ಜನ ಸಾಮಾನ್ಯರ ಕುರಿತು ಅಪಾರ ಕಳಕಳಿ ಹೊಂದಿರುವ ನ್ಯಾ. ಡಿ ವೈ ಚಂದ್ರಚೂಡ್ ಅವರು (ನ.೯ ರಂದು) ಮುಖ್ಯ ನ್ಯಾಯ ಮೂರ್ತಿ ಹುದ್ದೆಗೆ ಏರಿರುವುದು ಭವಿಷ್ಯದಲ್ಲಿ ನ್ಯಾಯಕ್ಕಾಗಿ ಹೋರಾಡುವವರಿಗೆ ಭರವಸೆ ನೀಡಿದೆ. ಅವರು ನಡೆದು ಬಂದ ಹಾದಿ, ನೀಡಿರುವ ತೀರ್ಪುಗಳು ಈ ನಿರೀಕ್ಷೆಗೆ ಖಂಡಿತವಾಗಿಯೂ ಸಾಕ್ಷಿಯಾಗುತ್ತವೆ. ಹೈಕೋರ್ಟ್ ವಕೀಲರಾಗಿರುವ ಪ್ರವೀಣ ಕಟ್ಟೆಯವರು ಸಿಜೆಐ ಯವರ ನ್ಯಾಯ ನಿಷ್ಠೆ ಹಾಗೂ ಕರ್ತವ್ಯ ಪರತೆಯನ್ನು ಪೀಪಲ್ ಮೀಡಿಯಾ ಕನ್ನಡ ಜಾಲತಾಣಕ್ಕಾಗಿ ಕಟ್ಟಿಕೊಟ್ಟಿದ್ದಾರೆ.
‘ಧನಂಜಯ ಯಶ್ವಂತ್ ಚಂದ್ರಚೂಡ’ ಭಾರತದ ಸರ್ವೋಚ್ಚ ನ್ಯಾಯಾಲಯದ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಇದೀಗ ಅಧಿಕಾರ ಸ್ವೀಕರಿಸಿದ್ದಾರೆ. ಇವರು ಇನ್ನೂ ಎರಡು ವರ್ಷಗಳ ಕಾಲ ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸುವವರಿದ್ದಾರೆ.
ಇವರು ದೇಶದ ಇತಿಹಾಸದಲ್ಲೇ ಅತಿ ಹೆಚ್ಚು ಕಾಲ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿದ್ದ ಹದಿನಾರನೆಯ ಮುಖ್ಯ ನ್ಯಾಯಮೂರ್ತಿ “ಶ್ರೀ ಯಶವಂತ ವಿಷ್ಣು ಚಂದ್ರಚೂಡ” ಹಾಗೂ ಶಾಸ್ತ್ರೀಯ ಸಂಗೀತ ವಿದ್ವಾಂಸೆ ʼಶ್ರೀಮತಿ ಪ್ರಭಾʼ” ಅವರ ಪುತ್ರ.
ವಿದ್ಯಾಭ್ಯಾಸ
ನವೆಂಬರ್ 11, 1959 ರಲ್ಲಿ ಜನಿಸಿದ ಇವರು ಮುಂಬೈನ ಕೆತಾಡ್ರಾಲ್ ಮತ್ತು ಜಾನ್ ಕೆನ್ನೆನ್ ಶಾಲೆ ಹಾಗೂ ದೆಹಲಿಯ ಸೈಂಟ್ ಕೊಲಂಬಿಯಾ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿ ತನ್ನ ಕಾನೂನು ಪದವಿಯನ್ನು 1982 ರಲ್ಲಿ ದೆಹಲಿ ಯೂನಿವರ್ಸಿಟಿಯಿಂದ ಪಡೆದು ಕೊಂಡಿದ್ದಾರೆ. 1983 ರಲ್ಲಿ ಹಾರ್ವರ್ಡ್ ಲಾ ಕಾಲೇಜಿನಿಂದ “ಮಾಸ್ಟರ್ ಆಫ್ ಲಾ” ಪದವಿಯನ್ನು ಪಡೆದುಕೊಂಡು ಇದೇ ಹಾರ್ವರ್ಡ್ ನಲ್ಲಿ 1986ರಲ್ಲಿ ನ್ಯಾಯಾಂಗ ವಿಜ್ಞಾನದಲ್ಲಿ (ಡಾಕ್ಟರೇಟ್ ಆಫ್ ಜ್ಯೂರಿಡಿಕಲ್ ಸೈನ್ಸ್)ಡಾಕ್ಟರೇಟ್ ಪಡೆದಿದ್ದಾರೆ.
