ಇತ್ತೀಚೆಗೆ ಬಿಡುಗಡೆಯಾಗಿರುವ ದ ಕೇರಳ ಸ್ಟೋರಿ (The Kerala Story) ಎಂಬ ಸಿನಿಮಾದ ಕುರಿತು ಚರ್ಚೆ ವಾದ ವಿವಾದ ನಡೆಯುತ್ತಿವೆ. ಆರ್ ಎಸ್ ಎಸ್ ನ ಅಂಗಸಂಸ್ಥೆಗಳಾದ ವಿಎಚ್ಪಿ, ಭಜರಂಗದಳದಂತಹ ಸಂಘಟನೆಗಳು ಮಹಿಳೆಯರಿಗೆ, ಹೆಣ್ಣುಮಕ್ಕಳಿಗೆ ಉಚಿತವಾಗಿ ಈ ಸಿನಿಮಾ ತೋರಿಸುವ ಕೆಲಸವನ್ನು ಎಲ್ಲಾ ಕಡೆಗಳಲ್ಲಿ ಮಾಡುತ್ತಿದ್ದಾರೆ. ಇಳಕಲ್ ಪಟ್ಟಣದಲ್ಲಿ ಕಾಲೇಜೊಂದರ ಪ್ರಿನ್ಸಿಪಾಲರು ಎಲ್ಲಾ ವಿದ್ಯಾರ್ಥಿಗಳು ದ ಕೇರಳ ಸ್ಟೋರಿ ನೋಡಬೇಕು ಎಂದು ಸುತ್ತೋಲೆ ಹೊರಡಿಸಿರುವ ಸಂಗತಿ ಬೆಳಕಿಗೆ ಬಂದು ವ್ಯಾಪಕ ಖಂಡನೆಗೆ ಒಳಗಾಗಿದೆ. ಇದರ ಬೆನ್ನಲ್ಲೇ ಉಡುಪಿಯಲ್ಲಿ ಭಜನಾ ಮಂದಿರಗಳಿಗೆ ಬರುವ ಮಹಿಳೆಯರನ್ನು ಭಜರಂಗದಳದವರು ಹತ್ತಿರದ ಚಿತ್ರಮಂದಿರಗಳಿಗೆ ಕರೆದುಕೊಂಡು ಹೋಗಿ ಉಚಿತವಾಗಿ ತೋರಿಸುತ್ತಿರುವ ಸಂಗತಿ ತಿಳಿದು ಬಂದಿದೆ.
ದ ಕೇರಳ ಸ್ಟೋರಿ ಸಿನಿಮಾವು ಸತ್ಯ ಘಟನೆಗಳ ಆಧಾರಿತ ಸಿನಿಮಾ ಎಂದು ಮೊದಲಿಗೆ ಅದರ ನಿರ್ದೇಶಕ ಸುದಿಪ್ತೊ ಸೇನ್ ಹೇಳಿಕೊಂಡಿದ್ದರು. ಆದರೆ ಈ ವಿಚಾರ ನ್ಯಾಯಾಲಯದ ಮೆಟ್ಟಿಲೇರಿ ಅಲ್ಲಿ ಈ ಸಿನಿಮಾದಲ್ಲಿ ಹೇಳಿರುವ ಸಂಗತಿಗಳು ಸತ್ಯ ಎಂದು ಹೇಳಲು ಯಾವುದೇ ಪುರಾವೆ ತೋರಿಸಲು ವಿಫಲರಾದರು. ಈ ಕಾರಣದಿಂದ ನ್ಯಾಯಾಲವೇ ಇದು ಕಾಲ್ಪನಿಕ ಸಿನಿಮಾ ಎಂದು ಚಿತ್ರದಲ್ಲಿ ಮೊದಲಿಗೆ ತೋರಿಸಬೇಕು ಎಂದು ತಾಕೀತು ಮಾಡಿದೆ. ಈ ಸಿನಿಮಾದ ಕೊನೆಯಲ್ಲಿ ISIS ಜಾಲದೊಳಕ್ಕೆ ಹೋಗಿ ಬಂದ ಮಹಿಳೆಯರನ್ನು ತೋರಿಸುತ್ತಾರೆ. ಅದನ್ನು ನೋಡಿದಾಗ ಇದು ನಿಜ ಸಂಗತಿ ಆಧರಿಸಿದ ಸಿನಿಮಾ ಎನಿಸಿಬಿಡುತ್ತದೆ. ಆದರೆ ಮರೆಮಾಚಲಾಗಿರುವ ಸಂಗತಿ ಏನೆಂದರೆ ಆ ಮಹಿಳೆಯರು ISIS ಗೆ ಸೇರಿಕೊಂಡಿದ್ದರೂ ಅವರು ಸಿನಿಮಾದಲ್ಲಿ ತೋರಿಸುವಂತೆ ಲವ್ ಜಿಹಾದ್ ಮೂಲಕ ಹೋದವರಲ್ಲ. ಒಂದೇ ಕುಟುಂಬದ ಇಬ್ಬರು ಮಹಿಳೆಯರು ಅವರ ಗಂಡಂದಿರೊಂದಿಗೆ ಹೋಗಿದ್ದವರೇ ಹೊರತು ಯಾರೋ ಮೋಸ ಮಾಡಿ ಕರೆದುಕೊಂಡು ಹೋದವರಲ್ಲ.
