(ಈ ವರೆಗೆ…)
ಲಕ್ಷ್ಮಿಯ ತಿಥಿ ಕಾರ್ಯ ಮುಗಿದ ಮೇಲೆ ಚಂದ್ರಹಾಸನಿಗೆ ಮದುವೆ ಮಾಡಲು ಹೆಣ್ಣು ನೋಡಲು ಶುರುಮಾಡುತ್ತಾರೆ. ಆತನಿಗೆ ಯಾರೂ ಇಷ್ಟವಾಗುವುದಿಲ್ಲ. ಕೊನೆಗೆ ಅಪ್ಪನಿಗೆ ಲಕ್ಷ್ಮಿಯನ್ನೇ ಹೋಲುವ ಬಸವಯ್ಯನ ಸುಂದರಿ ಮಗಳ ನೆನಪಾಗುತ್ತದೆ. ತಡಮಾಡದೆ ಹೆಣ್ಣುಕೇಳಲು ಅವರ ಮನೆಗೆ ಹೋಗುತ್ತಾನೆ. ಮದುವೆ ಸಂಬಂಧ ಕುದುರಿತೇ? ಓದಿ.. ವಾಣಿ ಸತೀಶ್ ಅವರ ತಂತಿ ಮೇಲಣ ಹೆಜ್ಜೆಯ ಇಪ್ಪತ್ತನಾಲ್ಕನೆಯ ಕಂತು.
ಲಕ್ಷ್ಮಿಯ ಸಾವಿನ ಸುದ್ದಿಗಿಂತಲು ಮಿಗಿಲಾಗಿ ಬೋಪಯ್ಯ ತನ್ನ ಮನೆಯ ಹೆಣ್ಣು ಕೇಳುತ್ತಿರುವುದನ್ನು ಕಂಡು ದಿಗ್ಭ್ರಮೆ ಗೊಂಡ ಬಸವಯ್ಯ “ಇದೆಂತ ಮಾತು ಅಂತ ಆಡ್ತಿದ್ದೀರಿ ಬುದ್ದಿ ಬುಡ್ತು ಅನ್ನಿ. ಕುಲಸ್ತ್ರಲ್ಲ ಜಾತ್ಯಸ್ತ್ರಲ್ಲ ಹೋಗ್ಲಿ ಅಂತಸ್ತ್ನಲ್ಲು ನಿಮಗೆ ಸರಿಗಟ್ಟ್ ನಿಲ್ಲೋರಲ್ಲ. ದರಿದ್ರಾನೆ ಹಾಸ್ ವಚ್ಕೊಂಡಿರೋ ನಮ್ಮೊಂತೋರ್ ಮನೆಲಿ ಹೆಣ್ಣ್ ಕೇಳ್ತಿದ್ದೀರಲ್ಲ ಇದು ಹೆಂಗ್ ಸರಿಯಾದದು ಬುದ್ದಿ. ಅಮ್ಮೋರ್ ಆಗ್ಲಿ, ಚಂದ್ರಹಾಸಪ್ಪೊರಾಗ್ಲಿ ಇದ್ನ ಒಪ್ಪಾರ. ನಿಮ್ಮ ಬಂಧು ಬಳಗ ಆದ್ರೂ ಏನ್ ಅಂತದೆ ಅಂತ ಯೋಚ್ನೆಮಾಡಿ. ನನ್ನ ಮಗಳು ನಿಮ್ಮ ಮಗಳಂಗೆ ಅವ್ಳೇ, ಅನ್ನೋ ಒಂದೇ ಕಾರ್ಣುಕ್ಕೆ ಅಷ್ಟು ಸರಾಗ್ವಾಗಿ ಸಂಬಂಧ ಬೆಸ್ಕಬುಡ್ತದ ಬುದ್ದಿ. ನಾವು ಹೆಣ್ಣ್ ಹೆತ್ತವ್ರು ಎಲ್ಲಾ ಕಡೆಯಿಂದ್ಲು ಯೋಚ್ನೆ ಮಾಡಬೇಕಲ್ವುವ್ರ. ನಾಳೆ ಮನೆಯಿಂದ ಹೊರಿಕೋದ್ ಮಗ ಇರ್ಸು ಮುರ್ಸು ಅನ್ಬೋಸ್ ಬಾರ್ದು ನೋಡಿ” ಎಂದು ತನ್ನ ಒಳಗಿನ ಆಸೆಯನ್ನು ಮೆಟ್ಟಿ ನಿಷ್ಠುರವಾಗಿ ನುಡಿದ.
