ನವದೆಹಲಿ: ದೆಹಲಿ ಪೊಲೀಸರ ವಿಶೇಷ ಸೆಲ್ ನ್ಯೂಸ್ ಕ್ಲಿಕ್ ಆನ್ಲೈನ್ ಸುದ್ದಿ ಸಂಸ್ಥೆಯ ಪತ್ರಕರ್ತರ ಮನೆಗಳ ಮೇಲೆ ದಾಳಿ ನಡೆಸಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದೆ. “ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ” ಅಪಾಯದಲ್ಲಿದೆಯೇ ಎಂಬ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ನ್ಯೂಸ್ ಕ್ಲಿಕ್ ಸ್ಥಾಪಕ ಮತ್ತು ಪ್ರಧಾನ ಸಂಪಾದಕ ಪ್ರಬೀರ್ ಪುರಕಾಯಸ್ಥ ಮತ್ತು ಅದರ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ಏಳು ದಿನಗಳ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಆರೋಪದ ಮೇಲೆ ಅವರನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಬಂಧಿಸಲಾಗಿದೆ.
ಯುಎಪಿಎ – ಭಯೋತ್ಪಾದನಾ ವಿರೋಧಿ ಕಾನೂನು. ಈ ಕಾಯ್ದೆಯಡಿ ಬಂಧಿಸಿದರೆ ಜಾಮೀನು ಪಡೆಯುವುದು ತುಂಬಾ ಕಷ್ಟ.
ಜಾರಿ ನಿರ್ದೇಶನಾಲಯ ಮತ್ತು ದೆಹಲಿ ಪೊಲೀಸ್ ಆರ್ಥಿಕ ಅಪರಾಧಗಳ ವಿಭಾಗವು ಈಗಾಗಲೇ ನ್ಯೂಸ್ ಕ್ಲಿಕ್ ಮೇಲಿನ ಮನಿ ಲಾಂಡರಿಂಗ್ ಆರೋಪದ ಬಗ್ಗೆ ತನಿಖೆ ನಡೆಸುತ್ತಿದೆ. ನ್ಯೂಸ್ ಕ್ಲಿಕ್ ಪ್ರಧಾನ ಸಂಪಾದಕ ಪ್ರಬೀರ್ ಪುರಕಾಯಸ್ಥ ಅವರು ಈ ಪ್ರಕರಣಗಳಿಗೆ ಮಧ್ಯಂತರ ತಡೆಯಾಜ್ಞೆ ಪಡೆದಿದ್ದಾರೆ.
ಈಗ ನ್ಯೂಸ್ಕ್ಲಿಕ್ ಪತ್ರಕರ್ತರನ್ನು ಕಾಯ್ದೆಯಡಿ ಬಂಧಿಸಲಾಗಿದ್ದು, ಪತ್ರಕರ್ತರನ್ನು UAPA ಸೆಕ್ಷನ್ನುಗಳ ಅಡಿಯಲ್ಲಿ ಬಂಧಿಸಬಹುದೆ? ಅವರಿಗೆ ಜಾಮೀನು ಸಿಗುತ್ತದೆಯೇ ಎಂಬುದು ಈಗ ಚರ್ಚೆಯ ವಿಷಯವಾಗಿದೆ.
ಪತ್ರಕರ್ತರ ಮೇಲೆ ಯುಎಪಿಎ ಏಕೆ?
ನ್ಯೂಸ್ ಕ್ಲಿಕ್ ಪತ್ರಕರ್ತರ ಮೇಲೆ ಯುಎಪಿಎ ಬಳಕೆಯ ಬಗ್ಗೆ ಭಾರತೀಯ ಮಾಧ್ಯಮಗಳಲ್ಲಿ ಮತ್ತು ಪ್ರಪಂಚದಾದ್ಯಂತ ಕಳವಳಗಳು ಹೆಚ್ಚುತ್ತಿವೆ.
