Home ಜನ-ಗಣ-ಮನ ಕಲೆ – ಸಾಹಿತ್ಯ ಪ್ರಯೋಗಶೀಲ ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯರಿ– ಊರ್ಮನಿ ಹೆಣ್ಣಿನ್ ನುಡಿ‌ ನಮನ

ಪ್ರಯೋಗಶೀಲ ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯರಿ– ಊರ್ಮನಿ ಹೆಣ್ಣಿನ್ ನುಡಿ‌ ನಮನ

0

ಕನ್ನಡ ರಂಗಭೂಮಿಯಲ್ಲಿ ವಿಶಿಷ್ಟ ಪ್ರಯೋಗಗಳ ಮೂಲಕ ನಾಟಕ ಪ್ರಿಯರ ಮನಗೆದ್ದ ಅಪರೂಪದ ರಂಗಕರ್ಮಿ ಗೋಪಾಲಕೃಷ್ಣ ನಾಯರಿ ಜನವರಿ ಆರರಂದು ನೇಪಥ್ಯಕ್ಕೆ ಸರಿದಿದ್ದಾರೆ. ರಂಗಭೂಮಿಯೊಂದಿಗೆ ಹೆಜ್ಜೆಹಾಕಲು ಅಪಾರವಾಗಿ ಪ್ರೇರೇಪಿಸಿದ ತನ್ನ ಮೇಸ್ಟ್ರನ್ನು ಅವರೊಂದಿಗಿನ ಒಡನಾಟದ ಅನುಭವಗಳನ್ನು ಆಪ್ತವಾಗಿ ಕಟ್ಟಿಕೊಟ್ಟು ಅವರಿಗೆ ನುಡಿನಮನ ಸಲ್ಲಿಸಿದ್ದಾರೆ ರಂಗಭೂಮಿ ಕಲಾವಿದೆ ರೇವತಿ ರಾಂ ಕುಂದನಾಡು.

ನಾನಾಗ ಕುಂದಾಪುರದ ರಂಗ ಅಧ್ಯಯನ ಕೇಂದ್ರದ ನಾಟಕ ಡಿಪ್ಲೋಮಾದ ವಿದ್ಯಾರ್ಥಿನಿ. ನನಗೆ ಯಕ್ಷಗಾನ, ಭಜನೆಗಳ ಒಲವಿತ್ತೆ ಹೊರತು ಈ  ನಾಟಕ ರಂಗಭೂಮಿಯ ಯಾವ ಆಯಾಮಗಳ ಬಗ್ಗೆಯೂ ಅಷ್ಟು ಆಳವಾಗಿ ತಿಳಿದಿರಲಿಲ್ಲ… ಈಗಲೂ…!

ನಾನು ಕಾಲೇಜಿಗೆ ಸೇರಿ ಒಂದೂವರೆ ಎರಡು ತಿಂಗಳಾಗಿರಬಹುದು.. ಉಳಿದ ವಿದ್ಯಾರ್ಥಿಗಳಿಂದ ಅಷ್ಟೋ ಇಷ್ಟೋ ನಾಟಕದ ಬಗ್ಗೆ ತಿಳಿದುಕೊಂಡೆ ಮತ್ತು ಅಲ್ಲಿಯ ಗೋಡೆಗಳ ಮೇಲೆ ನಾಟಕಗಳ ಫೋಟೋ, ನಿರ್ದೇಶಕರು, ದೊಡ್ಡ ದೊಡ್ಡ ವ್ಯಕ್ತಿಗಳ ಫೋಟೋ ನೋಡಿ ಅದರ ಕೆಳಗಿರುವ ಬರಹ ನೋಡಿ.. ಹೀಗೆಲ್ಲ ನಾಟಕ‌ ಮಾಡಿದ್ದಾರಾ ಅನ್ನೋ ಕುತೂಹಲದ ಜೊತೆಗೆ ಅನೇಕ ಪ್ರಶ್ನೆಗಳು ಮೂಡಿ ಭಯ ಹುಟ್ಟಿಸುತ್ತಿದ್ದವು. 