ದ ಕೇರಳ ಸ್ಟೋರಿ ಸಿನಿಮಾದ ಕತೆ ಏನು?
ಬಂಗಾಳಿ ನಿರ್ದೇಶಕ ಸುದಿಪ್ತೊ ಸೇನ್ ನಿರ್ದೇಶನದ ದ ಕೇರಳ ಸ್ಟೋರಿ ಸಿನಿಮಾಲ್ಲಿ ಕೇರಳ ರಾಜ್ಯದ ಕಾಸರಗೋಡಿನ ಕಾಲೇಜೊಂದರಲ್ಲಿ ನರ್ಸಿಂಗ್ ಓದುತ್ತಿರುವ ಶಾಲಿನಿ ಉನ್ನಿಕೃಷ್ಣನ್ ಎಂಬ ಹುಡುಗಿ ಇಸ್ಲಾಂಗೆ ಮತಾಂತರಗೊಂಡು ಸಿರಿಯಾದ ಭಯೋತ್ಪಾದಕ ಸಂಘಟನೆಯಾದ ISIS ಸೇರಲು ದೇಶದಿಂದ ಪರಾರಿಯಾಗುತ್ತಾಳೆ. ಆಕೆಯನ್ನು ಕೇರಳದ ಒಂದು ಭಯೋತ್ಪಾದಕರ ಜಾಲವು ಬಲೆಗೆ ಬೀಳಿಸಿಕೊಂಡು ಮುಸ್ಲಿಂ ಯುವಕನೊಬ್ಬ ಪ್ರೀತಿಸುವ ನಾಟಕ ಮಾಡಿ, ಆಕೆ ಗರ್ಭ ಧರಿಸಿದ ನಂತರ ಮೋಸ ಮಾಡುತ್ತಾನೆ. ವಿಧಿಯಿಲ್ಲದ ಆಕೆ ಬೇರೊಬ್ಬನನ್ನು ಮದುವೆಯಾಗಿ ಅವಳಿಗೆ ಗೊತ್ತಿಲ್ಲದೇ ಹೋಗಿ ISIS ಉಗ್ರರ ಲೈಂಗಿಕ ದಾಸಿಯಾಗಿಬಿಡುತ್ತಾಳೆ. ನಂತರ ಅಲ್ಲಿನ ಬರ್ಬರತೆಯನ್ನು ನೋಡಿ ತಡೆಯದೇ ಅಲ್ಲಿಂದ ತಪ್ಪಿಸಿಕೊಂಡು ಬರುತ್ತಾಳೆ. ಆಕೆಯನ್ನು ವಿಚಾರಣೆ ನಡೆಸುವ ದೃಶ್ಯದೊಂದಿಗೆ ಫ್ಲಾಶ್ಬ್ಯಾಕ್ ನಲ್ಲಿ ಕತೆಯನ್ನು ಹೇಳುತ್ತಾ ಹೋಗುತ್ತಾಳೆ. ಇದು ಸಿನಿಮಾದ ಕತೆ. ಈ ಸಿನಿಮಾದಲ್ಲಿ ಒಂದು ಕಡೆ ಶಾಲಿನಿ ಉನ್ನಿಕೃಷ್ಣನ್ ರೀತಿಯಲ್ಲಿ 32,000 ಹಿಂದೂ ಮಹಿಳೆಯರನ್ನು ಮತಾಂತರಗೊಳಿಸಿ ಹೀಗೆ ISISನಲ್ಲಿ ಲೈಂಗಿಕ ದಾಸಿಯರಾಗಿ ಕಳಿಸಲಾಗಿದೆ ಎಂದೂ ತೋರಿಸಲಾಗುತ್ತದೆ.
ಈ ಸಿನಿಮಾ ನೋಡಿದಾಗ ಇದರ ವಾಸ್ತವಗಳನ್ನು ತಿಳಿಯದ ಸಾಮಾನ್ಯ ಜನರಲ್ಲಿ ಒಂದು ಬಗೆಯ ಭಯ ಉಂಟಾಗುತ್ತದೆ, ಮುಸ್ಲಿಮರ ಕುರಿತು ಆಕ್ರೋಶ ಉಂಟಾಗುತ್ತದೆ. ISISಗೆ ಕಳಿಸಲಿಕ್ಕಾಗಿಯೇ ಮುಸ್ಲಿಂ ಯುವಕರು ಪ್ರೀತಿಸುವ ನಾಟಕವಾಡುತ್ತಾರೆ, ನಂತರ ಮತಾಂತರಗೊಳಿಸುತ್ತಾರೆ ಎಂದು ಬಿಂಬಿಸಲಾಗಿದೆ.
