ಬೆಂಗಳೂರು: ಕಳೆದ ಎಂಟು ತಿಂಗಳುಗಳಿಂದ ಹಾಲಿನ ದರ ಹೆಚ್ಚಿಸುವಂತೆ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ರಾಜ್ಯ ಸರ್ಕಾರಕ್ಕೆ ಮನವಿ ಮಾಡಿತ್ತು, ಆದರೆ ಸರ್ಕಾರ ಈ ವಿಷಯದ ಬಗ್ಗೆ ಯಾವುದೇ ನಿರ್ಧಾರ ತೆದುಕೊಳ್ಳದಿರುವ ಪರಿಣಾಮ ಕೆಎಂಎಫ್ ಸ್ವತಃ ತಾವೇ ಬೆಲೆ ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಂಡಿದೆ.
ಪ್ರತಿ ಬಾರಿಯೂ ರಾಜ್ಯ ಸರ್ಕಾರದ ಅನುಮತಿ ಪಡೆದೇ ಹಾಲಿನ ದರ ಹೆಚ್ಚಳ ಮಾಡುತ್ತಿದ್ದ ಕೆಎಂಎಫ್, ಈ ಬಾರಿ ನಿರ್ಧಾರವನ್ನು ಬದಲಿಸಿದೆ. ಸಂಕಷ್ಟದಲ್ಲಿರುವ ರೈತರಿಗೆ ಸಹಕರಿಸುವ ನಿಟ್ಟಿನಲ್ಲಿ ಹಾಲಿನ ದರ ಹೆಚ್ಚಳದ ಕುರಿತು ಸರ್ಕಾರಕ್ಕೆ ಕೆಎಂಎಫ್ ಹಲವಾರು ಬಾರಿ ಪ್ರಸ್ತಾವನೆ ನೀಡಿತ್ತು. ಆದರೆ ಸರ್ಕಾರ ಈ ಕುರಿತು ಮೀನಾಮೇಷಾ ಎಣಿಸುತ್ತಿರುವುದು ಈ ನಿರ್ಧಾರಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಮಾಹಿತಿ ನೀಡಿರುವ ಕರ್ನಾಟಕ ಹಾಲು ಒಕ್ಕೂಟ, ಆರ್ಥಿಕವಾಗಿ ಹಾಗೂ ಹಲವು ಯೋಜನೆಗಳೊಂದಿಗೆ ಸರ್ಕಾರದ ಜತೆ ಸಹಭಾಗಿತ್ವ ಇರುವುದರಿಂದ ರಾಜ್ಯ ಸರ್ಕಾರದ ಸಮ್ಮತಿ ಇಲ್ಲದೆ ಹಾಲಿನ ದರಗಳ ಬಗ್ಗೆ ಕೆಎಂಎಫ್ ನಿರ್ಧಾರ ತೆಗೆದುಕೊಳ್ಳುತ್ತಿರಲಿಲ್ಲ. ಆದರೆ, ಪ್ರಸ್ತುತ ಅಗತ್ಯ ವಸ್ತುಗಳ ಬೆಲೆ ಏರಿಕೆ, ಹಾಲಿನ ಉತ್ಪಾದನಾ ವೆಚ್ಚ ಹೆಚ್ಚಳ, ಅತಿವೃಷ್ಟಿಯಿಂದ ರೈತರಿಗೆ ಉಂಟಾಗಿರುವ ತೀವ್ರ ಸಂಕಷ್ಟದಿಂದಾಗಿ ಹಾಲಿನ ದರ ಹೆಚ್ಚಳ ಮಾಡಬೇಕಿರುವುದು ಅನಿವಾರ್ಯವಾಗಿದ್ದು, ರಾಜ್ಯದಲ್ಲಿನ ಸುಮಾರು 14 ಹಾಲು ಒಕ್ಕೂಟಗಳಿಂದ ಸಭೆ ನಡೆಸಿ, ಹಾಲಿನ ದರವನ್ನು 3 ರೂಪಾಯಿ ಹೆಚ್ಚಳ ಮಾಡಬೇಕೆಂಬ ನಿರ್ಧಾರದ ಕುರಿತು ಒಕ್ಕೂಟ ಮಾಹಿತಿ ನೀಡಿದೆ.