ಧರ್ಮಸ್ಥಳದಲ್ಲಿ ಸರಣಿ ಸಾವಿನ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಧರ್ಮಸ್ಥಳ ಧರ್ಮಾಧಿಕಾರಿ ಡಿ ವೀರೇಂದ್ರ ಹೆಗ್ಗಡೆ ಸಹೋದರ ಹರ್ಷೇಂದ್ರ ಕುಮಾರ್ ಡಿ ಅವರಿಗೆ ತೀವ್ರ ಹಿನ್ನಡೆಯಾಗಿದೆ. ಪ್ರಕರಣದ ಅಡಿಯಲ್ಲಿ ಮಾನಹಾನಿಕರ ವರದಿಗಳನ್ನು ನಿರ್ಬಂಧಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ ಸುಪ್ರೀಂ ಕೋರ್ಟ್, ಮಾಧ್ಯಮಗಳ ಮೇಲೆ ಯಾವುದೇ ನಿರ್ಬಂಧ ಹೇರಲು ನಿರಾಕರಿಸಿದೆ.
ಹಾಗೆಯೇ ಹರ್ಷೇಂದ್ರ ಕುಮಾರ್ ಡಿ ವರ್ಸಸ್ ಕುಡ್ಲ ರ್ಯಾಂಪೇಜ್ ಮತ್ತು ಇತರರು’ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಂತರ ತಡೆಯಾಜ್ಞೆ ಕೋರಿರುವ ಅರ್ಜಿಯನ್ನು ಹೊಸದಾಗಿ ಪರಿಗಣಿಸಿ, ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಕರ್ನಾಟಕದ ವಿಚಾರಣಾ ನ್ಯಾಯಾಲಯಕ್ಕೆ ಇದೇ ಸಂದರ್ಭದಲ್ಲಿ ನಿರ್ದೇಶನ ನೀಡಿದೆ.
‘ಅತ್ಯಂತ ಅಪರೂಪದ ಪ್ರಕರಣಗಳಲ್ಲಿ ಮಾತ್ರ ಇಂತಹ ನಿರ್ಬಂಧದ ಆದೇಶಗಳನ್ನು ಅಂದರೆ ಗ್ಯಾಗ್ ಆರ್ಡರ್ಗಳನ್ನು ನೀಡಲಾಗುತ್ತದೆ. ಇದು ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತದೆ’ ಎಂದು ನ್ಯಾಯಮೂರ್ತಿಗಳಾದ ರಾಜೇಶ್ ಬಿಂದಾಲ್ ಮತ್ತು ಮನಮೋಹನ್ ಅವರಿದ್ದ ಪೀಠದ ಶುಕ್ರವಾರ ಹೇಳಿದೆ.
ದೇವಸ್ಥಾನದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ‘ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸುದ್ದಿ ವಾಹಿನಿಗಳಲ್ಲಿ ಪ್ರತಿದಿನ ಅವಹೇಳನಕಾರಿ ವರದಿಗಳು ಮತ್ತು ಮೀಮ್ಗಳು ಪ್ರಸಾರವಾಗುತ್ತಿವೆ ಎಂದು ಪೀಠದ ಗಮನ ಸೆಳೆದು, ಕನಿಷ್ಠ ಮಧ್ಯಂತರ ರಕ್ಷಣೆ ನೀಡುವಂತೆ’ ಮನವಿ ಮಾಡಿದರು. ಆದರೆ, ಅವರ ಮನವಿಯನ್ನು ಪುರಸ್ಕರಿಸದ ನ್ಯಾಯಪೀಠ, “ಮಾನಹಾನಿಕರ ವರದಿಗಳಿಂದ ನಷ್ಟವಾದರೆ, ಅದಕ್ಕೆ ಪರಿಹಾರವನ್ನು ಕೇಳಲು ದೇವಸ್ಥಾನಕ್ಕೆ ಯಾವಾಗಲೂ ಅವಕಾಶವಿದೆ. ಆದರೆ ಮಾಧ್ಯಮಗಳ ಮೇಲೆ ನಿರ್ಬಂಧ ಹೇರುವುದು ಸರಿಯಲ್ಲ,” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.