ಎಂದಿನಂತೆ ತರಗತಿಗಳು ನಡೆಯುತ್ತಿದ್ದವು.. ಒಂದು ದಿನ ನಮ್ಮ ಪ್ರಾಂಶುಪಾಲರಾದ ಪ್ರೋ. ವಸಂತ ಬನ್ನಾಡಿಯವರು ಬಂದು ಸರ್ಕಲ್ ಮಾಡಿ … ‘ನೋಡಿ ನಾಳೆಯಿಂದ ನಿಮಗೆ ಹೊಸ ನಾಟಕ ಪ್ರಯೋಗ ಪ್ರಾರಂಭ ಆಗುತ್ತೆ.  ನಿರ್ದೇಶಕರಾಗಿ ಎನ್ ಎಸ್ ಡಿ ಪದವೀಧರರಾದ ನಾಯರಿಯವರು ಬರ್ತಾರೆ’ ಅಂದರು.

ಸಹಪಾಠಿಗಳಿಗೆ ಈ ಎನ್.ಎಸ್.ಡಿ ಪರಿಚಯ ಬಹಳ ಇತ್ತೇನೋ.. ನನಗೇ ಏನೂ ತಿಳಿಯದ್ದರಿಂದ ಅವರ ಮಾತುಗಳಿಗೆ ಹೆದರಿದೆ. ಎನ್ ಎಸ್ ಡಿ ಯವರು ತುಂಬ ಶಿಸ್ತಿನವರು,  ದೈಹಿಕ ಕಸರತ್ತು ಮಾಡಿಸ್ತಾರೆ..ಹಾಗೇ ಮಾಡಿಸ್ತಾರೆ…ಹೀಗೆ ಮಾಡಿಸ್ತಾರೆ.. ಮೈ ಛಳಿ ಬಿಡಿಸ್ತಾರೆ ಅಂತೆಲ್ಲ ಏನೇನೋ.. ಮೊದಲೇ ಹೆದರಿದ ನನಗೆ ಇನ್ನಷ್ಟು ಭಯ ಆಗಿತ್ತು..  ಇನ್ನೂ ನೆನಪಿದೆ…ಎಷ್ಟೆಂದರೆ ಆ ರಾತ್ರಿಯೆಲ್ಲ ನಿದ್ದೆನೇ ಬರಲಿಲ್ಲ. ನಾಯಿರಿ ಅಂದ್ರೆ ಮಲೆಯಾಳಿಯವರು.. ನನಗೆ ಹೇಗೆ ಅರ್ಥ ಆಗಬೇಕು.. ಹಿಂದಿ ಇಂಗ್ಲೀಷ್ ಮಾತಾಡಿದ್ರೂ ಅಷ್ಟಕಷ್ಟೆ.. ನಾನಂತೂ ಅವರಿಂದ ಪೆಟ್ಟು ತಿನ್ನೋದು ಗ್ಯಾರಂಟಿ ಅಂತ ಮನಸಲ್ಲೆ ಅಂದು ಕೊಂಡಿದ್ದೆ.

