ಹಡಗಲಿಯ ಅಭಿನವ ಹಾಲಸ್ವಾಮೀಜಿಯ ಆಪ್ತ ಸ್ನೇಹಿತ ಚಕ್ರವರ್ತಿ ಸೂಲಿಬೆಲೆಗೂ ಈ ವಂಚನೆ ಪ್ರಕರಣಕ್ಕೂ ಇರುವ ಸಂಬಂಧವೇನು? ಈ ಪ್ರಕರಣದಲ್ಲಿ ಚೈತ್ರಾ ಕೇವಲ ಪಾತ್ರವಾದರೆ ಸೂತ್ರದಾರರು ಯಾರು? ಕೇವಲ ಬಾಯಿಬಡುಕಿಯೊಬ್ಬಳನ್ನು ಸಿಕ್ಕಿಹಾಕಿಸಿ ಪರದೆಯ ಹಿಂದಿರುವ ಸಂಘ ಪರಿವಾರದ ಮೌನಿ ಬಾಬಾಗಳು ನುಣುಚಿಕೊಳ್ಳಲು ಅವಕಾಶ ಆಗಬಾರದು. ಅವಳೊಬ್ಬಳನ್ನೇ ಟಾರ್ಗೆಟ್ ಮಾಡುವುದು ಸರಿಯಲ್ಲ. ಹಿಂದುತ್ವವಾದಿಗಳ ಮುಖವಾಡವೂ ಬಯಲಾಗಲೇಬೇಕಲ್ಲಾ..ಶಶಿಕಾಂತ ಯಡಹಳ್ಳಿ, ಹಿರಿಯ ಪತ್ರಕರ್ತರು.
“ಭಲೆ ಭಲೆ ಚೆಂದದ ಚೆಂದುಳ್ಳಿ ಕಳ್ಳಿ ನೀನು
ಪುಂಗ್ಲಿ ಕೂಡಾ ನಾಚುವ ಮಿಂಚಿನ ಸುಳ್ಳಿ ನೀನು
ನಿನ್ನ ಭಾಷಣ ಕೇಳಲು ಕಿವಿ ತಮಟೆ ಸಾಲದು
ನಿನ್ನ “ಚೈನಿನ” ಕಾಂತಿಗಳಿಂದಾನೆ ತಾನೇನೇ
ಊರೆಲ್ಲಾ ಹೊಂಬೆಳಕು,
ನೀನು ಹೆಜ್ಜೆಯ ಇಟ್ಟಲ್ಲೆಲ್ಲಾನೂ
ದ್ವೇಷದ ಹೂಗಳು ನಗಬೇಕು”
ಹೀಗೊಂದು ತಿರುಚಿ ಬರೆದ ಹಾಡು ಸಾಮಾಜಿಕ ಜಾಲತಾಣಗಳಲಿ ದೊಡ್ಡ ಸದ್ದು ಮಾಡುತ್ತಿದೆ. ಈ ಹಾಡಿನೊಳಗಿನ ಖಳನಾಯಕಿ ಆರೆಸ್ಟ್ ಆಗಿ ಜೈಲು ಸೇರಿದ್ದಾಳೆ. ಕೂಗುಮಾರಿಯೊಂದು ಹಳ್ಳಕ್ಕೆ ಬಿದ್ದಿದೆ, ಆಕೆಯ ದ್ವೇಷದ ಭಾಷಣಗಳಿಂದ ಬೇಸತ್ತ ಜನ ಆಳಿಗೊಂದು ಟ್ರೋಲ್ ಬಿಸಾಕುತ್ತಿದ್ದಾರೆ.