ಬಸವಯ್ಯ ಈ ಸಂಬಂಧ ಒಪ್ಪೇ ಒಪ್ಪುತ್ತಾನೆ ಎಂಬ ದೃಢ ವಿಶ್ವಾಸ ಇಟ್ಟು ಹೆಣ್ಣು ಕೇಳಿದ್ದ ಅಪ್ಪನಿಗೆ ತುಸು ಕಸಿವಿಸಿ ಆಯಿತು. ಈ ಎಲ್ಲಾ ಆಲೋಚನೆಗಳನ್ನು ಮಾಡಿಯೇ ಇಲ್ಲಿಗೆ ಬಂದಿದ್ದ ಅಪ್ಪ ” ಆಡೋರ್ ಮಾತು, ಮನೆ ಸಂಕ್ಟುಕ್ಕೆ ಮದ್ದಾದದ ಬಸವಯ್ಯ. ನಮ್ ಸಾಕಿ ಲಕ್ಷ್ಮಿನ ಮಡ್ಲುಕ್ಕಟ್ಕೊಂಡು ಬರುವಾಗ ಯಾವ ಜಾತಿ, ಯಾವ ಕುಲ ಅಂತ ನೋಡ್ಲಿಲ್ಲ. ಹೆತ್ತ ಮಕ್ಕಳಿಗಿಂತ ಒಂದು ಮುಷ್ಟಿ ಹೆಚ್ಚ್ಗೆ ಪ್ರೀತಿ ಕೊಟ್ಟು ಸಾಕಿದ್ಲು. ಅವಳೇನಾರ ಈಗ ನಿನ್ ಮಗ್ಳು ಮಖಾ ನೋಡಿದ್ರೆ ಹೋದ ಜೀವ ಬಂದಷ್ಟು ಖುಸಿ ಪಡ್ತಳೆ. ನಮ್ ಚಂದ್ರಹಾಸ್ನು ಇದುಕ್ಕೆ ಎದ್ರಾಡಕಿಲ್ಲ ಅನ್ಕಂಡಿದ್ದೀನಿ. ಈಗ ನನಗೆ ಬೇಕಾಗಿರದು ನಿನ್ನ ಒಪ್ಕೆ, ಮುಂದಿದ್ದು ನನಗ್ ಬುಡಪ್ಪ” ಎಂದ.
ಎರಡು ವರ್ಷಗಳ ಹಿಂದೆ ಬಸವಯ್ಯನ ಹೆಂಡತಿ ಲಕ್ಕಮ್ಮ ಹಾವು ಕಚ್ಚಿ ಸತ್ತಿದ್ದರಿಂದಾಗಿ, ಮನೆಯ ಒಳಗಿನ ಜವಾಬ್ದಾರಿ ಮಗಳು ಯಶೋಧೆಯ ಮೇಲೆ ಬಿದ್ದರೆ, ಮನೆ ಹೊರಗಿನ ಜವಾಬ್ದಾರಿ ಮಗ ರಂಗನ ಮೇಲೆ ಬಿದ್ದಿತ್ತು. ಹೆಂಡತಿಯ ಸಾವನ್ನು ಅರಗಿಸಿಕೊಳ್ಳಲಾರದೆ ಕುಸಿದಿದ್ದ ಬಸವಯ್ಯನಿಗೆ, ಮಳೆಗಾಲ, ಚಳಿಗಾಲದಲ್ಲಿ ಮಾತ್ರ ಬಂದು ಹಣಕಿ ಹೋಗುತ್ತಿದ್ದ ಗೂರಲು ರೋಗ, ಇತ್ತೀಚೆಗೆ ಖಾಯಂ ಆಗಿ ಕೆದರಿ ನಿಂತು ಹೈರಾಣ ಮಾಡಿ ಬಿಟ್ಟಿತ್ತು. ಅವ್ವ ಅಪ್ಪನ ಒತ್ತಾಯಕ್ಕೆ ಮಣಿದು ಹಾಗೂ ಹೀಗೂ ಎಂಟನೇ ತರಗತಿವರೆಗೆ ಇಸ್ಕೂಲಿನ ನೊಗ ಹೊತ್ತು ಎಳೆದಾಡಿ ಬಂದ ರಂಗಸ್ವಾಮಿ, ಅವ್ವ ಸತ್ತ ವರ್ಷದೊಳಗೆ ತನ್ನ ಓದಿಗೆ ಎಳ್ಳು ನೀರು ಬಿಟ್ಟು ಪಕ್ಕದ ಸಂಪನಕೊಪ್ಪಲ ಪೇಟೆಯಲ್ಲಿ ಗಾರೆ ಕೆಲಸಕ್ಕೆ ಇಳಿದಿದ್ದ.