“ಯುಎಪಿಎಯಂತಹ ಕಠಿಣ ಕಾನೂನುಗಳು ಇರಬಾರದು. ಈ ಕಾನೂನುಗಳನ್ನು ಎಲ್ಲಾ ಸರ್ಕಾರಗಳು ಬಳಸಿವೆ. ಕೆಲವು ಸರ್ಕಾರಗಳು ಇತರರಿಗಿಂತ ಹೆಚ್ಚು ಪ್ರಯೋಗಗಳನ್ನು ಮಾಡಿವೆ. ನಮ್ಮ ಜನರ ವಿರುದ್ಧ ಇಂತಹ ಕಾನೂನುಗಳನ್ನು ಜಾರಿಗೊಳಿಸುವ ಅಗತ್ಯವೇನಿದೆ? ಭಯೋತ್ಪಾದಕರು, ಸುಲಿಗೆಕೋರರು, ಕೊಲೆಗಡುಕರು ಮತ್ತು ದೇಶದ್ರೋಹಿಗಳ ವಿರುದ್ಧ ದೇಶದಲ್ಲಿ ಅನೇಕ ಕಾನೂನುಗಳಿವೆ. ಹಾಗಾದರೆ ವಸಾಹತುಶಾಹಿ ಕಾನೂನುಗಳನ್ನು ಏಕೆ ತರಲಾಗುತ್ತಿದೆ” ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಪತ್ರಕರ್ತರೊಬ್ಬರು ಹೇಳಿದರು.
ಪತ್ರಕರ್ತರು ಯುಎಪಿಎ ವಿರುದ್ಧ ಲೇಖನಗಳನ್ನು ಬರೆಯುತ್ತಲೇ ಇದ್ದಾರೆ.
“ಈ ಕಾನೂನುಗಳನ್ನು ಮುಗ್ಧ ಜನರ ವಿರುದ್ಧ ಬಳಸಬಹುದೆನ್ನುವುದು ನಮಗೆ ತಿಳಿದಿದೆ. ಇದನ್ನು ಹೆಚ್ಚಾಗಿ ಭಯೋತ್ಪಾದಕರ ವಿರುದ್ಧ ಬಳಸಲಾಗುವುದಿಲ್ಲ. ಇದನ್ನು ಸಾಮಾನ್ಯ ಜನರ ವಿರುದ್ಧವೇ ಬಳಸಲಾಗುತ್ತದೆ. ಏಕೆಂದರೆ ಭಯೋತ್ಪಾದಕರನ್ನು ಎದುರಿಸಲು ಈಗಾಗಲೇ ಸಾಕಷ್ಟು ಕಾನೂನುಗಳಿವೆ” ಎಂದು ಹಿರಿಯ ಪತ್ರಕರ್ತರೊಬ್ಬರು ಹೇಳಿದರು.
“ಯಾವುದೇ ಸರ್ಕಾರವು ಅದನ್ನು ಪ್ರಶ್ನಿಸುವವರನ್ನು ನಿಯಂತ್ರಿಸಲು ಪ್ರಯತ್ನಿಸುತ್ತದೆ. ವ್ಯತ್ಯಾಸವೆಂದರೆ ಕೆಲವು ಸರ್ಕಾರಗಳು ಕ್ರೂರವಾಗಿ ವರ್ತಿಸುತ್ತವೆ, ಆದರೆ ಉಳಿದವರು ಕಡಿಮೆ ಕ್ರೌರ್ಯವನ್ನು ತೋರಿಸುತ್ತಾರೆ. ಪ್ರಜಾಪ್ರಭುತ್ವದಲ್ಲಿ, ಯಾವುದೇ ಸರ್ಕಾರವು ಪ್ರಾಮಾಣಿಕ ಮಾಧ್ಯಮವನ್ನು ಸ್ವೀಕರಿಸಲು ಸಾಧ್ಯವಿಲ್ಲ. ಮಾಧ್ಯಮಗಳನ್ನು ಕತ್ತು ಹಿಸುಕಿ ಕೊಲ್ಲಲಾಗುತ್ತಿದೆ. ಸರ್ಕಾರಗಳ ದಾಳಿಯ ವಿರುದ್ಧ ಹೋರಾಡದಿದ್ದರೆ ಪ್ರಜಾಪ್ರಭುತ್ವಕ್ಕೆ ಅಪಾಯವಿದೆ. ಯಾರೇ ಅಧಿಕಾರದಲ್ಲಿದ್ದರೂ… ಜನರು ಧ್ವನಿ ಎತ್ತದಿದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ” ಎಂದು ಹಿರಿಯ ಪತ್ರಕರ್ತರೊಬ್ಬರು ಹೇಳಿದರು.
