Home ಕರ್ನಾಟಕ ಚುನಾವಣೆ - 2023 ರಂಗಭೂಮಿಗೆ ಪಕ್ಷ ರಾಜಕಾರಣದ ಧೂಳು?

ರಂಗಭೂಮಿಗೆ ಪಕ್ಷ ರಾಜಕಾರಣದ ಧೂಳು?

0

ಕರ್ನಾಟಕ ಚುನಾವಣೆಯ ಹೊಸ್ತಿಲಲ್ಲಿತ್ತು. ಆಡಳಿತಾರೂಢ ಬಿಜೆಪಿ ಸರಕಾರಕ್ಕೆ ಹೇಗಾದರೂ ಮಾಡಿ ಚುನಾವಣೆಯನ್ನು ಗೆಲ್ಲಲೇಬೇಕಾಗಿತ್ತು. ಜನರ ಮಧ್ಯೆ ಒಡಕನ್ನು ತಾರದೆ, ವೈಷಮ್ಯವನ್ನು ಬಿತ್ತದೆ ಅದು ಸುಲಭ ಸಾಧ್ಯವಾಗದು ಎಂಬುದು ಅವರಿಗೆ ಗೊತ್ತಿತ್ತು. ಅದಕ್ಕೆ ರಂಗಭೂಮಿಯೂ ಒಂದು ಕಿರು ಹಾದಿಯಾಗಿತ್ತು…. ರಂಗಭೂಮಿ ದಿನದ ನೆಪದಲ್ಲಿ, ರಾಜಕಾರಣದಿಂದ ರಂಗಭೂಮಿ ವಿರೂಪಗೊಳ್ಳುತ್ತಿರುವುದರ ಬಗ್ಗೆ  ಉಷಾ ಕಟ್ಟೆಮನೆ ಬರೆದಿದ್ದಾರೆ.

ಪ್ರತಿವರ್ಷ ವಿಶ್ವ ರಂಗಭೂಮಿ ದಿನದ ಸಂದರ್ಭದಲ್ಲಿ ಖ್ಯಾತನಾಮರಾದ ರಂಗತಜ್ಞರೊಬ್ಬರು ವಿಶ್ವರಂಗಭೂಮಿ ಸಂದೇಶ ನೀಡುತ್ತಾರೆ. ಈ ಬಾರಿ ಆ ಗೌರವವನ್ನು ಪಡೆದುಕೊಂಡವರು ಈಜಿಪ್ತಿನ ಸಮಿಹಾ ಅಯೌಬ್. ಆ ಸಂದೇಶದ ವಿವರಗಳನ್ನು ನಾನಿಲ್ಲಿ ಕೊಡುವುದಿಲ್ಲ. ಆದರೆ ಸಮಿಹಾ ಅಯೌಬ್ ತಮ್ಮ ಸಂದೇಶದಲ್ಲಿ ಜಗತ್ತಿನ ಮಹಾನ್ ರಂಗ ವಿದ್ವಾಂಸ ಸ್ಟಾನಿಸ್ಲಾವಾಸ್ಕಿಯವರ ಮಾತುಗಳನ್ನು ಉಲ್ಲೇಖಿಸುತ್ತಾರೆ. ಅದು ನಮ್ಮ ವರ್ತಮಾನಕ್ಕೆ ಅನ್ವಯಿಸುವುದರಿಂದ ಅದನ್ನಿಲ್ಲಿ ಉಲ್ಲೇಖಿಸದೆ ಮುಂದುವರಿಯುವುದು ಸಮಂಜಸವೆನಿಸಲಾರದು. ಅವರು ಹೇಳುತ್ತಾರೆ, ‘ನಿಮ್ಮ ಕಾಲುಗಳ ಮೇಲೆ ಬಿದ್ದಿರುವ ಮಣ್ಣಿನೊಂದಿಗೆ ಎಂದೂ ರಂಗಭೂಮಿಗೆ ಬರಬೇಡಿ. ನೀವು ಮೆತ್ತಿಕೊಂಡಿರುವ ಧೂಳು ಮತ್ತು ಕೊಳೆಯನ್ನು ಅಲ್ಲಿಯೇ, ಹೊರಗೆ ಬಿಟ್ಟುಬಿಡಿ. ನಿಮ್ಮ ಸಣ್ಣತನಗಳು, ಜಗಳಗಳು, ಸಣ್ಣ ತೊಂದರೆಗಳನ್ನು, ನಿಮ್ಮ ಜೀವನವನ್ನು ಹಾಳು ಮಾಡುವ ಎಲ್ಲಾ ವಸ್ತುಗಳನ್ನು ನಿಮ್ಮ ಪೋಷಾಕುಗಳಿಂದ ದೂರ ಬಿಟ್ಟು ಪರೀಕ್ಷಿಸಿ ನೋಡಿ. ಮತ್ತು ನಿಮ್ಮ ಕಲೆಗಾರಿಕೆಯಿಂದ ಎಲ್ಲರ ಗಮನವನ್ನು ಸೆಳೆಯಿರಿ.’

