Home ಅಪರಾಧ ಬೋಲಾರಂ ಸೇನಾ ಕಂಟೋನ್ಮೆಂಟ್ ಶಸ್ತ್ರಾಸ್ತ್ರ ಕಳವು ಪ್ರಕರಣ ಭೇದಿಸಿದ ತೆಲಂಗಾಣ ಪೊಲೀಸರು: ಮಾಜಿ ಹವಾಲ್ದಾರ್ ಬಂಧನ,...

ಬೋಲಾರಂ ಸೇನಾ ಕಂಟೋನ್ಮೆಂಟ್ ಶಸ್ತ್ರಾಸ್ತ್ರ ಕಳವು ಪ್ರಕರಣ ಭೇದಿಸಿದ ತೆಲಂಗಾಣ ಪೊಲೀಸರು: ಮಾಜಿ ಹವಾಲ್ದಾರ್ ಬಂಧನ, ಎಕೆ-203 ರೈಫಲ್‌ಗಳು, ಪಿಸ್ತೂಲ್‌ಗಳು ವಶಕ್ಕೆ

0

ಹೈದರಾಬಾದ್‌ನ ಬೋಲಾರಂನಲ್ಲಿರುವ 20 ಬೆಟಾಲಿಯನ್ ಮದ್ರಾಸ್ ರೆಜಿಮೆಂಟ್‌ನಲ್ಲಿ ಆಗಸ್ಟ್ 31 ರಂದು ನಡೆದಿದ್ದ ಶಸ್ತ್ರಾಸ್ತ್ರ ಕಳ್ಳತನ ಪ್ರಕರಣವನ್ನು ತೆಲಂಗಾಣ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಈ ಸಂಬಂಧ ಭಾರತೀಯ ಸೇನೆಯ 37 ವರ್ಷದ ನಿವೃತ್ತ ಹವಾಲ್ದಾರ್‌ನನ್ನು ಬಂಧಿಸಲಾಗಿದ್ದು, ಕಳವು ಮಾಡಲಾಗಿದ್ದ ಬೃಹತ್ ಪ್ರಮಾಣದ ಮಾರಕಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ನಾಗರ್‌ಕರ್ನೂಲ್ ಜಿಲ್ಲೆಯ ಅಮ್ರಾಬಾದ್‌ನ ಜಂಗಂ ರೆಡ್ಡಿ ಪಲ್ಲಿ ನಿವಾಸಿಯಾದ ಉಪ್ಪುತೋಳ್ಳ ಮಲ್ಲೇಶ್ ಬಂಧಿತ ಆರೋಪಿ. ಭಾರತೀಯ ಸೇನೆಯಲ್ಲಿ 16 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಈತನನ್ನು ಶಿಸ್ತುರಾಹಿತ್ಯ ಮತ್ತು ಅನಾರೋಗ್ಯದ ಕಾರಣದಿಂದ 2026 ರ ಜೂನ್ 30 ರಂದು ಅವಧಿಗೆ ಮುನ್ನವೇ ನಿವೃತ್ತಿಗೊಳಿಸಲಾಗಿತ್ತು. ಸೇವೆಯಿಂದ ಅಕಾಲಿಕವಾಗಿ ಬಿಡುಗಡೆ ಮಾಡಿದ್ದರಿಂದ ಉಂಟಾಗಿದ್ದ ತೀವ್ರ ಅಸಮಾಧಾನವೇ ಈ ಕೃತ್ಯಕ್ಕೆ ಪ್ರಾಥಮಿಕ ಪ್ರೇರಣೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದ್ದು, ನಿಖರ ಕಾರಣ ತಿಳಿಯಲು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