ಪತ್ರಕರ್ತರು ತಪ್ಪು ಮಾಡಿದರೆ ಮತ್ತು ಸರ್ಕಾರದ ವಿರುದ್ಧ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿದರೆ, ಅವರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಹಲವು ಮಾರ್ಗಗಳಿವೆ. ಮೇಲಾಗಿ “ಅವರನ್ನು ಭಯೋತ್ಪಾದನಾ ನಿಗ್ರಹ ಕಾನೂನಿನಡಿಯಲ್ಲಿ ಬಂಧಿಸಿರುವುದು ಸಂಪೂರ್ಣ ತಪ್ಪು” ಎನ್ನುತ್ತಾರೆ ಹಿರಿಯ ಪತ್ರಕರ್ತೆ ಜ್ಯೋತಿ ಮಲ್ಹೋತ್ರಾ.
“ಮೋದಿ ಸರ್ಕಾರವು ಬಂಧನಗಳ ಮೂಲಕ ಪತ್ರಕರ್ತರನ್ನು ಹೆದರಿಸಲು ಬಯಸಿದೆ. ಭಯೋತ್ಪಾದನಾ ವಿರೋಧಿ ಕಾನೂನುಗಳ ಅಡಿಯಲ್ಲಿ ಪತ್ರಕರ್ತರನ್ನು ಜೈಲಿಗೆ ಹಾಕುವ ಅಗತ್ಯವೇನಿದೆ ಎಂದು ನಾವು ಕೇಳುತ್ತಿದ್ದೇವೆ. ಭಾರತದಲ್ಲಿ ಪತ್ರಕರ್ತರು ಈಗ ಭಯೋತ್ಪಾದಕರಾಗಿದ್ದಾರೆಯೇ? ಸರ್ಕಾರವು ನಮ್ಮನ್ನು ಭಯೋತ್ಪಾದಕರು ಎಂದು ಭಾವಿಸುವುದಾದರೆ, ನೀವು ಭಯೋತ್ಪಾದನೆಯೆಂದು ಪರಿಗಣಿಸಬಹುದಾದ ಯಾವ ಲೇಖನವನ್ನು ಬರೆದಿದ್ದೇವೆ ಎನ್ನುವುದನ್ನು ತಿಳಿಸಿ” ಎಂದು ಅವರು ಆಗ್ರಹಿಸಿದರು.
ಈ ಕಾಯಿದೆಯನ್ನು ಪತ್ರಿಕೆಗಳು ಮತ್ತು ಮಾಧ್ಯಮಗಳ ಮೇಲೆ ಪ್ರಯೋಗಿಸಬಾರದು ಎನ್ನುವುದು ಜ್ಯೋತಿ ಮಲ್ಹೋತ್ರಾ ಅವರ ಅಭಿಪ್ರಾಯ.
“ಒಂದೆಡೆ, ನೀವು ಕಾಂಗ್ರೆಸ್ ಪಕ್ಷವು ತಂದ ತುರ್ತು ಪರಿಸ್ಥಿತಿಯನ್ನು ಟೀಕಿಸುತ್ತಿದ್ದೀರಿ ಮತ್ತು ನೀವು ಮಾಧ್ಯಮ ಸ್ವಾತಂತ್ರ್ಯವನ್ನು ರಕ್ಷಿಸುತ್ತಿರುವುದಾಗಿ ಹೇಳುತ್ತಿದ್ದೀರಿ, ಮತ್ತೊಂದೆಡೆ, ಪತ್ರಕರ್ತರನ್ನು ಬಂಧಿಸಿ ಜೈಲಿಗೆ ಹಾಕಲಾಗುತ್ತಿದೆ” ಎಂದು ಅವರು ನರೇಂದ್ರ ಮೋದಿ ಸರ್ಕಾರವನ್ನು ಉಲ್ಲೇಖಿಸಿ ಹೇಳಿದರು.
ಸಂವಿಧಾನವು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದೆ. ಪತ್ರಕರ್ತರು ಜನರ ಪರವಾಗಿದ್ದಾರೆ. ಅವರು ಸಾರ್ವಜನಿಕ ಸಮಸ್ಯೆಗಳ ಕುರಿತು ಬರೆಯುತ್ತಾರೆ ಮತ್ತು ಆಡಳಿತಗಾರರನ್ನು ಪ್ರಶ್ನಿಸುತ್ತಾರೆ. ಆಡಳಿತದ ವ್ಯವಹಾರಗಳಲ್ಲಿ ನಡೆಯುತ್ತಿರುವ ತಪ್ಪುಗಳ ವಿರುದ್ಧ ನಾವು ಖಂಡಿತವಾಗಿಯೂ ಧ್ವನಿ ಎತ್ತುತ್ತೇವೆ” ಎಂದು ಮಲ್ಹೋತ್ರಾ ಹೇಳಿದರು.
