ರಾಯಚೂರು : ಕರ್ನಾಟಕ, ಆಂಧ್ರ ಮತ್ತು ತೆಲಂಗಾಣದ ಗಡಿ ಭಾಗಗಳಲ್ಲಿರುವ ರಾಯಚೂರು (Raichur) ಜಿಲ್ಲೆಯ ಸುಮಾರು 33 ಕನ್ನಡ ಮಾಧ್ಯಮ ಶಾಲೆಗಳ (Kannada medium schools) ಹತ್ತು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷ ಆರಂಭವಾಗಿ ತಿಂಗಳು ಕಳೆದರೂ ಪಠ್ಯಪುಸ್ತಕಗಳು ಲಭ್ಯವಾಗಿಲ್ಲ. ಸರ್ಕಾರದ ಈ ಬೇಜವಾಬ್ದಾರಿತನಕ್ಕೆ ಪೋಷಕರು ಮತ್ತು ಕನ್ನಡ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುಸ್ತಕಗಳ ತೀವ್ರ ಅಭಾವದಿಂದಾಗಿ ಪ್ರಸ್ತುತ ಗಡಿಭಾಗದ ಶಾಲೆಗಳಲ್ಲಿ ಏಳೆಂಟು ವಿದ್ಯಾರ್ಥಿಗಳು ಕೇವಲ ಒಂದು ಪುಸ್ತಕವನ್ನು ಹಂಚಿಕೊಂಡು ಅಭ್ಯಾಸ ಮಾಡುವ ಅನಿವಾರ್ಯತೆ ಎದುರಾಗಿದೆ. ಶಿಕ್ಷಕರು ಹಳೆಯ ವಿದ್ಯಾರ್ಥಿಗಳಿಂದ ಪುಸ್ತಕಗಳನ್ನು ಸಂಗ್ರಹಿಸಿ ತರಗತಿಗಳನ್ನು ನಡೆಸುತ್ತಿದ್ದಾರೆ. ಮೇ ತಿಂಗಳಲ್ಲೇ ಶಿಕ್ಷಣ ಇಲಾಖೆಗೆ ಬೇಡಿಕೆ ಸಲ್ಲಿಸಿದ್ದರೂ ಈವರೆಗೆ ಅಗತ್ಯ ಪಠ್ಯಪುಸ್ತಕಗಳು ಸರಬರಾಜಾಗಿಲ್ಲ. ಈ ಸೌಲಭ್ಯಗಳ ಕೊರತೆಯಿಂದ ಬೇಸತ್ತು ಗಡಿಭಾಗದ ಮಕ್ಕಳು ತೆಲುಗು ಹಾಗೂ ಇಂಗ್ಲಿಷ್ ಮಾಧ್ಯಮಗಳತ್ತ ಆಕರ್ಷಿತರಾಗುತ್ತಿದ್ದಾರೆ ಎಂಬ ಕಳವಳ ವ್ಯಕ್ತವಾಗಿದೆ. ಈ ಗಂಭೀರ ಸಮಸ್ಯೆಯ ಕುರಿತು ರಾಯಚೂರಿನ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಲ್ಲಿಕಾರ್ಜುನ ಜಿ. ಅವರು ಪ್ರತಿಕ್ರಿಯಿಸಿದ್ದು, ಈಗಾಗಲೇ ಅಗತ್ಯವಿರುವ ಪುಸ್ತಕಗಳ ಪಟ್ಟಿಯನ್ನು ಸರ್ಕಾರಕ್ಕೆ ರವಾನಿಸಲಾಗಿದೆ. ಪ್ರಸ್ತುತ ಹಂತ ಹಂತವಾಗಿ ಪುಸ್ತಕಗಳು ಬರುತ್ತಿದ್ದು, ಗಡಿಭಾಗದ ಕನ್ನಡ ಶಾಲೆಗಳಿಗೆ ಶೀಘ್ರದಲ್ಲೇ ವಿತರಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಭರವಸೆ ನೀಡಿದ್ದಾರೆ.
