Home ರಾಜಕೀಯ ಕಾವೇರಿ ಚರ್ಚೆಗೆ ಸಿಗದ ಪ್ರಧಾನಿ ಜೆಡಿಎಸ್ ಜೊತೆಗಿನ ಮೈತ್ರಿಗೆ ಸಿಕ್ತಾರೆ : ಎನ್.ಚಲುವರಾಯಸ್ವಾಮಿ ಆಕ್ರೋಶ

ಕಾವೇರಿ ಚರ್ಚೆಗೆ ಸಿಗದ ಪ್ರಧಾನಿ ಜೆಡಿಎಸ್ ಜೊತೆಗಿನ ಮೈತ್ರಿಗೆ ಸಿಕ್ತಾರೆ : ಎನ್.ಚಲುವರಾಯಸ್ವಾಮಿ ಆಕ್ರೋಶ

0

ರಾಜ್ಯದಲ್ಲಿ ತೀವ್ರತರವಾದ ಬರಗಾಲ ಬಂದಿದೆ. ಇದರ ಜೊತೆಗೆ ಕಾವೇರಿ ನದಿ ನೀರಿನಿಂದಲೂ ರಾಜ್ಯಕ್ಕೆ ಅನ್ಯಾಯವಾಗಿದೆ. ರಾಜ್ಯ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನೀರಿನ ಅಭಾವ ಎದುರಿಸುತ್ತಿದ್ದರೂ ಕೇಂದ್ರ ಸರ್ಕಾರ ಅಥವಾ ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶಿಸದೇ ಇರುವುದು ಕರ್ನಾಟಕಕ್ಕೆ ಎಸಗುತ್ತಿರುವ ಅನ್ಯಾಯ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.

ಕಾವೇರಿ ನೀರಿನ ಹಂಚಿಕೆ ವಿಚಾರದಲ್ಲಿ ಪ್ರಧಾನಿ ಮಧ್ಯೆ ಪ್ರವೇಶಿಸಬೇಕು ಎಂದು ಈಗಾಗಲೇ ಹಲವು ಬಾರಿ ಪ್ರಧಾನಿಗೆ ಪತ್ರ ಬರೆಯಲಾಗಿದೆ. ಅಷ್ಟೆ ಅಲ್ಲದೆ ಪ್ರಧಾನಿ ಭೇಟಿಗೂ ಸಹ ಕರ್ನಾಟಕ ಸರ್ಕಾರ ಪ್ರಯತ್ನಿಸಿದೆ. ಈ ವರೆಗೂ ಪ್ರಧಾನಿ ಕಛೇರಿಯಿಂದ ಪ್ರತ್ಯುತ್ತರವಾಗಲಿ ಬಂದಿಲ್ಲ. ಹಾಗೆಯೇ ರಾಜತಾಂತ್ರಿಕ ವಿಚಾರಗಳ ಬಗ್ಗೆ, ರಾಜ್ಯದ ಸಮಸ್ಯೆಗಳ ಬಗ್ಗೆಯೂ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ನಮ್ಮ ಕೈಗೆ ಸಿಗುತ್ತಿಲ್ಲ ಎಂದು ಸಚಿವ ಚಲುವರಾಯಸ್ವಾಮಿ ದೂರಿದ್ದಾರೆ.

ಇವರ ರಾಜಕೀಯ ಮೈತ್ರಿ ಹಾಗೂ ಪಕ್ಷದ ವಿಚಾರವಾಗಿ ಚರ್ಚಿಸಲು ಪ್ರಧಾನಿ ಎಷ್ಟು ಹೊತ್ತಿಗೆ ಬೇಕಾದರೂ ಜೆಡಿಎಸ್ ನವರ ಕೈಗೆ ಸಿಗುತ್ತಾರೆ. ಇದರ ನಡುವೆ ಕಾವೇರಿ ನೀರಿನ ಹಂಚಿಕೆ ವಿಚಾರಕ್ಕೆ ಜೆಡಿಎಸ್ ಪ್ರಧಾನಿ ಜೊತೆಗೆ ಎಳ್ಳಷ್ಟೂ ಚರ್ಚಿಸಿಲ್ಲ. ಆದರೆ ಜೆಡಿಎಸ್ ನವರು ಇಲ್ಲಿ ಬಂದು ಇಲ್ಲದ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಇನ್ನು ನಮ್ಮ ರೈತರು, ಸಂಘಟನೆಗಳು ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆ ಮಾಡುತ್ತಿದ್ದಾರೆ. ಅವರ ಬಗ್ಗೆ ಮಾತನಾಡುವುದಿಲ್ಲ. ನಾವು ನಮ್ಮ ಸಮಸ್ಯೆಯನ್ನು ಕೋರ್ಟ್ ಹಾಗೂ ಪ್ರಾಧಿಕಾರದ ಮುಂದೆ ಹೇಳಬಹುದಷ್ಟೆ. ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡುವ ಅವಕಾಶವಿದೆ ಎಂದರು.

