ಮೂಲ ಮಲಯಾಳಂ: ಪಿ. ಎನ್. ಗೋಪಿಕೃಷ್ಣನ್
ಕನ್ನಡಕ್ಕೆ: ಸುನೈಫ್
ಅಧ್ಯಾಯ ೧
ಯಾಕಾಗಿ ಈ ಕಥನ
ಭಾಗಶಃ ನಮ್ಮ ದೇಶವು ಹಿಂದುತ್ವವೆಂಬ ಚಿಂತನೆಯು ಮುಂದಿಡುವ ಸಾಮಾಜಿಕ ವ್ಯವಸ್ಥೆಯೊಂದಿಗೆ ಬಹಳವೇ ಸಂಬಂಧ ಹೊಂದಿರುವ ಕಾಲದಲ್ಲಿ ಈ ಲೇಖನ ಸರಣಿಯನ್ನು ಬರೆಯುತ್ತಿದ್ದೇನೆ. ಎಪ್ಪತ್ತಮೂರು ವರ್ಷ ದಾಟಿದ ಇಂಡಿಯನ್ ರಿಪಬ್ಲಿಕ್ನ ಅಡಿಪಾಯಕ್ಕೆ ಈ ಕಾಲಮಾನದಲ್ಲಿ ಸಂಭವಿಸಿದ ಗಾಯಗಳು ಮಾತ್ರವೇ ಇದಕ್ಕೆ ಕಾರಣವಲ್ಲ. ಶತಮಾನಗಳಿಂದ ಜನರೇ ಕಟ್ಟಿ ಬೆಳೆಸಿದ್ದ, ಬದುಕನ್ನು ಮುನ್ನಡೆಸುತ್ತಿದ್ದ ಆಂತರಿಕ ಶಕ್ತಿ ಮೂಲಕ್ಕೇ ಅದು ನಿರಂತರವಾಗಿ ಘಾಸಿ ಮಾಡುತ್ತಿದೆ ಎಂಬುದೂ ಪ್ರಮುಖ ಕಾರಣ. ಕಮ್ಮಿಯೆಂದರೂ ಕಳೆದೊಂದು ಶತಮಾನದಿಂದ ಇಂಡಿಯಾವನ್ನು ಸಾಮಾಜಿಕವಾಗಿ ಅಡಿಯಾಳಾಗಿಸಲು ಇಂತಹ ಹಲವು ಪ್ರಯತ್ನಗಳು ನಡೆದಿವೆ. ಅವೆಲ್ಲ ಒಂದೇ ರೂಪದವೂ ಅಲ್ಲ. ರಾಜಕಾರಣವೆಂದು ನಾವು ಗುರುತಿಸುವ ಕ್ಷೇತ್ರವೊಂದರಲ್ಲಿ ಮಾತ್ರ ಅದು ನಡೆದಿರುವುದೂ ಅಲ್ಲ. ಹಿಂದುತ್ವ ಫ್ಯಾಸಿಸಮ್ಮಿನ ಬಹಳ ಮುಖ್ಯವಾದ ವಿಶೇಷತೆಯೆಂದರೆ ಅದು ಸಾಂಸ್ಕೃತಿಕ ರಾಜಕಾರಣ ಎಂಬುದು. ಭಾರತದ ಚರಿತ್ರೆಯಲ್ಲಿ ತನ್ನ ಕಪಿಮುಷ್ಠಿಯನ್ನು ಬಿಗಿಗೊಳಿಸುತ್ತಾ ಸಾಂಸ್ಕೃತಿಕ ಅಧಿಪತ್ಯ ಸ್ಥಾಪಿಸುವುದು ಅದರ ಗುರಿ. ಹಾಗಾಗಿಯೇ ಇತಿಹಾಸದ ಮೇಲೆ ಅದಕ್ಕೆ ಇನ್ನಿಲ್ಲದ ಆಸಕ್ತಿ. ಹಿಂಸೆಯನ್ನು ಎತ್ತಿಹಿಡಿಯುವ ಶಕ್ತಿ ಅದು. ಮನುಷ್ಯರು ತಮ್ಮೊಳಗೆ ಕಟ್ಟಿಬೆಳೆಸಿರುವ ಮೌಲ್ಯಗಳೆಲ್ಲವು ಪೊಳ್ಳೆಂದೂ ಬಿಗಿ ಹಿಡಿತಕ್ಕೆ ಅವು ನುಚ್ಚು ನೂರಾಗುತ್ತವೆಯೆಂದೂ ಅದು ನಂಬಿಸುತ್ತದೆ. ಅದು ತನ್ನ ಅನುಯಾಯಿಗಳನ್ನೂ ವಿರೋಧಿಗಳನ್ನೂ ಒಟ್ಟಿಗೆ ದಾಳವಾಗಿಸುತ್ತದೆ. ವಾಸ್ತವದಿಂದ ಗುಳೇ ಎಬ್ಬಿಸುವ ಅಜೆಂಡಾಗಳನ್ನು ಅದು ನಿರಂತರವಾಗಿ ನಿರ್ಮಿಸುತ್ತಿರುತ್ತದೆ. ಅಷ್ಟೇ ಅಲ್ಲ, ಪ್ರಜ್ಞಾಪೂರ್ವಕವಾಗಿ ಸುಳ್ಳು ಸುಳ್ಳೇ ವೈರುಧ್ಯಗಳನ್ನೂ ಸೃಷ್ಠಿಸುತ್ತಿರುತ್ತದೆ. ಜೊತೆಗೆ, ಎಂದೂ ಕಂಡಿಲ್ಲದಷ್ಟು ಬೃಹತ್ತಾದ ಗಂಡಸ್ತನದ ಲೋಕವನ್ನು ಸೃಷ್ಠಿಸುತ್ತದೆ. ರಾಜಿಯಾಗಬೇಕಾದಲ್ಲಿ ರಾಜಿಯಾಗುತ್ತಾ, ಕಬಳಿಸಬೇಕಾದಲ್ಲಿ ಕಬಳಿಸುತ್ತಾ ಅದು ಮುನ್ನೇರುತ್ತಲೇ ಇದೆ.