ಹೌದು, ಆ ಮಹಿಳೆಯ ಹೆಸರು ಚೈತ್ರಾ ಕುಂದಾಪುರ. ಎಬಿವಿಪಿ ಎಂಬ ಸಂಘ ಪರಿವಾರದ ಅಂಗಶಾಖೆಯಲ್ಲಿ ಮೆದುಳು ತೊಳೆಸಿಕೊಂಡು ಅವತರಿಸಿದ ವಿಕ್ಷಿಪ್ತ ಪ್ರತಿಭೆ. ಚಿಕ್ಕವರಿದ್ದಾಗ ಕುತೂಹಲಕ್ಕೆಂದು ಸಂಘದ ಶಾಖೆಗೆ ಸೇರಿದವರು, ವಿದ್ಯಾರ್ಥಿಗಳಾಗಿದ್ದಾಗ ಎಬಿವಿಪಿಯತ್ತ ಚಿತ್ತ ಹರಿಸಿದವರು, ಮುಂದೆ ಯುವಕರಾದಾಗ ಆರೆಸ್ಸೆಸ್ ಎಂಬ ವಿಷವೃತ್ತದಲಿ ಸಿಕ್ಕು ಹಿಂದುತ್ವದ ಭ್ರಮೆಗೆ ಒಳಗಾದವರೆಲ್ಲಾ ಸ್ವಂತ ವಿವೇಚನಾ ಶಕ್ತಿ ಹಾಗೂ ಆಲೋಚನಾ ಯುಕ್ತಿಯನ್ನು ಕಳೆದುಕೊಂಡು, ಹಿಂದುತ್ವದ ಕಾರ್ಖಾನೆಯಲ್ಲಿ ಹಂತಹಂತವಾಗಿ ಮೆದುಳು ತೊಳೆಸಿಕೊಂಡು ಅತಿರೇಕದ ದೇಶಭಕ್ತಿ ಹಾಗೂ ಅನ್ಯಧರ್ಮದ್ವೇಷಗಳನ್ನು ಬದುಕಾಗಿಸಿಕೊಳ್ಳುತ್ತಾರೆ. ಇದಕ್ಕೆ ಲೇಟೆಸ್ಟ್ ಉದಾಹರಣೆ ಈ ಚೈತ್ರಾ ಕುಂದಾಪುರ ಎನ್ನುವ ಸಂಘಿ ಫೈರ್ ಬ್ರ್ಯಾಂಡ್ ಖ್ಯಾತಿಯ ಮಹಿಳೆ ಹಾಗೂ ಆಕೆಗೆ ಒದಗಿಬಂದ ದುಸ್ಥಿತಿ.

“ಹುಟ್ಟಿದರೆ ಪ್ರತಿ ಮನೆಯಲ್ಲೂ ಇಂತಹ ಹೆಣ್ಮಕ್ಕಳು ಹುಟ್ಟಬೇಕು, ಅದೇನು ಹಿಂದೂಧರ್ಮದ ಮೇಲಿನ ಭಕ್ತಿ, ಅದೆಷ್ಟು ಹಿಂದೂ ಸಂಸ್ಕೃತಿ ಮೇಲಿನ ಅಭಿಮಾನ, ಹಿಂದೂ ಮಹಿಳೆ ಅಂದ್ರೆ ಹೀಗಿರಬೇಕು” ಎಂದು ಸಂಘ ಪರಿವಾರಿಗರು ಈ ಚೈತ್ರಾ ಎನ್ನುವ ಉಗ್ರ ಭಾಷಣಕೋರಳ ಬಗ್ಗೆ ಅಭಿಮಾನದಿಂದ ಮಾತಾಡತೊಡಗಿದ್ದರು. ಎಲ್ಲಾ ಮಹಿಳೆಯರು ಅವಳನ್ನು ಮಾದರಿಯಾಗಿ ಅನುಸರಿಸಬೇಕೆಂದು ಪ್ರಚಾರ ಮಾಡತೊಡಗಿದರು. ಕೆಲವೇ ದಿನಗಳಲ್ಲಿ ಕೋಮು ಪ್ರಕ್ಷುಬ್ದ ಕರಾವಳಿ ಭಾಗದಲ್ಲಿ ಚೈತ್ರಾ ತನ್ನ ಚಿತ್ರವಿಚಿತ್ರ ಮಾತುಗಳಿಂದ ಮನೆಮಾತಾದಳು. ಕರಾವಳಿಯ ಸಂಘಿಗಳು ತಮ್ಮ ಸ್ವಧರ್ಮ ಪ್ರೇಮ ಹಾಗೂ ಅನ್ಯಧರ್ಮ ದ್ವೇಷವನ್ನು ಈ ಮಹಿಳೆಯ ಬಾಯಿಂದ ಹೊರಬರುವಂತೆ ನೋಡಿಕೊಂಡರು. ಸಂಘದವರ ಪ್ರೋತ್ಸಾಹ ಹಾಗೂ ಕೇಳುಗರ ಚಪ್ಪಾಳೆಗಳನ್ನೇ ನಂಬಿದ ಚೈತ್ರಾ ತಾನೊಬ್ಬ ಹಿಂದೂಧರ್ಮದ ರಕ್ಷಕಿ ಎಂಬ ಭ್ರಮೆಗೆ ಬಿದ್ದು ಕೋಮುವ್ಯಾಧಿ ಪೀಡಿತಳಾಗಿ ವೃತ್ತಿಪರ ಕೂಗುಮಾರಿಯಾಗಿ ಬದಲಾದಳು. ಹೆಂಗ್ ಪುಂಗ್ಲಿ ಖ್ಯಾತಿಯ ಸೂಲಿಬೆಲೆಯಂತೆ ಸುಳ್ಳುಗಳನ್ನು ಸತ್ಯದ ತಲೆಯಮೇಲೆ ಹೊಡೆದಂತೆ ಮಾತಾಡಿ ಜನರನ್ನು ನಂಬಿಸತೊಡಗಿದಳು. ಬಾಯಿ ಬಿಟ್ಟರೆ ಮುಸ್ಲಿಂ ದ್ವೇಷ, ಮತಾಂಧತೆ ಹಾಗೂ ಹುಸಿ ರಾಷ್ಟ್ರೀಯತೆಗಳ ಬೆಂಕಿ ಕಾರಲು ಈಕೆಯನ್ನು ಸಂಘಪರಿವಾರದವರು ಪ್ರೇರೇಪಿಸಿದರು. ಕುಂದಾಪುರದ ಕಾಳಿ ಎನ್ನುವ ಬಿರುದನ್ನಿತ್ತು ಅಟ್ಟಕ್ಕೇರಿಸಿದರು. ಹಿಂದು ಧರ್ಮ ರಕ್ಷಣೆಗಾಗಿ ಅವತಾರವೆತ್ತಿದ ಸಿಂಹಿಣಿ ಎಂದು ಭ್ರಮೆ ಸೃಷ್ಟಿಸಿದರು. ಕೇಸರಿ ಸೀರೆಯುಟ್ಟ ಕಾಳಿಯಂತೆ ಕಾಣುವ ಈ ಚೈತ್ರಮ್ಮನ ಚಿತ್ರವಿರುವ ಸ್ಟಿಕ್ಕರ್ ಗಳನ್ನು ಅಂಟಿಸಿದರು, ಬ್ಯಾನರ್ ಗಳನ್ನು ಕಟ್ಟಿಸಿದರು. ಬಿಜೆಪಿಗರು ಈ ಕೂಗುಮಾರಿಯನ್ನು ಜನರನ್ನು ಉದ್ದೀಪನಗೊಳಿಸಲು ಚುನಾವಣಾ ಪ್ರಚಾರಕ್ಕೆ ಅವ್ಯಾಹತವಾಗಿ ಬಳಸಿಕೊಂಡರು ಹಾಗೂ ಅದರ ಪ್ರತಿಫಲವಾಗಿ ಗೆಲುವನ್ನೂ ಪಡೆದರು.
