Home ದೇಶ ನೀಟ್ ಪರೀಕ್ಷೆ ರದ್ದುಪಡಿಸಿ ರಾಜ್ಯಗಳಿಗೆ ಅಧಿಕಾರ ನೀಡಿ: ತಮಿಳುನಾಡು ಸಿಎಂ ವಿಜಯ್ ಪಟ್ಟು

ನೀಟ್ ಪರೀಕ್ಷೆ ರದ್ದುಪಡಿಸಿ ರಾಜ್ಯಗಳಿಗೆ ಅಧಿಕಾರ ನೀಡಿ: ತಮಿಳುನಾಡು ಸಿಎಂ ವಿಜಯ್ ಪಟ್ಟು

0

ಚೆನ್ನೈ: ನೀಟ್ ಪರೀಕ್ಷೆಯನ್ನು ರದ್ದುಗೊಳಿಸಬೇಕು ಎಂಬ ತಮಿಳುನಾಡಿನ ದಶಕಗಳ ಕಾಲದ ನಿಲುವನ್ನು ನೂತನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಬುಧವಾರ ಪುನರುಚ್ಚರಿಸಿದ್ದಾರೆ. ರಾಷ್ಟ್ರೀಯ ಮಟ್ಟದ ಈ ಪರೀಕ್ಷೆಯನ್ನು ಕೈಬಿಟ್ಟು, ರಾಜ್ಯಗಳೇ 12ನೇ ತರಗತಿಯ ಅಂಕಗಳ ಆಧಾರದ ಮೇಲೆ ವೈದ್ಯಕೀಯ ಮತ್ತು ದಂತವೈದ್ಯಕೀಯ ಸೀಟುಗಳನ್ನು ಭರ್ತಿ ಮಾಡಲು ಅವಕಾಶ ನೀಡಬೇಕು ಎಂದು ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಇತ್ತೀಚೆಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ನೀಟ್ ಪರೀಕ್ಷೆಯನ್ನು ರದ್ದುಗೊಳಿಸಿರುವುದು ದೇಶಾದ್ಯಂತ ಲಕ್ಷಾಂತರ ವೈದ್ಯಕೀಯ ಆಕಾಂಕ್ಷಿಗಳ ಆಸೆಯನ್ನು ಕಮರಿಸಿದೆ ಎಂದು ವಿಜಯ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೀಟ್ ಪರೀಕ್ಷೆಯ ಪಾವಿತ್ರ್ಯತೆಗೆ ಧಕ್ಕೆಯಾಗುತ್ತಿರುವುದು ಇದೇ ಮೊದಲೇನಲ್ಲ ಎಂದು ಅವರು ನೆನಪಿಸಿದ್ದಾರೆ.

ಇಸ್ರೋ ಮಾಜಿ ಅಧ್ಯಕ್ಷ ಡಾ. ಕೆ. ರಾಧಾಕೃಷ್ಣನ್ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಸುಧಾರಣೆಗಾಗಿ 95 ಶಿಫಾರಸುಗಳನ್ನು ನೀಡಿದ ನಂತರವೂ ಪೇಪರ್ ಸೋರಿಕೆಯಾಗಿರುವುದು ರಾಷ್ಟ್ರೀಯ ಮಟ್ಟದ ಪರೀಕ್ಷೆಯಲ್ಲಿನ ರಚನಾತ್ಮಕ ದೋಷಗಳಿಗೆ ಸಾಕ್ಷಿಯಾಗಿದೆ ಎಂದು ವಿಜಯ್ ಹೇಳಿದ್ದಾರೆ. “ತಮಿಳುನಾಡು ಸರ್ಕಾರವು ಆರಂಭದಿಂದಲೂ ನೀಟ್ ಪರೀಕ್ಷೆಯನ್ನು ಸರ್ವಾನುಮತದಿಂದ ವಿರೋಧಿಸುತ್ತಾ ಬಂದಿದೆ” ಎಂದು ಅವರು ತಿಳಿಸಿದ್ದಾರೆ.

ನೀಟ್ ಪರೀಕ್ಷೆಯು ಗ್ರಾಮೀಣ ಭಾಗದ ವಿದ್ಯಾರ್ಥಿಗಳು, ಸರ್ಕಾರಿ ಶಾಲಾ ಮಕ್ಕಳು, ತಮಿಳು ಮಾಧ್ಯಮದ ವಿದ್ಯಾರ್ಥಿಗಳು ಮತ್ತು ಸಾಮಾಜಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳಿಗೆ ಭಾರಿ ಅನಾನುಕೂಲತೆಯನ್ನು ಉಂಟುಮಾಡಿದೆ ಎಂದು ಮುಖ್ಯಮಂತ್ರಿಗಳು ಪ್ರತಿಪಾದಿಸಿದ್ದಾರೆ. ಎಂಬಿಬಿಎಸ್, ಬಿಡಿಎಸ್ ಮತ್ತು ಆಯುಷ್ ಕೋರ್ಸ್‌ಗಳಿಗೆ ರಾಜ್ಯ ಕೋಟಾದ ಅಡಿಯಲ್ಲಿ ಸೀಟುಗಳನ್ನು ಹಂಚಿಕೆ ಮಾಡಲು 12ನೇ ತರಗತಿಯ ಅಂಕಗಳನ್ನೇ ಪರಿಗಣಿಸಬೇಕು ಎಂದು ಅವರು ಒತ್ತಿಹೇಳಿದ್ದಾರೆ.

ತಮಿಳುನಾಡಿನಲ್ಲಿ ನೀಟ್ ಪರೀಕ್ಷೆಯು ಅತ್ಯಂತ ಸೂಕ್ಷ್ಮ ವಿಷಯವಾಗಿದ್ದು, ಪರೀಕ್ಷೆಯ ಭಯದಿಂದಾಗಿ ಇದುವರೆಗೆ ಸುಮಾರು ಎರಡು ಡಜನ್‌ಗೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿಂದೆ ಎಐಎಡಿಎಂಕ ಮತ್ತು ಡಿಎಂಕೆ ಸರ್ಕಾರಗಳು ನೀಟ್‌ನಿಂದ ವಿನಾಯಿತಿ ಕೋರಿ ಮಸೂದೆಗಳನ್ನು ಅಂಗೀಕರಿಸಿದ್ದರೂ ಕೇಂದ್ರ ಸರ್ಕಾರ ಅವುಗಳನ್ನು ತಿರಸ್ಕರಿಸಿತ್ತು.


You cannot copy content of this page

Exit mobile version