ಮಾಧ್ಯಮಗಳ ಕತ್ತು ಹಿಸುಕುವ ಪ್ರಯತ್ನ: ಎಡಿಟರ್ಸ್ ಗಿಲ್ಡ್
ದೆಹಲಿ ಮತ್ತು ಮುಂಬೈನ 50 ಸ್ಥಳಗಳಲ್ಲಿ ನ್ಯೂಸ್ ಕ್ಲಿಕ್ ಸಂಸ್ಥೆಯ 46 ಪತ್ರಕರ್ತರನ್ನು ಪ್ರಶ್ನಿಸಲಾಗಿದೆ. ನಂತರ, ಅವರ ಬಳಿಯಿದ್ದ ಡಿಜಿಟಲ್ ಸಾಧನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು. ದೆಹಲಿಯ ನ್ಯೂಸ್ ಕ್ಲಿಕ್ ಕಚೇರಿಯನ್ನು ಸೀಲ್ ಮಾಡಲಾಗಿದೆ.
ನ್ಯೂಸ್ಲಿಕ್ಗಾಗಿ ಕಾನೂನುಬಾಹಿರ ಚಾನೆಲ್ಗಳ ಮೂಲಕ ಚೀನಾ ಮತ್ತು ಅಮೇರಿಕಾದಿಂದ ಹಣವನ್ನು ಸ್ವೀಕರಿಸಿದ ಆರೋಪದ ಮೇಲೆ ದೆಹಲಿ ಪೊಲೀಸರು ಈ ವರ್ಷದ ಆಗಸ್ಟ್ 17ರಂದು ಇಡಿ ವಿರುದ್ಧ FIR ದಾಖಲಿಸಿದ್ದರು. ಇದರ ಆಧಾರದ ಮೇಲೆ ಇತ್ತೀಚಿನ ಬಂಧನಗಳನ್ನು ಮಾಡಲಾಗಿದೆ ಎಂದು ಹೇಳಲಾಗುತ್ತದೆ.
ನ್ಯೂಸ್ ಕ್ಲಿಕ್ ಸಂಸ್ಥೆಯ ಪತ್ರಕರ್ತರ ಬಂಧನವನ್ನು ದೇಶದೆಲ್ಲೆಡೆಯ ಮಾಧ್ಯಮ ಸಂಸ್ಥೆಗಳು ತೀಕ್ಷ್ಣವಾಗಿ ಖಂಡಿಸಿವೆ.
“ಈ ದಾಳಿಗಳು ಮಾಧ್ಯಮಗಳ ಧ್ವನಿಯನ್ನು ನಿಗ್ರಹಿಸುವ ಮತ್ತೊಂದು ಪ್ರಯತ್ನವಾಗಿದೆ” ಎಂದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
“ಯಾವುದೇ ಅಪರಾಧ ನಿಜವಾಗಿಯೂ ನಡೆದಿದ್ದರೆ, ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಬೇಕು. ಅಂತಹ ವಿಶೇಷ ಪ್ರಕರಣಗಳ ಮೇಲೆ ವಿಚಾರಣೆಯ ಹೆಸರಿನಲ್ಲಿ ಕಠಿಣ ಕಾನೂನುಗಳಿಂದ ದಾಳಿ ಮಾಡಬಾರದು. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸರ್ಕಾರದ ವಿರುದ್ಧದ ವಿರೋಧ ಮತ್ತು ಟೀಕೆಗಳನ್ನು ಹತ್ತಿಕ್ಕಬಾರದು” ಎಂದು ಎಡಿಟರ್ಸ್ ಗಿಲ್ಡ್ ಹೇಳಿಕೆಯಲ್ಲಿ ತಿಳಿಸಿದೆ.
“ಪ್ರಜಾಪ್ರಭುತ್ವದಲ್ಲಿ ಮುಕ್ತವಾಗಿ ಕೆಲಸ ಮಾಡುವ ಮಾಧ್ಯಮದ ಅವಶ್ಯಕತೆಯಿದೆ ಎಂದು ನಾವು ಮತ್ತೊಮ್ಮೆ ಸರ್ಕಾರಕ್ಕೆ ನೆನಪಿಸುತ್ತಿದ್ದೇವೆ. ಪ್ರಜಾಪ್ರಭುತ್ವದ ನಾಲ್ಕನೇ ಸ್ಥಂಭವನ್ನು ಗೌರವಿಸಲು ಮತ್ತು ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾವು ನಿಮಗೆ ಕರೆ ನೀಡುತ್ತೇವೆ” ಎಂದು ಅದು ಹೇಳಿದೆ.
