Home Uncategorized ಆದರೂ…ದೂರ ತಳ್ಳಬಾರದಿತ್ತು…

ಆದರೂ…ದೂರ ತಳ್ಳಬಾರದಿತ್ತು…

0

ಬಣ್ಣಗಳು ಮತ್ತು ಬದುಕು ಒಂದರೊಳಗೊಂದು ಬೆಸೆದುಕೊಂಡಿದೆ. ಬಣ್ಣಗಳು ಎಂದ ಕೂಡಲೇ ಸಂತಸದ ಕನಸುಗಳ ಭಾವಲೋಕ ತೆರೆದು ಕೊಳ್ಳುತ್ತದೆ. ಆದರೆ, ಭಾವನೆಗಳು ನಿರ್ದಿಷ್ಟ ಬಣ್ಣಗಳೊಂದಿಗೆ ಗುರುತಿಸಿಕೊಳ್ಳುವ ಈ ವಿಷಾದನೀಯ ದಿನಗಳಲ್ಲಿ ನಮ್ಮ ಭಾವನಾ ಜಗತ್ತಿನ ಒಳಗಣ್ಣನ್ನು ತೆರೆದು ನಮ್ಮ ಬದುಕಿನಲ್ಲಿ ಎಲ್ಲ ರೀತಿಯ ಬಣ್ಣಗಳಿಗೂ, ಆ ವರ್ಣಮಯ ಜನರಿಗೂ ಪ್ರವೇಶ ಕಲ್ಪಿಸಿ ʼದೂರ ತಳ್ಳಬಾರದಿತ್ತುʼ ಎಂದು ನೋಯುವವರಿಗೆ ಸಾಂತ್ವನದ ಬಣ್ಣ ನೀಡಬೇಕಿದೆ. ಸಿಹಾನ ಕಾಲಂ ʼಮೈಂಡ್‌ ಬ್ಲಾಕ್

ಇದು ಬಣ್ಣಗಳ ಲೋಕ. ಇಲ್ಲಿ ಮಾತಿಗೂ ಬಣ್ಣ ಹಚ್ಚುವರು. ನೋಟದಲ್ಲೂ ಬಣ್ಣ ಹುಡುಕುವರು. ಬಣ್ಣಗಳಿಂದಲೇ ಗದ್ದುಗೆಯನ್ನು ಹಿಡಿಯುವರು. ಇದೀಗ ಕಣ್ಣು, ಮೂಗು, ಬಾಯಿ, ಎದೆಗೂ ಬಣ್ಣ ಬಳಿದಾಯಿತು. ಒಡನಾಡಿಗಳ ನಡುವೆ ಬಣ್ಣದ ಆಟ ಆಡಿಯಾಯಿತು. ಇವರು ರಾಜಕೀಯ ಕಟ್ಟುವುದು ಸಹ ಬಣ್ಣಗಳಿಂದಲೇ.  ಪ್ರೀತಿಗೂ ಬಣ್ಣದ ಪ್ರವೇಶವಾಯಿತು. ಪ್ರೀತಿಯ ಹುಟ್ಟು ಹೃದಯದಿಂದ ಅಂತೆ. ಆ ಪ್ರೀತಿ ಅರಳುವುದು ಮೌನ ಮತ್ತು ಮಾತಿನೊಂದಿಗೆ ಅಂತೆ. ಅಲ್ಲೂ ಬಣ್ಣ ವಕ್ಕರಿಸಿದರೆ ಹೃದಯದಲ್ಲಿ ಅದುಮಿಟ್ಟ ಪ್ರೀತಿಯನ್ನು ಹೊರ ಹಾಕುವುದಾದರೂ ಹೇಗೆ ? ಹೆಣ್ಣು, ಗಂಡಿನ ಪ್ರೀತಿಯಲ್ಲಿ ಜಿಹಾದಿನ ಹುಡುಕಾಟ, ಕೇಸರಿಯ ಮೆರೆದಾಟ. ಕೇಸರಿ, ಬಿಳಿ, ಹಸಿರು, ನೀಲಿ, ಕೆಂಪು, ಹಳದಿ ಬಣ್ಣಗಳಿಗೆಲ್ಲ ಕೆಸರು ಮೆತ್ತಿ ಬರೀ ಆತಂಕ, ತಳ್ಳಂಕಗಳದೇ ಆಟ.