ಗೂರಲಿನೊಳಗೆ ಗೋರಾಡುತ್ತಿದ್ದ ಬಸವಯ್ಯನಿಗೆ ಚೆಂದುಳ್ಳೇ ಚೆಲುವೆ ಮಗಳು ಯಶಿಯನ್ನು, ಕೀಚಕರ ಕಣ್ಣು ತಪ್ಪಿಸಿ ಮುಚ್ಚಟೆ ಮಾಡುವುದೆ ಒಂದು ದೊಡ್ಡ ಸವಾಲಾಗಿ ಬಿಟ್ಟಿತ್ತು. ಕೆಲವು ಅಕ್ಕ ಪಕ್ಕದ ಮೇಲ್ಜಾತಿಯ ಶ್ರೀಮಂತರು ಹಣದ ಆಸೆ ತೋರಿಸಿ ಗುಟ್ಟಾಗಿ ಕೂಡಿಕೆ ಮಾಡಿಕೊಳ್ಳಲು ಕೇಳಿದ್ದು ಉಂಟು. ಇರುವ ಕಾಯಿಲೆಯ ಜೊತೆಗೆ ಈ ಎಲ್ಲಾ ಕೊರಗು ಸೇರಿ ಬಸವಯ್ಯನ ಓಡಾಡುವ ತ್ರಾಣವನ್ನೇ ಕಸಿದುಕೊಂಡು ಬಿಟ್ಟಿತ್ತು. ವಿಧಿ ಇಲ್ಲದೆ ಪೂರ್ತಿಯಾಗಿ ಮಗನ ಮೇಲೆ ಒರಗಿ ಕೊಂಡ ಬಸವಯ್ಯ, ಈಗ ಮಲಗಿದಲ್ಲಿಯೇ ಹೊರಳಾಡುತ್ತಾ ಈ ಎಲ್ಲಾ ಸಂಕಟಗಳನ್ನು ತಾನು ಇದುವರೆಗೆ ನಂಬಿ ಬಂದ ಗವಿರಂಗಪ್ಪನ ಪಾದಕ್ಕೆ ಹಾಕಿ ತೆಪ್ಪಗಾಗಿ ಬಿಟ್ಟಿದ್ದ.
ಇದ್ದಕ್ಕಿದ್ದಂತೆ ಹೀಗೆ ಹುಡುಕಾಡಿಕೊಂಡು ಬಂದು ತನ್ನ ಮನೆಯ ಹೆಣ್ಣು ಕೇಳುತ್ತಿರುವ ಬೋಪಯ್ಯನನ್ನು ಕಂಡು ತನ್ನ ಮನೆ ದೈವವೇ ಮಗಳನ್ನು ಕಾಪಾಡಲು ಬೋಪಯ್ಯನ ರೂಪದಲ್ಲಿ ಅವತರಿಸಿ ಬಂದಂತೆ ಭಾವಿಸಿದ ಬಸವಯ್ಯ, ಕೃತಜ್ಞತೆಯಿಂದ ಕೈ ಮುಗಿದು “ಆ ನಮ್ಮಪ್ಪ ರಂಗಪ್ಪನಿಚ್ಚೆನೇ ಹಂಗಿದ್ರೆ ಹಂಗೆ ಆಗ್ಲಿ ಬುದ್ದಿ” ಎಂದು ಒಳಗೊಳಗೆ ಹಿಗ್ಗಿದ. ಅಪ್ಪನ ಮಾತಿನಂತೆ ಇನ್ನೆರಡು ದಿನದಲ್ಲಿ ಯಶಿಯನ್ನು ಸಂಪನಕೊಪ್ಪಲ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಕರೆದುಕೊಂಡು ಬಂದು ಹೆಣ್ಣು ತೋರಿಸುವುದೆಂದು ತೀರ್ಮಾನವಾಯಿತು.
