Home ಬ್ರೇಕಿಂಗ್ ಸುದ್ದಿ ಟಿಪ್ಪು-ಸಾವರ್ಕರ್ ಫ್ಲೆಕ್ಸ್ ವಿವಾದ : ಶಿವಮೊಗ್ಗದಲ್ಲಿ ನಿಷೇಧಾಜ್ಞೆ

ಟಿಪ್ಪು-ಸಾವರ್ಕರ್ ಫ್ಲೆಕ್ಸ್ ವಿವಾದ : ಶಿವಮೊಗ್ಗದಲ್ಲಿ ನಿಷೇಧಾಜ್ಞೆ

0

ಸಾವರ್ಕರ್ ಮತ್ತು ಟಿಪ್ಪು ಬ್ಯಾನರ್ ವಿವಾದ ಈಗ ಶಿವಮೊಗ್ಗದಲ್ಲಿ 144 ಸೆಕ್ಷನ್ ಜಾರಿಯ ವರೆಗೂ ಮುಂದುವರೆದಿದೆ. ಇನ್ನು ಕೆಲವೇ ದಿನಗಳಲ್ಲಿ ಎದುರಾಗುವ ಗಣೇಶ ಉತ್ಸವದ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತ 144 ಸೆಕ್ಷನ್ ಜಾರಿ ಮಾಡಿದೆ.

ಘಟನೆ ಹಿನ್ನೆಲೆ : ಟಿಪ್ಪು ಸುಲ್ತಾನ್ ಹೆಸರಿನ ಸಂಘಟನೆಯೊಂದು ಸ್ವಾತಂತ್ರ್ಯ ದಿನದ ಹಿನ್ನೆಲೆಯಲ್ಲಿ ಮೆರವಣಿಗೆ ಹೊರಟಿತ್ತು. ಈ ಮೆರವಣಿಗೆ ನಗರದ ಅಮೀರ್ ಅಹ್ಮದ್ ವೃತ್ತದ ಬಳಿ ಬರುತ್ತಿದ್ದಂತೆ ಅಲ್ಲೇ ಇದ್ದ ಸಾವರ್ಕರ್ ಫ್ಲೆಕ್ಸ್ ಬಳಿ ಟಿಪ್ಪು ಸುಲ್ತಾನ್ ಫ್ಲೆಕ್ಸ್ ಹಾಕಲು ಅನುಮತಿ ಕೊಡಬೇಕು ಎಂದು ಟಿಪ್ಪು ಸಂಘಟನೆ ವಿನಂತಿಸಿದೆ. ಸ್ಥಳದಲ್ಲಿದ್ದ ಅಧಿಕಾರಿಗಳು ಮನವಿ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಸಾವರ್ಕರ್ ಫ್ಲೆಕ್ಸ್ ಕೂಡಾ ತೆರವುಗೊಳಿಸಬೇಕು ಎಂದು ಒತ್ತಾಯಿಸಿದೆ.

ಕೆಲವು ನಿಮಿಷಗಳ ವಾಗ್ವಾದದ ಸಂದರ್ಭದಲ್ಲಿ ಗುಂಪಿನಲ್ಲಿದ್ದ ಕೆಲವು ಸಂಘಟಕರು ಸಾವರ್ಕರ್ ಫೋಟೊ ತೆರವುಗೊಳಿಸಿದ್ದಾರೆ. ಈ ಸಮಯದಲ್ಲಿ ಸ್ಥಳದಲ್ಲೇ ಇದ್ದ ಹಿಂದೂಪರ ಸಂಘಟನೆಯ ಗುಂಪು ಟಿಪ್ಪು ಸಂಘಟನೆ ಜೊತೆಗೆ ವಾಗ್ವಾದಕ್ಕೆ ಬಿದ್ದಿದೆ. ವಾಗ್ವಾದ ಘರ್ಷಣೆಗೆ ತಿರುಗುವ ಸಂದರ್ಭದಕ್ಕೆ ಸರಿಯಾಗಿ ಪೊಲೀಸರು ಫ್ಲೆಕ್ಸ್ ತೆರವುಗೊಳಿಸಿದವರ ಮೇಲೆ ಲಘು ಲಾಠಿ ಚಾರ್ಜ್ ನಡೆಸಿದ್ದಾರೆ. ನಂತರ ಸಾವರ್ಕರ್ ಫ್ಲೆಕ್ಸನ್ನು ಪೊಲೀಸರು ಸ್ಟೇಶನ್ನಿಗೆ ತಗೆದುಕೊಂಡು ಹೋಗಿದ್ದಾರೆ.

ಸ್ಥಳೀಯ ಹಿಂದೂಪರ ಸಂಘಟನೆಯವರು ಸಾವರ್ಕರ್ ಫ್ಲೆಕ್ಸ್ ಮರಳಿ ಕೊಡಬೇಕು ಮತ್ತು ಅದೇ ಸ್ಥಳದಲ್ಲಿ ಅಳವಡಿಸಬೇಕು ಎಂದು ಅಮೀರ್ ಅಹ್ಮದ್ ವೃತ್ತದಲ್ಲೇ ಪ್ರತಿಭಟನೆ ಪ್ರಾರಂಭಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಎಲ್ಲಾ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತ 144 ಸೆಕ್ಷನ್ ಜಾರಿ ಮಾಡಿದೆ.

ಇದರ ಜೊತೆಗೆ ಗೌರಿ ಗಣೇಶ ಹಬ್ಬ ಇನ್ನು ಕೆಲವೇ ದಿನ ಇರುವ ಕಾರಣ ಶಿವಮೊಗ್ಗದಲ್ಲಿ ಕೋಮು ಸಂಘರ್ಷ ತಿಳಿಗೊಳಿಸಬೇಕಾದ ಅನಿವಾರ್ಯತೆ ಇದೆ. ಆ ಕಾರಣ ಶಿವಮೊಗ್ಗ ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ‌.

You cannot copy content of this page

Exit mobile version