Home ರಾಜ್ಯ ಹಾಸನ ಕಾಡಾನೆ ಸಮಸ್ಯೆ ಸಕಲೇಶಪುರದಲ್ಲಿ ಬೃಹತ್‌ ಪ್ರತಿಭಟನೆ

ಕಾಡಾನೆ ಸಮಸ್ಯೆ ಸಕಲೇಶಪುರದಲ್ಲಿ ಬೃಹತ್‌ ಪ್ರತಿಭಟನೆ

0

ಸಕಲೇಶಪುರ: ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವಂತೆ ಆಗ್ರಹಿಸಿ ವಳಲಹಳ್ಳಿ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಜನರು ಹಿರಿಯೂರು ಕೂಡಿಗೆ ಬಂದ್ ಮಾಡಿ ಶುಕ್ರವಾರ ಪ್ರತಿಭಟನೆ ನಡೆಸಿದ್ದಾರೆ.

ಕಳೆದ ಎರಡು ದಶಕಗಳಿಂದ ವಳಲಹಳ್ಳಿ ಗ್ರಾ.ಪಂ ಕಾಡಾನೆಗಳ ಬೀಡಾಗಿದ್ದು ಹತ್ತಾರು ಸಾವುಗಳು ಸಂಭವಿಸಿದೆ. ಅಂದಿನಿಂದಲು ಕಾಡಾನೆ ಸ್ಥಳಾಂತರಕ್ಕೆ ಆಗ್ರಹಿಸಿ ಹತ್ತಾರು ಪ್ರತಿಭಟನೆ ನಡೆಸಿದರೂ ಶಾಸಕರಾಗಲಿ, ಸರ್ಕಾರಗಳಾಗಲಿ ಸ್ಪಂದಿಸುತ್ತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಗ್ರಾಪಂ ವ್ಯಾಪ್ತಿಯ ಮರ್ಕಳ್ಳಿ, ಕಿರ್ಕಳ್ಳಿ, ಬೊಬ್ಬನಹಳ್ಳಿ, ವಳಲಹಳ್ಳಿ, ಕರಿಡಗಾಲ, ಬೊಮ್ಮನಕೆರೆ, ಕಲ್ಲತೋಟ ಸೇರಿದಂತೆ ಹಲವು ಗ್ರಾಮಗಳಲ್ಲಿ ಕಾಡಾನೆ ಉಪಟಳ ಮೇರೆಮೀರಿದೆ. ರಾತ್ರಿ ವೇಳೆ ಮಾತ್ರ ಸಂಚರಿಸುತ್ತಿದ್ದ ಕಾಡಾನೆಗಳು ಈಗ ಹಗಲಿನಲ್ಲೂ ಗ್ರಾಮದೊಳಗೆ ನಿರ್ಭಯವಾಗಿ ಸಂಚರಿಸುತ್ತಾ ಬೆಳೆಹಾನಿಯಲ್ಲಿ ತೊಡಗಿವೆ.

ಈ ಭಾಗದ ರೈತರು ಮನೆಯಿಂದ ಹೊರಹೋದರೆ ಮನೆಗೆ ಬರುವುದು ಖಾತ್ರಿ ಇಲ್ಲದಂತಾಗಿದೆ. ಹತ್ತಾರು ಆನೆಗಳ ಹಿಂಡು ಏಕಕಾಲಕ್ಕೆ ಕಾಫಿ, ಏಲಕ್ಕಿ ತೋಟ ಹಾಗೂ ಭತ್ತದ ಗದ್ದೆಗಳಿಗೆ ಲಗ್ಗೆ ಇಡುತ್ತಿರುವುದರಿಂದ ವ್ಯಾಪಕ ಬೆಳೆಹಾನಿ ಸಂಭವಿಸುತ್ತಿದೆ. ಇದರ ಪರಿಣಾಮ ಈ ಭಾಗದಲ್ಲಿ ಸಾಕಷ್ಟು ಭತ್ತದ ಗದ್ದೆಗಳನ್ನು ಪಾಳುಬಿಡಲಾಗುತ್ತಿದೆ. ಇದರಿಂದಾಗಿ ಭತ್ತದ ಗದ್ದೆಗಳಿದ್ದರೂ ಅಂಗಡಿಯಿಂದ ಅಕ್ಕಿತಂದು ತಿನ್ನುವ ಪರಿಸ್ಥಿತಿ ಸೃಷ್ಟಿಯಾಗಿದೆ. ಕಾಡಾನೆ ತುಳಿದು ಮೃತಪಟ್ಟ ರೈತನ ಕುಟುಂಬಕ್ಕೆ 15 ಲಕ್ಷ ಪರಿಹಾರ ನೀಡುತ್ತಿದೆ. ಆದರೆ, ಸರ್ಕಾರಿ ಅಧಿಕಾರಿಗಳು ಮೃತಪಟ್ಟರೆ 50 ಲಕ್ಷಕ್ಕೂ ಅಧಿಕ ಪರಿಹಾರ ನೀಡುತ್ತಾರೆ. ಇದರಲ್ಲೂ ರೈತರ ಶೋಷಣೆ ಮಾಡಲಾಗುತ್ತಿದೆ.

ಹತ್ತಾರು ವರ್ಷ ಕಷ್ಟಪಟ್ಟು ಬೆಳೆದ ಕಾಫಿಗಿಡಗಳು ಕಾಡಾನೆ ದಾಳಿಯಿಂದ ನಾಶವಾದರೆ ನೀಡುವ ಪರಿಹಾರ ಸಹ ಅವೈಜ್ಞಾನಿಕವಾಗಿದೆ. ಮುಖ್ಯಮಂತ್ರಿ ಆದೇಶದ ಹಿನ್ನಲೆಯಲ್ಲಿ ತಾಲೂಕಿಗೆ ಆಗಮಿಸಿದ್ದ ಹಿರಿಯ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಹತ್ತೂ ಹೋಬಳಿಗೆ ಭೇಟಿ ನೀಡದೆ ನಿರ್ಲಕ್ಷಿಸಿದೆ. ಅಧಿಕಾರಿಗಳ ಹೋಬಳಿ ನಿರ್ಲಕ್ಷಕ್ಕೆ   ಶಾಸಕರೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸದ್ಯ ಈಗ ಹೋಬಳಿಯ ಜನರೊಂದಿಗೆ ಅರಣ್ಯ ಇಲಾಖೆ ಸಹ ಅಮಾನವೀಯವಾಗಿ ನಡೆದುಕೊಳ್ಳುತ್ತಿದ್ದು ಮರಕಡಿದರೆ ತಕ್ಷಣವೇ ಸ್ಥಳಕ್ಕೆ ಬರುವ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆ ಬಗ್ಗೆ ಮಾಹಿತಿ ನೀಡಿದರೆ ನಿರ್ಲಕ್ಷ  ತೋರುತ್ತಿದ್ದಾರೆ ಎಂದು ಪ್ರತಿಭಟನಕಾರರು ದೂರಿದ್ದಾರೆ.

ಸಮಸ್ಯೆ ಗಂಭೀರತೆ ಅರಿವಿಲ್ಲ:

ತಾಲೂಕಿನಲ್ಲಿ ಉಪಟಳ ನಡೆಸುತ್ತಿರುವ ಕಾಡಾನೆ ಸಮಸ್ಯೆ ಆಳುವ ಸರ್ಕಾರ ಗಂಭೀರವಾಗಿ ಪರಿಗಣಿಸದ ಪರಿಣಾಮ ತಾತ್ಕಾಲಿಕ ಉಪಶಮನಕ್ಕೆ ಯೋಜನೆ ರೂಪಿಸುತ್ತಿದೆ. ರೈಲ್ವೆ ಕಂಬಿಯಿಂದಾಗಲಿ, ಕಂದಕ ನಿರ್ಮಾಣ ಅಥವಾ ಆನೆ ಕಾರಿಡಾರ್ ನಿರ್ಮಾಣದಿಂದಾಗಲಿ, ಕಾಡಾನೆ ಟಾಸ್ಕಪೋರ್ಸ್ ಮಾಡುವುದರಿಂದಾಗಲಿ ಕಾಡಾನೆ ಉಪಟಳ ತಡೆಯುವುದು ಅಸಾಧ್ಯ. ಕಾಡಾನೆಗಳನ್ನು ಇಲ್ಲಿಂದ ಸಂಪೂರ್ಣ ಸ್ಥಳಾಂತರಿಸುವುದೊಂದೆ ಪರಿಹಾರ. ತಪ್ಪಿದಲ್ಲಿ ತಾಲೂಕಿನಲ್ಲಿ ಕಳೆದ ಎರಡು ದಶಕಗಳ ಹಿಂದೆ  ಇದ್ದ ಹತ್ತು ಕಾಡಾನೆಗಳು ಇಂದು ನೂರಾಗಿವೆ. ಮುಂದಿನ ಒಂದು ದಶಕದಲ್ಲಿ ಕಾಡಾನೆಗಳ ಸಂಖ್ಯೆ ದ್ವಿಗುಣಗೊಳ್ಳುವ ಮೂಲಕ ಕಾಡಾನೆಗಾಗಿ ಗ್ರಾಮಗಳನ್ನೇ ಸ್ಥಳಾಂತರಿಸುವ ಪರಿಸ್ಥಿತಿ ಸೃಷ್ಟಿಯಾಗಲಿದೆ ಇದಕ್ಕೆ ನೂರಾರು ಕೋಟಿ ವಿನಿಯೋಗಿಸಬೇಕಾಗುತ್ತದೆ ಎಂದರು.

ಸಾರ್ವಜನಿಕ ಹಿತಾಸಕ್ತಿ ಅರ್ಜಿ:

ತಾಲೂಕಿನಲ್ಲಿರುವ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸುವಂತೆ ನೂರಾರು ಪ್ರತಿಭಟನೆ ನಡೆಸಿದ್ದರೂ ಸರ್ಕಾರ ಸಮಸ್ಯೆಯನ್ನು ಗಂಭರವಾಗಿ ಪರಿಗಣಿಸದಿರುವುದನ್ನು ಪರಿಗಣಿಸಿ ಹೈಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸಲಾಗಿದೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಪ್ರಧಾನಕಾರ್ಯದರ್ಶಿ ಕೃಷ್ಣಪ್ಪ ಮಾಹಿತಿ ನೀಡಿದರು.

ಚುನಾವಣೆ ಬಹಿಷ್ಕಾರ:

ರಾಜಕೀಯಕ್ಕಿಂತ ದೇಶದ ಬೆನ್ನೆಲುಬಾಗಿರುವ ರೈತರ ಹಿತ ಮುಖ್ಯ. ಆದ್ದರಿಂದ ಕಾಡಾನೆ ಸಮಸ್ಯೆ ಪರಿಹಾರಿಸಲು ಸರ್ಕಾರ ಗಂಭೀರ ಚಿಂತನೆ ನಡೆಸದಿರುವುದು ಹಾಗೂ ಜನಪ್ರತಿನಿಧಿಗಳು ಸಹ ಸಮಸ್ಯೆಗೆ ಸರಿಯಾಗಿ ಸ್ಪಂದನೆ ಮಾಡದಿರುವುದನ್ನು ಖಂಡಿಸಿ ಮುಂಬರುವ ಚುನಾವಣೆ ಬಹಿಷ್ಕರಿಸುವುದು ಹಾಗೂ ಈ ಬಾರಿ ಬೆಳಗಾಂನಲ್ಲಿ ನಡೆಯಲಿರುವ ಅಧಿವೇಶನಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡೋಣ ಎಂಬ ಆಗ್ರಹ ಕೇಳಿ ಬಂದಿತು. ಇಂದು ಹಿರಿಯೂರು ಕೂಡಿಗೆಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಆರಂಭವಾಗಿದ್ದು ಮುಂದಿನ ದಿನಗಳಲ್ಲಿ ಬಾರಿ ಪ್ರತಿಭಟನೆ ನಡೆಯುವುದು ನಿಶ್ಚಿತವಾಗಿದೆ ಎಂಬ ಎಚ್ಚರಿಕೆ ನೀಡಲಾಯಿತು.