ಕಂಟೋನ್ಮೆಂಟ್‌ನ ಸಂಪೂರ್ಣ ಪರಿಚಯವಿದ್ದ ಮಲ್ಲೇಶ್, ಆಗಸ್ಟ್ 27 ರಿಂದ 29 ರ ನಡುವೆ ಪ್ರದೇಶದ ಪರಿಶೀಲನೆ (ರೆಕ್ಕಿ) ನಡೆಸಿದ್ದ. ಬಳಿಕ ಆಗಸ್ಟ್ 30 ಮತ್ತು 31 ರ ಮಧ್ಯರಾತ್ರಿ ರೆಜಿಮೆಂಟ್‌ನ ಶಸ್ತ್ರಾಗಾರಕ್ಕೆ (ಕೋಟೆ ಮತ್ತು ಮ್ಯಾಗಜೀನ್ ಕೊಠಡಿಗಳು) ನುಗ್ಗಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ದೋಚಿದ್ದ. ಕಳವು ಮಾಡಲಾದ ವಸ್ತುಗಳಲ್ಲಿ ಐದು ಮ್ಯಾಗಜೀನ್‌ಗಳುಳ್ಳ ನಾಲ್ಕು ಎಕೆ-203 ರೈಫಲ್‌ಗಳು, ಮೂರು ಮ್ಯಾಗಜೀನ್‌ಗಳುಳ್ಳ ಒಂದು ಇನ್ಸಾಸ್ (INSAS) 5.56 ಎಂಎಂ ರೈಫಲ್, 12 ಮ್ಯಾಗಜೀನ್‌ಗಳುಳ್ಳ ಆರು 9 ಎಂಎಂ ಪಿಸ್ತೂಲ್‌ಗಳು, ಒಂದು ಸಿವಿಲಿಯನ್ 6.35 ಬೋರ್ ಪಿಸ್ತೂಲ್, ಪ್ಯಾಸಿವ್ ನೈಟ್ ವಿಷನ್ ಬೈನಾಕ್ಯುಲರ್, 156 ಜೀವಂತ 9 ಎಂಎಂ ಗುಂಡುಗಳು, 720 ಎಕೆ-203 ಗುಂಡುಗಳು ಹಾಗೂ 36 ಇನ್ಸಾಸ್ ಮದ್ದುಗುಂಡುಗಳು ಸೇರಿವೆ.

ಕದ್ದ ಶಸ್ತ್ರಾಸ್ತ್ರಗಳನ್ನು ಕಂಟೋನ್ಮೆಂಟ್ ಸಮೀಪದ ದೇವಸ್ಥಾನದ ಮೂಲಕ ತನ್ನ ಬಿಳಿ ಬಣ್ಣದ ಬ್ರೆಝಾ ಕಾರಿಗೆ ತುಂಬಿಸಿಕೊಂಡು ನಾಗರ್‌ಕರ್ನೂಲ್ ಜಿಲ್ಲೆಯ ಅಚ್ಚಂಪೇಟೆಯತ್ತ ಚಲಾಯಿಸಿಕೊಂಡು ಹೋಗಿದ್ದ. ಟೋಲ್ ಕ್ಯಾಮೆರಾಗಳಿಂದ ತಪ್ಪಿಸಿಕೊಳ್ಳಲು ಮತ್ತು ತಾನೊಬ್ಬ ಟ್ಯಾಕ್ಸಿ ಚಾಲಕನೆಂದು ಬಿಂಬಿಸಲು ಆತ ಉದ್ದೇಶಪೂರ್ವಕವಾಗಿ ಔಟರ್ ರಿಂಗ್ ರೋಡ್ ಮತ್ತು ಸಾಗರ್ ರಿಂಗ್ ರೋಡ್ ಮೂಲಕ ಮಾರ್ಗ ಬದಲಿಸಿ, ದಾರಿಯಲ್ಲಿ ಬಾಡಿಗೆ ಪ್ರಯಾಣಿಕರನ್ನು ಹತ್ತಿಸಿಕೊಂಡು ಪ್ರಯಾಣಿಸಿದ್ದ.

ತನಿಖೆಗೆ ಹಾಜರಾಗಲು ನಿರಾಕರಿಸಿದ ಆತನ ಡಿಜಿಟಲ್ ಹೆಜ್ಜೆಗುರುತುಗಳು, ಅಳಿಸಿಹಾಕಲಾದ ಕರೆ ದಾಖಲೆಗಳು ಮತ್ತು ಅನುಮಾನಾಸ್ಪದ ಚಲನವಲನಗಳನ್ನು ಪತ್ತೆಹಚ್ಚಿ ಮಲ್ಕಾಜ್‌ಗಿರಿ ಪೊಲೀಸ್ ವಲಯ, ಹೈದರಾಬಾದ್ ಟಾಸ್ಕ್‌ಫೋರ್ಸ್, ಎಸ್‌ಒಟಿ ಹಾಗೂ ಗುಪ್ತಚರ ಇಲಾಖೆಗಳು ಜಂಟಿ ಕಾರ್ಯಾಚರಣೆ ನಡೆಸಿ ಪ್ರಕರಣವನ್ನು ಭೇದಿಸಿವೆ ಎಂದು ತೆಲಂಗಾಣ ಡಿಜಿಪಿ ಸಿ.ವಿ. ಆನಂದ್ ತಿಳಿಸಿದ್ದಾರೆ.

You cannot copy content of this page

Exit mobile version