 ಹೂವಿನೊಳಗೆ ಸಿಗುವ ಮೂರು ಕೇಸರಿ ಎಸಳುಗಳು, ಕಾಡೊಳಗಿನ ರಾಜ ಕೇಸರಿ ಸಿಂಹ,  ಹಿತನೀಯುವ ಶಕ್ತಿ ತುಂಬುವ ಕೇಸರಿ ಜಾಫ್ರಾನ್, ಕಣ್ಣು ತಂಪಾಗಿಸುವ ಹಸಿರುಗಿಡ, ಹಣ್ಣುಕಾಯಿಗಳನ್ನು ಹೊದ್ದ ಹಸಿರುಪೊರೆ, ವಿಶಾಲವಾದ ನೀಲ ಕಡಲು -ನೀಲಾಕಾಶ, ಬಿಳಿಯ ಅಮೃತಧಾರೆ, ಹುಟ್ಟಿದ ಸೃಷ್ಟಿಗಳ ದೇಹದಲ್ಲಿ ಹರಿಯುವ ಕೆಂಪುರಕ್ತ ಇದೆಲ್ಲದರಲ್ಲಿರುವ ಬಣ್ಣಗಳಿಗೆ ತೋಚಿದ ರೀತಿಯಲ್ಲಿ ವಾಕ್ಯ ರಚಿಸಿದರು.  ದ್ವೇಷ ತುಂಬಿದರು. ಬೆಂಕಿ ಹಚ್ಚಿದರು. ಬಣ್ಣಕ್ಕೂ ರಾಜಕೀಯಕ್ಕೂ ಯಾವುದೋ ಸಂಬಂಧ ಇದೆಯೆಂದು ಗಳಿಗೆಗೊಮ್ಮೆ ಧರ್ಮದ ಕಥೆ ಕಟ್ಟುತ್ತಿರುವರು. ಬಣ್ಣದ ಹೆಸರಿನಿಂದ ನಖಶಿಖಾಂತ ದ್ವೇಷಿಸಲು ಹೊರಟವರ ಮುಂದೆ ಪ್ರೀತಿಯ ಮಾತು ಹರವಲು ಹೊರಟರೆ ಮರುದಿನ ಮತ್ತೊಂದು ಬೇಟೆಯತ್ತ ಮುಖ ಮಾಡುವರು.

 ಪ್ರೀತಿ ತೆಳುವಾಗುವುದು, ಗಾಢವಾಗುವುದು, ಮುಳುಗಿ ಹೋಗುವುದು, ಬ್ರೇಕ್ ಆಗುವುದು ಇದೆಲ್ಲವೂ ಇದ್ದದ್ದೇ ಬಿಡಿ. ಆದರೂ ಅದಕ್ಕೆ ಬಣ್ಣ ಹಚ್ಚಬಾರದಿತ್ತು. ಹಾಡಿನೊಳಗೆ, ಕುಣಿತದೊಳಗೆ, ಆಹಾರದೊಳಗೆ, ಉಡುಪಿನಲ್ಲಿ, ವ್ಯಾಪಾರದಲ್ಲಿ ಬಣ್ಣಗಳ ಹುಡುಕಾಟ ಶುರುವಾಗಿದೆ. ನಟಿಯೊಬ್ಬಳ ಕುಣಿತದಲ್ಲಿ ತೊಟ್ಟ ಬಟ್ಟೆಯ ಬಣ್ಣದಲ್ಲಿ ಧರ್ಮ ಹುಡುಕುವವರು ಪ್ರೇಮಿಗಳ ಮಧ್ಯೆ ಬಣ್ಣದೊಂದಿಗೆ ಧರ್ಮವನ್ನು ಎಳೆದು ತರದೇ ಇರುವರೇ ? ಇವರಿಗೆ ಆ ಬಣ್ಣ, ಅವರಿಗೆ ಈ ಬಣ್ಣ ಎನ್ನುತ್ತಾ ಬಣ್ಣಗಳೊಳಗೆ ಮನಸ್ಸುಗಳು ಅವಿತು ಹೋಗಿವೆ. ಈ ಹೊತ್ತಿಗಾಗಲೇ ವಿಚಿತ್ರ ವಾಸನೆ ಸುತ್ತ ಹರಡಿದೆ. ಅಸಹನೀಯ ಆರೋಪ, ಪ್ರತ್ಯಾರೋಪ, ಕಿರುಚಾಟ, ಕಿತ್ತಾಟ ತುಂಬಿದೆ. ಸಹಿಸಲಾಗದ ನಿಟ್ಟುಸಿರು. ಕೊನೆಗೆ ಪರಕೀಯತೆ, ಅನಾಥಭಾವ ಮನೆ ಮಾಡಿಯಾಯಿತು. ಪ್ರೀತಿಯೊಂದಿಗೆ ಉಸಿರಾಡಬೇಕೆನ್ನುವಾಗಲೇ ಉಸಿರುಗಟ್ಟಿಸುವ ಇವರಾಟಕ್ಕೆ ಬೀದಿಗಿಳಿಯುವಂತಿಲ್ಲ. ಬಸ್ಸಿನಲ್ಲಿ ಪ್ರಯಾಣಿಸುವಂತಿಲ್ಲ. ಜೊತೆಯಾಗಿ ಕೆಲಸ ಮಾಡುವಂತಿಲ್ಲ. ಪರಸ್ಪರ ಮಾತನಾಡುವಂತಿಲ್ಲ.