ಫ್ಯಾಸಿಸಮ್ಮಿನ ಚರ್ಚೆಗಳು ನಮಗೆ ಹೊಸತೇನಲ್ಲ. ಕಡಿಮೆಯೆಂದರೂ ೧೯೪೦ರ ದಶಕಗಳಿಂದಲೆ ಫ್ಯಾಸಿಸಂ ನಮ್ಮ ಚರ್ಚಾವಿಷಯವಾಗಿತ್ತು. ಹಿಟ್ಲರ್ ಮತ್ತು ಮುಸೊಲಿನಿ ಯಾರೆಂದೂ, ಅವರ ವಿಚಾರಗಳಿಂದ ಲೋಕದಲ್ಲಿ ಏನೆಲ್ಲ ನಡೆದವು ಎಂದೂ ಕನಿಷ್ಟ ಎರಡು ತಲೆಮಾರುಗಳ ಹಿಂದೆಯೇ ತಿಳಿದುಕೊಂಡವರು ನಾವು. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿಯೇ ಅದರ ಕುರಿತಾದ ಚರ್ಚೆಗಳು ಜೀವಂತವಾಗಿದ್ದವು. ನೆಹರು ತನ್ನ ಭಾರತ ದರ್ಶನ ಶುರು ಮಾಡುವುದೇ ಫ್ಯಾಸಿಸಂ ಅನ್ನು ಎದುರಿಸಬೇಕಾದ ತುರ್ತಿನ ಕುರಿತು ವಿವರಿಸುವ ಮೂಲಕ. ಇವತ್ತಿಗೂ ಕಮ್ಯೂನಿಸ್ಟ್ ಇತಿಹಾಸದ ಪ್ರಮುಖ ಚರ್ಚಾವಿಷಯಗಳಲ್ಲಿ ಒಂದು ೧೯೪೨ರ ಕ್ವಿಟ್ ಇಂಡಿಯಾ ಚಳುವಳಿಯಿಂದ ಅವರು ಹಿಂದೆ ಸರಿದ ಕಾರಣಗಳ ಕುರಿತೇ ಆಗಿದೆ. ಈ ಚರ್ಚೆಗಳ ಸಂದರ್ಭಗಳಲ್ಲಿ, ಎರಡನೇ ವಿಶ್ವಯುದ್ಧವು ಫ್ಯಾಸಿಸಂ ವಿರುದ್ಧದ ಹೋರಾಟವೂ ಆಗಿತ್ತು ಎಂಬ ಕಮ್ಯುನಿಸ್ಟ್ ಚಳುವಳಿಗಳ ಅಂತರಾಷ್ಟ್ರೀಯ ನಿಲುವನ್ನೇ ಎಡಚಳುವಳಿಗಾರರು ಎತ್ತಿ ತೋರಿಸುತ್ತಾರೆ. ಫ್ಯಾಸಿಸಂ ಕುರಿತು ಅಂತರಾಷ್ಟ್ರೀಯ ಮಟ್ಟದಲ್ಲಿ ಅವರಿಗಿದ್ದ ಸುಸ್ಪಷ್ಟ ದೃಷ್ಟಿಕೋನಕ್ಕೆ ನಿದರ್ಶನವೂ ಇದರಲ್ಲಿದೆ, ಆ ಕಾಲದಲ್ಲಿ ಅದನ್ನು ರಾಷ್ಟ್ರೀಯ ಚರಿತ್ರೆಯ ಭಾಗವಾಗಿಸುವಾಗ ಉಂಟಾಗಬಹುದಾದ ಸಂಕೀರ್ಣತೆಗಳ ಸಿಕ್ಕು ಬಿಡಿಸಲು ಅವರಿಂದ ಸಾಧ್ಯವಾಗದಿದ್ದರು ಕೂಡ. ಮತ್ತೊಂದು ಕಡೆ ಕಮ್ಯುನಿಸ್ಟ್ ಪಕ್ಷಗಳ ವಿರೋಧಿಗಳು ಅವರನ್ನು ವಿರೋಧಿಸುತ್ತಿದ್ದದ್ದು ಸ್ಟಾಲಿನ್-ಹಿಟ್ಲರ್ ಒಪ್ಪದಂದವನ್ನು ಎತ್ತಿತೋರಿಸಿಕೊಂಡಾಗಿತ್ತು. ಸ್ಟಾಲಿನ್ನ ರಷ್ಯಾದಲ್ಲಿಯೇ ಹಿಟ್ಲರ್ ತನ್ನ ದಾರುಣ ಸೋಲನ್ನು ಕಂಡ ಎಂದು ಹೇಳುವ ಮೂಲಕ ಕಮ್ಯುನಿಸ್ಟರು ಅದಕ್ಕೆ ಉತ್ತರವನ್ನು ನೀಡಿದ್ದಾರೆ.

ಅಂತರಾಷ್ಟ್ರೀಯ ಫ್ಯಾಸಿಸ್ಟ್ ವಿರೋಧಿ ಸಾಹಿತ್ಯ ಮತ್ತು ಕಲೆಗೆ ಅತ್ಯಂತ ಹೆಚ್ಚು ಓದುಗರು ಸೃಷ್ಠಿಯಾದ ತೃತೀಯ ಜಗತ್ತಿನ ಒಂದು ಭೂಭಾಗವಿದ್ದರೆ ಅದು ಕೇರಳವೆಂದು ಖಂಡಿತವಾಗಿ ಹೇಳಬಹುದು. ನಮ್ಮ ಎಲ್ಲ ಲೈಬ್ರರಿಗಳ ಒಂದು ಕಪಾಟಿನಲ್ಲಿ ಆನ್ ಫ್ರಾಂಕಳ ಡೈರಿ ಇದ್ದೇ ಇರುತ್ತಿತ್ತು. ಸ್ವಂತ ಮಕ್ಕಳಲ್ಲಿ ಒಬ್ಬಳನ್ನಾಗಿಯೇ ನಾವು ಆನ್ ಫ್ರಾಂಕಳನ್ನು ಕಂಡಿದ್ದೆವು. ಸಾಕ್ಷರತೆ, ಸಾಹಿತ್ಯ ಚಳುವಳಿ, ವಿಶಿಷ್ಠ ಸಾಮಾಜಿಕ ಚರಿತ್ರೆ ಮೊದಲಾಗಿ ಹಲವು ಕಾರಣಗಳ ಫಲದಿಂದ ಕೇರಳದ ಒಂದು ಉಪಸಾಮಾಜಿಕ ವಿಭಾಗವೆಂದು ಧೈರ್ಯವಾಗಿ ಕರೆಯಬಹುದಾದ ʻಓದುಗ ಸಮಾಜʻಕ್ಕೆ ಏಲಿ ವೀಸೆಲ್ ಸೇರಿದಂತೆ ಹಲವು ಫ್ಯಾಸಿಸ್ಟ್ ವಿರೋಧಿ ಬರಹಗಾರರು ಅಪರಿಚಿತರಾಗಿರಲಿಲ್ಲ. ಕಾನ್ಸಂಟ್ರೇಷನ್ ಕ್ಯಾಂಪಿನ ತನ್ನ ಅನುಭವಗಳನ್ನು ವಿವರಿಸಿದ್ದ ರಾತ್ರಿ (The Night) ಎಂಬ ಪುಸ್ತಕದ ಬಗ್ಗೆ ಸಾಹಿತ್ಯವಾರಫಲ ಎಂಬ ಜನಪರ ಅಂಕಣದಲ್ಲಿ ಎಂ. ಕೃಷ್ಣನ್ ನಾಯರ್ ಒಂದಕ್ಕಿಂತ ಹೆಚ್ಚು ಸಲ ಬರೆದರು. ಲೈಬ್ರರಿ ಚಳುವಳಿ ಬಿಟ್ಟರೆ ಎಪ್ಪತ್ತರ ದಶಕದ ಕೇರಳದಲ್ಲಿ ಆಳವಾಗಿ ಬೇರೂರಿದ್ದ ಫಿಲಂ ಸೊಸೈಟಿ ಚಳುವಳಿಗಳೂ ಫ್ಯಾಸಿಸ್ಟ್ ವಿರೋಧಿ ಸಿನಿಮಾಗಳನ್ನು ಕೊಂಡಾಡಿದವು. ಅಲನ್ ರೆನೇಯ ನೈಟ್ ಆಂಡ್ ಫಾಗ್ ಯುರೋಪಿನಿಂದ ಹೊರಗೆ ಅತ್ಯಂತ ಹೆಚ್ಚು ಪ್ರದರ್ಶನ ಕಂಡ ಜಾಗ ಕೇರಳವೇ ಆಗಿರಬೇಕು. ಹಿಟ್ಲರನ ತದ್ರೂಪಿಯಾಗಿ ಚಾಪ್ಲಿನ್ ಅತ್ಯದ್ಭುತವಾಗಿ ನಟಿಸಿದ ದಿ ಗ್ರೇಟ್ ಡಿಕ್ಟೇಟರ್ ಎಂಬ ಸಿನಿಮಾ ಕೂಡ ಮಲಯಾಳಿಗರಿಗೆ ಚಿರ ಪರಿಚಿತ.
