Home ರಾಜ್ಯ ದಾವಣಗೆರೆ 2027ರ ವೇಳೆಗೆ ತುಮಕೂರು-ದಾವಣಗೆರೆ ನೇರ ರೈಲ್ವೆ ಮಾರ್ಗ ಪೂರ್ಣ: ಅಧಿಕಾರಿಗಳಿಗೆ ಗಡುವು ನೀಡಿದ ಸಚಿವ ವಿ....

2027ರ ವೇಳೆಗೆ ತುಮಕೂರು-ದಾವಣಗೆರೆ ನೇರ ರೈಲ್ವೆ ಮಾರ್ಗ ಪೂರ್ಣ: ಅಧಿಕಾರಿಗಳಿಗೆ ಗಡುವು ನೀಡಿದ ಸಚಿವ ವಿ. ಸೋಮಣ್ಣ

0

ದಾವಣಗೆರೆ,ಫೆಬ್ರವರಿ.26(ಕರ್ನಾಟಕ ವಾರ್ತೆ) ಬಹಳ ವರ್ಷಗಳ ಕನಸಿನ ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲ್ವೆ ಯೋಜನೆಯನ್ನು ಅತ್ಯಂತ ವೇಗವಾಗಿ ಪೂರ್ಣಗೊಳಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. 2027ರ ಡಿಸೆಂಬರ್ ಒಳಗೆ ಈ ಮಾರ್ಗವನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ತಿಳಿಸಿದರು.


ಅವರು ಗುರುವಾರ ದಾವಣಗೆರೆ ಜಿಲ್ಲೆಯ ತೋಳಹುಣಸೆಯಿಂದ ಚಿತ್ರದುರ್ಗ-ತುಮಕೂರು ನೇರ ರೈಲ್ವೆ ಮಾರ್ಗದ ಪರಿಶೀಲನೆಯನ್ನು ತೋಳಹುಣಸೆಯಿಂದ ಆನಗೋಡು ರೈಲ್ವೆ ನಿಲ್ದಾಣದವರೆಗೆ ಮೋಟರ್ ಟ್ರಾö್ಯಲಿಯಲ್ಲಿ ಪರಿಶೀಲನೆ ನಡೆಸಿ ಆನಗೋಡು ರೈಲ್ವೆ ನಿಲ್ದಾಣದಲ್ಲಿ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಸಚಿವರು ತೋಳಹುಣಸೆ ನಿಲ್ದಾಣದಿಂದ ಆನಗೋಡು ವರೆಗೆ ಮೋಟಾರ್ ಟ್ರ‍್ಯಾಲಿಯಲ್ಲಿ ಸಂಚರಿಸಿ ಮಾರ್ಗಗಳ ಸ್ಥಿತಿಗತಿ ಮತ್ತು ನಿಲ್ದಾಣದ ಕಾಮಗಾರಿಗಳನ್ನು ಖುದ್ದಾಗಿ ವೀಕ್ಷಿಸಿದರು.


ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ‘ವಿಕಸಿತ ಭಾರತ 2047’ ಎಂಬ ಯೋಜನೆ ರೂಪಿಸಲಾಗಿದೆ. ರೈಲ್ವೆ ಮತ್ತು ಜಲಶಕ್ತಿ ಇಲಾಖೆಗಳು ತಮ್ಮ ಯೋಜನೆಗಳ ಮೂಲಕ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ರೈಲ್ವೆ ಇಲಾಖೆಯ ಕಾರ್ಯಗಳಿಗೆ ಈ ವರ್ಷ ಈಗಾಗಲೇ 52,000 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಅಭಿವೃದ್ಧಿಗಾಗಿ 7,800 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ, ರೈಲ್ವೆ ಇಲಾಖೆಯ ಶೌಚಾಲಯಗಳ ಮೂಲಭೂತ ಸೌಕರ್ಯಕ್ಕಾಗಿ 2093 ಕೋಟಿಗಳ ಅನುದಾನವನ್ನು ಒದಗಿಸಲಾಗಿದೆ ಎಂದರು.


ಕಳೆದ 20 ವರ್ಷಗಳ ಹಿಂದೆ ಆರಂಭವಾದ ಯೋಜನೆಯನ್ನು 2027 ರ ಡಿಸೆಂಬರ್ ವೇಳೆಗೆ ಕಾಮಗಾರಿ ಪೂರ್ಣಗೊಳಿಸಿ ಸಂಚಾರಮುಕ್ತಗೊಳಿಸುವ ಗುರಿ ಹೊಂದಲಾಗಿದೆ. ಈ ಯೋಜನೆಗಾಗಿ ರಾಜ್ಯ ಸರ್ಕಾರವೂ ಸಂಪೂರ್ಣ ಸಹಕಾರ ನೀಡುತ್ತಿದ್ದು, ಕೇಂದ್ರ ಸರ್ಕಾರವೂ ಅನುದಾನ ಬಿಡುಗಡೆ ಮಾಡಿದೆ. ತುಮಕೂರು-ಚಿತ್ರದುರ್ಗ-ದಾವಣಗೆರೆ ಜಿಲ್ಲೆ ಸೇರಿ ಒಟ್ಟು 1200 ಎಕರೆ ಜಮೀನು ಬೇಕಾಗಿದ್ದು ಚಿತ್ರದುರ್ಗ ಜಿಲ್ಲೆಯಲ್ಲಿ ಇನ್ನೂ ಸುಮಾರು 111 ಎಕರೆ ಭೂಮಿಯ ಅಗತ್ಯವಿದೆ. ಭೂಸ್ವಾಧೀನಾಧಿಕಾರಿಗಳು ವಿಳಂಬ ಮಾಡುತ್ತಿದ್ದು ಯಾವುದೇ ಕಾರಣಕ್ಕೂ ಪ್ರಕ್ರಿಯೆಯನ್ನು ಮುಂದೂಡದೇ ಮಾರ್ಚ್ 31ರ ಒಳಗಾಗಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.


ಈ ಹೊಸ ಮಾರ್ಗದಲ್ಲಿ ತೋಳಹುಣಸೆಯಿಂದ ಹೆಬ್ಬಾಳದವರೆಗೆ ಕಾಮಗಾರಿ ಭರದಿಂದ ಸಾಗಿದ್ದು ಭವಿಷ್ಯದ ಜನಸಂಖ್ಯೆ ಬೆಳವಣಿಗೆಯ ದೃಷ್ಟಿಯಿಂದ ರೈಲ್ವೆ ಪ್ಲಾಟ್‌ಫಾರ್ಮ್ಗಳನ್ನು ಕನಿಷ್ಠ 21 ಬೋಗಿಗಳು ನಿಲ್ಲುವಷ್ಟು ವಿಸ್ತರಿಸಲು ತೀರ್ಮಾನಿಸಲಾಗಿದೆ. ನೂತನ ಮಾರ್ಗದಲ್ಲಿ ಕೆಲವು ಕಿಡಿಗೇಡಿಗಳು ಕಲ್ಲು ಎಸೆಯುವುದು ಮತ್ತು ಕಾಮಗಾರಿ ಮಾಡುವವರಿಗೆ ತೊಂದರೆಯುAಟು ಮಾಡುತ್ತಿದ್ದಾರೆ ಎಂಬ ಮಾಹಿತಿ ಇದ್ದು ಕಾಮಗಾರಿ ಅನುಷ್ಟಾನದಲ್ಲಿ ತೊಂದರೆ ಉಂಟು ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿ ರೈಲ್ವೆ ಪೊಲೀಸ್ ಮತ್ತು ಪೊಲೀಸ್ ಅಧಿಕಾರಿಗಳಿಗೆ ಗಸ್ತು ನಡೆಸುವಂತೆ ತಿಳಿಸಿದರು.