ವೃತ್ತಿ ಬದುಕು
ಖ್ಯಾತ ವಕೀಲ ʼಪಾಲಿ ನಾರಿಮನ್ʼ ಅವರೊಂದಿಗೆ ಕೆಲವು ಕಾಲ ಕಿರಿಯ ವಕೀಲರಾಗಿ ಕೆಲಸ ಮಾಡಿದ ಇವರು, ಬಾಂಬೆ ಹೈಕೋರ್ಟ್ ನ ಹಿರಿಯ ವಕೀಲರಾಗಿ 1998ರಲ್ಲಿ ನಿಯುಕ್ತಿಗೊಂಡರು. ತದನಂತರ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಕಾರ್ಯ ನಿರ್ವಹಿಸಿ 29 ನೇ ಮಾರ್ಚ್ 2000 ಇಸವಿಯಲ್ಲಿ ಬಾಂಬೆ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ನೇಮಕವಾದರು. 2013 ರಲ್ಲಿ ಅಲಹಾಬಾದ್ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡ ಶ್ರೀ ಚಂದ್ರಚೂಡ್ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಮೇ 13, 2018 ರಲ್ಲಿ ನೇಮಕಗೊಂಡರು. ʼರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರʼ ದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಇದೀಗ ದಿನಾಂಕ 9 ನವೆಂಬರ್ 2022 ರಂದು ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ದೂರಗಾಮಿ ಪರಿಣಾಮದ ತೀರ್ಪುಗಳು
ʼನ್ಯಾಯಮೂರ್ತಿʼ ಯಾಗಿ ಅತೀ ಹೆಚ್ಚು ಸಾಂವಿಧಾನಿಕ ಪೀಠ (ಐವರು ಮತ್ತು ಹೆಚ್ಚು ನ್ಯಾಯಮೂರ್ತಿಗಳ ಪೀಠ) ಪ್ರಕರಣಗಳಲ್ಲಿ ಬಹುತೇಕ ಸಾಂವಿಧಾನಿಕ ಪ್ರಶ್ನೆಗಳಿಗೆ ಉನ್ನತ ಹಾಗೂ ಸುಂದರವಾದ ತೀರ್ಪುಗಳನ್ನು ನೀಡಿರುವ ಹಿರಿಮೆ ಇವರದ್ದು. ಇದರಲ್ಲಿ ಮುಖ್ಯವಾದವು ಅಂದರೆ ಸಂವಿಧಾನ ವಿಷಯ ಸಂಬಂಧಿ, ಮಾನವ ಹಕ್ಕು, ಲಿಂಗ ಸಮಾನತೆ, ಸಾರ್ವಜನಿಕ ಹಿತಾಸಕ್ತಿ ಪ್ರಕರಣಗಳು, ವಾಣಿಜ್ಯ ಪ್ರಕರಣಗಳು ಮತ್ತು ದಂಡ ಸಂಹಿತೆಗೆ ಸಂಬಂಧಿಸಿದ ಪ್ರಕರಣಗಳೂ ಸೇರಿವೆ.