ಹೀಗೆ ಕಾಳಿಯನ್ನು ಸೃಷ್ಟಿಸಿ ಗೆಲುವು ಗಿಟ್ಟಿಸಿಕೊಂಡ ಬಿಜೆಪಿಗರು 2019 ರಲ್ಲಿ ರಾಜ್ಯದಲ್ಲಿ ಅಕ್ರಮವಾಗಿ ಅಧಿಕಾರಕ್ಕೆ ಬಂದಾದ ಮೇಲೆ ಕೂಗುಮಾರಿಯನ್ನು ಪಕ್ಕಕ್ಕಿಟ್ಟರು. ಆದರೆ ಈ ಮಾರಿ ಸುಮ್ಮನಿರಬೇಕಲ್ಲ. ಕೆಲವು ಹಿಂದುತ್ವವಾದಿಗಳ ಶಡ್ಯಂತ್ರದ ಭಾಗವಾದಳು. ವಂಚನೆ ಪ್ರಕರಣದಲ್ಲಿ ಪಾಲುದಾರಳಾದಳು. 2023 ರ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುತ್ತೇನೆಂದು ನಂಬಿಸಿ ಉದ್ಯಮಿಯೊಬ್ಬರಿಂದ ಏಳು ಕೋಟಿಯಷ್ಟು ಹಣ ಪಡೆದು ಪಂಗನಾಮ ಹಾಕಿದಳು. ದೂರು ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಳು. ಈಗ ಇದೇ ವಂಚನೆ ಕೇಸಲ್ಲಿ ಸಿಸಿಬಿ ಪೊಲೀಸರಿಂದ ಆರೆಸ್ಟ್ ಆಗಿ ಅವಳ ಸಹಚರರ ಜೊತೆ ಜೈಲು ಸೇರಿದ್ದಾಳೆ. ವಿಶೇಷವೇನೆಂದರೆ ಯಾವ ಮುಸ್ಲಿಂ ಧರ್ಮೀಯರ ವಿರುದ್ಧ ದ್ವೇಷದ ಕೆಂಡ ಕಾರುತ್ತಿದ್ದಳೋ ಅದೇ ಮುಸ್ಲಿಂ ಗೆಳತಿಯ ಮನೆಯಲ್ಲಿ ಆಶ್ರಯ ಪಡೆದು ಅಡಗಿ ಕೂತಿದ್ದಳೆಂಬುದೇ ವಿಪರ್ಯಾಸ.
ಇದೆಲ್ಲಾ ಆಗಿ ಈಗ ಸಂಘದವರೇ ಸೃಷ್ಟಿಸಿದ ಈ ಕೂಗುಮಾರಿ ಸಿಕ್ಕಾಕಿ ಕೊಂಡಿದ್ದರಿಂದ ಸಂಘದವರಿಗೆ ಬೇಡವಾಗಿದ್ದಾಳೆ. ತನ್ನ ರಕ್ಷಣೆಗೆ ಬಿಜೆಪಿಗರೂ ಹಾಗೂ ಆರೆಸ್ಸೆಸ್ಸಿಗರು ಓಡಿ ಬರುತ್ತಾರೆ ಎಂದುಕೊಂಡ ಅವಳ ಭ್ರಮೆ ಕಳಚಿ ಬಿದ್ದಿದೆ. ಸ್ವತಃ ಮೋದಿಯವರೇ ತನ್ನನ್ನು ರಕ್ಷಿಸುತ್ತಾರೆ ಎಂದು ಪೊಲೀಸ್ ಕಸ್ಟಡಿಯಲ್ಲಿ ಈ ಕಾಳಿ ಕೂಗುತ್ತಿದ್ದಾಳೆಯಾದರೂ ಸಂಘ ಪರಿವಾರದ ಯಾರೊಬ್ಬರೂ ಮುಂದೆ ಬಂದು ರಕ್ಷಿಸುವ ಮಾತು ಬಿಡಿ ಅವಳ ಪರವಾಗಿ ಒಂದೇ ಒಂದು ಮಾತನ್ನೂ ಆಡುತ್ತಿಲ್ಲ. ತಮಗೂ ಹಾಗೂ ತಾವೇ ಸೃಷ್ಟಿಸಿದ ಈ ರುದ್ರಕಾಳಿಗೂ ಯಾವುದೇ ಸಂಬಂಧವಿಲ್ಲವೆನ್ನುವಂತೆ ಮೌನಕ್ಕೆ ಶರಣಾಗಿದ್ದಾರೆ.