ಮಲಯಾಳಿಗರಿಗೆ ಆಧುನಿಕ ಚಿತ್ರಕಲೆಯನ್ನು ಎದುರುಗೊಳ್ಳುವ ಸಂದರ್ಭ ಬಂದಿದ್ದರೆ, ಅವುಗಳಲ್ಲಿ ಅತ್ಯಂತ ಸುಪರಿಚಿತ ಚಿತ್ರ ಪಿಕಾಸೊನ ಗೋರ್ಣಿಕಾ ಆಗಿರಬಹುದು. ಕೆ ಜಿ ಶಂಕರಪಿಳ್ಳೆ ಅನುವಾದಿಸಿದ ಮಾರ್ಟಿನ್ ನೀಮೋಳರನ ʼಮೊದಲು ಅವರು ಜ್ಯೂಗಳನ್ನು ಹುಡುಕಿ ಬಂದರು, ನಾನು ಸುಮ್ಮನಿದ್ದೆʼ ಎಂದು ಶುರುವಾಗುವ ಕವಿತೆಯನ್ನು ಮಲಯಾಳಂ ಕವಿತೆಯ ಹಾಗೆಯೆ ಮಲಯಾಳಿಗಳು ಸ್ವೀಕರಿಸಿದರು. ಹಿಟ್ಲರ್ ಕಾರಣದಿಂದ ದಾರುಣಸ್ಥಿತಿ ತಲುಪಿದ್ದ ಪೌಲ್ ಸೆಲಾನೆ ಕುರಿತು ಸಚ್ಚಿದಾನಂದನ್ ಕವಿತೆ ಬರೆದರು. ಆತನ ಡೆತ್ ಫ್ಯೂಗ್ ಎಂಬ ಕವಿತೆಯನ್ನು ಬಾಲಚಂದ್ರನ್ ಚುಳ್ಳಿಕಾಡ್ ಅನುವಾದ ಮಾಡಿದರು. ಹಿಟ್ಲರ್ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡ ಮಾರ್ಟಿನ್ ಬೆಂಜಮಿನ್ ಮತ್ತು ಆತನ ಬರಹಗಳು ತತ್ವಶಾಸ್ತ್ರ ವಿದ್ಯಾರ್ಥಿಗಳಾಚೆ ಕೇರಳದ ಸಾಮಾನ್ಯ ಜನತೆಯ ನಡವಲ್ಲೂ ಬಹಳಷ್ಟು ಚರ್ಚೆಯಾಗಿದ್ದವು. ʼಆಪತ್ತಿನ ಕ್ಷಣಗಳಲ್ಲಿ ಮಿಂಚಿ ಮರೆಯಾಗುವ ನೆನಪುಗಳನ್ನು ಹೆಕ್ಕಿಟ್ಟುಕೊಳ್ಳುವುದೇ ಚರಿತ್ರೆʼ ಎಂಬ ಆತನ ಪ್ರಸಿದ್ಧ ಮಾತನ್ನು ಹಲವಾರು ಮಲಯಾಳಿಗಳು ತಮ್ಮ ಬದುಕಿನ ದಾಸ್ತಾನಿನಲ್ಲಿ ಗುರುತಿಸಿಟ್ಟುಕೊಂಡಿದ್ದಾರೆ. ಈ ಮೇಲಿನ ಮಾತನ್ನು ಮಲಯಾಳಂ ಭಾಷೆಗೆ ಅನುವಾದ ಮಾಡಿದ ಡಾ. ಟಿ.ಕೆ. ರಾಮಚಂದ್ರನ್ ಸಹಿತ ಹಲವರು ಫ್ಯಾಸಿಸಮ್ಮಿನ ಆಳ-ಅಗಲವನ್ನು ವಿಮರ್ಶಿಸಿ ಬರೆದಿದ್ದಾರೆ. ವಿಲ್ಹೆಮ್ ರೀಹನ ಫ್ಯಾಸಿಸಮ್ಮಿನ ಗುಂಪು ಮನಸ್ಥಿತಿ (The Mass Psychology of Fascism) ತರಹದ ಕೃತಿಗಳು ಮಲಯಾಳಂ ಭಾಷೆಗೆ ಅನುವಾದಗೊಂಡವು, ಓದಲ್ಪಟ್ಟವು. ಸುಕುಮಾರನ್ ಅಳಿಕೋಡ್, ಎಂ.ಎನ್. ವಿಜಯನ್, ಬಿ. ರಾಜೀವನ್, ಕೆ.ಇ.ಎನ್., ಕೆ.ಎಸ್. ಹರಿಹರನ್, ಸುನಿಲ್ ಪಿ. ಇಲಯಿಡಂ, ಒ.ವಿ. ವಿಜಯನ್, ಸಕರಿಯಾ, ಸಚ್ಚಿದಾನಂದನ್, ಕೆ.ಜಿ.ಎಸ್., ಸಾರಾ ಜೋಸೆಫ್, ಟಿ.ಟಿ. ಶ್ರೀಕುಮಾರ್, ಜೆ. ದೇವಿಕ, ಎನ್.ಎಸ್. ಮಾಧವನ್, ಕೆ. ಅರವಿಂದಾಕ್ಷನ್, ಎನ್. ಪ್ರಭಾಕರನ್ ಮತ್ತು ಇನ್ನೂ ಅನೇಕರು ಫ್ಯಾಸಿಸಂ ವಿರುದ್ಧವಾಗಿ ಬರವಣಿಗೆ ಮತ್ತು ಭಾಷಣಗಳ ಮೂಲಕ ದನಿ ಎತ್ತಿದರು. ಮಲಯಾಳಿಯಾದ ಕೆ.ಎನ್. ಪಣಿಕ್ಕರ್ ಸತತವಾಗಿ ಮೂರು ದಶಕಗಳ ಕಾಲ ಇಂಡಿಯನ್ ಫ್ಯಾಸಿಸಂ ಕುರಿತು ಮುನ್ನೆಚ್ಚರಿಕೆಗಳನ್ನು ನೀಡಿದರು. ರೋಮಿಲಾ ಥಾಪರ್, ಆಶಿಶ್ ನಂದಿ, ಸುಧೀರ್ ಕಾಕರ್, ತೀಸ್ತಾ ಸೆಟಲ್ವಾಡ್, ಅಕ್ಷಯ ಮುಕುಲ್ ಮೊದಲಾದವರನ್ನು ಮಲಯಾಳದಲ್ಲಿ ವ್ಯಾಪಕವಾಗಿ ಓದಲಾಯಿತು.
ಇದರ ಜೊತೆಗೆ, ಕೆಲವೇ ಕೆಲವು ಮಲಯಾಳಿಗಳು ಹಿಟ್ಲರ್ ಫ್ಯಾಸಿಸಮ್ಮಿನ ʼರುಚಿʼ ನೇರವಾಗಿ ಅನುಭವಿಸಿದರು ಎಂಬುದನ್ನು ನಾವಿಲ್ಲಿ ಮರೆಯಬಾರದು. ೧೯೩೩ ಫೆಬ್ರವರಿ ೨೭ರಂದು ಬರ್ಲಿನ್ನಲ್ಲಿ ಏ.ಸಿ.ಎನ್. ನಂಬಿಯಾರ್ ಎಂಬ ಮಲಯಾಳಿ ಪತ್ರಕರ್ತನನ್ನು ಹಿಟ್ಲರನ ʼಸ್ಟೋರ್ಮ್ ಟ್ರೂಪರ್ಸ್ʼ ಅರೆಸ್ಟ್ ಮಾಡಿತು. ಜರ್ಮನ್ ಚರಿತ್ರೆ ಮತ್ತು ಫ್ಯಾಸಿಸ್ಟ್ ಚರಿತ್ರೆಯ ಪ್ರಧಾನ ಬಿಂದುಗಳಲ್ಲಿ ಒಂದಾಗಿದ್ದ ಜರ್ಮನ್ ಪಾರ್ಲಿಮೆಂಟ್ (ರೀಕ್ಸ್ಟಾಗ್) ಕಟ್ಟಡಕ್ಕೆ ಬೆಂಕಿಯಿಟ್ಟ ಪ್ರಕರಣಕ್ಕೆ ಸಂಬಂಧಿಸಿ ನಂಬಿಯಾರನ್ನು ಅರೆಸ್ಟ್ ಮಾಡಲಾಗಿತ್ತು. ನಂತರದ ದಿನಗಳಲ್ಲಿ ಅದು ನಾಜಿಗಳದ್ದೇ ಕೆಲಸವಾಗಿತ್ತು ಎಂಬ ಸತ್ಯ ಹೊರಬಿದ್ದಿತ್ತು. ಆದರೆ, ೧೯೩೩ ಫೆಬ್ರವರಿ ೨೬ರ ಅರ್ಧರಾತ್ರಿಯಲ್ಲಿ ನಡೆದ ಆ ಘಟನೆಯನ್ನು ಆಗ ಕಮ್ಯುನಿಸ್ಟರ ತಲೆಗೆ ಕಟ್ಟಲಾಗಿತ್ತು. ಅದಕ್ಕೂ ನಾಲ್ಕು ವಾರಗಳ ಮೊದಲು ಹಿಟ್ಲರ್ ಜರ್ಮನ್ ಚಾನ್ಸಲರ್ ಆಗಿ ಅಧಿಕಾರಕ್ಕೇರಿದ್ದ. ಎದುರಾಳಿಗಳನ್ನು ಹೊಡೆದು ಹಾಕಲು ಬೇಕಾದ ತಂತ್ರಗಳನ್ನು ಆಗಲೇ ಶುರು ಮಾಡಿದ್ದ. ಅದರ ಭಾಗವಾಗಿ ನಡೆದ ದೊಡ್ಡದೊಂದು ಪಿತೂರಿಯೇ ರೀಕ್ಸ್ಟಾಗ್ ದಾಳಿ.