ಪ್ರತಿಯೊಬ್ಬ ಕಲಾವಿದನೂ ರಂಗಸ್ಥಳವನ್ನು ಹತ್ತುವ ಮುನ್ನ ಅದಕ್ಕೆ ನಮಸ್ಕರಿಸಿಯೇ ಬಲಗಾಲನ್ನಿಡುತ್ತಾನೆ. ಅದು ಭಾರತೀಯ ಸಂಸ್ಕೃತಿ. ಅಂದರೆ ಆತ/ಆಕೆ ಕಾಯಾ ವಾಚಾ ಮನಸಾ ತಾನು ಅಭಿನಯಿಸುವ ಪಾತ್ರದೊಡನೆ ಅವಿನಾಭಾವ ಸಂಬಂಧವನ್ನು ಹೊಂದುತ್ತಾರೆ. ಪಾತ್ರವೇ ಆಗಿಬಿಡುತ್ತಾರೆ. ಹಾಗಿರುವಾಗ ಆ ಪಾತ್ರವು ಸಮಾಜದ ಸಾಮರಸ್ಯವನ್ನು ಕದಡುವ ಹಾಗಿದ್ದರೆ? ಈ ವರ್ಷ ಅಂತಹ ಎರಡು ನಾಟಕಗಳು ರಂಗಭೂಮಿಯನ್ನು ಏರಿದ್ದವು. ಒಂದು, ಶಶಿರಾಜ್ ಕಾವೂರು ರಚಿಸಿದ ಕಾರ್ಕಳದ ಯಕ್ಷ ರಂಗಾಯಣ ನಿರ್ಮಾಣದ ಜೀವನರಾಂ ಸುಳ್ಯ ನಿರ್ದೇಶನದ ‘ಪರಶುರಾಮ’ ನಾಟಕ. ಇನ್ನೊಂದು ಅಡ್ಡಂಡ ಕಾರ್ಯಪ್ಪ ರಚಿಸಿ ನಿರ್ದೇಶಿಸಿದ ‘ಟಿಪ್ಪುವಿನ ನಿಜ ಕನಸುಗಳು’ ನಾಟಕ.

ಈ ಎರಡೂ ನಾಟಕಗಳ ಹುಟ್ಟಿಗೆ ಕಾರಣಗಳಿದ್ದವು. ಅವು ಆಡಳಿತಾರೂಢ ರಾಜಕಾರಣದ ಜೊತೆ ತಳುಕು ಹಾಕಿಕೊಂಡಿದ್ದವು. ಅಂದರೆ ಸಮೀಹಾ ಅಯೌಬ್ ಉಲ್ಲೇಖಿಸಿದ ಸ್ಟಾನಿಸ್ಲಾವಾಸ್ಕಿ ಹೇಳಿದಂತೆ ರಾಜಕಾರಣದ ಧೂಳಿನೊಂದಿಗೇ ರಂಗಭೂಮಿಯನ್ನು ಪ್ರವೇಶಿಸಿದ್ದವು.

ತುಳುವರನ್ನು ಸಿಟ್ಟಿಗೆಬ್ಬಿಸಿದ ಪರಶುರಾಮ ನಾಟಕ

ತುಳು ಸಂಸ್ಕೃತಿಗೂ ಪರಶುರಾಮನಿಗೂ ಯಾವುದೇ ಸಂಬಂಧ ಇಲ್ಲದಿದ್ದರೂ ತುಳುನಾಡನ್ನು ಪರಶುರಾಮ ಸೃಷ್ಟಿಯೆಂದು ಮತ್ತೆ ಮತ್ತೆ ಬಿಂಬಿಸುತ್ತಾ ಬರಲಾಗಿದೆ. ಆ ಪುರಾಣ ಪಾತ್ರವನ್ನು ಸ್ಥಾವರಗೊಳಿಸಲು ಆಡಳಿತ ಬಿಜೆಪಿ ಸರಕಾರವು ಕಾರ್ಕಳದಲ್ಲಿ ಪರುಶುರಾಮ ಥೀಮ್ ಪಾರ್ಕನ್ನು ಸ್ಥಾಪಿಸಿತ್ತು. ಅದರ ಉದ್ಘಾಟನೆಯ ಹಿನ್ನೆಲೆಯಲ್ಲಿ ಪರಶುರಾಮ ನಾಟಕ ರಂಗವೇರಿತು.