ಜಸ್ಟೀಸ್ ಕೆ. ಎಸ್. ಪುಟ್ಟ ಸ್ವಾಮಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ 9 ಮಂದಿ ನ್ಯಾಯಮೂರ್ತಿಗಳಿರುವ ಸಾಂವಿಧಾನಿಕ ಪೀಠದ ‘ಗೌಪ್ಯತೆ ವ್ಯಕ್ತಿಯ ಒಂದು ಸಾಂವಿಧಾನಿಕ ಹಕ್ಕುʼ ಎಂಬ ಮಹತ್ತರ ತೀರ್ಪಿನಲ್ಲೂ ಇವರು ಭಾಗಿಯಾಗಿದ್ದರು. ಈ ಪ್ರಕರಣದಲ್ಲಿ ತನ್ನ ತೀರ್ಪನ್ನು ಬರೆಯುತ್ತಾ ʼಗೌಪ್ಯತೆ ಇಲ್ಲದಿದ್ದರೆ ವ್ಯಕ್ತಿಗೆ ಘನತೆ ಅನ್ನುವಂತಹ ಪ್ರಶ್ನೆಯೇ ಇರಲಾರದು. ಒಬ್ಬ ವ್ಯಕ್ತಿಯ ಪರಮೋಚ್ಚ ವಿಷಯ ಎಂದರೆ ಅವನ ಗೌಪ್ಯತೆಯ ಹಕ್ಕುʼ ಎಂದು ತಮ್ಮ ಮಹತ್ತರ ತೀರ್ಪನ್ನು ದಾಖಲಿಸಿದ್ದಾರೆ.
ನ್ಯಾಯಮೂರ್ತಿ ಚಂದ್ರಚೂಡ್ ಅವರು “ಅಭಿವ್ಯಕ್ತಿ ಸ್ವಾತಂತ್ರ್ಯ” ದ ಬಗ್ಗೆ ಕೂಡಾ ಸುಂದರವಾದ ಹಲವು ತೀರ್ಪನ್ನು ನೀಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ “ವಿರೋಧ” ಅನ್ನುವಂತದ್ದು ಕೂಡ ಅತ್ಯಂತ ಮೌಲ್ಯಯುತವಾದ ಆಯುಧ ಎಂಬ ಪ್ರತಿಪಾದನಾ ಅಭಿಪ್ರಾಯವನ್ನು ವ್ಯಕ್ತಪಡಿಸಿರುವಂಥದ್ದನ್ನು ನಾವು ಕಾಣಬಹುದಾಗಿದೆ.
2018ರ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಐವರು ಮಾನವ ಹಕ್ಕುಗಳ ಹೋರಾಟಗಾರರ ಬಂಧನವನ್ನು ಅವರು ವಿರೋಧಿಸಿದ್ದರು. ಹಿಂಸಾ ಪ್ರಕರಣ “ರೋಮಿಲಾ ತಾಪರ್ ಮತ್ತು ಇತರರು ವರ್ಸಸ್ ಯೂನಿಯನ್ ಆಫ್ ಇಂಡಿಯಾ” ಪ್ರಕರಣವೊಂದರಲ್ಲಿ ಬಹುಮತದ ನ್ಯಾಯಮೂರ್ತಿಗಳು ವಿಶೇಷ ತನಿಖಾ ತಂಡವನ್ನು ರಚಿಸುವಲ್ಲಿ ವಿರೋಧ ವ್ಯಕ್ತಪಡಿಸಿದಾಗ ʼಇಂತಹ ವಿಶೇಷ ಪ್ರಕರಣಗಳಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಬೇಕಾದ ಅಗತ್ಯ ಇದೆʼ ಎಂದು ತಮ್ಮ ವ್ಯತಿರಿಕ್ತ ತೀರ್ಪನ್ನು ಪ್ರಕಟಿಸಿದ್ದರು.