ಕೇರಳದ ಕಣ್ಣೂರು ಮೂಲದ ಏ.ಸಿ.ಎನ್. ನಂಬಿಯಾರ್ ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನ ವಿದ್ಯಾಭ್ಯಾಸದ ನಂತರ, ಲಂಡನ್ನಿಗೆ ಹೋಗಿ ಅಲ್ಲಿಂದ ೧೯೨೪ರಲ್ಲಿ ಬರ್ಲಿನ್ಗೆ ತಲುಪಿದ್ದರು. ಲಂಡನ್ನಿನಲ್ಲಿ ಆಗ ಇದ್ದ ಭಾರತೀಯ ಕ್ರಾಂತಿಕಾರಿಗಳ ಗೆಳೆತನ ಸಿಕ್ಕಿತ್ತು. ಜೊತೆಗೆ ಯೂರೋಪಿಯನ್ ಸೋಶ್ಯಲಿಸ್ಟ್ ಮತ್ತು ಕಮ್ಯುನಿಸ್ಟುಗಳ ಸಂಪರ್ಕ ಸಿಕ್ಕಿ, ನಂತರ ಕಮ್ಯುನಿಸ್ಟ್ ಆಗಿಯೂ ಬದಲಾದರು. ಅವರು ಬರ್ಲಿನ್ನಿನ ವಿಲ್ಹೆಮ್ಸ್ಟ್ರಾಸೆಯಲ್ಲಿ ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ಸಿನ ಸಹಾಯದಿಂದ ಇಂಡಿಯನ್ ಇನ್ಫರ್ಮೇಶನ್ ಬ್ಯೂರೋ ನಡೆಸುತ್ತಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಅನುಕೂಲಕರವಾದ ಜನಾಭಿಪ್ರಾಯ ರೂಪಿಸುವ ಪ್ರಯತ್ನದ ಭಾಗವಾಗಿ ನಂಬಿಯಾರ್ ಇದನ್ನು ನಡೆಸುತ್ತಿದ್ದರು. ೧೯೨೭ರಲ್ಲಿ ಬ್ರಸೆಲ್ಸಲ್ಲಿ ನಡೆದ ಸಾಮ್ರಾಜ್ಯವಾದ ಮತ್ತು ವಸಾಹತುಶಾಹಿ ವಿರೋಧಿ ಅಂತರಾಷ್ಟ್ರೀಯ ಸಮಾವೇಶದಲ್ಲಿ ನೆಹರು ಜೊತೆಗಿನ ಭೇಟಿ ನಂಬಿಯಾರನ್ನು ಇಂತಹದ್ದೊಂದು ಕೆಲಸಕ್ಕೆ ಹಚ್ಚಿತ್ತು.
ಸರೋಜಿನಿ ನಾಯ್ಡು ಅವರ ಸಹೋದರಿ ಮತ್ತು ಇಂಡಿಯಾದ ಮೊದಲ ಕಮ್ಯುನಿಸ್ಟ್ ಪಾರ್ಟಿಯ ಮಹಿಳಾ ಸದಸ್ಯರಲ್ಲಿ ಒಬ್ಬರಾಗಿದ್ದ ಸುಹಾಸಿನಿ ಚಟ್ಟೋಪಾಧ್ಯಾಯರನ್ನು ನಂಬಿಯಾರ್ ಮದುವೆಯಾಗಿದ್ದರು. ೧೯೨೦ರ ಹೊತ್ತಿಗೆ ಆ ದಾಂಪತ್ಯದಲ್ಲಿ ಬಿರುಕುಗಳು ಮೂಡಿ, ನಂತರ ಬವೇರಿಯಾದ ಕಮ್ಯುನಿಸ್ಟ್ ಇವಾ ಗೆಸ್ಟರ್ ಅನ್ನು ಮದುವೆಯಾದರು.
ಸ್ಟೋರ್ಮ್ ಟ್ರೂಪರ್ಸ್ ನಂಬಿಯಾರನ್ನು ಬಂಧಿಸಿ ಅವರ ಕೇಂದ್ರ ಕಛೇರಿಗೆ ಕೊಂಡು ಹೋಗಿದ್ದರು. ಅಲ್ಲಿ ಕಠಿಣ ಹಿಂಸೆಗೆ ಗುರಿ ಪಡಿಸಿದರು. ನಂತರ ಅವರನ್ನು ಅಲೆಕ್ಸಾಂಡರ್ ಪ್ಲಾಟ್ಸಿನ ಪೊಲಿಸ್ ಕೇಂದ್ರದಲ್ಲಿ ಹಾಜರುಪಡಿಸಿದರು. ಅಲ್ಲಿ ಏಕಾಂಗಿ ಶಿಕ್ಷೆಗೆ ಗುರಿಯಾದರು. ಕೊನೆಗೆ ಜರ್ಮನಿಯಿಂದ ಗಡಿಪಾರು ಮಾಡಲಾಯಿತು.
ಓ.ವಿ ವಿಜಯನ್ರ ಕೊನೆಯ ಕಾದಂಬರಿ ತಲಮುರ ದಲ್ಲಿ ಕಾನ್ಸಂಟ್ರೇಷನ್ ಕ್ಯಾಂಪಿಗೆ ಬೀಳುವ ಒಬ್ಬ ಮಲಯಾಳಿ ಕಥಾಪಾತ್ರದ ಚಿತ್ರೀಕರಣವಿದೆ.
ಇದರ ಜೊತೆಗೆ ನೆನೆಯಲೇಬೇಕಾದ ಇನ್ನೊಂದು ಘಟನೆ ಇದೆ. ಮಲಯಾಳದಲ್ಲಿ ಸಿನಿಮಾ ಕ್ಷೇತ್ರಕ್ಕೆ ನಾಗಾಲೋಟದ ವೇಗ ನೀಡಿದ ಪ್ರಮುಖ ನಿರ್ಮಾಣ ಕಂಪೆನಿಗಳಲ್ಲಿ ಒಂದಾದ ಉದಯಾ ಸ್ಟುಡಿಯೋಸ್ ಬ್ಯಾನರಲ್ಲಿ ಹೊರಬಂದ ಮೊದಲ ಸಿನಿಮಾ ವೆಳ್ಳಿನಕ್ಷತ್ರಂ. ಇದರ ನಿರ್ದೇಶಕ ಫೆಲಿಕ್ಸ್ ಜೆ. ಬೇಯ್ಸ್ ಎಂಬ ಜರ್ಮನ್ನನಾಗಿದ್ದ. ಮಲಯಾಳದ ಆರಂಭದ ನಟರಲ್ಲಿ ಒಬ್ಬರೂ, ತಿರುವಾಂಕೂರು ಕಾಂಗ್ರೆಸಿನ ಪ್ರಮುಖ ಕಾರ್ಯಕರ್ತರೂ ಆಗಿದ್ದ ಆಲಪ್ಪಿ ವಿನ್ಸಂಟ್ ಚೆನ್ನೈಯಲ್ಲಿ ಆಕಸ್ಮಿಕವಾಗಿ ಭೇಟಿಯಾಗಿದ್ದ ಫೊಟೊಗ್ರಾಫರ್ ಈ ಫೆಲಿಕ್ಸ್. ಆ ಪರಿಚಯ ಆತನನ್ನು ಆಲೆಪ್ಪಿಗೆ ಕರೆಸಿಕೊಂಡಿತು. ಚಿತ್ರೀಕರಣದ ಉದ್ದಕ್ಕೂ ಯಾವ ಲೊಕೇಶನ್ ಚಿತ್ರದಲ್ಲೂ ತಾನು ಕಾಣಿಸದಂತೆ ಫೆಲಿಕ್ಸ್ ಅತಿ ಎಚ್ಚರ ವಹಿಸಿದ್ದ. ಆದ್ದರಿಂದ ಫೆಲಿಕ್ಸ್ನ ಒಂದೇ ಒಂದು ಫೋಟೋ ಕೂಡ ಉದಯಾ ಸ್ಟುಡಿಯೋದ ಶೇಖರದಲ್ಲಿಲ್ಲ. ಬಂದ ಹಾಗೆಯೇ ಆತ ಕಣ್ಮರೆಯೂ ಆಗಿದ್ದ.