ಪತ್ರಕರ್ತರ ಮೇಲೆ ಪಕ್ಷಪಾತಿತನದ ದಾಳಿ: ಎಫ್ಎಂಪಿ
‘ಸರ್ಕಾರವು ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳಿಗೆ ಕಿರುಕುಳ ನೀಡುತ್ತಿದ್ದು, ಕೆಲವೇ ಜನರನ್ನು ಗುರಿಯಾಗಿಸಿಕೊಂಡು ಏಕಪಕ್ಷೀಯ ಪಕ್ಷಪಾತ ಧೋರಣೆಯಿಂದ ದಾಳಿ ನಡೆಸುತ್ತಿದೆ’ ಎನ್ನುವ ಫೌಂಡೇಶನ್ ಫಾರ್ ಮೀಡಿಯಾ ಪ್ರೊಫೆಷನಲ್ಸ್ (ಎಫ್ಎಂಪಿ) ಹೇಳಿಕೆ ಪರಿಸ್ಥಿತಿಯ ಗಂಭೀರತೆಯನ್ನು ಬಿಂಬಿಸುತ್ತದೆ.
“ಈ ನಿಟ್ಟಿನಲ್ಲಿ ಕ್ರೂರ ಯುಎಪಿಎ ಅನುಷ್ಠಾನವು ಅಭೂತಪೂರ್ವ ಪರಿಣಾಮ ಬೀರುತ್ತಿದೆ” ಎಂದು ಎಫ್ಎಂಪಿ ಹೇಳಿದೆ.
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಎಂದು ಹೇಳಿಕೊಳ್ಳುವ ದೇಶದಲ್ಲಿ, ಸರ್ಕಾರವನ್ನು ಟೀಕಿಸುವ ಕೆಲವು ಪತ್ರಕರ್ತರು ಮತ್ತು ಪತ್ರಿಕೆಗಳನ್ನು ಗುರಿಯಾಗಿಸಲಾಗುತ್ತಿದೆ ಮತ್ತು ಕಿರುಕುಳ ನೀಡಲಾಗುತ್ತಿದೆ.
ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳ ಮೇಲಿನ ಪೊಲೀಸ್ ದಾಳಿಗಳು “ಸಂಪೂರ್ಣವಾಗಿ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ” ಎಂದು ಡಿಜಿಪಬ್ ನ್ಯೂಸ್ ಫೌಂಡೇಶನ್ ಹೇಳಿದೆ.
“ಸರ್ಕಾರವು ಏಕಪಕ್ಷೀಯವಾಗಿ ವರ್ತಿಸುವ ಮೂಲಕ ಪತ್ರಿಕೆಗಳನ್ನು ಬೆದರಿಸುವ ವಿಧಾನವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ. ಪತ್ರಿಕಾ ಸ್ವಾತಂತ್ರ್ಯ, ನಾಗರಿಕ ಸ್ವಾತಂತ್ರ್ಯ, ಮಾನವ ಹಕ್ಕುಗಳು ಮತ್ತು ಮಾಧ್ಯಮಗಳ ವಿರುದ್ಧ ಸರ್ಕಾರದ ವರ್ತನೆಯ ವಿಷಯದಲ್ಲಿ ಭಾರತದ ಶ್ರೇಯಾಂಕವು ದಿನದಿಂದ ದಿನಕ್ಕೆ ಹದಗೆಡುತ್ತಿದೆ” ಎಂದು ಡಿಜಿ ಪಬ್ ಹೇಳಿದೆ.
ಮಾಧ್ಯಮ ಸ್ವಾತಂತ್ರ್ಯದ ವಿಷಯದಲ್ಲಿ ಭಾರತದ ಸ್ಥಾನ ಯಾವುದು?
ವಿಶ್ವ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕವು 161ರಿಂದ 180ಕ್ಕೆ ಇಳಿದಿದೆ, ಇದು 2002ರಲ್ಲಿ 150ರಲ್ಲಿತ್ತು ಎಂದು ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ ಎಂಬ ಜಾಗತಿಕ ಮಾಧ್ಯಮ ನಿಗಾ ಸಂಸ್ಥೆ ಈ ವರ್ಷದ ಮೇ ತಿಂಗಳಲ್ಲಿ ವರದಿಯೊಂದನ್ನು ಬಿಡುಗಡೆ ಮಾಡಿತ್ತು.