ಪುರಾಣದ ಪರಶುರಾಮ ಮಾತೃಹಂತಕ. ಆದರೆ ನಾಟಕದ ಪರಶುರಾಮ ಗೋರಕ್ಷಕ. ಈ ಪರಶುರಾಮ ತನ್ನ ತಾಯಿಯ ತಲೆ ಕಡೆಯುವುದಿಲ್ಲ. ಬದಲಾಗಿ ತಾಯಿ ರೇಣುಕೆಯೇ ಮಗನ ಕೈಯಿಂದ ಖಡ್ಗವನ್ನು ಕಸಿದುಕೊಂಡು ತನ್ನ ತಲೆಯನ್ನು ತಾನೇ ಕತ್ತರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಸರಿ, ಅದನ್ನು ಕೃತಿಕಾರರ ಮತ್ತು ನಿರ್ದೇಶಕರ ಸ್ವಾತಂತ್ರ್ಯ ಎಂದು ಒಪ್ಪಿಕೊಂಡರೂ ಥೀಮ್ ಪಾರ್ಕಿನಲ್ಲಿ ಕಡೆದು ನಿಲ್ಲಿಸಿದ ಪರಶುರಾಮನ ಮೂರ್ತಿ ವಿವಾದಕ್ಕೆ ಕಾರಣವಾಗಿತ್ತು. ತುಳುನಾಡು ದೈವ ಆರಾಧಕರ ಬೀಡು. ಇಲ್ಲಿ ದೇವರಿಗಿಂತಲೂ, ಭೂತಗಳೆಂದು ಕರೆಯಲ್ಪಡುವ ಕಾರಣಿಕ ದೈವಗಳೇ ದೇವರಿಗಿಂತಲೂ ಮೇಲು. ತುಳುವರ ದೈನಂದಿನ ಬದುಕನ್ನು ನಿರ್ದೇಶಿಸುವ ಇಂತಹ ‘ಸತ್ಯಗಳು’ ದೈವಗಳನ್ನು ಪುರಾಣ ಪಾತ್ರವೊಂದರ ಪದತಲದಲ್ಲಿ ಇರಿಸಿರುವುದು ಆರಾಧನಾ ರಂಗಭೂಮಿಗೆ ಮಾಡಿದ ಅವಮಾನ ಎಂದು ಪ್ರಜ್ಞಾವಂತ ತುಳುವರು ತರ್ಕಿಸಿದರು. ಹಾಗಾಗಿ ಅಭಿನಯ, ರಂಗಸಜ್ಜಿಕೆ, ಸಂಗೀತ, ಬೆಳಕು ಸೇರಿದಂತೆ ಎಲ್ಲಾ ಆಯಾಮದಿಂದಲೂ ಉತ್ತಮ ಪ್ರಯೋಗ ಕಂಡರೂ ಆಶಯದ ದೃಷ್ಟಿಯಿಂದ ವಿವಾದಕ್ಕೆಡೆಯಾಯಿತು. ಆದರೂ ನಾಡಿನ ಹಲವು ಕಡೆಗಳಲ್ಲಿ ಅದು ಪ್ರಯೋಗಗೊಳ್ಳುತ್ತಿದೆ.

ಸರ್ಕಾರದ ಹಣದಲ್ಲಿ ಹೆಣೆದ ʼಕೇಸರಿʼ ಬಲೆ

ಬಲಪಂಥೀಯರಿಂದ ಟ್ರೋಲ್ ಗೆ ಒಳಗಾಗಿದ್ದ, ಅವರಿಂದ ‘ಅರ್ಬನ್ ನಕ್ಸಲ್’ ಎಂದೇ ಬಿಂಬಿತವಾಗಿದ್ದ ಗಿರೀಶ್ ಕಾರ್ನಾಡ್ ಬರೆದ ನಾಟಕ ‘ಟಿಪ್ಪುವಿನ ಕನಸುಗಳು’. ಈ ನಾಟಕಕ್ಕೆ ಪ್ರತಿಸ್ಪರ್ಧಿಯಾಗಿ ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಬರೆದ ದಿಢೀರ್ ನಾಟಕ ‘ಟಿಪ್ಪುವಿನ ನಿಜ ಕನಸುಗಳು.