ನಂತರದ ಕಾಲದಲ್ಲಿ ಆಲೆಪ್ಪಿ ವಿನ್ಸಂಟ್ ತನ್ನೊಂದಿಗೆ ಹೇಳಿಕೊಂಡಿದ್ದ ರಹಸ್ಯವಿದೆಂದು ಚೇಲಂಗಾಟ್ಟ್ ಗೋಪಾಲಕೃಷ್ಣನ್ ಎಂಬ ಸಿನಿಮಾ ಚರಿತ್ರೆಗಾರ, ಫೆಲಿಕ್ಸ್ ಜೆ. ಬೇಯ್ಸ್ ಒಬ್ಬ ನಾಜಿ ಗೂಢಚಾರನಾಗಿದ್ದ ಎಂದು ಹೇಳಿದ್ದರು. ಎರಡನೇ ವಿಶ್ವಯುದ್ಧದ ಕಾಲದಲ್ಲಿ ಜರ್ಮನಿಯ ಎದುರಾಳಿಯಾಗಿದ್ದ ಬ್ರಿಟಿಷ್ ಇಂಡಿಯಾದ ಆಯಕಟ್ಟಿನ ಜಾಗಗಳ ಫೋಟೋ ತೆಗೆದು ನಾಜಿಗಳಿಗೆ ತಲುಪಿಸುವ ಜವಾಬ್ದಾರಿಯೊಂದಿಗೆ ಫೆಲಿಕ್ಸ್ ಇಂಡಿಯಾ ತಲುಪಿದ್ದ. ಎರಡನೇ ವಿಶ್ವಯುದ್ಧದಲ್ಲಿ ನಾಜಿಗಳು ಸೋತು, ಹಿಟ್ಲರ್ ಆತ್ಮಹತ್ಯೆ ಮಾಡಿಕೊಂಡ. ಅದರೊಂದಿಗೆ ನಾಜಿ ಖೈದಿಗಳನ್ನು ಶಿಕ್ಷಿಸಲು ನ್ಯೂರಂಬರ್ಗ್ ವಿಚಾರಣೆ ಕೂಡ ಶುರುವಾಯಿತು. ಅದಕ್ಕಾಗಿ ತನ್ನ ಒಂದೇ ಒಂದು ಭಾವಚಿತ್ರ ಕೂಡ ಹೊರಬಾರದಂತೆ ಫೆಲಿಕ್ಸ್ ಎಚ್ಚರ ವಹಿಸಿದ್ದ ಎಂದು ಚೇಲಂಗಾಟ್ಟ್, ವಿನ್ಸಂಟ್ ಅನ್ನು ಉಲ್ಲೇಖಿಸುತ್ತಾ ಹೇಳುತ್ತಾರೆ.
ಆದರೆ, ಈ ಕಥೆ ಸುಳ್ಳೆಂದೂ ಬ್ರಿಟಿಷ್ ಸರಕಾರದ ತನಿಖೆಯಲ್ಲಿ ಆತನಿಗೆ ನಾಜಿಗಳ ಜೊತೆಗೆ ಸಂಬಂಧವಿಲ್ಲವೆಂದು ಸಾಬೀತಾಗಿದೆಯೆಂದೂ ನಂಬುವವರು ಇದ್ದಾರೆ.
ನಾನಿಲ್ಲಿ ಹೇಳಲು ಪ್ರಯತ್ನಿಸುತ್ತಿರುವುದು, ಫ್ಯಾಸಿಸಮ್ಮಿನ ಜೀವವಿರೋಧಿ ತತ್ವವನ್ನು ನಿರಂತರವಾಗಿ ಬೆತ್ತಲಾಗಿಸುತ್ತಲೇ ಬಂದ ಒಂದು ಸಮುದಾಯ ಮಲಯಾಳಿ ಸಮುದಾಯ ಎಂಬುದು. ಇವೆಲ್ಲದರ ಫಲವಾಗಿ, ಫ್ಯಾಸಿಸಮ್ಮಿಗೆದುರಾದ ಮನೋಭಾವವೊಂದು ಸಾಮಾನ್ಯವೆಂಬಂತೆ ಮಲಯಾಳಿಗಳ ನಡುವೆ ಉಳಿದಿದೆ.
ಆದರೆ, ಈ ಫ್ಯಾಸಿಸ್ಟ್ ವಿರೋಧಿ ಮಲಯಾಳಿ ಬದುಕಿಗೆ ಇನ್ನೊಂದು ಮುಖವೂ ಇದೆ. ೧೯೯೬ರಲ್ಲಿ ಹೊರಬಂದ ಮಲಯಾಳಂ ಸಿನಿಮಾ ಕಾಲಾಪಾನಿ. ಮಲಯಾಳಂ ಸಿನಿಮಾ ರಂಗದ ಜನಪ್ರಿಯ ನಿರ್ದೇಶಕ ಪ್ರಿಯದರ್ಶನ್ ನಿರ್ದೇಶನದಲ್ಲಿ, ಅಲ್ಲಿಯ ತನಕದ ಮಲಯಾಳಂ ಸಿನಿಮಾ ಇತಿಹಾಸದಲ್ಲಿ ಅತ್ಯಂತ ಹೆಚ್ಚು ದುಡ್ಡು ಖರ್ಚು ಮಾಡಿ ತಯಾರಿಸಿದ ಸಿನಿಮಾ. ೧೯೧೫ರ ಕಾಲಘಟ್ಟದ ಹಿನ್ನೆಲೆಯಲ್ಲಿ ತಯಾರಾದ, ಕಾಲ್ಪನಿಕವೆಂದು ಹೇಳಬಹುದಾದ ಆ ಸಿನಿಮಾವನ್ನು ಹಿಂದಿ ಸಹಿತ ಹಲವು ಭಾಷೆಗಳಿಗೆ ಡಬ್ ಮಾಡಿ ಪ್ರದರ್ಶಿಸಲಾಯಿತು. ಭಾರತದ ಸ್ವಾತಂತ್ರ್ಯ ಹೋರಾಟದ ಗಾಂಧಿಪೂರ್ವ ಕಾಲದ ಹಿನ್ನೆಲೆಯಲ್ಲಿ ನಿರ್ಮಿಸಿದ ಆ ಚಿತ್ರದಲ್ಲಿ ಐತಿಹಾಸಿಕವೂ ಅಲ್ಲದವೂ ಆದ ಕಥಾಪಾತ್ರಗಳು ಇದ್ದವು. ಮೋಹನ್ ಲಾಲ್ ಅಭಿನಯಿಸಿದ ಗೋವರ್ಧನ್ ಮೆನನ್ ಇಡಿಯಾಗಿ ಇತಿಹಾಸದಲ್ಲಿ ಇಲ್ಲದ ಪಾತ್ರವಾಗಿತ್ತು. ಆದರೆ, ಐತಿಹಾಸಿಕವೆಂದು ಹೇಳಬಹುದಾದ ಮೂರು ಕಥಾಪಾತ್ರಗಳಿದ್ದವು. ಅವು ಅನ್ನು ಕಪೂರ್ ನಟಿಸಿದ ವಿ.ಡಿ. ಸಾವರ್ಕರ್, ಅಮರೀಶ್ ಪುರಿ ನಟಿಸಿದ ಮಿರ್ಜಾಖಾನ್ ಮತ್ತು ಅಲೆಕ್ಸ್ ಡ್ರೇಪರ್ ನಟಿಸಿದ ಐರ್ಲಾಂಡಿನ ಡೇವಿಡ್ ಬಾರಿ ಪಾತ್ರಗಳು. ನಿಜದಲ್ಲಿ ಈ ಮೂರೂ ಪಾತ್ರಗಳನ್ನು ವಿ.ಡಿ. ಸಾವರ್ಕರ್ ಬರೆದ My transportaion for life ಎಂಬ ಅಂಡಮಾನ್ ಸೆಲ್ಯುಲಾರ್ ಜೈಲ್ ನೆನಪಿನ ಪುಸ್ತಕದ ಆಧಾರದಲ್ಲಿ ಕಟ್ಟಲಾಗಿತ್ತು.