ಭಾರತದ ಎಲ್ಲಾ ಪ್ರಮುಖ ಮಾಧ್ಯಮ ಸಂಸ್ಥೆಗಳು ಪ್ರಧಾನಿ ನರೇಂದ್ರ ಮೋದಿಯವರ ಆಪ್ತ ಉದ್ಯಮಿಯ ಒಡೆತನದಲ್ಲಿದೆ ಎಂದು RSF ತನ್ನ ವರದಿಯಲ್ಲಿ ತಿಳಿಸಿದೆ.
ವರದಿಯ ಪ್ರಕಾರ, ಸರ್ಕಾರದ ವಿರುದ್ಧ ಆನ್ಲೈನ್ ವಿಮರ್ಶಕರ ಮೇಲೆ ನಿಗಾ ಇಡಲು ಮೋದಿ ಸೈನ್ಯವಿದೆ, ಮತ್ತು ಅವರೆಲ್ಲರೂ ವಿಷಕಾರಿ ಪ್ರಚಾರದ ಮೂಲಕ ಟೀಕಾಕಾರರ ಮೇಲೆ ದಾಳಿ ಮಾಡುತ್ತಿದ್ದಾರೆ. ಈ ಎರಡು ಗುಂಪುಗಳ ನಡುವೆ ಪತ್ರಕರ್ತರು ತೀವ್ರ ಒತ್ತಡದಲ್ಲಿದ್ದಾರೆ ಮತ್ತು ಅನೇಕರು ಮುಕ್ತವಾಗಿ ಬರೆಯಲು ಸಾಧ್ಯವಾಗುತ್ತಿಲ್ಲ ಎಂದು ಆರ್ಎಸ್ಎಫ್ ವರದಿ ಬಹಿರಂಗಪಡಿಸಿದೆ.
“ಪತ್ರಕರ್ತರು ಕಾನೂನಿಗಿಂತ ದೊಡ್ಡವರಲ್ಲ, ಆದರೆ…’
“ಪತ್ರಕರ್ತರು ಸುಲಭ ಗುರಿಯಾಗಿದ್ದಾರೆ. ಅದೂ ಸಹ ಸಣ್ಣ ಸುದ್ದಿ ಪೋರ್ಟಲ್ಗಳಲ್ಲಿ ಕೆಲಸ ಮಾಡುವವರು. ಅವರಿಗೆ ದೊಡ್ಡ ಕಂಪನಿಗಳಲ್ಲಿರುವಂತೆ ರಕ್ಷಣೆಗಳಿಲ್ಲ” ಎಂದು ಹಿರಿಯ ಪತ್ರಕರ್ತ ರಾಜ್ದೀಪ್ ಸರ್ದೇಸಾಯಿ ಹೇಳುತ್ತಾರೆ.
ಇಂಡಿಯಾ ಟುಡೇ ಚಾನೆಲ್ಲಿನಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ, ಎಡಿಟರ್ಸ್ ಗಿಲ್ಡ್ ಹೇಳಿದಂತೆ ಅಪರಾಧ ಎಸಗಿದ ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು, ಆದರೆ ಕಠಿಣ ಕಾನೂನುಗಳನ್ನು ಜಾರಿಗೊಳಿಸಬಾರದು ಮತ್ತು ಕಿರುಕುಳ ನೀಡಬಾರದು ಎಂಬ ಎಡಿಟರ್ಸ್ ಗಿಲ್ಡ್ ಹೇಳಿಕೆಯನ್ನು ಅವರು ಸಮರ್ಥಿಸಿಕೊಂಡರು.
ಪತ್ರಕರ್ತರು ಕಾನೂನಿಗಿಂತ ದೊಡ್ಡವರು ಎಂದು ಯಾರೂ ಹೇಳುತ್ತಿಲ್ಲ. ಅದೇ ಸಮಯದಲ್ಲಿ, ಭಯೋತ್ಪಾದಕರನ್ನು ಬಂಧಿಸುವಾಗ ಅವರ ವಿರುದ್ಧ ಬಳಸುವ ಕಠಿಣ ಕಾನೂನುಗಳನ್ನು ಬಳಸುವುದು ಕಾನೂನಿನ ಉಲ್ಲಂಘನೆಯಾಗಿದೆ. ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವು ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ’ ಎಂದು ಸರ್ದೇಸಾಯಿ ಹೇಳಿದರು.