ಬೆಳಗಾಯಿತು.. ಎಂದಿನಂತೆ 6 ಕ್ಕೆ ತರಗತಿಗೆ ಹೋಗಿ ಬೆಳಗಿನ ಕಸರತ್ತು, ಸಂಗೀತ ತರಗತಿ ಮುಗಿಸಿ ಫ್ರೆಶಪ್ ಆಗಿ ಬಂದು ತಿಂಡಿ ತಿಂದು‌ ಕ್ಲಾಸಿಗೆ ಕುಳಿತೆ. ನಾಯರಿಯವರ ಕ್ಲಾಸ್ ಅಂತೆ ಈಗ ಅಂತ ಗೆಳತಿ ವನಿತ ಹೇಳಿದ್ದಷ್ಟೆ.  ನನ್ನ ಮೈ ಬೆವರಿತ್ತು! ಬನ್ನಾಡಿಯವರೊಂದಿಗೆ ನಾಯರಿ ಕ್ಲಾಸೊಳಗೆ ಬಂದೇ ಬಿಟ್ಟರು..! ಸರಳತೆಯಿಂದ ಕಾಣುವ ಜುಬ್ಬ ಪೈಜಾಮ ಹಾಕಿದ ಕುಳ್ಳಗಿನ ಗಡ್ಡಧಾರಿ ವ್ಯಕ್ತಿ ನಮ್ಮೆದುರು ಬಂದು ನಿಂತರು. ಎಲ್ಲರೂ ಎದ್ದು ನಿಂತು ನಮಸ್ಕರಿಸಿದೆವು.  ನಾಯರಿ ಎಂದರೆ ಕಟ್ಟುಮಸ್ತಾದ ದೇಹ ಹೊಂದಿದ ಎತ್ತರದ ವ್ಯಕ್ತಿ ಅಂತ ನಿನ್ನೆ ದಿನವೇ ಕಲ್ಪಿಸಿ ಕೊಂಡಿದ್ದೆ. ಇಲ್ಲಿ ತದ್ವಿರುದ್ಧ.. ಆದರೂ  ಅವರ ಕಣ್ಣಿನ ತೀಕ್ಷ್ಣತೆ ಭಯ ಹುಟ್ಟಿಸಿತ್ತು. ಬನ್ನಾಡಿಯವರು ಅವರ ಪರಿಚಯ ಮಾಡಿಸಿದರು. ನಮ್ಮ ಪರಿಚಯ ಮಾಡಿಕೊಳ್ಳಲು  ಸೂಚಿಸಿದರು. ಯಾರೋ ಒಬ್ಬರು ನಿಧಾನವಾಗಿ ಹೇಳಿದ್ದಕ್ಕೆ… ಅಲ್ಲಿಯವರೆಗೆ ಸುಮ್ಮನಿದ್ದ ಅವರು ‘ಗಟ್ಟಿಯಾಗಿ ಹೇಳಿ ನಾಟಕದ ವಿದ್ಯಾರ್ಥಿಗಳು ನೀವು’ ಅಂದರು ಗಡಸು ಧ್ವನಿಯಲ್ಲಿ.. ನನಗೆ ಇನ್ನೂ ಹೆದರಿಕೆಯಾಯ್ತು.. ಕೊನೆಯಲ್ಲಿ ಕೂತವಳು ನಾನು ನನ್ನ ಸರದಿ ಬಂದಂತೆ..ದುಃಖ ಭಯ ಒಟ್ಟಿಗೆ ಬಂದು ಜೋರಾಗಿ ಹೇಳಿದೆ. ‘ಓಹ್… ಊರ್ಮನಿ ಹೆಣ್ಣ್.. ಖುಷಿ ಆಯ್ತ್ ಕಣೇ. ನಾನ್ ಸಾಲಿಗ್ರಾಮದವ…ಹೆದರ್ಬೇಡ.. ಚೆಂದ ಕಲಿ ‘ ಎಂದು ಭುಜ ತಟ್ಟಿದರು. 

 ಗೋಪಾಲ ಕೃಷ್ಣ ನಾಯರಿ ಎಂದರೆ ಯಾರೋ ಕೇರಳದವರು ಅಂದುಕೊಂಡ ನನಗೆ ಕುಂದಾಪ್ರ ಭಾಷಿ ಕೇಳಿ ಭಯ ಹೆದರಿಕೆ ಎಲ್ಲ ಮಾಯವಾಗಿತ್ತು. ಎರಡೆರಡು ಖುಷಿ ಮನಸೊಳಗೆ. ಒಂದು ಕನ್ನಡದವರೆಂಬುದು. ಇನ್ನೊಂದು ನಮ್ಮ ಕುಂದಾಪ್ರದವ್ರೇ ಅನ್ನೋದು. ಬನ್ನಾಡಿಯವರು ಪರಿಚಯ ಮಾಡಿಸಿದಾಗ ದೆಹಲಿ ಎನ್ ಎಸ್ ಡಿ ಯವರು ಅಂದಿದ್ದು ಮಾತ್ರ ನನ್ನ ಕಿವಿಗೆ ಬಿದ್ದಿತ್ತು. ಆ ಭಯದಲ್ಲಿ ಅವರ ಊರ ಹೆಸರನ್ನು ಸರಿಯಾಗಿ ಕೇಳಿಸಿ ಕೊಂಡಿರಲಿಲ್ಲ!  ಹೀಗೆ, ಗೋಪಾಲಕೃಷ್ಣ ನಾಯರಿಯವರನ್ನ ಬರಮಾಡಿಕೊಂಡಿದ್ದು ನಾನು.