ಹಾಗಾದರೆ ನಿಜಾಂಶಗಳೇನು?
ಈ ಸಿನಿಮಾದಲ್ಲಿ ತೋರಿಸಿರುವಂತೆ ಕೇರಳದಲ್ಲಿ 32,000 ಮಹಿಳೆಯರ ಮತಾಂತರ ಆಗಿರುವುದಾಗಲೀ, ಅವರಲ್ಲಿ 15,000 ಮಹಿಳೆಯರು ಮಂಗಳೂರಿನವರು ಎಂಬುದಾಗಲೀ, ಅವರೆಲ್ಲಾ ISIS ಸೇರಿದ್ದಾರೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ. ಈ ಅವಾಸ್ತವಿಕ ಅಂಶಗಳನ್ನು ನಿಜವೆಂಬಂತೆ ತೋರಿಸಲು ಈ ಸಿನಿಮಾ ನಿರ್ದೇಶಕ ಒಂದು ಸಂದರ್ಶನದಲ್ಲಿ, “ಕೇರಳದ ಮಾಜಿ ಮುಖ್ಯಮಂತ್ರಿಗಳಾಗಿದ್ದ ವಿ.ಅಚ್ಯುತಾನಂದನ್ 2005 ರಲ್ಲಿ ದೆಹಲಿಗೆ ಬಂದಿದ್ದಾಗ ಒಂದು ಹೇಳಿಕೆ ನೀಡಿದ್ದರು. ಕೇರಳದಲ್ಲಿ ಬಲವಂತದಿಂದ ಮತಾಂತರಗೊಳಿಸಿ ISIS ಸಂಘಟನೆಗೆ ಸೇರಿಸಲಾಗುತ್ತಿದೆ ಎಂದಿದ್ದರು” ಎಂದು ಹೇಳಿದ್ದರು. ಹಾಗೆಯೇ ಅವರು ಅದೇ ಸಂದರ್ಶನದಲ್ಲಿ, ಕೇರಳದ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಓಮನ್ ಚಾಂಡಿಯವರು ಶಾಸನ ಸಭೆಯಲ್ಲಿ ಮಾಹಿತಿ ನೀಡಿದ್ದರು, ಇನ್ನು 20 ವರ್ಷದಲ್ಲೇ ಕೇರಳ ಇಸ್ಲಾಮಿಕ್ ಸ್ಟೇಟ್ ಆಗುತ್ತದೆ ಎಂದು ಹೇಳಿದ್ದ ಕುರಿತು ಪತ್ರಿಕೆಯಲ್ಲಿ ಉಲ್ಲೇಖವಿದೆ” ಎಂದೂ ಹೇಳಿದ್ದಾರೆ. ಈ ದ ಕೇರಳ ಸ್ಟೋರಿಯ ನಿರ್ದೇಶಕ ಸುದಿಪ್ತೊ ಸೇನ್ ಉಲ್ಲೇಖಿಸಿರುವ ಎರಡೂ ಹೇಳಿಕೆಗಳು ದುರುದ್ದೇಶದಿಂದ ತಿರುಚಲಾದವು ಮತ್ತು ಹಸಿಹಸಿ ಸುಳ್ಳುಗಳು. ಮೊದಲ ಹೇಳಿಕೆಗೆ ಬರುವುದಾದರೆ, 2005ರಲ್ಲಿ ISIS ಎಂಬ ಸಂಘಟನೆಯೇ ಅಸ್ತಿತ್ವದಲ್ಲಿ ಇರಲಿಲ್ಲ. ಅದರ ಬಗ್ಗೆ ಲೋಕಕ್ಕೆ ತಿಳಿದು ಬಂದಿದ್ದೇ 2014 ರ ಮಾರ್ಚ್ ತಿಂಗಳಲ್ಲಿ ISIS ಇರಾಕಿನ ಮೋಸುಲ್ ನಗರವನ್ನು ಆಕ್ರಮಿಸಿಕೊಂಡಾಗ. ಸುದಿಪ್ತೊ ಸೇನ್ 2010ರಲ್ಲಿ ದೆಹಲಿಗೆ ಹೋಗಿದ್ದಾಗ ಆಡಿದ್ದ ಒಂದು ಮಾತನ್ನು ಸುದಿಪ್ತೊ ಸೇನ್ ತಂಡ ತಿರುಚಿ ʼದ ಕೇರಳ ಸ್ಟೋರಿʼಯ ಟೀಸರ್ ನಲ್ಲಿ ಹಾಕಿಕೊಂಡಿತ್ತು. ಈ ಟೀಸರ್ನಲ್ಲಿ ಅಚ್ಯುತಾನಂದನ್ ಅವರು ಮಲಯಾಳದಲ್ಲಿ ಆಡಿದ್ದ ಮಾತಿಗೆ ಈ ಸಿನಿಮಾ ತಂಡ ಈ ರೀತಿ ಸಬ್ ಟೈಟಲ್ ಕೊಟ್ಟಿತ್ತು- “ಪಾಲ್ಯುಲರ್ ಫ್ರಂಟ್ ನಿಷೇದಿತ ಎನ್ ಡಿ ಎಫ್ ರೀತಿಯಲ್ಲಿಯೇ ಕೇರಳವನ್ನು ಒಂದು ಮುಸ್ಲಿಂ ರಾಜ್ಯವನ್ನಾಗಿ ಮಾಡಲು ಯತ್ನಿಸುತ್ತಿದೆ”. ಎಂದಿದೆ. ಆದರೆ ವಾಸ್ತವದಲ್ಲಿ ಅಚ್ಯುತಾನಂದನ್ ಅವರು ಮಲಯಾಳಂನಲ್ಲಿ ಹೀಗೆ ಹೇಳಿರಲೇ ಇಲ್ಲ. ಅವರು 2010ರ ಜುಲೈ 24ರಂದು ನಿಜಕ್ಕೂ ಹೇಳಿದ್ದ ವಾಕ್ಯವೇನಾಗಿತ್ತೆಂದರೆ, “ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ರಾಷ್ಟ್ರವಾದಿಗಳು, ದೇಶಪ್ರೇಮಿಗಳು ಎಲ್ಲರೂ ಒಂದೇ ರೀತಿಯಲ್ಲಿ ಸಂಭ್ರಮಾಚರಿಸುತ್ತಾರೆ. ಯುವಜನರು ಪ್ರಭಾವಿತರಾಗುತ್ತಾರೆ, ಕೆಲವೊಮ್ಮೆ ಆಮಿಷಗಳಿಗೆ ಒಳಗಾಗುತ್ತಾರೆ”. ಇದರಲ್ಲಿ ಪಾಪ್ಯುಲರ್ ಫ್ರಂಟ್ ಬಗ್ಗೆಯಾಗಲೀ, ಮುಸ್ಲಿಂ ಸ್ಟೇಟ್ ಉಲ್ಲೇಖವಾಗಲೀ ಇರಲೇ ಇಲ್ಲ. ಅದು ದಿ ಕೇರಳ ಸ್ಟೋರಿ ನಿರ್ದೇಶಕನ ಕಟ್ಟುಕತೆಯಷ್ಟೇ. ಇದೇ ರೀತಿಯಲ್ಲಿ ಓಮನ್ ಚಾಂಡಿಯವರು 2012ರಲ್ಲಿ ಶಾಶನ ಸಭೆಯಲ್ಲಿ ಸಹ ಇಸ್ಲಾಮಿಕ್ ಸ್ಟೇಟ್ ಪ್ರಸ್ತಾಪ ಮಾಡಿರಲೇ ಇಲ್ಲ.
ಒಂದು ಸಿನಿಮಾವನ್ನು ಜನರಿಗೆ ನಂಬಿಸಲು ಆ ಸುಳ್ಳುಗಳನ್ನು ಕೇರಳದ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಬಾಯಿಂದ ಹೇಳಿಸುವ ಅಗತ್ಯವೇನಿತ್ತು?
ಹಾಗಾದರೆ ಕೇರಳದಿಂದ ISISಗೆ ಮಹಿಳೆಯರು ಹೋಗಿರಲಿಲ್ಲವೇ? ಖಂಡಿತಾ ಹೋಗಿದ್ದರು. 2016ರಿಂದ 2018ರ ನಡುವೆ ಕೇರಳದಿಂದ ಅಫಘಾನಿಸ್ತಾನ ಮಾರ್ಗದಲ್ಲಿ ಸಿರಿಯಾಕ್ಕೆ ಹೋಗಿ ISIS ಸೇರಿದವರಲ್ಲಿ ನಿಮಿಷಾ ಆಲಿಯಾಸ್ ಫಾತಿಮಾ, ಸೋನಿಯಾ ಸೆಬಾಸ್ಟಿಯನ್, ಮರಿಯಮ್ ಜಾಕೋಬ್ ಎಂಬುವವರು ಹೋಗಿದ್ದರು. ಇವರಲ್ಲದೇ ರಫೇಲಾ, ಸಂಶಿಯಾ ಎಂಬುವವರೂ ಇದ್ದರು. ಇವರೆಲ್ಲರೂ 2019ರಲ್ಲಿ ಶರಣಾಗತರಾಗಿದ್ದಾರೆ. ದ ಕೇರಳ ಸ್ಟೋರಿ ಸಿನಿಮಾದಲ್ಲಿ ಹೇಳಿದಂತೆ ಇವರು ಲವ್ ಜಿಹಾದ್ ಮೂಲಕ ಅಲ್ಲಿಗೆ ಹೋದವರಲ್ಲ. ಇವರಲ್ಲಿ ಫಾತಿಮಾ ನಿಮಿಷಾ ಎಂಬಾಕೆಯ ಗಂಡ ಬೆಕ್ಸನ್ ವಿನ್ಸೆಂಟ್ ಎಂಬಾತ ಮೂಲತಃ ಕ್ರೈಸ್ತ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡಿದ್ದವನು. ಅವನ ಜೊತೆಯಲ್ಲೇ ಫಾತಿಮಾ ಸಿರಿಯಾಗೆ ಹೋಗಿದ್ದಳು. ಈ ಬೆಕ್ಸನ್ ವಿನ್ಸೆಂಟ್ನ ಸೋದರ ಬೆಟ್ಸನ್ ಮತ್ತವನ ಪತ್ನಿ ಮರಿಯಂ ಕೂಡಾ ಇವರೊಂದಿಗೆ ಹೋಗಿ ISIS ಸೇರಿಕೊಂಡಿದ್ದರು.