ಸಾವರ್ಕರ್ ಯಾರು ಎಂಬ ಪ್ರಶ್ನೆಗೆ ಇವತ್ತು ಮಲಯಾಳಿಗಳು ಉತ್ತರ ಹೇಳಬಲ್ಲರು. ಕಾರಣ, ಇಂದಿನ ಹಿಂದುತ್ವ ಫ್ಯಾಸಿಸ್ಟ್ ಸರಕಾರ ಉದ್ದೇಶಪೂರ್ವಕವಾಗಿ ಕೆತ್ತಲು ಶ್ರಮಿಸುತ್ತಿರುವ ದೇಸೀ ಪ್ರತಿಮೆಗಳಲ್ಲಿ ಅತ್ಯಂತ ಪ್ರಮುಖವಾದದ್ದು ಈ ಸಾವರ್ಕರ್. ಇತಿಹಾಸದ ಕಸದ ತೊಟ್ಟಿಯಲ್ಲಿ ಬಿದ್ದಿದ್ದ ಬಿಂಬವಾಗಿತ್ತು ಸಾವರ್ಕರ್. ಅದಕ್ಕೆ ಪ್ರಮುಖ ಕಾರಣ, ಸ್ವತಂತ್ರ ಭಾರತದ ಅತ್ಯಂತ ದಾರುಣ ಘಟನೆಗಳಲ್ಲಿ ಪ್ರಮುಖವಾದ ಗಾಂಧಿ ಹತ್ಯೆಯಲ್ಲಿ ಆತನಿಗೆ ಪಾಲಿತ್ತು ಎಂದು ಹೇಳಲಾದ ಸಂಗತಿ. ಅಷ್ಟೇ ಅಲ್ಲ, ಅಂಡಮಾನಿನ ಸೆಲ್ಯುಲಾರ್ ಜೈಲಿನಲ್ಲಿ ಶಿಕ್ಷೆಗೆ ಗುರಿಯಾಗಿದ್ದಾಗ ಬ್ರಿಟಿಷರಿಗೆ ಬರೆದಿದ್ದ ಕ್ಷಮಾಪಣಾ ಪತ್ರಗಳು ಪುನಹ ಈ ಕಾಲದ ಸಾರ್ವಜನಿಕ ವಲಯದಲ್ಲಿ ಚರ್ಚಾವಿಷಯವಾಯಿತು. ಹಿಂದುತ್ವ ಫ್ಯಾಸಿಸ್ಟರು ಸಾವರ್ಕರನ್ನು ರಾಷ್ಟ್ರೀಯ ಬಿಂಬವಾಗಿ, ಒಂದರ್ಥದಲ್ಲಿ ಗಾಂಧಿಗೆ ಬದಲಿಯಾಗುವ ರೀತಿಯಲ್ಲಿ, ಕೊಂಡಾಡುತ್ತಿರುವುದು ಆತ ಹಿಂದುತ್ವ ಎಂಬ ಸಿದ್ಧಾಂತದ ಪಿತಾಮಹ ಆಗಿರುವುದರಿಂದ. ಆತ ೧೯೨೩ರಲ್ಲಿ ಬರೆದ Essentials of Hindutva ಎಂಬ ಪುಸ್ತಕವೇ ಹಿಂದುತ್ವ ಎಂಬ ಕಲ್ಪನೆಗೆ ಜನ್ಮ ನೀಡಿರುವುದು.
ಅಂತಹಾ ಸಾವರ್ಕರ್ ಬರೆದ ನೆನಪಿನ ಪುಸ್ತಕದ ಆಧಾರದಲ್ಲಿ, ಅಲ್ಲಿಯ ತನಕ ಕೇರಳ ಕಂಡು ಕೇಳಿರದಿದ್ದ ಬಜೆಟ್ಟಿನಲ್ಲಿ, ಜನಪ್ರಿಯ ನಿರ್ದೇಶಕನೊಬ್ಬ, ಮಲಯಾಳಂ, ತಮಿಳು, ಹಿಂದಿ ಭಾಷೆಗಳ ದೊಡ್ಡ ದೊಡ್ಡ ನಟರನ್ನು (ಮೋಹನ್ ಲಾಲ್, ಪ್ರಭು, ಅಮರೀಶ್ ಪುರಿ, ಅನ್ನು ಕಪೂರ್ ಇತ್ಯಾದಿ) ಇಟ್ಟುಕೊಂಡು ದೃಶ್ಯ ವಿಸ್ಮಯದ ಚಿತ್ರ ತಯಾರಿಸಿಯೂ, ಅಂಡಮಾನ್ ಜೈಲಿಂದ ಸಾವರ್ಕರ್ ಬರೆದ ಕ್ಷಮಾಪಣಾ ಪತ್ರಗಳ ಬಗ್ಗೆಯಾಗಲೀ, ಮುಸ್ಲಿಂ ದ್ವೇಷ ಹೊತ್ತಿ ಉರಿಸುವ ರೀತಿಯಲ್ಲಿ ಆ ನೆನಪಿನ ಪುಸ್ತಕದಲ್ಲಿ ಮಾಡಿದ್ದ ವಿಮರ್ಶೆಗಳ ಬಗ್ಗೆಯಾಗಲೀ ಯಾವ ವಿಧದ ಚರ್ಚೆಯೂ ಅಂದು ಹುಟ್ಟಿಕೊಳ್ಳಲಿಲ್ಲ. ಆ ವರ್ಷದ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾದಾಗ ಎಂ.ಪಿ. ಸುಕುಮಾರನ್ ನಾಯರ್ ಅವರ ಕಳಗಂ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದುಕೊಂಡಿತು. ಕಾಲಾಪಾನಿಗೆ ಎರಡನೇ ಅತ್ಯುತ್ತಮ ಪ್ರಶಸ್ತಿ ಸಹಿತ ಏಳು ಪ್ರಶಸ್ತಿಗಳು ಸಂದವು. ಅಂದು ಪ್ರಶಸ್ತಿ ಸಮಿತಿಯಲ್ಲಿದ್ದ ಪ್ರಸಿದ್ಧ ನಟಿ ಸೀಮಾ, ಪ್ರಶಸ್ತಿ ಘೋಷಣೆಯ ನಂತರ ಅತ್ಯುತ್ತಮ ಚಿತ್ರ ಪ್ರಶಸ್ತಿ ಕಾಲಾಪಾನಿಗೆ ಕೊಡಬೇಕಿತ್ತು ಎಂದು ಹೇಳುವ ಮೂಲಕ ದೊಡ್ಡದೊಂದು ವಿವಾದಕ್ಕೆ ಕಾರಣವಾಗಿದ್ದರು. ಆ ವರ್ಷದ ರಾಷ್ಟ್ರ ಪ್ರಶಸ್ತಿಗಳು ಘೋಷಣೆಯಾದಾಗ ನಾಲ್ಕು ಪ್ರಶಸ್ತಿಗಳು ಕಾಲಾಪಾನಿಗೆ ಬಂದವು.