ಯಾವುದು ಆಗಬಾರದು ಅಂದುಕೊಂಡಿದ್ದೇವೋ ಅದೀಗ ಆಗಿಯೇ ಬಿಟ್ಟಿದೆ. ಈಗ ಕಾಲ ತಿರುಗಿ ಬಿದ್ದಿದೆ. ನಮ್ಮವರು ಯಾರೆಂಬುದು ಅರಿಯದಷ್ಟರ ಮಟ್ಟಿಗೆ ಪರಿಸ್ಥಿತಿ ಬೆಳೆದಿದೆ. ಪ್ರೀತಿಸುವುದಕ್ಕೂ ಇಲ್ಲಿ ಭಯ. ದ್ವೇಷಿಸಲು ಬಾರದವರಿಗೆ ಬದುಕುವ ಹಾಗಿಲ್ಲ. ಪ್ರೀತಿಸಿದ ಗಳಿಗೆಯಲ್ಲೇ ದೂರ ಮಾಡುವವರು ತುಂಬಿದ್ದಾರೆ. ನಿನ್ನೆ ಮಾತಾಡಿದವರು ಇಂದು ಮೌನವಾಗುತ್ತಿದ್ದಾರೆ. ಬಂಧನಗಳ ಸಂಕೋಲೆಗಳಲ್ಲಿ ಬಂಧಿಸುತ್ತಿದ್ದಾರೆ. ಅವರ ಸ್ವಾರ್ಥಕ್ಕಾಗಿ ಇತರರ ಬದುಕನ್ನು ಹಾಳುಗೆಡವಲು ಹಿಂಜರಿಯಲಾರರು. ತಾನು ಮಾಡಿದ್ದೇ ಸರಿ. ತನ್ನ ಮಾತೇ ಕೊನೆಯೆಂಬಂತಿದೆ ಇವರ ಧಾಟಿ. ಇನ್ನು ಯಾವ ಹೃದಯದಲ್ಲಿ ಪ್ರೀತಿಯಿದೆ, ಇನ್ನ್ಯಾವ ಹೃದಯದಲ್ಲಿ ದ್ವೇಷ ತುಂಬಿದೆಯೆಂದು ಕಂಡುಹಿಡಿಯಬೇಕಾದರೆ ದುರ್ಬೀನುಗಳಿಗೆ ಆಗಲೇ ಕೆಸರು ಮೆತ್ತಿಕೊಂಡಿದೆ.

ಬೆಳಕಿಗೆ ಹಂಬಲಿಸುವಾಗಲೇ ಬೆಂಕಿಗೆ ಮುತ್ತಿಡುವ ಪತಂಗಗಳ ರಾಶಿಯನ್ನು ಭಸ್ಮವಾಗದಂತೆ ಕಾಪಿಡಬೇಕಾಗಿದೆ. ನಮ್ಮದೇ ಗಡಿಯೊಳಗೆ ನಮ್ಮವರಿಂದ ಸುಟ್ಟು ಕರಕಲಾಗುವ ಆತಂಕ ಎದ್ದಿದೆ. ಹೆಸರಿಗೆ ಬಣ್ಣವನ್ನು ಎಳೆದು ತರುವರು. ಇದ್ದ ದ್ವೇಷವನ್ನು ಕಕ್ಕಿಬಿಡಲು ಬಣ್ಣವನ್ನು ಮುಂದಿಡುವರು. ಕೇಸರಿ ಬಟ್ಟೆ ಧರಿಸುವಂತಿಲ್ಲ. ಹಸಿರು ಉಡುವಂತಿಲ್ಲ. ಶಾಂತಿಗೂ ತ್ಯಾಗಕ್ಕೂ ದ್ವೇಷದ ಬಣ್ಣ ಬಳಿದಾಯಿತು. ಹೀಗೆ ದ್ವೇಷದೊಳಗೆ ನಲುಗುತ್ತಿರುವವರು ಪ್ರೀತಿಯ ಹುಡುಕಾಟ ನಡೆಸದೇ ಇರುವರೇ? ಪ್ರೀತಿಯಿಲ್ಲದೆ ಮನುಷ್ಯ ಅದೆಷ್ಟು ಕಾಲ ಬದುಕಬಲ್ಲನು?

