ಬಿಜೆಪಿಯಲ್ಲಿ ಈಗಾಗಲೇ ಲಿಂಗಾಯತ ನಾಯಕರ ನಡುವೆ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಇರುವುದರಿಂದಲೂ ಅವರಲ್ಲಿ ಯಾರಿಗೂ ಕೊಡದೆ ಮತ್ತೆ ಭಿನ್ನಮತೀಯ ಚಟುವಟಿಕೆ ಭುಗಿಲೇಳದ ಹಾಗೆ ನೋಡಿಕೊಳ್ಳಲು ಪಕ್ಷ ಯೋಚಿಸಿದೆ.
ಇದೆಲ್ಲ ಹಿನ್ನೆಲೆಯಲ್ಲಿ ಇನ್ನೆರಡು ದಿನಗಳಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನವನ್ನು ಶೋಭಾ ಕರಂದ್ಲಾಜೆ ಅಲಂಕರಿಸಲಿದ್ದಾರೆ. ಇತ್ತೀಚೆಗೆ ಮಹಿಳಾ ಮೀಸಲಾತಿ ಮಸೂದೆಯನ್ನು ಅನುಮೋದಿಸಿರುವ ಕೇಂದ್ರ ಅದರಿಂದ ಸಾಧ್ಯವಿರುವಷ್ಟು ಪ್ರಚಾರ ಪಡೆಯುವ ಸಲುವಾಯೂ ಹಲವೆಡೆ ಮಹಿಳೆಯರನ್ನು ಮುನ್ನೆಲೆಗೆ ತರುತ್ತಿದೆ.
ರಾಜ್ಯಾಧ್ಯಕ್ಷರ ಆಯ್ಕೆಯ ನಂತರ ದೊಡ್ಡ ಮಟ್ಟದಲ್ಲಿ ಭಿನ್ನಮತ ಎದ್ದಲ್ಲಿ ಅವರಲ್ಲಿ ಒಬ್ಬರಿಗೆ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗುವ ಅವಕಾಶವನ್ನು ಪಕ್ಷ ನೀಡಲಿದೆ. ಈಗಾಗಲೇ ಸಾಕಷ್ಟು ದೊಡ್ಡ ಮಟ್ಟದಲ್ಲಿ ಕೇಂದ್ರ ನಾಯಕತ್ವದ ವಿರುದ್ಧ ದನಿಯೆತ್ತಿದ್ದ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರನ್ನು ಹೈಕಮಾಂಡ್ ತನ್ನ ಬಳಿಗೆ ಕರೆಸಿಕೊಂಡು ತಮಿಳುನಾಡಿನ ಸರ್ಕಾರದ ವಿರುದ್ಧ ಇರುವ ಆರೋಪಗಳ ಪಟ್ಟಿಯನ್ನು ತಯಾರಿಸಿ ತರುವಂತೆ ಚೆನ್ನೈ ವಿಮಾನ ಹತ್ತಿಸಿ ಕಳುಹಿಸಿದೆ.