ಸಿನಿಮಾದಲ್ಲಿ ತೋರಿಸಿರುವಂತೆ ಯಾರನ್ನೂ ಪ್ರೆಗ್ನೆಂಟ್ ಮಾಡಿಸಿ ಕರೆದುಕೊಂಡು ಹೋಗಿರಲಿಲ್ಲ. ಆದರೆ ಇವರೆಲ್ಲರೂ ISISಗಾಗಿ ತಾವು ಕೆಲಸ ಮಾಡಬೇಕು, ಜೀವ ಹೋದರೂ ಹೋಗಲಿ ಎಂದು ಹೋದವರಾಗಿದ್ದರು. ಅಂದರೆ ಹೇಗೆ ದುರ್ಗಾವಾಹಿನಿಯಂತಹ ಸಂಘಪರಿವಾರದ ಉಗ್ರ ಸಂಘಟನೆಗಳಿಗೆ ಹಿಂದೂ ಮಹಿಳೆಯರು ಬ್ರೈನ್ ವಾಶ್ ಆಗಿ ಹೋಗುತ್ತಾರೋ ಹಾಗೆ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಸಿದ್ಧಾಂತಕ್ಕೆ ಮರುಳಾಗಿ ಹೋಗಿದ್ದವರು. ಇವರು ಸಿರಿಯಾ ಹೋದ ನಂತರದಲ್ಲಿ ಬೆಕ್ಸನ್ ಮತ್ತು ಬೆಟ್ಸನ್ ಇಬ್ಬರೂ ಸೇನಾ ಪಡೆಗಳಿಂದ ಹತರಾಗುತ್ತಾರೆ. 2018-19ರ ಸುಮಾರಿಗೆ ISIS ಎಲ್ಲಾ ಕಡೆ ನೆಲೆ ಕಳೆದುಕೊಂಡಿತ್ತು. ಅದರ ಬಹುತೇಕ ಪಡೆಗಳು ನಾಶವಾಗಿದ್ದವು. ISIS ಉಗ್ರರಿಗೆ ಕೊನೆಯ ಸರಿಯಾದ ಹೊಡೆತ ನೀಡಿದವರು ಇರಾಕ್, ಸಿರಿಯಾಗಡಿಗಳಲ್ಲಿ ಇರುವ YPG ಎಂಬ ಹೆಸರಿನ ಕುರ್ದಿಶ್ ಮುಸ್ಲಿಂ ಮಹಿಳೆಯರೇ. ISIS ಬಲ ಕಳೆದುಕೊಳ್ಳುತ್ತಿದ್ದಂತೆ ಅದರಲ್ಲಿ ತಮ್ಮ ಗಂಡಂದಿರೊಂದಿಗೆ ಹೋಗಿದ್ದ ಫಾತಿಮಾ ನಿಮಿಷಾ. ಮರಿಯಂ ತರದವರು ಶರಣಾಗತಿಯಾದರು. ಇಂದಿಗೂ ಅವರು ಭಾರತಕ್ಕೆ ವಾಪಾಸು ಬರುವ ಕಾತರದಲ್ಲಿದ್ದಾರೆ. ಆದರೆ ಅವರಿನ್ನೂ ವಿಚಾರಣಾದೀನ ಕೈದಿಗಳೇ ಆಗಿದ್ದಾರೆ. ಇದು ವಾಸ್ತವ ಸಂಗತಿ. ಈ ಮಹಿಳೆಯರನ್ನು ವಿಚಾರಣೆ ಮಾಡಿದಾಗ ಅವರುಗಳು ಆಡಿದ ಮಾತುಗಳನ್ನು ನೀವು ಕೇಳಬಹುದು. ಅವರಿಗೆ ISIS ಕುರಿತು ಯಾವುದೇ ಕೆಟ್ಟ ಭಾವನೆ ಈಗಲೂ ಇಲ್ಲ. ʼನಾವು ಅಂದುಕೊಂಡಂತೆ ಆಗಲಿಲ್ಲ. ಈಗ ಅದರಿಂದ ಹೊರಗೆ ಬಂದಿದ್ದೇವೆ. ಅದೆಲ್ಲಾ ಬಿಟ್ಟು ಬದುಕುತ್ತೇವೆ. ಅಲ್ಲಿ ನಮ್ಮನ್ನು ಚೆನ್ನಾಗಿಯೇ ನೋಡಿಕೊಂಡಿದ್ದರು. ಬರುವಾಗ ಕೈಗೆ ಹಣವನ್ನೂ ಕೊಟ್ಟಿದ್ದರುʼ ಎಂದು ಅವರು ಹೇಳುತ್ತಾರೆ. ಈ ಮಾತುಗಳನ್ನು ಯೂಟ್ಯೂಬ್ ವಿಡಿಯೋಗಳಲ್ಲಿ ನೀವೂ ಕೇಳಿಸಿಕೊಳ್ಳಬಹುದು. ಕೇರಳ ಸ್ಟೋರಿಯಲ್ಲಿ ಹೇಳಿದಂತೆ ಇವರನ್ನೆಲ್ಲಾ ಲೈಂಗಿಕ ದಾಸಿಯರಾಗಿ ಬಳಸಿಕೊಂಡಿದ್ದರು ಎನ್ನಲು ಯಾವುದೇ ಆಧಾರಗಳಿಲ್ಲ.