ಮನೆಗೆ ಬಂದ ಅಪ್ಪ ಅವ್ವನ ಬಳಿ ಲಕ್ಷ್ಮಿಯ ಪಡಿಯಚ್ಚಿನಂತಿರುವ ಯಶೋಧಳ ಬಗ್ಗೆ ಹೇಳಿದ್ದೇ ತಡ, ಅವ್ವ “ಆ ಹುಡ್ಗಿನ ನಾನು ಈಗ್ಲೆ ನೋಡ್ಬೇಕು ಕರ್ಕೊಂಡೋಗಿ” ಎಂದು ಕುಳಿತು ಬಿಟ್ಟಳು. ಇತ್ತ ಬಸವಯ್ಯನ ಜಾತಿ ಮತ್ತು ಬಡತನದ ಬಗ್ಗೆ ಚೆನ್ನಾಗಿಯೇ ತಿಳಿದಿದ್ದ ಚಂದ್ರಹಾಸನಿಗೆ ಅಪ್ಪನ ಈ ನಡೆಯಿಂದ ಪಿತ್ತ ನೆತ್ತಿಗೇರಿತು ” ನಿನಗೇನಾರ ತಲೆಗಿಲೆ ಕೆಟೈತೆನಪ್ಪೊ ಜಾತಿ, ಜನಾಂಗ, ಮನೆತನ ಎಲ್ಲನೂ ಬುಟ್ಟು ಆ ಗತ್ಕೆಟ್ಟೋನ್ ಮನೆಗೆ ಹೆಣ್ಣ್ ಕೇಳ್ಕೊಂಡ್ ಹೋಗಿದ್ಯಲ್ಲ ಯಾರುನ್ನ್ ಕೇಳ್ಕೊಂಡು ಹೋದೆ. ನಾನಂತೂ ಸುತ್ರಾಮ್ ಆ ಜೋಪ್ಡಿಗೆ ಅಳಿಯ ಆಗಂತೂ ಹೋಗಕಿಲ್ಲ” ಎಂದು ಖಡಾಖಂಡಿತವಾಗಿ ಹೇಳಿ ಬಿಟ್ಟ.
ಆ ಹುಡುಗಿಯನ್ನು ನೋಡಲು ತುದಿಗಾಲಿನಲ್ಲಿ ನಿಂತಿದ್ದ ಅವ್ವ ಚಂದ್ರಹಾಸನ ಕೈಕಾಲು ಹಿಡಿದು “ನಮ್ ಹತ್ರುವೇ ಬೇಕಾದಂಗ್ ಇರುವಾಗ ಅವರ ಮನೆ ಅಂತಸ್ತು ಕಟ್ಟ್ಕೊಂಡು ಏನಾಗಬೇಕ್ಲಾ ಚಂದ್ರ. ಎಲ್ರು ಮೈನಾಗು ಹರಿಯದು ಒಂದೇ ರಕ್ತ ತಾನೆಯ. ಪಾಪ ಅವ್ವ ಇಲ್ಲುದು ಹುಡುಗಿ. ನಿನ್ನೇನು ಅವರ್ ಮನೆ ಮನೆವಾಳ್ತನುಕ್ಕೋಗು ಅಂತಿದಿವ. ಮದುವೆ ಮಾಡ್ಕೊಂಡು ಬಂದ್ ಮೇಲೆ ನಿನಗೆ ಇಷ್ಟ ಆದ್ರೆ ಅವರ ಮನೆಗೆ ಹೋಗು, ಬ್ಯಾಡದಿದ್ರೆ ಬುಡು. ಮೊದ್ಲು ಹೋಗಿ ಆ ಹುಡುಗಿ ನೋಡ್ಕೊಂಡ್ ಬರನ ಬರ್ಲಾ” ಎಂದು ಬೇಡಿಕೊಂಡಳು. ತಂಗಿಯ ಸಾವಿನ ಆಘಾತದಿಂದ ಆಗಷ್ಟೇ ಸುಧಾರಿಸಿಕೊಳ್ಳುತ್ತಿದ್ದ ಅವ್ವನಿಗೆ ಇನ್ನಷ್ಟು ಘಾಸಿ ಮಾಡಲು ಹಿಂಜರಿದ ಚಂದ್ರಹಾಸ “ಆಯ್ತು ಆ ಹುಡ್ಗಿ ನನಗಿಷ್ಟ ಆಗ್ದಿದ್ರೆ ಒತ್ತಾಯ ಮಾಡಕ್ಕೂಡ್ದು” ಎಂಬ ಶರತ್ತಿನ ಮೇಲೆ ಯಶೋಧಳನ್ನು ನೋಡಲು ಒಪ್ಪಿದ.