ಯಾಕೆಂದರೆ ಈ ಏಳು ಕೋಟಿ ವಂಚನೆಯ ಪ್ರಕರಣದಲ್ಲಿ ಸ್ವಯಂಸೇವಕ ಸಂಘದ ನಾಯಕರೂ ಭಾಗಿಯಾಗಿದ್ದಾರೆ ಎನ್ನುವ ಅನುಮಾನ ದಟ್ಟವಾಗಿದೆ. ಚೈತ್ರಾ ಎನ್ನುವ ಭ್ರಮಾಧೀನ ಹೆಂಗಸನ್ನು ಮುಂದಿಟ್ಟುಕೊಂಡು ಹಣ ವಸೂಲಿಗೆ ಸಂಘ ಪರಿವಾರದ ಕೆಲವರು ಪ್ಲಾನ್ ಮಾಡಿದ್ದಾರೆ ಎಂಬ ಗುಲ್ಲು ಕರಾವಳಿಯಲ್ಲಿ ಪಿಸುಗುಟ್ಟುತ್ತಿದೆ. ಎಲ್ಲಿ ಈ ಕೂಗುಮಾರಿಯ ಬಂಧನವನ್ನು ಖಂಡಿಸಿದರೆ, ಆಳುವ ಪಕ್ಷದ ವಿರುದ್ಧ ಹೋರಾಟಕ್ಕಿಳಿದರೆ ಇಡೀ ಪ್ರಕರಣ ತಮ್ಮ ಬುಡಕ್ಕೆ ಸುತ್ತಿಕೊಳ್ಳುತ್ತೋ ಎನ್ನುವ ಆತಂಕದಲ್ಲಿ ಆರೆಸ್ಸೆಸ್ಸಿಗರು ತಲ್ಲಣಿಸಿದ್ದಾರೆ. ಇಡೀ ವಂಚನೆಯ ಪ್ರಕರಣದಲ್ಲಿ ಈ ಕಾಳಿಯಮ್ಮನನ್ನು ಬಲಿಪಶುವಾಗಿಸಿ ಸಂಘ ಪರಿವಾರದ ಹೆಸರು ಕೆಡದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಮಾರಿಕೊಂಡ ಮಾಧ್ಯಮಗಳು ಚೈತ್ರ ಕುಂದಾಪುರಳನ್ನು ಇಡೀ ಪ್ರಕರಣದ ಖಳನಾಯಕಿಯನ್ನಾಗಿ ಬಿಂಬಿಸಿ ಬ್ರೇಕಿಂಗ್ ನ್ಯೂಸ್ ಕೊಡುತ್ತಿವೆ. ಖಳನಾಯಕಿಯ ಸುತ್ತ ಸ್ಟೋರಿಗಳನ್ನು ಕಟ್ಟುತ್ತಿವೆ. ಚರ್ಚೆಗಳನ್ನು ಹುಟ್ಟುಹಾಕುತ್ತಿವೆ.