ಬಿಜೆಪಿ ಹಾಗೂ ಜೆಡಿಎಸ್‌ನವರಿಗೆ ಕೃತಜ್ಞತೆ ಇಲ್ಲವೇ, ಮಂಡ್ಯದಲ್ಲಿ ಬಂದು ಏನು ಮಾಡುತ್ತಾರೆ, ನಮ್ಮ ಗಮನಕ್ಕೆ ತರಲು ಮಂಡ್ಯದಲ್ಲಿ ರೈತರಿಲ್ಲವೇ ಎಂದು ಪ್ರಶ್ನಿಸಿದರು. ಇನ್ನು ಮಾಜಿ ಸಿಎಂಗಳಾದ ಕುಮಾರಸ್ವಾಮಿ, ಬೊಮ್ಮಾಯಿ ಅವರು ದೆಹಲಿಗೆ ಹೋಗಿ ಪ್ರಧಾನಿಗಳ ಬಳಿ ಮಾತನಾಡಬೇಕು. ಕಾವೇರಿ ವಿಚಾರ ಸಮಸ್ಯೆ ಹೇಳಿ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆಸಿ ಸಮಸ್ಯೆ ಬಗೆಹರಿಸಿಕೊಳ್ಳಲು ಹೇಳಬೇಕು. ಅದು ಬಿಟ್ಟು ಇಲ್ಲಿ ಬಂದು ಮಾಧ್ಯಮಗಳ ಮುಂದೆ ಪ್ರತಿಭಟನೆ ಮಾಡಬೇಕಾ ಎಂದು ವಾಗ್ದಾಳಿ ನಡೆಸಿದರು.

ಇನ್ನು ಕರ್ನಾಟಕ ಸರ್ಕಾರದ ವತಿಯಿಂದ ದೆಹಲಿಗೆ ಹೋಗಿದ್ದೇವೆ. ಇಲ್ಲಿನ ಸಂಸದರ ಸಭೆ ನಡೆಸಿದ್ದೇವೆ. ಮೂರು ಬಾರಿ ವಿರೋಧ ಪಕ್ಷಗಳ ಸಭೆಯನ್ನೂ ಮಾಡಿದ್ದೀವಿ, ಕೋರ್ಟ್ ಹಾಗೂ ಪ್ರಾಧಿಕಾರದ ಆದೇಶವನ್ನು ಎಲ್ಲಾ ಸಿಎಂಗಳು ಪಾಲಿಸಿದ್ದಾರೆ. ಇಲ್ಲಿ ಬಂದು ಶೂರರ-ವೀರರ ರೀತಿ ಭಾಷಣ ಮಾಡುವ ಜೆಡಿಎಸ್-ಬಿಜೆಪಿಯವರು ಎಲ್ಲರೂ ನೀರು ಬಿಟ್ಟಿದ್ದಾರೆ ಎಂದು ಛೇಡಿಸಿದರು.

ಈ ಹಿಂದೆ ಕಾವೇರಿ ವಿಚಾರದಲ್ಲಿ ಮಧ್ಯೆ ಪ್ರವೇಶಿಸಿದ್ದ ಹಿಂದಿನ ಪ್ರಧಾನಿ ವಾಜಪೇಯಿ ಕೂಡಾ ಕಾವೇರಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ದನ್ನು ನೆನಪಿಸಿದ ಸಚಿವ ಚಲುವರಾಯಸ್ವಾಮಿ, ಈಗ ಪ್ರಧಾನಿ ಮಧ್ಯ ಪ್ರವೇಶ ಮಾಡಲು ಆಗಲ್ಲ ಅಂದರೆ ಮನೆಯಲ್ಲಿ ಇರಲಿ, ರಾಜಕಾರಣ ಯಾಕೆ ಮಾಡಬೇಕು ಎಂದು ಪ್ರಶ್ನಿಸಿದರು.

ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಎರಡೂ ರಾಜ್ಯಗಳನ್ನು ಕರೆದು ಸಮಸ್ಯೆ ಬಗೆಹರಿಸಬೇಕು. ಕರ್ನಾಟಕ, ತಮಿಳುನಾಡು ಬೇರೆ ಬೇರೆ ರಾಜ್ಯ. ತಮಿಳುನಾಡಿನವರು ಅವರ ರೈತರ ಹಿತ ಕಾಯುತ್ತಾರೆ. ನಾವು ಕರ್ನಾಟಕದವರು ನಮ್ಮ ರೈತರ ಹಿತ ಕಾಯುತ್ತೇವೆ ಎಂದರು.

INDIA ಒಕ್ಕೂಟದ ರಾಜಕೀಯದಲ್ಲಿ ತಮಿಳುನಾಡಿನ ಆಡಳಿತಾರೂಢ DMK ವಿಚಾರ ಪ್ರಸ್ತಾಪಿಸಿ ಮಾತನಾಡಿದಾಗ, INDIA ಒಕ್ಕೂಟದ ರಾಜಕೀಯ ಬೇರೆ, ಕಾವೇರಿ ವಿಚಾರವೇ ಬೇರೆ. ಎರಡನ್ನೂ ಒಟ್ಟಿಗೆ ಮಾಡುವುದು ಸರಿಯಲ್ಲ. ಬೇರೆ ವಿಚಾರದಲ್ಲಿ ರಾಜಕೀಯ ಮಾಡಿಕೊಳ್ಳಲಿ, ನಾವೂ ಸಹ INDIA ಒಕ್ಕೂಟದ ಮೂಲಕ ರಾಜಕೀಯ ಮಾಡುತ್ತಿದ್ದೇವೆ. ಕಾವೇರಿ ಸಮಸ್ಯೆಯನ್ನು ಸಾಧ್ಯವಾದರೂ ಬಗೆಹರಿಸಲಿ, ಅವರ ಕೈಯ್ಯಲ್ಲಿ ಆಗದೇ ಇದ್ದರೆ ನಮ್ಮ ರೈತರನ್ನು ಉಳಿಸೋದು ಹೇಗೆ ಎಂಬುದು ನಮಗೆ ಗೊತ್ತು. ಈಗಾಗಲೇ ನಾವು ಕಾವೇರಿ ನೀರಿನ ವಿಚಾರದ ಬಗ್ಗೆ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದೇವೆ ಎಂದರು.

You cannot copy content of this page

Exit mobile version