ರಂಗನಾಥ ಸ್ವಾಮಿಯ ಸನ್ನಿಧಿಯಲ್ಲಿ ಯಶೋಧಳನ್ನು ಕಂಡು ಬೆಕ್ಕಸ ಬೆರಗಾದ ಅವ್ವ ಬಾವುಕಳಾಗಿ “ಅವ್ವ ಲಕ್ಷ್ಮಿ….” ಎನ್ನುತ್ತಾ ಗಟ್ಟಿಯಾಗಿ ತಬ್ಬಿ ಮುಖದ ತುಂಬಾ ಲೋಚಲೋಚನೆ ಮುತ್ತಿಕ್ಕ ತೊಡಗಿದಳು. ಅವ್ವನ ಬಿಗುಪಿಗೆ ಉಸಿರು ಕಟ್ಟಿದ ಯಶಿ ದಿಕ್ಕುಗೆಟ್ಟವಳಂತೆ “ಅಯ್ಯೋ..ನಾನು ಯಶಿ….” ಎಂದು ಸಣ್ಣಗೆ ಒರಲಿದಳು. ಯಶೋಧಳಿಂದ ಅವ್ವನನ್ನು ಬಿಡಿಸಿ ಇತ್ತ ಕರೆದುಕೊಂಡು ಬಂದ ಚಂದ್ರಹಾಸ “ಆ ಹುಡ್ಗಿನ ಹಂಗ್ ಉಸ್ರು ಕಟ್ಟುಸ್ ಬುಟ್ಟಲ್ಲವ್ವ ಪಾಪ ಹೆಂಗ್ ಗಾಬ್ರಿ ಆಗೈತೆ ನೋಡು” ಎಂದು ಲೊಚಗುಟ್ಟಿದ. ಅವ್ವ ಅನಾಮತ್ತಾಗಿ ಚಂದ್ರಹಾಸನ ಕಾಲಿಗೆ ಬಿದ್ದು “ನಿನ್ ದಮ್ಮಯ್ಯಕನಪ್ಪ ಈ ಮದ್ವೆನ ಮಾತ್ರ ಬ್ಯಾಡ ಅನ್ನಬೇಡ ಈ ಹುಡುಗಿನ ನಮ್ಮನೆಗೆ ಕರ್ಕೊಂಡು ಹೋಗ್ಬುಡನ ಒಪ್ಕೊ” ಎಂದು ಅಂಗಲಾಚಿದಳು.