ಈ ಸಂಘ ಪರಿವಾರ ಇರುವುದೇ ಹೀಗೆ. ಕಾಲಕಾಲಕ್ಕೆ ಹಿಂದುಳಿದ ವರ್ಗದ ಯುವಕ ಯುವತಿಯರ ಮೆದುಳು ತೊಳೆದು, ತಲೆಯಲ್ಲಿ ಮತಾಂಧತೆ ತುಂಬಿ ಹೊಸ ಮುಖಗಳನ್ನು ಮುಂಚೂಣಿಗೆ ಬಿಡುವುದು. ಅವರ ಮೂಲಕ ಜನರಲ್ಲಿ ಭಾವನಾತ್ಮಕ ಉನ್ಮಾದವನ್ನು ಹೆಚ್ಚಿಸುವುದು. ತಮ್ಮ ಅಗತ್ಯ ಮುಗಿದಾದ ಮೇಲೆ ಅಥವಾ ತಮ್ಮ ಅಸ್ತಿತ್ವಕ್ಕೆ ದಕ್ಕೆಯಾಗುವ ಲಕ್ಷಣಗಳು ಕಂಡುಬಂದರೆ ತಾವೇ ಸೃಷ್ಟಿಸಿದ ಪಾತ್ರಗಳನ್ನು ಬಲಿಪಶುವನ್ನಾಗಿಸುವುದು. ಇದೇನು ಹೊಸದಲ್ಲ. ಮತಾಂಧತೆಯ ಮಾರುಕಟ್ಟೆಯಲ್ಲಿ ಹೀಗೆ ಅಸ್ತ್ರವಾಗಿ ಬಳಸಿ ಬಿಸಾಕಿದ ವ್ಯಕ್ತಿಗಳಿಗೆ ಲೆಕ್ಕವಿಲ್ಲ. ಅಂತವರಲ್ಲಿ ಹಿಂದುಳಿದ ವರ್ಗದ (ಸೇರೇಗಾರ್) ಈ ಚೈತ್ರಾ ಕುಂದಾಪುರ ಎನ್ನುವ ಯುವತಿ ಇತ್ತೀಚಿನ ಬಲಿಪಶು ಅಷ್ಟೇ. ಹಿಂದುತ್ವದ ಯಜಮಾನಿಕೆಗಾಗಿ ಮಹಾ ಯಜ್ಞ ನಡೆಯುತ್ತಿದೆ. ಅದರ ಯಶಸ್ಸಿಗಾಗಿ ಬಡವರ, ಹಿಂದುಳಿದವರ, ತಳ ಕೆಳ ಸಮುದಾಯದ ಮಕ್ಕಳ ಮೆದುಳು ತೊಳೆದು ಬಳಸಿಕೊಳ್ಳಲಾಗುತ್ತಿದೆ. ಧರ್ಮದ ಹೆಸರಲ್ಲಿ ಹಲ್ಲೆ ಹತ್ಯೆ ಮಾಡಲು ಕಾಲಾಳುಗಳನ್ನು ಸೃಷ್ಟಿಸಲಾಗುತ್ತದೆ. ಬಳಸಿ ಬೇಡವಾದಾಗ ಯಜ್ಞಕ್ಕೆ ಆಹುತಿ ನೀಡಲಾಗುತ್ತದೆ.
ಚೈತ್ರ ಕುಂದಾಪುರ ಎನ್ನುವ ಮಹಿಳೆಯ ಮೇಲೆ ಈಗ ಆರೋಪ ಮಾಡುವವರು, ಸಿಕ್ಕಾಪಟ್ಟೆ ಟ್ರೋಲ್ ಮಾಡುವವರು ಮೊದಲು ಆಕೆಯನ್ನು ರೂಪಿಸಿದ ದುಷ್ಟಶಕ್ತಿಗಳನ್ನು ಗುರುತಿಸಿ ವಿರೋಧಿಸಬೇಕಿದೆ. ಚೈತ್ರಾ ಇಲ್ಲಿ ಕೇವಲ ಸಂಘ ಪರಿವಾರದ ಒಂದು ಪರಿಕರ ಮಾತ್ರ. ಆದರೆ ಈ ಅಸ್ತ್ರವನ್ನು ರೂಪಿಸಿದ, ಬಳಸಿದ ಕೈಗಳು ಕಣ್ಣಿಗೆ ಕಾಣುವುದಿಲ್ಲ, ಹುಡುಕಿದರೂ ಗೋಚರಿಸುವುದಿಲ್ಲ. ಪಾತ್ರದ ಹಿಂದೆ ಬಿದ್ದು ನಿಂದಿಸುವ ಬದಲು ಅದನ್ನಾಡಿಸುವ ಸೂತ್ರದಾರಿಗಳ ಹುನ್ನಾರಗಳನ್ನು ಬಯಲುಗೊಳಿಸಬೇಕಿದೆ. ಇಂತಹ ಮತಾಂಧರು ಎಸೆಯುವ ಮತಾಂಧತೆಯ ಬಲೆಗೆ ಬಡವರ ಮಕ್ಕಳು ಬೀಳದಂತೆ ಪೋಷಕರನ್ನು ಎಚ್ಚರಿಸಬೇಕಿದೆ. ಒಟ್ಟಾರೆಯಾಗಿ ಸಂವಿಧಾನ ವಿರೋಧಿ ಸಂಘ ಪರಿವಾರವನ್ನು ಸೋಲಿಸಬೇಕಿದೆ. ಹಿಂದುತ್ವದ ಹಿಡಿತಕ್ಕೆ ಸಿಕ್ಕು ಮುಂದೆ ಬಲಿಯಾಗಬಹುದಾದ ಚೈತ್ರಾಳಂತಹ ಅನೇಕ ಯುವಕ ಯುವತಿಯರಲ್ಲಿ ಜಾಗೃತಿ ಮೂಡಿಸಬೇಕಿದೆ. ಈ ಕೆಲಸವನ್ನು ಮಾಧ್ಯಮಗಳು ಮಾಡಬೇಕು ಮಾಡುವುದಿಲ್ಲ. ಯಾಕೆಂದರೆ ಅವುಗಳಲ್ಲಿ ಬಹುತೇಕ ಸಂಘ ಪರಿವಾರದ ಅಂಗವಾಗಿವೆ. ಇನ್ನುಳಿದ ಸೋಷಿಯಲ್ ಮೀಡಿಯಾಗಳ ಮೂಲಕವಾದರೂ ಸಂಘ ಪರಿವಾರದ ಕೇಂದ್ರದಲ್ಲಿರುವ ವೈದಿಕಶಾಹಿ ಶಡ್ಯಂತ್ರಗಳನ್ನು ಬಯಲು ಗೊಳಿಸಬೇಕಿದೆ. ನಮ್ಮ ಟಾರ್ಗೆಟ್ ಪರಿಕರವಾದ ಚೈತ್ರಾ ಅಲ್ಲಾ. ಟಾರ್ಗೆಟ್ ಆಗಬೇಕಿರುವುದು ಅಂತಹ ಲಕ್ಷಾಂತರ ಪರಿಕರಗಳನ್ನು ಸೃಷ್ಟಿಸಿ ತಮ್ಮಿಚ್ಚೆ ಬಂದಂತೆ ಸಮಾಜದ ಒಗ್ಗಟ್ಟನ್ನು ಒಡೆಯಲು ಬಳಸುವ ವಿಚ್ಚಿದ್ರಕಾರಿ ಶಕ್ತಿಗಳು. ಈ ವಿವೇಚನೆ, ಮತಾಂಧತೆಯ ವಿರುದ್ಧ ಮಾನವೀಯತೆಗೆ ಜಯವಾಗಲಿ.