ದಾವಣಗೆರೆ ಸಂಸದರ ಮನವಿಯಂತೆ ವಂದೇ ಭಾರತ್ ರೈಲಿನ ಸಮಯ ಬದಲಾವಣೆ ಮತ್ತು ಸ್ಟಾಪೇಜ್ ಕುರಿತು ದೆಹಲಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.


ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಮಾತನಾಡಿ ದಾವಣಗೆರೆ ಲಿಂಗೇಶ್ವರ ದೇವಸ್ಥಾನದ ಬಳಿ ಸರ್ವಿಸ್ ರಸ್ತೆ ನಿರ್ಮಾಣ ಮಾಡಲು ಕ್ರಮವಹಿಸಬೇಕಾಗಿದೆ, ದಾವಣಗೆರೆ, ಹುಬ್ಬಳ್ಳಿ ಮತ್ತು ಬೆಳಗಾವಿ ಮಾರ್ಗವಾಗಿ ಬೆಂಗಳೂರು-ಮುಂಬೈ ಸೂಪರ್ ಫಾಸ್ಟ್ ರೈಲು ಸಂಚಾರಕ್ಕೆ ಅನುಮತಿ ನೀಡಬೇಕು, ಈ ಯೋಜನೆಯಿಂದ ಮುಂಬಯಿ ವ್ಯಾಪಾರಿಗಳಿಗೆ ಹೆಚ್ಚು ಅನುಕೂಲಕರವಾಗಲಿದೆ. ಹನುಮನಹಳ್ಳಿಯಲ್ಲಿ ಸುಮಾರು ಒಂದು ವರ್ಷದಿಂದ ಪ್ಲಾಟ್ಫಾರ್ಮ್ ವಿಸ್ತರಣೆಯ ಸಮಸ್ಯೆ ಇದೆ, ತೋಳಹುಣಸೆ ಸರ್ಕಾರಿ ಶಾಲೆಯ ಮಕ್ಕಳ ಓಡಾಟಕ್ಕೆ ಅನುಕೂಲವಾಗುವಂತೆ ಅಂಡರ್ ಪಾಸ್ ಹಾಗೂ ಪ್ಲಾಟ್ಫಾರ್ಮ್ ಲೆವೆಲಿಂಗ್ ಮಾಡಬೇಕಾಗಿದೆ ಎಂದರು.

ದಾವಣಗೆರೆ ಮತ್ತು ಹರಿಹರ ರೈಲ್ವೆ ಪ್ಲಾಟ್ಫಾರ್ಮ್ಗಳಲ್ಲಿ ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು, ಧಾರವಾಡದಿಂದ ಬೆಂಗಳೂರಿಗೆ ಸಂಚರಿಸುವ ವಂದೇ ಭಾರತ್ ರೈಲಿನ ಸಮಯವನ್ನು ಮರುಪರಿಶೀಲಿಸಬೇಕು, ಹರಿಹರ ಭಾಗದ ರೈಲ್ವೆ ಹಳಿಗಳ ಬಳಿ ಅಪಘಾತಗಳು ಹೆಚ್ಚುತ್ತಿದ್ದು, ಅಸುರಕ್ಷಿತ ಸ್ಥಳಗಳಲ್ಲಿ ಫೆನ್ಸಿಂಗ್ ಹಾಕುವ ಮೂಲಕ ಅಪಘಾತಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.