ಪ್ರಪಂಚದಾದ್ಯಂತ ಸುಮಾರು 110 ದೇಶಗಳಿಂದ ಸುಮಾರು 40,000 ಜನರು ISISಗಾಗಿ ಕೆಲಸ ಮಾಡಲು ಸಿರಿಯಾಕ್ಕೆ ಹೋಗಿದ್ದ ಕುರಿತು ಅಂತರರಾಷ್ಟ್ರೀಯ ದಾಖಲೆಗಳಿವೆ. ಅಮೆರಿಕ, ಯೂರೋಪ್, ಆಸ್ಟ್ರೇಲಿಯಾಗಳಿಂದ ಸಾವಿರಾರು ಜನರು ಹೋಗಿದ್ದಾರೆ. ಹಾಗೆ ನೋಡಿದರೆ ಭಾರತದಿಂದ ISIS ಸೇರಲು ಹೋದವರು ಸಂಖ್ಯೆ 150-200ಕ್ಕಿಂತ ಕಡಿಮೆ ಎಂದು ಭಾರತೀಯ ಹಾಗೂ ಅಂತರರಾಷ್ಟ್ರೀಯ ತನಿಖಾ ಸಂಸ್ಥೆಗಳು ನೀಡಿರುವ ಮಾಹಿತಿ. ಇವರಲ್ಲಿ 66ಜನರ ಕುರಿತು ಖಚಿತ ಮಾಹಿತಿ ನಮ್ಮ ತನಿಖಾ ಸಂಸ್ಥೆಗಳಿಗೆ ದೊರೆತಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ದಾಖಲೆ ಸಹ ಇದನ್ನೇ ಹೇಳುತ್ತದೆ. ಹೀಗಿರುವಾಗ ದ ಕೇರಳ ಸ್ಟೋರಿ ಹೇಳಿದ 32,000 ಅದರಲ್ಲೂ ಮಂಗಳೂರಿನಿಂದಲೇ 15,000 ಮಹಿಳೆಯರು ISIS ಸೇರಿದ್ದಾರೆ ಎನ್ನುವ ಕತೆ ಎಷ್ಟು ಸುಳ್ಳಲ್ಲವೆ? ಹಾಗೆಲ್ಲಾದರೂ ಅಷ್ಟು ಸಂಖ್ಯೆಯಲ್ಲಿ ಹೋಗಿದ್ದೇ ನಿಜವಾಗಿದ್ದರೆ ನಮ್ಮ ದೇಶದ ಭದ್ರತಾ ವ್ಯವಸ್ಥೆ ಪ್ರಪಂಚದಲ್ಲೇ ಅತ್ಯಂತ ದುರ್ಬಲ ಎಂದು ನಾವೇ ಒಪ್ಪಿಕೊಂಡಂತೆ ಆಗುವುದಿಲ್ಲವೆ? ಈಗ ದ ಕೇರಳ ಸ್ಟೋರಿ ಸಿನಿಮಾ ಇಂತಹ ಸುಳ್ಳುಗಳಿಂದ ಭಾರತದ ಮರ್ಯಾದೆ ತೆಗೆದಂತಾಗಿಲ್ಲವೇ?
ಈ ವಿಡಿಯೋ ನೋಡಿ: ಕೇರಳ ಸ್ಟೋರಿ: ಇದೊಂದು ಸುಳ್ಳಿನ ಕಂತೆ
ಯಾಕೆ ಈ ಸುಳ್ಳುಗಳು?