ಮುಖ್ಯ ಚುನಾವಣಾ ಅಧಿಕಾರಿ ವರ್ಸಸ್ ಎಮ್ ಆರ್ ವಿಜಯಭಾಸ್ಕರ್ ಪ್ರಕರಣದಲ್ಲಿ ʼನ್ಯಾಂಗದ ಪ್ರಕರಣಗಳನ್ನು ವರದಿ ಮಾಡುವ ಹಕ್ಕು ಮಾಧ್ಯಮಗಳಿಗೆ ಇದೆʼ ಎಂದು ತೀರ್ಪು ನೀಡಿ ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿದಿದ್ದರು.
ಮುಖ್ಯ ಚುನಾವಣಾ ಅಧಿಕಾರಿ, ನ್ಯಾಯಾಲಯದ ತೀರ್ಪನ್ನು ಮಾಧ್ಯಮಗಳು ಪ್ರಕಟಿಸುವುದನ್ನು ತಡೆಹಿಡಿಯಬೇಕೆಂದು ನ್ಯಾಯಾಲಯವನ್ನು ಕೋರಿದ್ದರು. ನ್ಯಾಯಾಲಯದ ಪ್ರಕರಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಬಗ್ಗೆ “ಈ ಮಾಧ್ಯಮಗಳಿಗೂ ಕೂಡ, ಅಭಿವ್ಯಕ್ತಿ ಸ್ವಾತಂತ್ರ್ಯ ಇದೆʼ ಎಂದೇ ತೀರ್ಪು ನೀಡಿದ್ದರು.
ದೇಶವನ್ನು ನಲುಗಿಸಿದ ಕೋವಿಡ್ 19 ದುರಂತ ಪ್ರಕರಣದ ಸಂದರ್ಭ ಸ್ವ ಇಚ್ಛೆಯಿಂದ ಪ್ರಕರಣ ದಾಖಲಿಸಿ ರಾಜ್ಯ ಸರ್ಕಾರಗಳ ಕಾರ್ಯ ವೈಖರಿಯನ್ನು ಟೀಕಿಸಿದ್ದಲ್ಲದೇ, ಜನರ ಅಭಿವೃದ್ಧಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಇವರ ಕೆಲಸಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ತಮ್ಮ ತೀರ್ಪಿನಲ್ಲಿ ದಾಖಲಿಸಿದ್ದನ್ನು ನಾವಿಲ್ಲಿ ಸ್ಮರಿಸ ಬಹುದಾಗಿದೆ.
ಚಂದ್ರಚೂಡ್ ಅವರು ʼಶಬರಿ ಮಲೆʼ ಪ್ರಕರಣದಲ್ಲಿ ʼನಮ್ಮೆಲ್ಲರ ಯೋಚನಾ ಶಕ್ತಿ ಬದಲಾಗಬೇಕುʼ ಎಂದು ತೀರ್ಪು ನೀಡುತ್ತಾ ʼಮಹಿಳೆಯರು ಸೇರಿ ಪ್ರತಿಯೊಬ್ಬರಿಗೂ ಈ ದೇಶದಲ್ಲಿ ಸಮಾನತೆಯ ಹಕ್ಕಿದೆʼ ಎಂದು ತೀರ್ಮಾನ ನೀಡಿದ್ದರು. ಸದರಿ ಪ್ರಕರಣದಲ್ಲಿ “ಇಂಡಿಯನ್ ಯಂಗ್ ಲಾಯರ್ಸ್ ಎಸೋಸಿಯೇಷನ್ ವರ್ಸಸ್ ಸ್ಟೇಟ್ ಆಫ್ ಕೇರಳ” ದಲ್ಲಿ, ʼಮುಟ್ಟಾಗುವ ವಯಸ್ಸಿನಲ್ಲಿ ಮಹಿಳೆಯರು ದೇವಸ್ಥಾನ ಪ್ರವೇಶಿಸಬಾರದುʼ ಎಂಬ ನಿಯಮ ಸಂವಿಧಾನ ವಿರೋಧಿಯಾಗಿದ್ದು ʼನಮ್ಮ ಸಂವಿಧಾನ ಮಹಿಳೆಯರಿಗೂ ಸಮಾನ ಹಕ್ಕು ಮತ್ತು ಘನತೆಯನ್ನು ನೀಡಿದೆʼ ಎಂಬ ಅಭಿಪ್ರಾಯವನ್ನು ತೀರ್ಪಿನಲ್ಲಿ ವ್ಯಕ್ತಪಡಿಸಿದ್ದರು.