ಎದೆಯೊಳಗಿದ್ದ ವಿಷಾದ, ನೋವುಗಳನ್ನು ಹೇಗಾದರು ಕೇಳಿಸ ಬೇಕೆನ್ನುವ ಹುಕಿ ಆಗಾಗ ಹುಟ್ಟಿ ಕೊಳ್ಳುತ್ತಲೇ ಇರುತ್ತದೆ. ಕೇಳುವ ಕಿವಿಯೊಳಗೆ ಸತ್ತ ನರಗಳು ತುಂಬಿರುವಾಗ ಮೊರೆತ ಆಲಿಸುವುದಾದರೂ ಹೇಗೆ? ಹಳೆ ನೆನಪುಗಳು ಇನ್ನೂ ಮರೆಯಾಗಿಲ್ಲ. ಕೊಟ್ಟ ಮಾತು ಇಟ್ಟ ಭಾಷೆ ಮರೆಯುವಂತಿಲ್ಲ. ಮಾತನಾಡಲು, ಧ್ವನಿಯೆತ್ತಲು ಬಯಸಿದಾಗಲೆಲ್ಲ ನಿಶ್ಯಬ್ದತೆಯೊಳಗೆ ನೂಕಿ ಬಿಡುವರು. ಆದರೆ ಬಿಡದೆ ಕಾಡುವ  ಹಳೆ ನೆನಪುಗಳನ್ನು ಮರೆಯುವುದಾದರೂ ಹೇಗೆ ? ಬದುಕಿಗೂ ಸಾವಿಗೂ ನಡುವೆಯೊಂದು ದಾರಿಯಿದೆ. ಆ ದಾರಿಯಲ್ಲಿ

ಜೊತೆಯಾದವರೆಷ್ಟೋ..ಹತ್ತಿರವಾದವರೆಷ್ಟೋ..ದೂರಮಾಡಿದವರೆಷ್ಟೋ..ಕಾಡಿಸಿದವರೆಷ್ಟೋ..ಪೀಡಿಸಿದವರೆಷ್ಟೋ.. ಅಪ್ಪಿಕೊಂಡವರೆಷ್ಟೋ…ನೋಯಿಸಿದವರೆಷ್ಟೋ… ಹಲವರು ಜೊತೆಯಾದ ಆ ದಾರಿ ಇರುವುದು ಈ ಭೂಮಿಯ ಮೇಲೆ ತಾನೇ? ನೋವು ಕೊಟ್ಟರೂ, ಹಿಂಸಿಸಿದರೂ, ದ್ವೇಷಿಸಿದರೂ, ದೂರ ತಳ್ಳಿದರೂ ಅವರೆಲ್ಲರು ನಮ್ಮವರಲ್ಲವೇ? 

ಕಳೆದುಕೊಂಡ ಪ್ರೀತಿಗಾಗಿ, ಮುರಿದುಬಿದ್ದ ಸ್ನೇಹಕ್ಕಾಗಿ, ಶಿಥಿಲವಾದ ಸಂಬಂಧಕ್ಕಾಗಿ, ಮೋಸ-ವಂಚನೆಗೆ ಬಲಿಯಾದುದಕ್ಕಾಗಿ ಜೀವ ತೆಗೆದವರ, ಜೀವ ಕೊಯ್ದವರ, ಆತ್ಮಹತ್ಯೆ ಮಾಡಿಕೊಂಡವರ ಮಧ್ಯೆ ಇನ್ನೂ ಬದುಕ ಬೇಕೆಂದು, ಬದುಕಿ ತೋರಿಸ ಬೇಕೆಂದು, ಶಾಂತಿ ಕಾಪಾಡ ಬೇಕೆಂದು ಹಂಬಲಿಸುವವರೂ ಈಗಲೂ ಇದ್ದಾರೆ. ಪ್ರೀತಿಸಲು ಬಿಡದಿದ್ದರೂ, ಪ್ರೀತಿಸಿದ ತಕ್ಷಣ ಕಾರಣ ಹುಡುಕಿ ದೂರ ಮಾಡಿದರೂ ಮತ್ತೂ ಮತ್ತೂ ಪ್ರೀತಿಸುವವರು ಇದ್ದಾರೆ. ಅವರು ಪ್ರೀತಿಸದೆ ಇರಲಾರರು. ಬೆಳಕಿನ  ಕಿರಣದಲ್ಲಿ, ರಾತ್ರಿಯ ಅಂಧಕಾರದಲ್ಲಿ, ಬಣ್ಣದ ಲೋಕದಲ್ಲಿ ಬಣ್ಣಗಳ ನಡುವೆ ಉಸಿರಾಡುವ ಅವರೆಲ್ಲರ ಎದೆಯಿಂದ ಹೊರಡುವ ಮಾತು ಒಂದೇ –

” ಆದರೂ…ನಮ್ಮನ್ನು ದೂರ ತಳ್ಳಬಾರದಿತ್ತು…” 

ಸಿಹಾನ ಬಿ.ಎಂ.

ಉದಯೋನ್ಮುಖ ಲೇಖಕಿ, ಕವಯಿತ್ರಿ            

You cannot copy content of this page

Exit mobile version