ಹೀಗೆ ಕಾಲಾಪಾನಿಯ ಕುರಿತು ಬಹಳಷ್ಟು ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ನಡೆಯುವಾಗಲೂ, ಹಿಂದುತ್ವ ಫ್ಯಾಸಿಸಮ್ಮಿನ ಪಿತಾಮಹ ಎಂದು ಕರೆಯಬಹುದಾದ ವಿ.ಡಿ. ಸಾವರ್ಕರ್ ಕುರಿತ ಆ ಚಿತ್ರದ ಸಂಬಂಧದ ಬಗ್ಗೆ ಯಾರೂ ತನಿಖೆ ಮಾಡಲಿಲ್ಲ. ಅದರಲ್ಲಿ ಸಾವರ್ಕರ್ ಒಂದು ಕಥಾಪಾತ್ರವಾಗಿ ಬಂದಿದ್ದರೂ ಕೂಡ. ಸಾವರ್ಕರ್ ಮಾತ್ರವಲ್ಲ, ಹಿಂದುತ್ವ ಫ್ಯಾಸಿಸಮ್ಮಿನ ಇನ್ನೊಬ್ಬ ಪ್ರಮುಖ ವ್ಯಕ್ತಿ, ಭಾಯ್ ಪರಮಾನಂದ ಕೂಡ ಅದರಲ್ಲಿ ಕಥಾಪಾತ್ರವಾಗಿ ಪ್ರತ್ಯಕ್ಷನಾಗಿದ್ದ. ಫ್ಯಾಸಿಸ್ಟ್ ಕುರಿತು ಹಲವು ರೀತಿಯಲ್ಲಿ ಅರಿತುಕೊಂಡವರಾಗಿದ್ದುಕೊಂಡೂ, ಹಿಂದುತ್ವವಾದಿಗಳು ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ ಪರಿಸ್ಥಿತಿಯಲ್ಲಿ ಪ್ರದರ್ಶನಕಂಡರೂ ಆ ಸಿನಿಮಾ ನಿರ್ವಹಿಸಿದ ʼಸಾವರ್ಕರ್ ಯೋಜನೆʼಯನ್ನು ಮಲಯಾಳಿಗಳು ಗುರುತಿಸಲೇ ಇಲ್ಲ.
ಇದರ ಜೊತೆಗೆ ನೆನೆಯಲೇಬೇಕಾದ ಮತ್ತೊಂದು ಸಿನಿಮಾ ರಾಜ್ ಕಮಲ್ ಇಂಟರ್ನಾಷನಲ್ ಬ್ಯಾನರಿನಲ್ಲಿ ಕಮಲ್ ಹಾಸನ್ ನಿರ್ದೇಶನದಲ್ಲಿ ೨೦೦೦ದಲ್ಲಿ ತೆರೆಗೆ ಬಂದ ʼಹೇ ರಾಮ್.ʼ ಗಾಂಧಿ ಹತ್ಯೆಯ ಹಿನ್ನೆಲೆಯ ಕಥಾಎಳೆಯನ್ನು ಅದು ಒಳಗೊಂಡಿತ್ತು. ಕಾಲಾಪಾನಿಯನ್ನು ನೆನಪಿಸುವ ರೀತಿಯಲ್ಲಿ ಪ್ಯಾನ್ ಇಂಡಿಯನ್ ಪ್ರೇಕ್ಷಕರನ್ನು ಗುರಿಯಾಗಿಸಿಕೊಂಡ ದೃಶ್ಯ ವಿಸ್ಮಯವಾಗಿ ಅದು ತೆರೆಕಂಡಿತ್ತು. ಕಮಲ್ ಹಾಸನ್, ಶಾರುಖ್ ಖಾನ್, ಅತುಲ್ ಕುಲಕರ್ಣಿ, ಓಂ ಪುರಿ, ಹೇಮಮಾಲಿನಿ, ನಸೀರುದ್ದೀನ್ ಶಾ, ರಾಣಿ ಮುಖರ್ಜಿ ಮೊದಲಾಗಿ ವಿವಿಧ ಭಾಷೆಗಳ ದೊಡ್ಡ ನಟರುಗಳು ಆ ಸಿನಿಮಾದಲ್ಲಿ ನಟಿಸಿದ್ದರು. ಕಾಲಾಪಾನಿಗೆ ವಿರುದ್ಧವಾಗಿ ಭಾರತದ ಚರಿತ್ರೆಯಲ್ಲಿ ವಿ.ಡಿ ಸಾಮರ್ಕರ್ ಪಾತ್ರವನ್ನು ವಿಮರ್ಶಾತ್ಮಕವಾಗಿ ಶೋಧಿಸುವ ಮುಖ್ಯವಾಹಿನಿ ಸಿನಿಮಾ ಅದಾಗಿತ್ತು. ಅತುಲ್ ಕುಲಕರ್ಣಿ ಅಭಿನಯಿಸಿದ ಶ್ರೀರಾಂ ಅಭಯಂಕರ್ ಎಂಬ ಕಥಾಪಾತ್ರ ʼಸಾವರ್ಕರ್ ಹಿಂದುತ್ವʼ ಕಲ್ಪನೆಯನ್ನು ಪೂರ್ತಿಯಾಗಿ ಆವಾಹಿಸಿಕೊಂಡಿದ್ದ ಪಾತ್ರವಾಗಿತ್ತು. ಅಭಯಂಕರ್ ಪಾತ್ರದ ಹಿನ್ನೆಲೆಯಲ್ಲಿ ಸಾವರ್ಕರ್ ಭಾವಚಿತ್ರವನ್ನು ತೋರಿಸುವ ಫ್ರೇಮ್ಗಳು ಕೂಡ ಆ ಸಿನಿಮಾದಲ್ಲಿದ್ದವು. ಹಿಂದು-ಮುಸ್ಲಿಂ ಸೌಹಾರ್ದತೆಯ ಕ್ಲೀಷೆಯಾಗಿ ಹೋಗಿರುವ ಶೈಲಿ ಮತ್ತು ಪ್ರಯೋಗಗಳು ಇವೆಯಾದರೂ, ದೇಶ ವಿಭಜನೆಯ ಹಿನ್ನೆಲೆಯಲ್ಲಿ ಹಿಂದುತ್ವ ಫ್ಯಾಸಿಸಮ್ಮಿನ ಹಿಂದೆ ಇರುವ ನವಬ್ರಾಹ್ಮನಿಸಂ ಅನ್ನು ಕಾಣುವ ಹಾಗೂ ವಿಭಜನೆ ಮತ್ತು ಗಾಂಧಿ ಹತ್ಯೆಯ ತನಕದ ಕಾಲದಲ್ಲಿ ಅದು ಹೇಗೆ ಕೆಲಸ ಮಾಡಿತು ಎಂದು ಸೃಜನಶೀಲವಾಗಿ ಶೋಧಿಸುವ ನಿಸ್ವಾರ್ಥ ಪ್ರಯತ್ನ ಆ ಸಿನಿಮಾದ ಹಿಂದೆ ಇತ್ತು. ಅದು ತೆರೆಕಂಡಾಗಲೂ ಸಾರ್ವಜನಿಕ ವಲಯದಲ್ಲಿ ಹಲವು ರೀತಿಯ ಚರ್ಚೆಗಳನ್ನು ಹುಟ್ಟುಹಾಕಲಾಯಿತು. ಮೂರು ರಾಷ್ಟ್ರ ಪ್ರಶಸ್ತಿಗಳನ್ನು ಅದು ಪಡೆದುಕೊಂಡಿತು. ಆದರೂ, ಕೇರಳದಲ್ಲಿ ಸಾವರ್ಕರ್ ವಿಷಯವಾಗಿ ಬಂದ ಈ ಸಿನಿಮಾದ ವಿಮರ್ಶಾತ್ಮಕ ನೋಟವನ್ನು ಯಾರೂ ಗಮನಿಸಲಿಲ್ಲ.