ನಿಜ ಹೇಳಬೇಕೆಂದರೆ ಯಶೋಧಳನ್ನು ಕಂಡು ಅವ್ವ ಅಷ್ಟೇ ಅಲ್ಲ ಚಂದ್ರಹಾಸನೂ ಬೆರಗು ಗೊಂಡಿದ್ದ. ಸಿರಿವಂತರ ಮನೆಯ ಮಗಳಂತೆ ಕಾಣುತ್ತಿದ್ದ ಯಶಿಯ ದಷ್ಟಪುಷ್ಟವಾದ ಮೈಕಟ್ಟು, ಉದ್ದನೆಯ ಜಡೆ, ಚಿವುಟಿದರೆ ರಕ್ತ ಚಿಮ್ಮುವಂತಿದ್ದ ಕೆಂಪನೆಯ ಬಣ್ಣ, ಬಟ್ಟಲು ಗಣ್ಣು ಎಲ್ಲವನ್ನು ಕಂಡ ಚಂದ್ರಹಾಸ “ಅಯ್ಯೊ ದೇವ್ರೆ ತೇಟ್ ನಮ್ಮ ಲಕ್ಷ್ಮಿಯಂಗೆ ಅವ್ಳಲ್ಲಪ್ಪ” ಎಂದು ತನಗೆ ಮಾತ್ರ ಕೇಳಿಸುವಂತೆ ಗೊಣಗಿ ಕೊಂಡಿದ್ದ. ಆ ಹುಡುಗಿಯನ್ನು ಮೇಲಿನಿಂದ ಕೆಳಗಿನ ವರೆಗೆ ನೋಡುವುದರ ಒಳಗೆ ಅವಳಿಗೆ ಮರುಳಾಗಿ ಮನಸ್ಸು ಕೊಟ್ಟು ಬಿಟ್ಟಿದ್ದ. ಹಾಗಾಗಿಯೇ ಅವ್ವನ ಎದುರು ಮರುಮಾತನಾಡದೆ ತಲೆತಗ್ಗಿಸಿ ನಿಂತು, ಅವ್ವನ ಬಿಗುಪಿನಿಂದ ಉಸಿರು ಕಟ್ಟಿದ್ದ ಅವಳನ್ನು ಕಣ್ಣ ತುದಿಯಿಂದಲೇ ಸಂತೈಸ ತೊಡಗಿದ್ದ. ಒಪ್ಪಿಗೆ ಕೇಳಲು ಬಂದ ಅಪ್ಪನಿಗೆ ತನ್ನ ಒಳ ಆಸೆಯನ್ನು ತೋರಗೊಡದೆ “ನಾನು ಬ್ಯಾಡ ಅಂದ್ರೆ ಈ ಅವ್ವ ಬುಟ್ಟಾಳ. ನಾನು ಬ್ಯಾಡ ಅನ್ನದು, ಮತ್ತೆ ಇವ್ಳುನ್ ಆಸ್ಪತ್ರೆಗೆ ಹೊತ್ಕೊಂಡ್ ಓಡಾಡದು, ಈ ಪಜೀತಿನೆ ಬ್ಯಾಡ ನಿಮ್ ಇಷ್ಟ ಬಂದಂಗ್ ಮಾಡಿ” ಎಂದು ದೇವಸ್ಥಾನದ ಹೊರ ಬಂದು ಅಲ್ಲೇ ಇದ್ದ ನವಗ್ರಹದ ಕಲ್ಲುಗಳನ್ನು ಸುತ್ತ ತೊಡಗಿದ. ಈ ಮೂರು ನಾಲ್ಕು ತಿಂಗಳಿಂದ ಹೆಣ್ಣಿಗಾಗಿ ಅಲೆದು ಸಾಕಾಗಿದ್ದ ಅಪ್ಪನಿಗೆ ಅವನ ಇಷ್ಟೇ ಅಭಿಪ್ರಾಯ ಸಾಕಾಗಿತ್ತು. ಮತ್ತೆ ಅವನನ್ನು ಕೆಣಕುವ ಗೋಜಿಗೆ ಹೋಗಲಿಲ್ಲ. ತಿಂಗಳೊಳಗೆ ಮನೆ ತುಂಬಿಸಿ ಕೊಂಡು ಬಿಡಬೇಕೆಂದು ತುದಿಗಾಲಲ್ಲಿ ನಿಂತ ಅವ್ವನ ಬಯಕೆಯಂತೆ ಒಳ್ಳೆಯ ದಿನವನ್ನು ಅದೇ ದೇವಸ್ಥಾನದಲ್ಲಿ ಗುರುತು ಹಾಕಿಸಿಕೊಂಡು ಮನೆಗೆ ಮರಳಿದರು.
ವಾಣಿ ಸತೀಶ್
ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