ಸಿದ್ದರಾಮಯ್ಯ ಅವರಿಗೆ ಸಾರ್ವಜನಿಕವಾಗಿ ಕೊಲೆಗೆ ಪ್ರಚೋದನೆ ನೀಡಿದ್ದ ಮಲ್ಲೇಶ್ವರ ಕ್ಷೇತ್ರ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಹೌದು, ತಮ್ಮದೇ ಸರ್ಕಾರ ಅಧಿಕಾರದಲ್ಲಿದ್ದಾಗ ಅಂದು ಸಚಿವರಾಗಿದ್ದ ಅಶ್ವಥ್ ನಾರಾಯಣ ಅವರು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ರವರನ್ನು ಹೊಡೆದು ಹಾಕಬೇಕು ಎಂದು ಕೊಲೆಗೆ ಸಾರ್ವಜನಿಕ ಪ್ರಚೋದನೆ ನೀಡಿದ್ದರು.
ಈಗ ಈ ಹೇಳಿಕೆಗೆ ತಕ್ಕ ಬೆಲೆ ತೆತ್ತುವ ಸಂದರ್ಭ ಬಂದಂತೆ ಕಾಣುತ್ತಿದ್ದೆ. ಶಾಸಕ ಅಶ್ವಥ್ ನಾರಾಯಣ ಅವರ ವಿರುದ್ಧ ಐಪಿಸಿ ಸೆಕ್ಷನ್ 505, 153ರ ಅಡಿ ಮೈಸೂರಿನ ದೇವರಾಜ ಪೋಲಿಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಮೈಸೂರು ನಿವಾಸಿ ಹಾಗೂ ಕಾಂಗ್ರೆಸ್ ಪಕ್ಷದ ವಕ್ತಾರರು ಆಗಿರುವ ಎಂ ಲಕ್ಷ್ಮಣ್ ಕೊಟ್ಟಿರುವ ಕೇಸಿನ ಆಧಾರದ ಮೇಲೆ FIR ದಾಖಲಾಗಿದೆ.
ಈ ಕುರಿತು ಲಕ್ಷ್ಮಣ್ ಅವರನ್ನು ಸಂಪರ್ಕಿಸಿದ ಪೀಪಲ್ ಮೀಡಿಯಾ, ಸಿದ್ದರಾಮಯ್ಯ ವಿರುದ್ಧ ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ಅವರನ್ನು ಕೊಲ್ಲುವ ಸಂಚು ಹೂಡಿದ್ದಾರೆ. ಅಶ್ವಥ್ ನಾರಾಯಣ್ ಬಹಿರಂಗವಾಗಿ ಹೇಳಿಕೆ ನೀಡಿದ್ದು, ಅವರೇ ಸುಫಾರಿ ಕೊಟ್ಟಿರಬಹುದು ಎಂದು ಆರೋಪಿಸಿದ್ದಾರೆ. ಹಾಗೂ ನಾಳೆ ಸ್ಥಳ ಮಹಜರಿಗೆ ಪೋಲಿಸರು ಹೋಗುತ್ತಿದ್ದಾರೆ. ಈ ತನಿಖೆಗೆ ಸಂಬಂಧಿಸಿದಂತೆ ಸಭಾಪತಿಗಳ ಅನುಮತಿಯನ್ನು ಪಡೆಯಲು ಪೋಲಿಸರು ಮುಂದಾಗಿದ್ದಾರೆ ಎಂದು ಹೇಳಿದರು.
ಮಂಡ್ಯ ಜಿಲ್ಲೆಯ ಸಾತನೂರು ಹೊರವಲಯದ ಕಂಬದ ನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಕಾರ್ಯಕ್ರಮದಲ್ಲಿ ಸಚಿವ ಅಶ್ವತ್ಥ ನಾರಾಯಣ ಮಾತನಾಡಿ, “ನಿಮಗೆ ಟಿಪ್ಪು ಬೇಕಾ..? ಸಾವರ್ಕರ್ ಬೇಕಾ..? ಟಿಪ್ಪು ಬೇಡಾ ಅಂದ್ರೆ ಸಿದ್ದರಾಮಯ್ಯ ಅವರನ್ನು ಟಿಪ್ಪು ಕಳುಹಿಸಿದ ಹಾಗೆ ಕಳಿಸಬೇಕು. ಉರಿಗೌಡ ಮತ್ತು ನಂಜೇಗೌಡ ಏನ್ ಮಾಡಿದ್ದರು. ಹಾಗೇಯೇ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕು” ಎಂದು ಹೇಳಿದ್ದರು.