ಹೌದು. ಹೀಗೆ ಬರೆಯುತ್ತಾ ಹೋದರೆ ನ್ಯಾಯಮೂರ್ತಿ ಚಂದ್ರಚೂಡ್ ಅವರು ನೀಡಿರುವ ಇಂತಹಾ ಸಂವೇದನಾಶೀಲ ತೀರ್ಪುಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ತೀರ್ಪುಗಳ ಮೂಲಕ ಸಮಾಜದ ವಾಸ್ತವಗಳಿಗೆ ಕಾನೂನನ್ನು ಇವರು ಅನ್ವಯಿಸಿದ ರೀತಿ ಜನತೆಯಲ್ಲೂ, ನ್ಯಾಯಾಂಗ ವ್ಯವಸ್ಥೆಯಲ್ಲೂ ಒಂದು ವಿಭಿನ್ನ ಸಂಚಲನವನ್ನೇ ಸೃಷ್ಟಿಸಿದೆ ಎನ್ನುವುದು ಬರೇ ಹೊಗಳಿಕೆಯಲ್ಲ!
ಇದೀಗ ಸರ್ವ ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯ ಸರ್ವೋಚ್ಚ ಪದವಿಯನ್ನು ಅಲಂಕರಿಸಿರುವ ಮುಖ್ಯ ನ್ಯಾಯಮೂರ್ತಿ ಶ್ರೀ ಧನಂಜಯ ಯಶ್ವಂತ್ ಚಂದ್ರಚೂಡ ರ ಮೇಲೆ ದೇಶದ ಜನತೆ ಅಪಾರ ವಿಶ್ವಾಸ ಇರಿಸಿದೆ ಎಂಬುದು ಮಾತ್ರ ಖಂಡಿತ ಸುಳ್ಳಲ್ಲ.
ಸುತ್ತಲೂ ಹಬ್ಬಿರುವ ಕಪ್ಪು ಕಾರ್ಮೋಡಗಳು ಕರಗಿ ಮಳೆ ನೀರು ಸುರಿದಾವೋ?
ಇಂದಿನ ಸುಡು ಬಿಸಿಲ ಮರುಭೂಮಿಯಲ್ಲಿ ತಂಪಿನ ಸಿಂಚನ ನೀಡುವ ಕಾರಂಜಿಯೊಂದು ಖಂಡಿತವಾಗಿಯೂ ಹರಿವ ಲಕ್ಷಣ ಗೋಚರಿಸಿದೆ. ಕಾರಂಜಿ ತಂಪೆರೆಯುತ್ತದೋ? ಅಥವಾ ಸುಡು ಬಿಸಿಲಿಗೆ ಮತ್ತೆ ಮರೆಯಾಗುತ್ತದೋ? ಕಾಲವೇ ಉತ್ತರಿಸ ಬೇಕಷ್ಟೆ. ಕರಿ ಕತ್ತಲಲ್ಲಿ ಬೆಳಕು ಹರಿದ ಸೂಚನೆಯಂತೂ ದಟ್ಟವಾಗಿದೆ.
ಕರ್ನಾಟಕ ಹೈ ಕೋರ್ಟ್ ನಲ್ಲಿ ವಕೀಲರಾಗಿರುವ ಇವರು ಹವ್ಯಾಸಿ ಬರಹಗಾರರೂ ಆಗಿದ್ದಾರೆ.