ಶ್ರೀ ಗೋಪಾಲಕೃಷ್ಣ ನಾಯರಿಯವರು ಕುಂದಾಪುರ ತಾಲೂಕಿನ ಸಾಲಿಗ್ರಾಮದ ಶ್ರೀಮತಿ ಬಚ್ಚಿ ಮತ್ತು ಸದಿಯ ನಾಯಿರಿಯವರ ಮಗನಾಗಿ 1955 ಫೆಬ್ರವರಿ 1ರಂದು ಜನಿಸಿದರೆಂದು ಉಲ್ಲೇಖವಿದೆ. ಕರಾವಳಿ ಭಾಗದವರೇ ಆಗಿರುವುದರಿಂದ ಚಿಕ್ಕಂದಿನಿಂದಲೇ ಯಕ್ಷಗಾನ, ಭಜನೆ, ಭೂತಾರಾಧನೆಯಂತಹ ಸಂಸ್ಕೃತಿಯನ್ನು ಒಗ್ಗೂಡಿಸಿಕೊಂಡು ಬೆಳೆದವರು. ನಾನೂ ಕೂಡ. 

ಸಾಲಿಗ್ರಾಮದಲ್ಲಿ ಹೈಸ್ಕೂಲ್ ಮುಗಿಸಿ, ನಂತರ ಬೆಂಗಳೂರಿನಲ್ಲಿ ಅಕ್ಕನ ಮನೆಯಲ್ಲಿದ್ದು ಅವರದೇ ಹೋಟೆಲ್ ಕೆಲಸ ಮಾಡಿಕೊಂಡೇ ಎಂ.ಇ.ಎಸ್ ಕಾಲೇಜಿಗೆ ಸೇರಿಕೊಂಡರು. ಅದೇ ಕಾಲೇಜಿನಲ್ಲೇ ರಂಗಭೂಮಿ ಅವರನ್ನು ಸೆಳೆದದ್ದು ಅಂತ ಅವರೇ ಹೇಳಿದ್ದರು. ತೆರೆಗಳು ನಾಟಕದ ಮೂಲಕ ರಂಗಪ್ರವೇಶ ಮಾಡಿ ಶ್ರೇಷ್ಠ ನಟ ಎನಿಸಿ ಕೊಂಡರಂತೆ. ಅಂದಿನಿಂದ ರಂಗಭೂಮಿಯ ಅನೇಕರ ಪರಿಚಯವಾಗುತ್ತ.. ಅನೇಕ‌ ಮಜಲುಗಳನ್ನು ತಿಳಿಯಲು ಶುರುಮಾಡಿದರು. ನಂತರದ ದಿನಗಳಲ್ಲಿ ತಾವೇ ನಾಟಕಗಳನ್ನು ನಿರ್ದೇಶನ ‌ಮಾಡಲು ಪ್ರಾರಂಭಿಸಿದರು. ಕುಂಟಾ ಕುಂಟಾ ಕುರುವತ್ತಿ, ಕ್ರಾಂತಿ ಬಂತು ಕ್ರಾಂತಿ, ನಾರ್ಸಿಸ್, ಖರೋಖರ ಹೀಗೆ ಏಕಾಂಕ ನಾಟಕಗಳ ಜೊತೆಗೆ ಚಿರಸ್ಮರಣೆಯಂತಹ ದೀರ್ಘ ನಾಟಕಗಳಲ್ಲೂ ಅಭಿನಯಿಸಿ ವೃತ್ತಿಪರ ರಂಗಕರ್ಮಿ ಎನಿಸಿಕೊಂಡರು.  ನಂತರ ದೆಹಲಿಯ ಎನ್ ಎಸ್ ಡಿ.ಗೆ ಅರ್ಜಿ ಸಲ್ಲಿಸಿದರು. ಆ ಸಂದರ್ಭದಲ್ಲಿ ಬಿ.ವಿ.ಕಾರಂತರು ಅಲ್ಲಿಯ ನಿರ್ದೇಶಕರಾಗಿದ್ದರು. ಎರಡು ಸಂದರ್ಶನಗಳನ್ನು ಎದುರಿಸುವ ಮೂಲಕ ಆಯ್ಕೆಯಾದರು. ಭಾಷೆ ದೊಡ್ಡ  ಸಮಸ್ಯೆ ಅನಿಸಿದ್ದರೂ ದೇಹ ಭಾಷೆ ಮುಖ್ಯವೆಂದು ಅರಿತು ಕಲಿಕೆಯಲ್ಲಿ ತಲ್ಲೀನರಾದರು. ಆರ್ಥಿಕವಾಗಿ ಕೊರತೆಯಿದ್ದರೂ ಶ್ರೀರಂಗರೂ ಸೇರಿದಂತೆ ಹಲವು ಸ್ನೇಹಿತರ ಸಹಾಯದಿಂದ ಪದವಿ ಪಡೆದು ಹೊರಬಂದರು. 

