ಧರ್ಮಸ್ಥಳ ಗ್ರಾಮದಲ್ಲಿ ಸಾಮೂಹಿಕವಾಗಿ ಶವ ಹೂತಿಟ್ಟ ಪ್ರಕರಣದ ಉತ್ಖನನದಲ್ಲಿ ಇಂದು ನಿರ್ಣಾಯಕ ಹಂತ ತಲುಪಿದೆ. ದೂರುದಾರ ಈವರೆಗೆ ಸೂಚಿಸಿದ ಗುರುತುಗಳಲ್ಲಿ ಕೊನೆಯ ಹಂತವಾಗಿ ಇಂದು ಉತ್ಖನನ ಕಾರ್ಯ ಶುರುವಾಗಿದೆ.
ಪ್ರಕರಣದ ಪ್ರಮುಖ ಸಾಕ್ಷಿ ಭೀಮಾ ಹೆಸರಿನಿಂದ ಕರೆಯಲ್ಪಡುವ ವ್ಯಕ್ತಿ ಸೂಚಿಸಿದ 13 ನೇ ಪಾಯಿಂಟ್ ನಲ್ಲಿ ಉತ್ಖನನ ಕಾರ್ಯ ನಡೆಯಲಿದೆ. ಭೀಮಾ ಹೇಳಿದಂತೆ 13 ನೇ ಪಾಯಿಂಟ್ ನಲ್ಲೇ ಅತಿ ಹೆಚ್ಚು ಶವ ಹೂತಿಟ್ಟ ಬಗ್ಗೆ ಈ ದಿನ ಬಹಳ ಕುತೂಹಲಕಾರಿ ವಿಷಯವಾಗಿದೆ.
ಈಗಾಗಲೇ ಅನಾಮಿಕ ದೂರುದಾರ ಗುರುತಿಸಿದ 13ರ ಪೈಕಿ 12 ಪಾಯಿಂಟ್ಗಳಲ್ಲಿ ಶೋಧ ಕಾರ್ಯ ನಡೆದಿದೆ. ಹಲವು ಜಾಗಗಳಲ್ಲಿ ಹೆಚ್ಚಿನ ಸಾಕ್ಷ್ಯ ಲಭಿಸಿವೆ ಎಂಬ ಬಗ್ಗೆಯೂ ಎಸ್ಐಟಿ ಮೂಲಗಳಿಂದ ತಿಳಿದು ಬಂದಿದೆ. ಆದರೆ ಈಗಾಗಲೇ ಸಿಕ್ಕ ಕಳೆಬರಗಳಿಗೆ ಎಷ್ಟು ವರ್ಷವಾಗಿದೆ, ಅವುಗಳ ಸ್ಥಿತಿ ಏನಿದೆ ಎಂಬ ಬಗ್ಗೆ ಎಸ್ಎಸ್ಎಲ್ ರಿಪೋರ್ಟ್ ಮೂಲಕವೇ ಉತ್ತರ ಸಿಗಲಿದೆ.
ಮಂಗಳವಾರ ಕಾಡಿನಲ್ಲಿ ಪರಿಶೀಲನೆ ನಡೆಸುವಾಗ ಎರಡು ವರ್ಷದ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾದ ಶವಗಳ ಮೂಳೆಗಳು ದೊರೆತಿದೆ. ಇದು ದೂರುದಾರ ಹೂತಿದ್ದಲ್ಲ, ಅಸಹಜ ಸಾವಿನ ಪ್ರಕರಣ ಎಂದು ಹೇಳಲಾಗುತ್ತಿದೆ. ಈ ನಡುವೆ ಮಂಗಳವಾರ ನಡೆದ ಎರಡು ಸಮಾಧಿಯ ಶೋಧ ಪ್ರಕರಣದಲ್ಲಿ ಯಾವುದೇ ಮಹತ್ವದ ಸಾಕ್ಷ್ಯಗಳು ಸಿಕ್ಕಿಲ್ಲ ಎನ್ನಲಾಗಿದೆ.
ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಎಂದಿನಂತೆ ಅಧಿಕಾರಿಗಳು, ಎಸ್ಐಟಿ ಮತ್ತು ದೂರುದಾರನನ್ನೊಳಗೊಂಡ ತಂಡ ನೇತ್ರಾವತಿ ನದಿ ತಟದ ಬಂಗ್ಲೆ ಗುಡ್ಡಕ್ಕೆ ಬರಲಿದೆ. ಎಸ್ಐಟಿ ತನಿಖೆಯ ಬಿಗ್ ಡೇ ಇಂದೇ ಆಗಿದ್ದು, ದೂರಿಗೆ ಸಂಬಂಧಿಸಿದಂತೆ ಮಹತ್ವದ ಸಾಕ್ಷಿಗಳು ಲಭ್ಯವಾಗುತ್ತಾ ಎಂಬ ಕುತೂಹಲವಿದೆ.