ಪ್ರತಿಭಟನೆ ಅಂಗವಾಗಿ ಗ್ರಾಮದ ರಸ್ತೆಯಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಿದರು. ಪ್ರತಿಭಟನೆ ಹಿನ್ನಲೆಯಲ್ಲಿ ಗ್ರಾಮದ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಬಂದ್ ಮಾಡಿ ಪ್ರತಿಭಟನೆ ಬೆಂಬಲ ವ್ಯಕ್ತಪಡಿಸಿದರು. ಗ್ರಾಮದಲ್ಲಿನ ರಾಜ್ಯ ಹೆದ್ದಾರಿ 107ರಲ್ಲಿನ ಸಂಚಾರಕ್ಕೆ ತಡೆ ಒಡ್ಡಿ ಮುಂಜಾನೆ 11 ರಿಂದ ಮಧ್ಯಾಹ್ನ 3 ರವರಗೆ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅರ್ಚನಾ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಗೆ ಕರ್ನಾಟಕ ಬೆಳೆಗಾರರ ಒಕ್ಕೂಟ, ಹಾಸನ ಬೆಳೆಗಾರರ ಸಂಘ, ಹೆತ್ತೂರು ಹೋಬಳಿ ಬೆಳೆಗಾರರ ಸಂಘ, ವಿವಿಧ ಕನ್ನಡಪರ ಸಂಘಟನೆಗಳು ಹಾಗೂ ಸ್ತ್ರೀಶಕ್ತಿ ಸಂಘಗಳ ಒಕ್ಕೂಟದ ಸದಸ್ಯರು ಬೆಂಬಲ ವ್ಯಕ್ತಪಡಿಸಿದ್ದಾರೆ.

ವಳಲಹಳ್ಳಿ ಪಂಚಾಯತ್ ವ್ಯಾಪ್ತಿ ಬೆಳೆಗಾರರ ಸಂಘದ ಅಧ್ಯಕ್ಷ ಸಿ.ಎಂ ಬಾಲು ಅವರು ಪ್ರತಿಭಟನೆ ನೇತೃತ್ವವನ್ನು ವಹಿಸಿದ್ದರು. ವಳಲಹಳ್ಳಿ ಗ್ರಾ.ಪಂ ಅಧ್ಯಕ್ಷ ರೇಣುಕಾ ಬೊಮ್ಮನಕೆರೆ, ಹಾಸನ ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ಸುಬ್ರಮಣ್ಯ, ಮಾಜಿ ಶಾಸಕ ಎಚ್.ಎಂ ವಿಶ್ವನಾಥ್, ಜಿಪಂಮಾಜಿ ಸದಸ್ಯೆ ಉಜ್ಮರುಜ್ವಿ ಸುದರ್ಶನ್, ಮುರುಳಿಮೋಹನ್, ಕರಡಿಗಾಲ ಕೃಷ್ಣೆಗೌಡ, ವಳಲಹಳ್ಳಿ ಅಶ್ವಥ್, ಬೆಕ್ಕಿನಹಳ್ಳಿ ನಾಗರಾಜ್ ಮುಂತಾದವರಿದ್ದರು.

ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಎಚ್.ಕೆ ಕುಮಾರಸ್ವಾಮಿ ಮಾತನಾಡಿ, ʼರಾಜಕೀಯಕ್ಕಿಂತ ತಾಲೂಕಿನ ರೈತರ ಹಿತಮುಖ್ಯ ಆದ್ದರಿಂದ ಸಮಸ್ಯೆ ಶಾಶ್ವತ ಪರಿಹಾರಕ್ಕಾಗಿ ತಾಲೂಕಿನ ಬೆಳೆಗಾರರು ತೆಗೆದುಕೊಳ್ಳುವ ಎಲ್ಲಾ ನಿರ್ಣಯಗಳಿಗೂ ನಾನು ಬದ್ದನಾಗಿರುತ್ತೇನೆ. ಸದ್ಯ ವಿಧಾನಸಭೆ ಚಲೋ ಅಥವಾ ಬೆಳಗಾಂ ಅಧಿವೇಶನ ಮುತ್ತಿಗೆಯಂತ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸರ್ಕಾರದ ಗಮನ ಸೆಳೆಯುವಂತ ಕೆಲಸ ಮಾಡೋಣ. ಈಗಾಗಲೇ ಹಲವು ಬಾರಿ ವಿಧಾನಸಭೆಯಲ್ಲಿ ಹಾಗೂ ಖಾಸಗಿಯಾಗಿ ಹಲವು ಬಾರಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಕಾಡಾನೆ ಸಮಸ್ಯೆ ಪರಿಹಾರದ ಬಗ್ಗೆ ಚರ್ಚೆ ನಡೆಸಿದ್ದೇನೆ. ಕಳೆದ ಬಾರಿ ಮೂರು ಕಾಡಾನೆಗಳನ್ನು ಸೆರೆಹಿಡಿಯಲಾಗಿದೆ. ಸದ್ಯ ವಳಲಹಳ್ಳಿ ಭಾಗದಲ್ಲಿರುವ ತುಂಟಾನೆಗಳ ಸೆರೆಹಿಡಿಯುವಂತೆ ಶೀಘ್ರದಲ್ಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಲಿದ್ದೇನೆ. ಶೀಘ್ರವೇ ಮುಖ್ಯಮಂತ್ರಿಗಳು ಸಕಲೇಶಪುರಕ್ಕೆ ಆಗಮಿಸಿ ಕಾಡಾನೆ ಸಮಸ್ಯೆ ಅರಿಯುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಮಾತನಾಡಿದ್ದಾರೆ.

ಜಟಾಪಟಿ:

ರೈತರ ಕೆಲಸ ಬೆಳೆ ಬೆಳೆಯುವುದು ಅದನ್ನು ಮಾರುಕಟ್ಟೆಗೆ ತಲುಪಿಸುವುದು ಆದರೆ, ತಾಲೂಕಿನ ರೈತರ ದುರದೃಷ್ಟ, ಸಮಸ್ಯೆ ಪರಿಹಾರಕ್ಕಾಗಿ ರೈತರು ರಸ್ತೆಯಲ್ಲಿ ಕುಳಿತುಕೊಳ್ಳುವಂತಾಗಿದೆ. ಆದರೆ, ಕ್ಷೇತ್ರದ ದುರದೃಷ್ಟ ಎಂದರೆ ತಿಂಗಳಿಗೆ ನಾಲ್ಕುವರೆ ಲಕ್ಷ.ರೂ ಸಂಬಳ ಪಡೆಯುವ ಕ್ಷೇತ್ರದ ಜನಪ್ರತಿನಿಧಿಯೇ ಚಳುವಳಿಯಲ್ಲಿ ಕುಳಿತುಕೊಳ್ಳುತ್ತಾರೆಂದು ಮಾಜಿ ಶಾಸಕ ಎಚ್.ಎಂ ವಿಶ್ವನಾಥ್, ಶಾಸಕರ ಹೆಸರು ಹೇಳದೆ ಚುಚ್ಚಿದರು. ಇದರಿಂದ ಕೆರಳಿದ ಶಾಸಕ ಎಚ್.ಕೆ ಕುಮಾರಸ್ವಾಮಿ, ಸಭೆಯಲ್ಲಿ ಸುಳ್ಳು ಹೇಳುವ ಮೂಲಕ ಕ್ಷೇತ್ರದ ಜನರ ದಿಕ್ಕುತಪ್ಪಿಸುವ ಕೆಲಸ ಮಾಡಬೇಡಿ. ಸಮಸ್ಯೆ ಪರಿಹಾರದ ಬಗ್ಗೆ ನನಗೂ ತಿಳಿದಿದೆ. ನೀವು ಅದನ್ನೆಲ್ಲ ಮಾತನಾಡ ಬೇಡಿ, ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ನಾನು ಸಾಕಷ್ಟು ಕೆಲಸ ಮಾಡಿದ್ದೇನೆ ಸುಮ್ಮನಿರಿ  ಎಂದರು.