ಗಿರೀಶ್ ಕಾರ್ನಾಡ್ ನಾಟಕ ಬರೆಯಲು ಒಂದು ಹಿನ್ನೆಲೆಯಿತ್ತು. 1997 ಭಾರತದ ಸ್ವಾತಂತ್ರ್ಯೋತ್ಸ್ವದ 50ನೇ ವರ್ಷದ ಸಂಭ್ರಮ. ಈ ಐತಿಹಾಸಿಕ ನೆನಪಿಗಾಗಿ ಬಿಬಿಸಿ ಕಾರ್ನಾಡರಿಂದ ಟಿಪ್ಪು ಕುರಿತಾದ ನಾಟಕವನ್ನು ಬರೆಸಿತ್ತು. ಬ್ರಿಟಿಷರನ್ನು ಇನ್ನಿಲ್ಲದಂತೆ ಕಾಡಿದ ರಾಜ ಟಿಪ್ಪು ತಾನೇ? ಆದರೆ ‘ಟಿಪ್ಪು ನಿಜ ಕನಸುಗಳು’ ಹುಟ್ಟಿದ ಸಂದರ್ಭವನ್ನು ಗಮನಿಸಿ. ಕರ್ನಾಟಕ ಚುನಾವಣೆಯ ಹೊಸ್ತಿಲಲ್ಲಿತ್ತು. ಆಡಳಿತಾರೂಢ ಬಿಜೆಪಿ ಸರಕಾರಕ್ಕೆ ಹೇಗಾದರೂ ಮಾಡಿ ಚುನಾವಣೆಯನ್ನು ಗೆಲ್ಲಲೇಬೇಕಾಗಿತ್ತು. ಜನರ ಮಧ್ಯೆ ಒಡಕನ್ನು ತಾರದೆ, ವೈಷಮ್ಯವನ್ನು ಬಿತ್ತದೆ ಅದು ಸುಲಭ ಸಾಧ್ಯವಾಗದು ಎಂಬುದು ಅವರಿಗೆ ಗೊತ್ತಿತ್ತು. ಹಾಗಾಗಿ ಅವರ ಪ್ರಯತ್ನ ಎಲ್ಲಾ ನಿಟ್ಟಿನಿಂದಲೂ ಸಾಗಿತ್ತು. ಅದಕ್ಕೆ ರಂಗಭೂಮಿಯೂ ಒಂದು ಕಿರು ಹಾದಿಯಾಗಿತ್ತು. ಅದಕ್ಕಾಗಿ ಹುಟ್ಟಿಕೊಂಡದ್ದೇ ‘ಟಿಪ್ಪುವಿನ ನಿಜ ಕನಸುಗಳು.’

ಇತಿಹಾಸ ಓದಿಕೊಂಡವರಿಗೆ ಗೊತ್ತಿದೆ. ಟಿಪ್ಪು ಅಪ್ರತಿಮ ಯೋಧನಾಗಿದ್ದ, ಛಲಗಾರನಾಗಿದ್ದ. ಮುಂದಾಲೋಚನೆಯುಳ್ಳ ಕನಸುಗಾರನಾಗಿದ್ದ. ಒಳ್ಳೆಯ ಆಡಳಿತಗಾರನೂ ಆಗಿದ್ದ. ಹಾಗಾಗಿದ್ದರಿಂದಲೇ ತನ್ನ ರಾಜ್ಯಕ್ಕೆ ಕಂಟಕಪ್ರಾಯರಾಗಿದ್ದ ಬ್ರಿಟಿಷರನ್ನು ಒದ್ದೋಡಿಸಲು ಸರ್ವ ಪ್ರಯತ್ನವನ್ನೂ ಮಾಡಿದ್ದ. ಇಂತಹ ಟಿಪ್ಪು ಜನಮಾನಸದಲ್ಲಿ ಆದರಣೀಯ ಸ್ಥಾನವನ್ನು ಪಡೆದಿದ್ದ. ಅದನ್ನು ಭಂಗ ಮಾಡುವ ಸಾಂಘಿಕ ಪ್ರಯತ್ನಕ್ಕೆ ಪೂರಕವಾಗಿ ಅಡ್ಡಂಡ ಕಾರ್ಯಪ್ಪ ಇತಿಹಾಸದ ಸಂದುಗೊಂದುಗಳಲ್ಲಿ ತಮಗೆ ಬೇಕಾದುದನ್ನು ಹೆಕ್ಕಿ ತೆಗೆದು ಅದಕ್ಕೆ ಬಣ್ಣದ ಬೇಗಡೆಗಳನ್ನು ಸುತ್ತಿ ನಾಟಕ ಹುಟ್ಟಿಸಿದರು. ಟಿಪ್ಪುವನ್ನು ಕೊಂದವರೆಂದು ಉರಿಗೌಡ ಮತ್ತು ನಂಜೇಗೌಡರೆಂಬ ಕಲ್ಪಿತ ಪಾತ್ರಗಳ ಸೃಷ್ಟಿಯಾಯಿತು. ಅದೇ ನಿಜ ಇತಿಹಾಸ ಎಂದು ಬಿಂಬಿಸಲಾಯಿತು. ಆದರೆ ತಮ್ಮನ್ನು ದೇಶದ್ರೋಹಿಗಳೆಂದು ಬಿಂಬಿಸಿದ ಈ ನಾಟಕದ ವಿರುದ್ಧ ಗೌಡ ಸಮಾಜ ಸಿಡಿದೆದ್ದಿತು. ಆಂದೋಲನದ ಬೆದರಿಕೆ ಹಾಕಿತು. ಸದ್ಯಕ್ಕಿದು ತೆರೆಮರೆಗೆ ಸರಿದಿದೆ. ದ್ವೇಷವನ್ನೇ ಬಿತ್ತಿ ದ್ವೇಷದ ಬೆಳೆಯನ್ನೇ ಪಡೆಯುವ ಹುನ್ನಾರವನ್ನು ಕಲೆಯ ಬಲೆಯಿಂದ ಮುಚ್ಚಲಾಗಿತ್ತು.

ಕರ್ನಾಟಕದಲ್ಲಿ ಹಲವಾರು ರೆಪರ್ಟರಿಗಳಿವೆ. ಅವೆಲ್ಲಾ ಖಾಸಗಿಯವವು. ಹಾಗಾಗಿ ಅವುಗಳು ತಮ್ಮ ತಿರುಗಾಟಕ್ಕೆ ಪ್ರಯೋಗಕ್ಕೆ ಅನುಕೂಲಕರವಾದ ನಾಟಕಗಳನ್ನು ಕೈಗೆತ್ತಿಕೊಳ್ಳುತ್ತವೆ. ಅದರಲ್ಲಿ ಮಾರ್ಪಾಡುಗಳನ್ನು ಮಾಡಿಕೊಳ್ಳುತ್ತವೆ. ರಂಗಭೂಮಿಯ ಕ್ರಿಯಾಶೀಲತೆ ಮತ್ತು ನಿರಂತರತೆಯನ್ನು ಕಾಯ್ದುಕೊಳ್ಳಲು ಹಳೆಯ ನಾಟಕಗಳು ಕೂಡ ಪುನರಾವರ್ತನೆಗೊಳ್ಳುತ್ತಿರಬೇಕು. ಆದರೆ ಅದೇ ಚಾಳಿಯಾಗಬಾರದು. ಸರಕಾರದ ಅನುದಾನದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಂಗಾಯಣದ ಚಟುವಟಿಗಳನ್ನು ಪ್ರಶ್ನಿಸುವ ಹಕ್ಕು ಜನರಿಗಿದೆ. ಯಾಕೆಂದರೆ ಅದು ನಡೆಯುವುದು ಜನರ ತೆರಿಗೆ ದುಡ್ಡಿನಿಂದ. ಅಲ್ಲಿಯ ಕಲಾವಿದರಿಗೆ ಸರಕಾರವೇ ಸಂಬಳ ಕೊಡುತ್ತದೆ. ಅಂದರೆ ಜನರೇ ಸಂಬಳ ಕೊಡುತ್ತಾರೆ.