“ನ್ಯೂಸ್ಕ್ಲಿಕ್ನಲ್ಲಿ ಕೆಲಸ ಮಾಡುತ್ತಿರುವ ಕಿರಿಯ ಉದ್ಯೋಗಿಗಳನ್ನು ಚೀನಾದಿಂದ ಹಣ ಪಡೆಯುತ್ತಿದೆ ಎಂಬ ಆರೋಪದ ಮೇಲೆ ಬಂಧಿಸುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಇದು ತಪ್ಪು ಸಂಕೇತಗಳನ್ನು ರವಾನಿಸುತ್ತದೆ. ಭಾರತವು ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಕೆಳಭಾಗದಲ್ಲಿದೆ. ಸರ್ಕಾರ ಉತ್ತರಿಸಬೇಕಿರುವ ಸಾಕಷ್ಟು ಪ್ರಶ್ನೆಗಳಿವೆ. ನಿಮಗೆ ಸ್ಪಷ್ಟತೆ ಇದ್ದರೆ ಮಾಹಿತಿಯನ್ನು ಸಾರ್ವಜನಿಕರ ಮುಂದೆ ಇರಿಸಿ ಮತ್ತು ಯಾವುದೇ ಕ್ರಮ ತೆಗೆದುಕೊಳ್ಳಿ”ಎಂದು ಅವರು ಹೇಳಿದರು.
“ನ್ಯೂಸ್ಕ್ಲಿಕ್ ವಿರುದ್ಧದ ಮನಿ ಲಾಂಡರಿಂಗ್ ಪ್ರಕರಣವು 2021ರಿಂದ ಚಾಲನೆಯಲ್ಲಿದೆ. ಸರ್ಕಾರವು ಈಗ ಈ ಕೇಸನ್ನು ಮನಿ ಲಾಂಡರಿಂಗ್ ವಿರೋಧಿ ಕಾಯ್ದೆಯಿಂದ ಕಠಿಣ UAPA ಅಡಿಯಲ್ಲಿ ಪ್ರಕರಣವನ್ನು ತಂದಿದೆ” ಎಂದು ರಾಜದೀಪ್ ಸರ್ದೇಸಾಯಿ ಹೇಳಿದ್ದಾರೆ.
ʼಡಿಜಿಟಲ್ ಪರಿಕರಗಳನ್ನು ಜಪ್ತಿ ಮಾಡಿದರೆ ಹೇಗೆ?ʼ
ನ್ಯೂಸ್ಕ್ಲಿಕ್ ಸಂಸ್ಥೆಯಲ್ಲಿ ಪೊಲೀಸರು ವಶಕ್ಕೆ ಪಡೆದು ಪ್ರಶ್ನಿಸಿದ 46 ಜನರ ಡೇಟಾವನ್ನು ಒಳಗೊಂಡಿರುವ ಸಾಧನಗಳನ್ನು ಸರ್ಕಾರ ವಶಪಡಿಸಿಕೊಂಡಿದೆ.
ಪತ್ರಕರ್ತರ ಮಾಹಿತಿ ಇರುವ ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಂಡು ಅದರ ಪ್ರತಿಗಳನ್ನು ನೀಡದಿರುವುದನ್ನು ಫೌಂಡೇಶನ್ ಫಾರ್ ಮೀಡಿಯಾ ಪ್ರಶ್ನಿಸಿದೆ. ಅವುಗಳಲ್ಲಿರುವ ಮಾಹಿತಿಯು ಮೌಲ್ಯಯುತವಾಗಿರಬಹುದು ಹಾಗೂ ಅದನ್ನು ರಕ್ಷಿಸುವ ಹಕ್ಕನ್ನು ನೀಡದಿರುವುದು ಅವರ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅದು ಹೇಳಿದೆ.
ಫೌಂಡೇಶನ್ ಫಾರ್ ಮೀಡಿಯಾ ಪ್ರೊಫೆಷನಲ್ಸ್ ಎಂಬ ಸಂಸ್ಥೆಯು ಪತ್ರಕರ್ತರಿಗೆ ಸೇರಿದ ಡಿಜಿಟಲ್ ಸಾಧನಗಳನ್ನು ಸ್ಕ್ಯಾನಿಂಗ್ ಮಾಡಿ ವಶಪಡಿಸಿಕೊಳ್ಳುವುದರ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈ ಸಾಧನಗಳಲ್ಲಿ ಪತ್ರಕರ್ತರ ವೈಯಕ್ತಿಕ ಮಾಹಿತಿಯೂ ಇರುತ್ತದೆ ಮತ್ತು ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅದು ವಾದಿಸಿದೆ.