ನಂತರ ಉದಯ‌ ಕಲಾನಿಕೇತನ, ಎಂ.ಇ.ಎಸ್ ಕಾಲೇಜು, ಶೇಷಾದ್ರಿಪುರಂ ಕಾಲೇಜು ಸೇರಿದಂತೆ ಹಲವು ನಾಟಕ ತಂಡಗಳಿಗೆ ಅಭಿನಯ ತರಬೇತಿಯನ್ನು ‌ನೀಡುತ್ತ ಬಂದರು. ಮೈಸೂರಿನಲ್ಲಿ ನಾಟಕ ಉಪನ್ಯಾಸಕರಾಗಿ ಸೇರಿಕೊಂಡು ಬಿ.ಎ. ಮುಗಿಸಿದರು. ಸುಲೋಚನ ಎಂಬವರನ್ನು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮೈಸೂರನ್ನು ಬಿಟ್ಟು ಕೇರಳದ  ತ್ರಿಚೂರಿನ ಕಾಲೇಜಿಗೆ ಅಭಿನಯಕ್ಕೆ ಅಧ್ಯಾಪಕರಾಗಿ ಸೇರ್ಪಡೆಗೊಂಡರೂ ಅಲ್ಲಿಯೂ ಹೆಚ್ಚುಕಾಲ ಉಳಿಯಲಾಗಲಿಲ್ಲ. ಕೆಲಸಕ್ಕಾಗಿ ತುಂಬ ಪ್ರಯತ್ನಿಸಿದರೂ ಸಾಧ್ಯವಾಗದೇ ಇದ್ದಾಗ ಚಿತ್ರದುರ್ಗದ ಮುರುಘಾ ಮಠದ ಅಭಿನಯ ಶಾಲೆಗೆ ಹೋದರೂ ಯಾಕೋ ಅವರ ಮನಸ್ಸಿಗೆ ಅಷ್ಟು ಹಿಡಿಸದೇ ಅಲ್ಲಿಂದ ಹೊರಬಂದರು. ಆದರೆ ಅಲ್ಲಿಯೇ ಒಂದಿಷ್ಟು ಸ್ನೇಹಿತರ ಬಳಗ ಅವರಿಗೆ ಸೃಷ್ಟಿಯಾಗಿತ್ತು. ಇದರಿಂದಾಗಿ ಕರ್ನಾಟಕದ ಬೇರೆ ಬೇರೆ ಕಡೆ ರಂಗಭೂಮಿಯ ಸಂಘಟನೆಗಳನ್ನು ಕಟ್ಟುವ ಇರಾದೆ ಇಟ್ಟುಕೊಂಡ ನಾಯರಿ, ಬೆಂಗಳೂರು, ಕುಂದಾಪುರ, ಉಡುಪಿ, ತುಮಕೂರು, ಹರಪನಹಳ್ಳಿ, ಚಿತ್ರದುರ್ಗದಲ್ಲಿ ತಂಡಗಳನ್ನು ಕಟ್ಟಿ ಬೆಳೆಸಲು ಪ್ರಯತ್ನಿಸಿದರು. ರಂಗಾಯಣಗಳ  ರಂಗಸಮಾಜದ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು. 