ಇದರಿಂದ ಮತ್ತಷ್ಟು ಕೆರಳಿದ ಮಾಜಿ ಶಾಸಕರು ನಿಮಗೇನ್ರಿ ಗೊತ್ತು? ಶಾಸನ ಸಭೆಯಲ್ಲಿ ಕೆಲಸ ಮಾಡಿ ಎಂದು ನಿಮ್ಮನ್ನು ಕಳುಹಿಸಿದರೆ ಬೀದಿಗೆ ಬಂದು ಜನರೊಂದಿಗೆ ಪ್ರತಿಭಟನೆಯಲ್ಲಿ ಕುಳಿತುಕೊಳ್ಳುತ್ತೀರಾ. ಜಿಲ್ಲೆಯಲ್ಲಿ ಮೂವರು ವಿಧಾನಪರಿಷತ್ ಸದಸ್ಯರು, ಓರ್ವ ಸಂಸದ ರಾಜ್ಯ ಸಭಾ ಸದಸ್ಯ, ಪ್ರಧಾನಿ ಪಟ್ಟ ಏರಿದ್ದ ಎಚ್.ಡಿ ದೇವೆಗೌಡರಂತ ಮುತ್ಸದ್ಧಿ ಇದ್ದರು. ತಾಲೂಕಿನ ಸಮಸ್ಯೆ ಬಗೆಹರಿಯದೆ ಇರಲು ಕ್ಷೇತ್ರದ ಶಾಸಕರದ್ದೇ ವೈಪಲ್ಯ ಕಾರಣ. ಇವರಿಗೆ ಮುಂದಿನ ಚುನಾವಣೆಯಲ್ಲಿ ಉತ್ತರ ನೀಡುವ ಕೆಲಸವಾಗ ಬೇಕಿದೆ. ಶಾಸಕರ ನಿರ್ಲಕ್ಷದಿಂದ  ಪರಿಣಾಮ ತಾಲೂಕಿನ ಸಂಪನ್ಮೂಲವನ್ನು ಬರಿದು ಮಾಡುವ ಕೆಲಸ ನಡೆಯುತ್ತಿದೆ. ಎಂದು ಆರೋಪಿಸಿದರು. ತಾಲೂಕನ್ನು ಆಳುವವರ ಚಿತಾವಣೆಯಿಂದಲೇ ತಾಲೂಕಿನಲ್ಲಿ ಜಾತಿಜಾತಿ ಮದ್ಯೆ ಕಂದಕ ನಿರ್ಮಾಣಗೊಳ್ಳುತ್ತಿದೆ ಎಂದು ಆರೋಪಿಸಿದರು. ಎಚ್.ಎಂ ವಿಶ್ವನಾಥರ ಏರುದ್ವನಿಯ ಬಾಷಣದಿಂದಾಗಿ ಶಾಸಕ ಎಚ್.ಕೆ ಕುಮಾರಸ್ವಾಮಿ, ಸರಿಸ್ವಾಮಿ ನಿಮ್ಮದೆ ಸರಿ ಎಂದು ಸುಮ್ಮನದಾರು.

You cannot copy content of this page

Exit mobile version