ದ ಕೇರಳ ಸ್ಟೋರಿ ಸಿನಿಮಾದಲ್ಲಿ ಸುಳ್ಳು ಹೇಳಿರುವುದಕ್ಕೆ ಕಾರಣವೇನಿರಬಹುದು? ಬಹಳ ಮುಖ್ಯವಾಗಿ ದೇವರ ನಾಡು ಎಂದು ಪ್ರಸಿದ್ಧವಾದ ಕೇರಳ ರಾಜ್ಯದ ಕುರಿತು ಕೆಟ್ಟ ಭಾವನೆಯನ್ನು ಬರಿಸುವುದು ಈ ಸಿನಿಮಾದ ಒಂದು ಉದ್ದೇಶ. ಕೇರಳದಲ್ಲಿ ಕಮ್ಯುನಿಷ್ಟ್ ಮತ್ತು ಕಾಂಗ್ರೆಸ್ ಸರ್ಕಾರಗಳೇ ಆಳ್ವಿಕೆ ನಡೆಸುತ್ತಿರುವುದರಿಂದ ಆ ರಾಜ್ಯವನ್ನು ISIS ಜಾಲವಿರುವ ರಾಜ್ಯ ಎಂದು ಬಿಂಬಿಸಿದರೆ ಕಮ್ಯುನಿಷ್ಟ್ ಮತ್ತು ಕಾಂಗ್ರೆಸ್ ಸಹ ISIS ಬೆಂಬಲಿಗರು ಎಂದು ತಿಳಿಯುವಂತಾಗುತ್ತದೆ. ಎರಡನೆಯದಾಗಿ ಈ ಸಿನಿಮಾದ ಮೂಲಕ ಹಿಂದೂ ಹೆಣ್ಣುಮಕ್ಕಳಲ್ಲಿ ಮುಸ್ಲಿಂ ಮಹಿಳೆಯರು ಎಷ್ಟು ಕೆಟ್ಟವರು, ಧರ್ಮಕ್ಕಾಗಿ ಹಿಂದೂಗಳನ್ನು ಮತಾಂತರ ಮಾಡುವ ಉದ್ದೇಶ ಇಟ್ಟುಕೊಂಡಿರುವವರು ಎಂದು ತೋರಿಸುವುದು. ಇದರಿಂದ ಯಾವುದೇ ಬುರ್ಖಾ ತೊಟ್ಟ ಮುಸ್ಲಿಂ ಮಹಿಳೆಯನ್ನು ನೋಡಿದರೂ ಅನುಮಾನ ಕಾಡುವಂತೆ ಮಾಡುವುದು. ಇನ್ನು ಈ ಸಿನಿಮಾದಲ್ಲಿ ತೋರಿಸುವ ಹಸಿಹಸಿ ಸೆಕ್ಸ್ ದೃಶ್ಯಗಳು ಹಿಂದೂ ಪುರುಷರಲ್ಲಿ ಆಕ್ರೋಶ ತರಲಿ ಎಂಬ ಉದ್ದೇಶವಿದೆ. ಹೀಗೆ ಒಂದು ಧರ್ಮದವರಲ್ಲಿ ಮತ್ತೊಂದು ಧರ್ಮದ ಕುರಿತು ಪೂರ್ವಾಗ್ರಹಳನ್ನು ಹುಟ್ಟುಹಾಕುವ, ದ್ವೇಷ ಹುಟ್ಟುಹಾಕುವ ಏಕೈಕ ಉದ್ದೇಶದಿಂದ ಈ ದ ಕೇರಳ ಸ್ಟೋರಿ ಸಿನಿಮಾ ಮಾಡಲಾಗಿದೆ ಎಂದು ಯಾರಾದರೂ ಹೇಳಬಹುದು.
ಭಾರತ ದೇಶದ ಮುಸ್ಲಿಮರ ಪರಂಪರೆ ಭಯೋತ್ಪಾದನಾ ಸಂಸ್ಥೆಗಳಿಗೆ ಬೆಂಬಲ ನೀಡಿದ ಪರಂಪರೆಯಲ್ಲ. ಎಲ್ಲೋ ಕೆಲವರು ಮೂಲಭೂತವಾಗಿ, ಭಯೋತ್ಪಾದಕ ಚಟುವಟಿಕೆಗೆ ಕುಮ್ಮಕ್ಕು ಕೊಡುವವರು ಇದ್ದ ಮಾತ್ರಕ್ಕೆ ಮುಸ್ಲಿಂ ಸಮುದಾಯವೇ ಹೀಗೆ ಎಂದು ಬಿಂಬಿಸುವುದು ದೇಶದ್ರೋಹದ ಕೆಲಸ. ಯಾಕೆಂದರೆ ISIS ತನ್ನ ಕ್ರೌರ್ಯ ಪ್ರದರ್ಶಿಸುತ್ತಿದ್ದಂತೆ ಅದಕ್ಕೆ ಭಾರತದ 1000 ಮುಸ್ಲಿಂ ಮೌಲ್ವಿಗಳು, ಮಸೀದಿಗಳು ಮತ್ತು ಮುಸ್ಲಿಂ ಧಾರ್ಮಿಕ ಪಂಡಿತರು ಒಟ್ಟಾಗಿ ಅದರ ವಿರುದ್ಧ ಫತ್ವಾ ಹೊರಡಿಸಿದ್ದರು. ISIS ಒಂದು ಇಸ್ಲಾಂ ಧರ್ಮ ಪಾಲಿಸುವ ಸಂಗಟನೆಯಲ್ಲ, ಇದರ ತತ್ವ ಮತ್ತು ಹಿಂಸೆಯ ಮಾರ್ಗವನ್ನು ಇಸ್ಲಾಂ ಒಪ್ಪುವುದಿಲ್ಲ, ಎಲ್ಲಾ ಭಾರತೀಯ ಮುಸ್ಲಿಮರೂ ಇದನ್ನು ತಿರಸ್ಕರಿಸಿಬೇಕು ಎಂದು ಬಹಿರಂಗ ಫತ್ವಾ ಹೊರಡಿಸಿದ್ದರು. ಇದನ್ನು ಅಮೆರಿಕವೂ ಸ್ವಾಗತಿಸಿತ್ತು. ಜೊತೆಗೆ ನೂರಾರು ಮುಸ್ಲಿಂ ಚಿಂತಕರು, ಬುದ್ದಿಜೀವಿಗಳು ಸಹ ISISನ್ನು ಧಿಕ್ಕರಿಸಿದ್ದರು.