ಶಾಸಕರಾದ ಕೆ.ಎಸ್.ಬಸವಂತಪ್ಪ ಮಾತನಾಡಿ ಆನಗೋಡು ಒಂದು ಪ್ರಮುಖ ಕೇಂದ್ರವಾಗಿದ್ದು, ಇಲ್ಲಿನ ರೈಲ್ವೆ ನಿಲ್ದಾಣವನ್ನು ಅಪ್‌ಗ್ರೇಡ್ ಮಾಡುವ ಅಗತ್ಯವಿದೆ. ಇದು ಜಂಕ್ಷನ್ ಆಗಿ ಬದಲಾದರೆ ಬಳ್ಳಾರಿ, ಹೊಸದುರ್ಗ, ಮಂಡ್ಯ, ಮೈಸೂರು ಮುಂತಾದ ಕಡೆಗಳಿಂದ ಬರುವ ಪ್ರಯಾಣಿಕರಿಗೆ ಹಾಗೂ ಸಂಪರ್ಕ ರಸ್ತೆಗಳಿಗೆ ತುಂಬಾ ಅನುಕೂಲವಾಗುತ್ತದೆ ಎಂದು ರೈಲ್ವೆ ಸಚಿವರಲ್ಲಿ ಮನವಿ ಮಾಡಿದರು.


ಮಾಯಕೊಂಡ ಕ್ಷೇತ್ರವು ಗ್ರಾಮಾಂತರ ಪ್ರದೇಶವಾಗಿದ್ದು, ಅಲ್ಲಿ ರೈಲುಗಳ ನಿಲುಗಡೆ ಕಡಿಮೆ ಇದೆ. ಆದ್ದರಿಂದ ಅಲ್ಲಿ ಇಂಟರ್ ಸಿಟಿ ರೈಲು ಹಾಗೂ ಇತರ ಎರಡು-ಮೂರು ಪ್ರಮುಖ ರೈಲುಗಳ ನಿಲುಗಡೆಗೆ ಅವಕಾಶ ಮಾಡಿಕೊಡಬೇಕು. ಆನಗೋಡು ಭಾಗದಲ್ಲಿ ಅಡಿಕೆ ಮತ್ತು ಮೆಕ್ಕೆಜೋಳ ಬೆಳೆಯುವ ರೈತರು ಹೆಚ್ಚಾಗಿರುವುದರಿಂದ, ಇಲ್ಲಿ ಒಂದು ಗುಡ್ ಶೆಡ್ ನಿರ್ಮಾಣ ಮಾಡಬೇಕು. ಇದು ಪ್ರಸ್ತುತ ಬಾತಿಯಲ್ಲಿ ಇರುವುದರಿಂದ ರೈತರಿಗೆ ಸಾಗಾಣಿಕೆ ವೆಚ್ಚ ಮತ್ತು ದೂರದ ತೊಂದರೆಯಾಗುತ್ತಿದೆ. ಕೇಂದ್ರ ಸರ್ಕಾರವು ರೈಲ್ವೆ ಅಭಿವೃದ್ಧಿಗಾಗಿ ₹52,000 ಕೋಟಿ ಅನುದಾನ ನೀಡಿದ್ದು, ಪ್ರಧಾನಿ ಮೋದಿಯವರಿಗೆ ಧನ್ಯವಾದ ಹೇಳಿದ ಅವರು ಭೂಸ್ವಾಧೀನ ಪ್ರಕ್ರಿಯೆ ಸೇರಿದಂತೆ ರಾಜ್ಯ ಸರ್ಕಾರದಿಂದ ಬೇಕಾದ ಎಲ್ಲಾ ಸಹಕಾರವನ್ನು ನೀಡಲು ಸರ್ಕಾರ ಸದಾ ಸಿದ್ಧವಿದೆ ಎಂದರು.


ಈ ವೇಳೆ ಜಿಲ್ಲಾಧಿಕಾರಿ ಜಿ.ಎಂ.ಗAಗಾಧರಸ್ವಾಮಿ, ಜಿಲ್ಲಾ ರಕ್ಷಣಾಧಿಕಾರಿ ಹೆಚ್.ಟಿ.ಶೇಖರ್, ರೈಲ್ವೆ ಇಲಾಖೆ ಮುಖ್ಯ ಇಂಜಿನಿಯರ್ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

You cannot copy content of this page

Exit mobile version