ವಿಶೇಷ ತನಿಖಾ ತಂಡ (ಎಸ್ಐಟಿ) ಪೆನ್ಡ್ರೈವ್ನಲ್ಲಿ ಪ್ರಜ್ವಲ್ ರೇವಣ್ಣನ ಅಶ್ಲೀಲ ವೀಡಿಯೊಗಳನ್ನು ಹೊಂದಿರುವ ಕುರಿತು ತನಿಖೆಯನ್ನು ತೀವ್ರಗೊಳಿಸಿದೆ.
ಸಂಸ್ಥೆಯು ಹಾಸನದಲ್ಲಿ ಇಬ್ಬರನ್ನು ಭಾನುವಾರ ಬಂಧಿಸಿದೆ.
ಬಂಧಿತ ಆರೋಪಿಗಳ ಹೆಸರು ಚೇತನ್ ಮತ್ತು ಲಿಕಿತ್. ಹಾಸನ ನಗರದ ಎನ್ ಆರ್ ಸರ್ಕಲ್ ನಲ್ಲಿರುವ ಸೈಬರ್ ಎಕನಾಮಿಕ್ ಅಂಡ್ ನಾರ್ಕೋಟಿಕ್ಸ್ ಕ್ರೈಮ್ (ಸಿಇಎನ್) ಪೊಲೀಸ್ ಠಾಣೆಯಲ್ಲಿ ಎಸ್ ಐಟಿ ಅಧಿಕಾರಿಗಳು ಇಬ್ಬರನ್ನು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಚೇತನ್ ಮತ್ತು ಲಿಕಿತ್ ಇಬ್ಬರೂ ಬಿಜೆಪಿ ಕಾರ್ಯಕರ್ತರು ಎನ್ನಲಾಗಿದೆ.
ಹಾಸನ ತಾಲೂಕಿನ ಯಳಗುಂದ ಗ್ರಾಮದಲ್ಲಿರುವ ಆರೋಪಿ ಚೇತನ್ ನಿವಾಸದಲ್ಲಿ ಎಸ್ಐಟಿ ತಂಡ ಒಂದೂವರೆ ಗಂಟೆಗೂ ಹೆಚ್ಚು ಕಾಲ ಸ್ಥಳ ಮಹಜರ್ ನಡೆಸಿ ಹೇಳಿಕೆ ದಾಖಲಿಸಿಕೊಂಡಿದೆ. ಮತ್ತೊಬ್ಬ ಆರೋಪಿಯನ್ನು ಶ್ರವಣಬೆಳಗೊಳದಲ್ಲಿರುವ ಆತನ ಮನೆಗೆ ಕರೆದೊಯ್ದು ವಿಚಾರಣೆ ನಡೆಸಲಾಗಿದೆ.
ಪೆನ್ ಡ್ರೈವ್ ಅನ್ನು ಏಪ್ರಿಲ್ 21ರಂದು ಪ್ರಸಾರ ಮಾಡಲಾಗಿದೆ ಎನ್ನಲಾಗಿದ್ದು, ಜೆಡಿಎಸ್ ಚುನಾವಣಾ ಏಜೆಂಟ್ ಪೂರ್ಣಚಂದ್ರ ತೇಜಸ್ವಿ ಪ್ರಜ್ವಲ್ ರೇವಣ್ಣ ಅವರ ಮಾಜಿ ಕಾರು ಚಾಲಕ ಕಾರ್ತಿಕ್, ಪುಟ್ಟರಾಜು, ನವೀನ್ ಗೌಡ, ಚೇತನ್ ಮತ್ತು ಲಿಕಿತ್ ವಿರುದ್ಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು.
ಏತನ್ಮಧ್ಯೆ, ಲೈಂಗಿಕ ಕಿರುಕುಳ ಮತ್ತು ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿರುವ ವಕೀಲ ಮತ್ತು ಬಿಜೆಪಿ ಮುಖಂಡ ಜಿ ದೇವರಾಜೇಗೌಡ ಅವರನ್ನು ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ.
ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಲೈಗಿಂಕ ಕಿರುಕುಳ, ಬೆದರಿಕೆ ಆರೋಪದಡಿ ಶುಕ್ರವಾರ ರಾತ್ರಿ ಹಿರಿಯೂರು ಪೊಲೀಸರು ದೇವರಾಜೇಗೌಡನನ್ನು ವಶಕ್ಕೆ ಪಡೆದಿದ್ದು, ಶನಿವಾರದಂದು ಹೊಳೆನರಸೀಪುರ ಪೊಲೀಸರು ವಿಚಾರಣೆ ನಡೆಸಿ ಬಂಧಿಸಿದ್ದಾರೆ. ಅವರನ್ನು ಮೇ 24ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.