ಮತಾಂದ ಸಂಘಟನೆಗಳಿಗೆ ಹಿಂದೂ-ಮುಸ್ಲಿಮರು ಸಹಬಾಳ್ವೆಯಿಂದ ಬದುಕುವುದು ಬೇಕಾಗಿಲ್ಲ. ಜನರು ಸದಾ ದ್ವೇಷದಿಂದ, ಭಯ ಆತಂಕಗಳಿಂದ ಬದುಕಿರಷ್ಟೇ ಅವರ ಬೇಳೆಕಾಳು ಬೇಯುವುದು.
ಸಮಾಜದಲ್ಲಿ ಆತಂಕ, ಭಯ, ಅಸ್ಥಿರತೆಯ ಭಾವನೆ ಹೆಚ್ಚಾದಷ್ಟೂ ಮತಾಂಧ ಸಂಘಟನೆಗಳು ಚಿಗಿತುಕೊಳ್ಳಲು ಅನುಕೂಲವಾಗುತ್ತದೆ. ಜನರಲ್ಲಿ ಉಂಟಾಗುವ ಭಯದ ಲಾಭ ಪಡೆದು ಮತ್ತೊಂದು ಧರ್ಮದವರ ಮೇಲೆ ಯಾವುದೇ ಹಲ್ಲೆ, ದೌರ್ಜನ್ಯ ನಡೆಸಿದರೂ ಅದಕ್ಕೆ ಸಮ್ಮತಿ ಪಡೆದುಕೊಳ್ಳಲಾಗುತ್ತದೆ. ಜರ್ಮನಿಯಲ್ಲಿ ಹಿಟ್ಲರ್ ಇದೇ ರೀತಿಯಲ್ಲಿ ಯಹೂದಿ ಗುಮ್ಮವನ್ನು ಸೃಷ್ಟಿಸಿ ಬಹುಸಂಖ್ಯಾತ ಜರ್ಮನ್ನರು ಹಿಂಸೆಗೆ ಸಮ್ಮತಿ ನೀಡುವುದು ಮಾತ್ರವಲ್ಲದೇ ಹಿಂಸೆಯಲ್ಲಿ ತಾವೇ ತೊಡಗಿಕೊಳ್ಳಲು ಪ್ರೇರೇಪಿಸಲಾಗಿತ್ತು. ಇದಕ್ಕಾಗಿ ಹಿಟ್ಲರ್ ಕೂಡಾ ಅನೇಕ ಸಿನಿಮಾಗಳನ್ನು ಬಳಸಿಕೊಂಡಿದ್ದ. ಮೊನ್ನೆ ಬಳ್ಳಾರಿಯಲ್ಲಿ ಚುನಾವಣಾ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹ ದ ಕೇರಳ ಸ್ಟೋರಿ ಸಿನಿಮಾ ಸತ್ಯ ಹೇಳುವ ಸಿನಿಮಾ ಎಂದು ಈ ಸಿನಿಮಾಕ್ಕೆ ಪ್ರಚಾರ ನೀಡಿದ್ದನ್ನು ನೋಡಬಹುದು.
ಭಾರತವನ್ನು ಮತ್ತೊಂದು ಹಿಟ್ಲರನ ಜರ್ಮನಿಯಾಗಿಸಲು ಇವೆಲ್ಲವೂ ತಯಾರಿಗಳು. ಬಲಿಪಶುಗಳಾಗುವವರು ಮುಗ್ದ ಹಿಂದೂಗಳು ಮತ್ತು ನಿರಪರಾಧಿ ಮುಸ್ಲಿಮರು.