ಲೇಟೆಸ್ಟ್ ಸುದ್ದಿ ಏನೆಂದ್ರೆ “ಸ್ವಾಮೀಜಿ ಅರೆಸ್ಟ್ ಆಗಲಿ. ಆಗ ದೊಡ್ಡ ದೊಡ್ಡವರೆಲ್ಲಾ ಸಿಕ್ಕಿ ಬೀಳ್ತಾರೆ” ಎಂದು ಇಂದು ಬೆಳಿಗ್ಗೆ ಪೊಲೀಸ್ ಕಸ್ಟಡಿಯಲ್ಲಿ ಮಹಿಳಾ ಸಾಂತ್ವನ ಕೇಂದ್ರದಿಂದ ಸಿಸಿಬಿ ಕಚೇರಿಗೆ ಬಂದ ಚೈತ್ರಾ ಕುಂದಾಪುರ ಮಾಧ್ಯಮಗಳಿಗೆ ಅಧಿಕೃತ ಹೇಳಿಕೆ ನೀಡಿದ್ದಾರೆ. ಈ ಸಂಘೀ ಸ್ವಾಮಿ ಹಡಗಲಿಯ ಅಭಿನವ ಹಾಲಸ್ವಾಮಿ. ಬಿಜೆಪಿ ಟಿಕೆಟ್ ಕೊಡಿಸ್ತೇನೆ ಎಂದು ಗೋವಿಂದ ಬಾಬು ಪೂಜಾರಿಯಿಂದ ಒಂದೂವರೆ ಕೋಟಿಯನ್ನು ಪಡೆದುಕೊಂಡ ಆಸಾಮಿ. ಈ ಸ್ವಾಮೀಜಿ ಮೂಲಕ ಯಾರ್ಯಾರಿಗೆ ಹಣ ಸಂದಾಯವಾಗಿದೆ? ದಗಲ್ಬಾಜಿ ಪ್ರಕರಣದ ಪಾಲುದಾರರುಗಳು ಯಾರು? ಸ್ವಾಮೀಜಿಯ ಆಪ್ತ ಸ್ನೇಹಿತ ಚಕ್ರವರ್ತಿ ಸೂಲಿಬೆಲೆಗೂ ಈ ವಂಚನೆ ಪ್ರಕರಣಕ್ಕೂ ಇರುವ ಸಂಬಂಧವೇನು? ಈ ಪ್ರಕರಣದಲ್ಲಿ ಚೈತ್ರಾ ಕೇವಲ ಪಾತ್ರವಾದರೆ ಸೂತ್ರದಾರರು ಯಾರು? ಈ ಬಗ್ಗೆ ವಿಶ್ಲೇಷಣೆ ಮಾಡಬೇಕಾದ ಮಾಧ್ಯಮಗಳು ತಮ್ಮ ಇಡೀ ತನಿಖಾ ವರದಿಯನ್ನು ಕಬಾಬ್, ಮೇಕಪ್, ಸೆಲೂನ್ ಗೆ ಸೀಮಿತಗೊಳಿಸುತ್ತಿರುವುದು ಯಾರನ್ನು ಕಾಪಾಡಲು? ಈ ವಂಚನೆ ಪ್ರಕರಣದ ಆಳಕ್ಕಿಳಿದಷ್ಟೂ ಅನೇಕ ರಹಸ್ಯಗಳು ಬಯಲಾಗದೇ ಇರದು. ಕೇವಲ ಬಾಯಿಬಡುಕಿಯೊಬ್ಬಳನ್ನು ಸಿಕ್ಕಿಹಾಕಿಸಿ ಪರದೆಯ ಹಿಂದಿರುವ ಸಂಘ ಪರಿವಾರದ ಮೌನಿ ಬಾಬಾಗಳು ನುಣುಚಿಕೊಳ್ಳಲು ಅವಕಾಶ ಆಗಬಾರದು. ಹಾಗಂತ ಚೈತ್ರಾಳ ಬಗ್ಗೆ ಮರುಕ ಪಡುವಂತಹುದೇನೂ ಇಲ್ಲ. ಅವಳೊಬ್ಬಳನ್ನೇ ಟಾರ್ಗೆಟ್ ಮಾಡುವುದು ಸರಿಯಲ್ಲ. ಹಿಂದುತ್ವವಾದಿಗಳ ಮುಖವಾಡವೂ ಬಯಲಾಗಲೇಬೇಕಲ್ಲಾ..
ಶಶಿಕಾಂತ ಯಡಹಳ್ಳಿ
ಹಿರಿಯ ಪತ್ರಕರ್ತರು ಹಾಗೂ ರಂಗಕರ್ಮಿ
ಇದನ್ನೂ ಓದಿ-ಸಮಾನತೆ ವಿರೋಧಿ ಸನಾತನ ಧರ್ಮ ಹಾಗೂ ಸಂವಿಧಾನ