Home ರಾಜ್ಯ ಕೋಲಾರ ದಲಿತ ಯುವಕ ಉದಯ ಕಿರಣ್ ಸಾವಿಗೆ ಕಾರಣರಾದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು: ಸಿಪಿಎಂ ಪಕ್ಷ ಆಗ್ರಹ

ದಲಿತ ಯುವಕ ಉದಯ ಕಿರಣ್ ಸಾವಿಗೆ ಕಾರಣರಾದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು: ಸಿಪಿಎಂ ಪಕ್ಷ ಆಗ್ರಹ

0

ಮುಳಬಾಗಿಲು: ದಲಿತ ಯುವಕ ಬೈಕ್ ಓವರ್ ಟೆಕ್ ಮಾಡಿದ ಕಾರಣದಿಂದ ಸವರ್ಣೀಯರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಜಾತಿ ನಿಂದನೆಯಿಂದ ಅವಮಾನಗೊಂಡು ದಲಿತ ಯುವಕ ಸಾವೀಗೀಡಾಗಿದ್ದು, ಈ ಘಟನೆ ಸಂಬಂಧಿತ ಆರೋಪಿಗಳನ್ನು ಕೂಡಲೆ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಭಾರತ ಕಮ್ಯುನಿಸ್ಟ್‌ ಪಕ್ಷ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಗಾಂಧಿನಗರ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.

ಕೋಲಾರದ ಮುಳಬಾಗಿಲು ತಾಲ್ಲೂಕಿನ ಪೆತ್ತಾಂಡ್ಲಹಳ್ಳಿ ಗ್ರಾಮದಲ್ಲಿ ಉದಯ್‌ ಕಿರಣ್‌ ಎಂಬ 25 ವರ್ಷದ  ದಲಿತ ಯುವಕನನ್ನು ರಾಜು ಎಂಬಾತನ ಬೈಕ್ ಓವರ್ ಟೆಕ್ ಮಾಡಿದ್ದು, ಮೇಲ್ಜಾತಿಯವರು ಸೇರಿ ಯುವಕನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ್ದಾರೆ. ಈ ರೀತಿ ಜಾತಿ ನಿಂದನೆಯಿಂದ ಮನನೊಂದು ದಲಿತ ಯುವಕ  ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ನಂಗಲಿ ಪೊಲೀಸ್‌ ಠಾಣೆಯಲ್ಲಿ ಹಲ್ಲೆ ನಡೆಸಿದ ರಾಜು, ಶಿವರಾಜ್‌, ಗೋಪಾಲಕೃಷ್ಣ ಮತ್ತು ಮುನಿವೆಂಕಟಪ್ಪ ಎಂಬ ನಾಲ್ವರ ವಿರುದ್ದ ಗುರುವಾರ ಪ್ರಕರಣ ದಾಖಲಾಗಿದೆ.

ಈ ಹಿನ್ನೆಲೆಯಲ್ಲಿ, ಜಾತಿ ದೌರ್ಜನ್ಯದಿಂದ ಮೃತಪಟ್ಟಿರುವ ದಲಿತ ಯುವಕ ಉದಯ್ ಕಿರಣ್ ಕುಟುಂಬದ ಸದಸ್ಯರನ್ನು ಶುಕ್ರವಾರದಂದು ಭೇಟಿ ಮಾಡಿದ ಸಿಪಿಎಂ , ಎಸ್ಎಫ್ಐ, ದಲಿತ ಸಂಘಟನೆಗಳ ಮುಖಂಡರು ಉದಯ್ ಕಿರಣ್ ಸಾವಿಗೆ ನ್ಯಾಯ ಸಿಗಬೇಕು, ಜಾತಿ ದೌರ್ಜನ್ಯಗಳು ನಿಲ್ಲಬೇಕು ಎಂದು ಘೋಷಣೆಗಳು ಕೂಗಿದ್ದಾರೆ. ಈ ವೇಳೆ ಮಾತನಾಡಿದ ಸಿಪಿಎಂ ಮುಖಂಡರು ಪೆತ್ತಾಂಡ್ಲಹಳ್ಳಿ ಗ್ರಾಮದಲ್ಲಿ ಬೈಕ್ ಓವರ್ ಟೆಕ್ ಮಾಡಿದ ಕಾರಣಕ್ಕೆ ದಲಿತ ಯುವಕನನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆಯನ್ನು ಸಿಪಿಐ(ಎಂ), ಎಸ್ಎಫ್ಐ, ದಲಿತ ಸಂಘಟನೆಗಳು ತೀವ್ರವಾಗಿ ಖಂಡಿಸಿದ್ದು,ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷಗಳು ಕಳೆದರು ದಲಿತರನ್ನು ಮನುಷ್ಯರಂತೆ ಸಮಾನವಾಗಿ ಕಾಣದ ಪಾಳೇಗಾರಿ ಮೌಲ್ಯಗಳೇ ಉದಯ್ ಸಾವಿಗೆ ಕಾರಣವಾಗಿದೆ ಎಂದಿದ್ದಾರೆ.