ಇಂಡಿಯನ್ ಫ್ಯಾಸಿಸಂ ಕುರಿತು ಬೀದಿಬೀದಿಯಲ್ಲಿ ಚರ್ಚೆ ನಡೆಸುವಷ್ಟು ರಾಜಕೀಯ ಮತ್ತು ಸಾಂಸ್ಕೃತಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳುವಾಗಲೂ, ಆ ಫ್ಯಾಸಿಸಂ ಅನ್ನು ಸಾಧ್ಯವಾಗಿಸಿದ ಇಂಡಿಯನ್ ಬೇರುಗಳ ಚರಿತ್ರೆಯ ಕುರಿತು ಅಪ್ರಜ್ಞರಾಗಿಯೇ ಇರುವ ವಿಮುಖತೆಯೊಂದು ಮಲಯಾಳಿಗಳೊಳಗೆ ಎಲ್ಲ ಕಾಲದಲ್ಲಿಯೂ ಇತ್ತು. ಹಿಟ್ಲರ್ ಸೋಲಿಸಿದ ದೇಶಗಳ ಕುರಿತು ಬಹಳ ಚೆನ್ನಾಗಿ ಗೊತ್ತಿರುವ ಜನರಿಗೆ, ಸಾವರ್ಕರ್ ಕೇರಳ ಭೇಟಿಯ ಬಗ್ಗೆ ಕೇಳಿದರೆ ಗೊಂದಲವಿದೆ. ಸರ್ ಸಿ.ಪಿ. ತಿರುವಾಂಕೂರನ್ನು ಸ್ವಂತಂತ್ರವಾಗಿ ಘೋಷಿಸಿದ್ದನ್ನು ಚರ್ಚಿಸುವಾಗ, ಅವರು ಎತ್ತಿ ಹಿಡಿದ ಅಮೇರಿಕಾ ಮಾದರಿಯನ್ನು ಮಾತ್ರ ವಿಮರ್ಶಿಸಲಾಗುತ್ತದೆ. ಅದೇ ಹೊತ್ತು, ಅದು ಹಿಂದುತ್ವ ರಿಪಬ್ಲಿಕಿನ ಮಿನಿಯೇಚರ್ ರೂಪವಾಗಿತ್ತು ಎಂಬುದು ನಮ್ಮ ಗಮನಕ್ಕೆ ಬರುವುದೇ ಇಲ್ಲ. ಸಾವರ್ಕರ್ ಮತ್ತು ಸಿ.ಪಿ. ಎಂಬುದು ನಮ್ಮ ಇತಿಹಾಸ ಅನ್ವೇಷಣೆಯಲ್ಲಿ ಒಂದು ಕುತೂಹಲ ಸುದ್ದಿಯೇ ಅಲ್ಲ.
ಗಾಂಧಿಹತ್ಯೆ ಹಿಂದುತ್ವ ಫ್ಯಾಸಿಸಮ್ಮಿನ ಅತ್ಯಂತ ಪ್ರಧಾನ ಪ್ರಯೋಗವಾಗಿತ್ತು. ಅದು ಆ ದಿನಗಳಲ್ಲೇ ಎಲ್ಲರಿಗೂ ತಿಳಿದ ಸಂಗತಿಯಾಗಿತ್ತು. ನಾಥುರಾಂ ವಿನಾಯಕ್ ಗೋಡ್ಸೆ ಬರಿಯ ಒಬ್ಬ ಮತಭ್ರಾಂತನಾಗಿರಲಿಲ್ಲವೆಂದೂ, ಹಿಂದುತ್ವ ಫ್ಯಾಸಿಸಮ್ಮಿನ ಪಿತೂರಿಯನ್ನು ಹೆಗಲಿಗೇರಿಸಿಕೊಂಡು ಕಾರ್ಯಗತಗೊಳಿಸಿದ ಒಬ್ಬ ಮುಂಚೂಣಿ ಕಾರ್ಯಕರ್ತ ಎಂದೂ ಮೊದಲ ವಿಚಾರಣೆಯಲ್ಲಿಯೇ ಬಹಿರಂಗಗೊಂಡಿತ್ತು. ನಂತರ ಗಾಂಧಿಹತ್ಯೆಯ ಗೂಢಾಲೋಚನೆಯ ಕುರಿತು ವಿಚಾರಣೆ ನಡೆಸಲು ನೇಮಿಸಲ್ಪಟ್ಟ ಕಪೂರ್ ಕಮಿಷನ್ ಇದರ ಕುರಿತು ಧಾರಾಳ ಮಾಹಿತಿಗಳನ್ನು ಹೊರ ತಂದಿತು. ಸಾವರ್ಕರ್ ಸರ್ವಾಧಿಕಾರಿಯಾಗಿದ್ದ ಹಿಂದೂ ರಾಷ್ಟ್ರ ದಳ್ ಎಂಬ ಒಳಹಿಂದುತ್ವ ಸಂಘಟನೆಯಲ್ಲಿ ಗೋಡ್ಸೆ ಎರಡನೇ ನಾಯಕನಾಗಿದ್ದ ಎಂಬದು ಸಹಿತ. ಗಾಂಧಿ ಮಲಯಾಳದ ಸಾಂಸ್ಕೃತಿಕ ಚಿಂತನೆಯ ಅತ್ಯಂತ ಪ್ರಮುಖ ಬಿಂಬವಾಗಿದ್ದರು ಕೂಡ ಗಾಂಧಿಹತ್ಯೆ ಎಂಬುದು ಕೇರಳದಲ್ಲಿ ಒಂದು ಸುದ್ದಿ ಮಾತ್ರವಾಗಿ ಉಳಿಯಿತು. ಎನ್.ವಿ. ಕೃಷ್ಣವಾರ್ಯರ್ ಅವರಂತಹ ಒಬ್ಬ ಮಹಾಮನುಷ್ಯ ಗಾಂಧಿ ಮತ್ತು ಗೋಡ್ಸೆಯನ್ನು ತುಲನೆ ಮಾಡಿ ಬರೆದ, ಮಲಯಾಳದಲ್ಲಿ ಮತ್ತೆ ಮತ್ತೆ ಜಗಿಯುತ್ತಲೇ ಇರುವ ಒಂದು ಕವಿತೆಯಿದೆ. ಅದರಲ್ಲಿ ಗಾಂಧಿಯ ಮೌಲ್ಯಗಳಿಗೆ ಎದುರಾಗಿ ನಿಲ್ಲುವ ಕಾಳಸಂತೆಯ ಭ್ರಷ್ಟ ವ್ಯಕ್ತಿಯಾಗಿಯೆಲ್ಲ ಗೋಡ್ಸೆ ಪ್ರತ್ಯಕ್ಷನಾಗುತ್ತಾನೆ. ಆದರೆ, ಕಪೂರ್ ಕಮಿಷನ್ ವಾರ್ತೆಯಲ್ಲಿ ತುಂಬಿ ನಿಂತಿದ್ದ ಕಾಲದಲ್ಲಿಯೇ ಬರೆದ ಕವಿತೆಯಾಗಿದ್ದು ಕೂಡ, ಗೋಡ್ಸೆಯ ಹಿಂದುತ್ವ ಸಂಬಂಧವನ್ನು ಅದು ಚೂರೇ ಚೂರು ಮುಟ್ಟುವುದಿಲ್ಲ. ಅದರಲ್ಲಿ ಬರುವ ಗೋಡ್ಸೆ ಇತಿಹಾಸದ ಗೋಡ್ಸೆಯೊಂದಿಗೆ ಯಾವ ಸಂಬಂಧವೂ ಇಲ್ಲದ ಒಬ್ಬ ವ್ಯಕ್ತಿ ಮಾತ್ರ.
ಇಂತಹಾ ಕಾಲಘಟ್ಟದಲ್ಲಿ ಈ ಲೇಖನ ಸರಣಿ ಬರೆಯುತ್ತಿದ್ದೇನೆ. ಫ್ಯಾಸಿಸಮ್ಮಿನ ಇಂಡಿಯನ್ ಬೇರುಗಳನ್ನು ಮಲಯಾಳದ ಸಾರ್ವಜನಿಕ ಪ್ರಜ್ಞೆಯಲ್ಲಿ ಅಚ್ಚೊತ್ತುವುದರಿಂದ, ನಮ್ಮದೇ ಚರಿತ್ರೆ ಮತ್ತು ಮನಸ್ಸೊಳಗೆ ಗಟ್ಟಿಯಾಗಿ ಕುಳಿತಿರುವ ವಿಮುಖತೆಯಷ್ಟು ಎತ್ತರಕ್ಕೆ ಬೆಳೆದಿರುವ ಅಜ್ಞತೆಯನ್ನು ಒಮ್ಮೆ ಅಲುಗಾಡಿಸಲು ಸಾಧ್ಯವಾಗಬಹುದು ಎಂಬ ಬಯಕೆಯೊಂದಿಗೆ.