ಡಿಜಿಪಬ್ ಪ್ರಕಾರ, ಪೊಲೀಸರು ಮತ್ತು ತನಿಖಾ ಸಂಸ್ಥೆಗಳು ನಡೆಸುವ ದಾಳಿಗಳಲ್ಲಿ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಕಾನೂನನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಸದ್ಯ ಈ ಪ್ರಕರಣ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ಹಂತದಲ್ಲಿದೆ.
ಮೋದಿ ಹೆದರಿದ್ದಾರೆ: ಕಾಂಗ್ರೆಸ್
ದೈನಿಕ್ ಭಾಸ್ಕರ್, ನ್ಯೂಸ್ ಲಾಂಡ್ರಿ, ದಿ ಕಾಶ್ಮೀರ್ ವಾಲಾ ಮತ್ತು ದಿ ವೈರ್ನಂತಹ ಪ್ರಮುಖ ಮಾಧ್ಯಮ ಸಂಸ್ಥೆಗಳ ಮೇಲೆ ಕೇಂದ್ರ ಸರ್ಕಾರದ ಏಜೆನ್ಸಿಗಳ ದಾಳಿಯ ನಂತರ, ದೇಶದಲ್ಲಿ ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆಯೇ ಎಂಬ ಪ್ರಶ್ನೆಗಳು ಉದ್ಭವಿಸುತ್ತಿವೆ.
ಸತ್ಯವನ್ನು ಮಾತನಾಡುವ ಪತ್ರಕರ್ತರ ಮೇಲೆ ಸರ್ಕಾರ, ಸಾರ್ವಜನಿಕ ವಲಯದ ಸಂಸ್ಥೆಗಳು ಮತ್ತು ಸರ್ಕಾರಿ ಅಂಗಸಂಸ್ಥೆಗಳು ದಾಳಿ ನಡೆಸುತ್ತಿವೆ ಎಂದು ವಿರೋಧ ಪಕ್ಷದ ಒಕ್ಕೂಟವು ಆರೋಪಿಸಿದೆ.
“ಪ್ರಧಾನಿ ಮೋದಿಗೆ ಭಯವಾಗಿದೆ. ಅವರು ತಮ್ಮ ವೈಫಲ್ಯಗಳನ್ನು ಪ್ರಶ್ನಿಸುವವರ ಬಗ್ಗೆ ಅಸಹನೆ ಹೊಂದಿದ್ದಾರೆ. ಸರ್ಕಾರ ವಿರೋಧ ಪಕ್ಷದ ನಾಯಕರು ಅಥವಾ ಪತ್ರಕರ್ತರು ಸೇರಿದಂತೆ ಸತ್ಯವನ್ನು ಮಾತನಾಡುವವರಿಗೆ ಕಿರುಕುಳ ನೀಡುತ್ತಿದೆ. ನ್ಯೂಸ್ಕ್ಲಿಕ್ ಮೇಲಿನ ದಾಳಿಯ ಮೂಲಕ ಇದು ಮತ್ತೊಮ್ಮೆ ಸಾಬೀತಾಗಿದೆ” ಎಂದು ಕಾಂಗ್ರೆಸ್ ಪಕ್ಷ ಹೇಳಿದೆ.
”ದೇಶದಲ್ಲಿ ಪ್ರಜಾಪ್ರಭುತ್ವವಿದ್ದರೆ ಪತ್ರಿಕಾ ಸ್ವಾತಂತ್ರ್ಯವಿರಬೇಕು, ಪತ್ರಿಕೆ, ಪ್ರಸಾರ ಮಾಧ್ಯಮಗಳ ವಿಚಾರದಲ್ಲಿ ಕೆಲವು ಸಂಸ್ಥೆಗಳು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ, ಒಂದು ವರ್ಗದ ಮಾಧ್ಯಮಗಳು ಇನ್ನೊಂದು ಮಾಧ್ಯಮವನ್ನು ಟೀಕಿಸುತ್ತಿರುವುದು ಗೊಂದಲ ಸೃಷ್ಟಿಸುತ್ತಿದೆ. ಇದು ಸರಿಯಲ್ಲ” ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಪತ್ರಕರ್ತರೊಬ್ಬರು ತಿಳಿಸಿದ್ದಾರೆ.
(ಮೂಲ: ಬಿಬಿಸಿ)