ಕೋಲಾರ ಜಿಲ್ಲೆ ಮತ್ತು  ಮುಳಬಾಗಿಲು ತಾಲೂಕು ದಲಿತ ಮೀಸಲಾತಿಯ ಸಂಸದರು, ಶಾಸಕರು ಇದ್ದರೂ ಸಹ ದಲಿತರ ಮೇಲೆ ದಾಳಿ ದೌರ್ಜ್ಯಗಳು ನಿರಂತರವಾಗಿ ಹೆಚ್ಚಾಗುತ್ತಿದೆ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಜಾತಿ ದೌರ್ಜನ್ಯದಿಂದ ಯುವಕ ಸಾವನ್ನಪ್ಪಿದ್ದರು ಸಹ ಈ ಕ್ಷೇತ್ರದ ಶಾಸಕರು, ಸಂಸದರು ಯಾವೊಬ್ಬ ಜನಪ್ರತಿನಿಧಿ ಬಾಯಿ ಬಿಚ್ಚದಿರುವುದಕ್ಕೆ ಜನ ತಕ್ಕ ಪಾಠ ಕಲಿಸಿದ್ದಾರೆ ಎಂದು ಎಚ್ಚರಿಸಿದರು.

ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ ಮಾತನಾಡಿ ಘಟನೆಯ ಸಂಬಂಧಿತ ಆರೋಪಿಗಳನ್ನು 24 ಗಂಟೆಗಳ ಒಳಗೆ ಬಂಧಿಸಬೇಕು. ಮೃತ ಉದಯ್ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕು. ಆತನ ತಾಯಿಗೆ ಸರ್ಕಾರಿ ಉದ್ಯೋಗ, ಮನೆ ನೀಡಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಹತ್ತಾರು ಸಾವಿರ ಜನರ ಪೆತ್ತಾಂಡ್ಲಹಳ್ಳಿ ಚಲೋ ಪಾದಯಾತ್ರೆ ಹಮ್ಮಿಕೊಂಡು ಹೋರಾಟ ತೀವ್ರ ಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

 ಈ ಸಂದರ್ಭದಲ್ಲಿ ಸಿಪಿಐಎಂ ತಾಲೂಕು ಕಾರ್ಯದರ್ಶಿ, ಪುಣ್ಯಹಳ್ಳಿ ಶಂಕರ್, ದಲಿತ ಮುಖಂಡರು ಸಂಗಸಂದ್ರ ವಿಜಯ್ ಕುಮಾರ್, ಮೆಕಾನಿಕ್ ಶ್ರೀನಿವಾಸ್, ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ, ಮೃತ ಸೋದರ ಮಾವ ನಾಗರಾಜ್ ಬೇವಹಳ್ಳಿ,  ಡಿವೈಎಫ್ಐ ಮುಖಂಡ ಕೇರಳ ಶ್ರೀನಿವಾಸ್, ಎಸ್ಎಫ್ಐ ಜಿಲ್ಲಾ ಉಪಾಧ್ಯಕ್ಷ ಸುರೇಶ್ ಬಾಬು, ತಾಲ್ಲೂಕು  ಅಧ್ಯಕ್ಷ ಶಶಿಕುಮಾರ್, ತಾಲೂಕು ಕಾರ್ಯದರ್ಶಿ ಸುದರ್ಶನ್ ಹಾಗೂ ನೂರಾರು ಜನ ಹೋರಾಟಗಾರರಿದ್ದರು.

You cannot copy content of this page

Exit mobile version