ನಾಯರಿಯವರ ತರಗತಿಗಳು ಶಿಸ್ತುಬದ್ಧ. ನಾಟಕಕ್ಕೆ ತಯಾರಿ ಮಾಡುವಾಗಲಂತೂ.. ಮೊದಲು ತಮ್ಮ ಲಯಕ್ಕೆ ಎಲ್ಲರನ್ನೂ ಅಣಿಗೊಳಿಸುತ್ತಿದ್ದರು. ನಾಟಕದ ವಸ್ತು ವಾಸ್ತವತೆಗೆ ಹತ್ತಿರವಾಗಿರುವಂತೆ, ಮಾತುಗಾರಿಕೆಯನ್ನು ಸರಳ ಮಾಡಿ,  ಜನಜೀವನಕ್ಕೆ ಆಪ್ತವಾಗುವ ಸಂಗೀತ, ವಾದ್ಯಪರಿಕರ, ಜನಪದೀಯವಾದ ಆಂಗಿಕ, ಆಹಾರ್ಯಗಳನ್ನು ಬಳಸುವುದು ಅವರ ಹೆಚ್ಚಿನ ನಾಟಕಗಳಲ್ಲಿ ಕಂಡುಬರುತ್ತದೆ. ಅವರ ಆಯ್ಕೆಯೇ ಹಾಗಿರುತ್ತಿತ್ತು. ಮತ್ತು ಹಳೆಯ ನಾಟಕಗಳನ್ನು ಶೈಲೀಕೃತಗೊಳಿಸಿ ಪ್ರಯೋಗಿಸಲು ಪ್ರಯತ್ನಿಸಿದ್ದರು. ಯಾವ ವಿದ್ಯುತ್ ಬೆಳಕನ್ನೂ ಬಳಸದೇ ಕೇವಲ ದೊಂದಿ ಬೆಳಕಿನಿಂದ ಪ್ರಯೋಗ ಮಾಡಿ ಯಶ ಕಂಡದ್ದು ಅವರ  ‘ಹಾಡಿಯಾಟ’. ಅವರ ಕಟ್ಟುನಿಟ್ಟಿನ ಶಿಸ್ತು ಹೇಗಿತ್ತೆಂದರೆ..ನಾಟಕ ಪ್ರಯೋಗಿಸುವ ಮುಂಚೆ ಯಾರು ಯಾರೊಂದಿಗೂ ವಿನಾ ಕಾರಣ ಮಾತಾಡುವಂತಿರಲಿಲ್ಲ. ಇಡೀ ದಿನ ನಾಟಕದ ಬಗ್ಗೆ ಮಾತ್ರ ಆಲೋಚಿಸುವಂತೆ ಮಾಡುತ್ತಿದ್ದರು. ನಮ್ಮ ಮತ್ತವಿಲಾಸ ಪ್ರಹಸನ ಸಾಗರದ ಸ್ಪಂದನದಲ್ಲಿ ಪ್ರದರ್ಶನವಿದ್ದಾಗ ಕುಂದಾಪುರದಿಂದ ಸಾಗರದವರೆಗೂ ನನ್ನ ಪಕ್ಕದ ಸೀಟಿನಲ್ಲಿಯೇ ಕುಳಿತು ಗದರಿಸಿದ್ದು ಇನ್ನೂ ನೆನಪಿದೆ. ನಾನೂ ಮೊದಲೇ ಬಾಯಿಬಡಕಿ. ಮಾತಾಡಲು ಹಾತೊರೆಯುತ್ತಿದ್ದೆ. ಮುಂದಿನ ಸೀಟೇ ನನ್ನದಿತ್ತು! ಸುಮ್ಮನೆ ಹಿಂದೆ ತಿರುಗಿ ನೋಡುವಷ್ಟರಲ್ಲೇ..’ ಏ ಗುಡ್ಡಿಯಂಗಡಿ  ನೋ.. ನೋ..ಕೂತ್ಕೋ ಸುಮ್ನೆ.  ನೀನೇ ನಾಟಕದ ಹೀರೋ ನಾಟಕದ ಬಗ್ಗೆ ಚಿಂತೆ ಮಾಡು. ಏನು…!’ ಆಗ ನಾನು ‘ಹು’ ಅಂತ ತಲೆ ಅಲ್ಲಾಡಿಸಿ ಸುಮ್ನೆ ಕೂತಾಗ, ಗುಡ್  ಜೈ ಜೈ.. ಅಂದರು. ಯಾವಾಗಲೂ ಪ್ರತಿ ಮಾತಿಗೂ ಅವರ ಬಾಯಿಂದ  ಬರುತ್ತಿದ್ದ ‘ಜೈ ಜೈ’ ಅನ್ನುವ ಪದ ಆತ್ಮೀಯ ಅನ್ನಿಸುತ್ತಿತ್ತು.