ಇದೆಲ್ಲದರ ಧೂಳಿನಲ್ಲಿ, ಸದುದ್ದೇಶದಿಂದ ರಂಗಕ್ಕೇರಿದ ಕೆಲವು ಪ್ರಯತ್ನಗಳು ಮಸುಕಾದವು. ಇದರಲ್ಲಿ ಬಹುಮುಖ್ಯವಾಗಿ ಹೆಸರಿಸಬೇಕಾದ್ದು ಕೆ.ಪಿ.ಲಕ್ಷ್ಮಣ್ ನಿರ್ದೇಶನದ ‘ದಕ್ಲಕಥಾ ದೇವಿ’. ತಳ ಸಮುದಾಯದ ಬದುಕಿನ ವಿವರಗಳನ್ನು ತಮ್ಮ ಬರಹಗಳಲ್ಲಿ ಜಗತ್ತಿನೆದುರು ತೆರೆದಿಟ್ಟ ಕೆ.ಬಿ.ಸಿದ್ದಯ್ಯನವರ ಬದುಕು ಬರಹಗಳನ್ನು ಆಧರಿಸಿದ ನಾಟಕವಿದು. ಅಸ್ಪೃಶ್ಯರ ಕುಲಪುರಾಣವನ್ನು ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟ ನಾಟಕ. ಬಹುಶಃ ಈ ವರ್ಷ ರಂಗಕ್ಕೇರಿದ ಅತ್ಯುತ್ತಮ ನಾಟಕವಿದು. ಇದರ ಜೊತೆ ರುದ್ರ ಥೇಟರ್ ತಂಡ ಅಭಿನಯಿಸಿದ ವಿದ್ದು ಉಚ್ಚಿಲ್ ಅವರ ‘ಶೂದ್ರ ಶಿವ’ ನಾಟಕವೂ ಸೇರುತ್ತದೆ.

ಮುಸ್ಲಿಮರೇ ಸೇರಿ ಆಡಿದ ‘ಕುರುಕ್ಷೇತ್ರ’ ನಾಟಕ

ಕರ್ನಾಟಕದಲ್ಲಿ ಮೊತ್ತ ಮೊದಲ ಬಾರಿಗೆ ಮುಸ್ಲಿಮರೇ ಸೇರಿಕೊಂಡು ‘ಕುರುಕ್ಷೇತ್ರ’ ನಾಟಕವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮುಂಗಲ ತಾಲೂಕಿನಲ್ಲಿ ಆಡಿದರು. ವೀರಾಂಜನೆಯ ಸ್ವಾಮಿ ಕಲಾವೃಂದದ ಬ್ಯಾನರಿನಡಿ ಹಾರ್ಮೋನಿಯಂ ಮಾಸ್ಟರ್ ಮುನಿರಾಜು ನಿರ್ದೇಶನದಲ್ಲಿ ಕಳೆದ ವಾರ ಪ್ರದರ್ಶನವಿತ್ತು. 15 ಪ್ರಮುಖ ಪಾತ್ರಗಳಿಗೆ ಮುಸ್ಲಿಮರು ಜೀವ ತುಂಬಿದ್ದರು. ಸ್ವತಃ ಹಾಡುಗಳನ್ನು ಹಾಡಿದ್ದರು. ಮೂರು ತಿಂಗಳು ತಾಲೀಮು ಮಾಡಿದ್ದರು. ಮುಸ್ಲಿಂ ಮಹಿಳೆಯರೂ ಪ್ರೇಕ್ಷಕರ ಸಾಲಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದಿದ್ದು ಆಶಾದಾಯಕ ಬೆಳವಣಿಗೆ. ಇದರ ಉದ್ದೇಶ ಸಮಾಜದಲ್ಲಿ ಭಾವೈಕ್ಯತೆಯನ್ನು ಮೂಡಿಸುವುದಾಗಿತ್ತು ಎಂದು ಕಲಾವಿದರೇ ಹೇಳಿಕೊಂಡಿದ್ದಾರೆ. ಸುಮಾರು ಇಪ್ಪತ್ತು ಸಾವಿರ ಪ್ರೇಕ್ಷಕರ ಸಮ್ಮುಖದಲ್ಲಿ ಪ್ರದರ್ಶಗೊಂಡ ಈ ನಾಟಕ ಕೋಮುವಾದಿಗಳಿಗೆ ಪ್ರತ್ಯುತ್ತರದಂತಿತ್ತು.

ಉಷಾ ಕಟ್ಟೆಮನೆ, ಬಂಡಿಹೊಳೆ

ರಂಗಾಸಕ್ತರು, ನಾಟಕ ಕೃತಿ ರಚನಾಕಾರರು.

You cannot copy content of this page

Exit mobile version