ದೊಂಬಿದಾಸರ ಪದ, ಯಕ್ಷಗಾನ, ವೀರಗಾಸೆಗಳ ಒಡಪು, ದೊಡ್ಡಾಟ  ಹೀಗೆ ಜನಪದೀಯ ಕಲೆಗಳನ್ನು ಒಗ್ಗೂಡಿಸಿಕೊಂಡು ತಿಳಿ ಹಾಸ್ಯದ ಮೂಲಕ  ಸಂಸ್ಕೃತ ನಾಟಕಗಳನ್ನು ಕಟ್ಟಿ, ಹೊಸತರದ ಪ್ರಯೋಗಗಳನ್ನು ಮಾಡುತ್ತಿದ್ದರು. ನಾನು ಅಭಿನಯಿಸಿದ ಮತ್ತವಿಲಾಸ ಪ್ರಹಸನದಲ್ಲಿ  ಇಡೀ ನಾಟಕದ ಸೂತ್ರಧಾರಿಗಳಂತೆ ಮೇಳಗಳು ಬಂದು ವೀರಗಾಸೆಯ ಒಡಪುಗಳ ಮೂಲಕವೇ ಕಥೆ ಸಾಗಿದ್ದು ವಿಶೇಷ. ಈ ಥರದಲ್ಲಿ ಹಲವು ಶೈಲಿಯಲ್ಲಿ ಅವರ ಅನೇಕ ನಾಟಕಗಳನ್ನು ನೋಡಬಹುದು.. 

 ಇಂತಹ ವಿಶೇಷ ಪ್ರತಿಭೆಯುಳ್ಳ  ಮಹಾನ್ ಚೇತನ ನಮಗೆಲ್ಲಗೂ “ಜೈ ಜೈ “ಹೇಳಿ  ಹೊರಟು ಬಿಟ್ಟಿದ್ದಾರೆ. ಗೋಪಾಲ ಕೃಷ್ಣ ನಾಯರಿಯವರು ನನ್ನಂತ ಸಾವಿರಾರು ಶಿಷ್ಯರ ಬಳಗವನ್ನೂ ಕರ್ನಾಟಕದಾದ್ಯಂತ ಸೃಷ್ಟಿಸಿದ್ದಾರೆ. ಇವರ ಪ್ರಯೋಗಗಳು ಚಿಂತನೆಗಳು ನಮ್ಮ ಜೊತೆ ಮುಂದುವರಿಯಲಿ ಎಂದು ಹೇಳುತ್ತ ಈ ಪುಟ್ಟ ಲೇಖನದ ಮೂಲಕ ಮಹಾನ್ ಚೇತನಕ್ಕೆ ನುಡಿನಮನ ಸಲ್ಲಿಸುತ್ತಿದ್ದೇನೆ.

ಹೋಗಿ ಬನ್ನಿ ಗುರುಗಳೇ ಜೈ ಜೈ.

ನಿಮ್ಮ ಪ್ರೀತಿಯ ಊರ್ಮನಿ ಹೆಣ್ಣ್.

ರೇವತಿರಾಂ ಕುಂದನಾಡು.

ರಂಗಭೂಮಿ ಕಲಾವಿದೆ

You cannot copy content of this page

Exit mobile version