ಹಾಸನ : ನಗರದಲ್ಲಿ ಶುಕ್ರವಾರ ಪ್ರತ್ಯೇಕ ಪ್ರಕರಣಗಳಲ್ಲಿ ಹೃದಯಾಘಾತದಿಂದ ಇಬ್ಬರು ದುರ್ಮರಣಕ್ಕೀಡಾಗಿದ್ದಾರೆ.
ತೆಲುಗರ ಬೀದಿಯ ಮೆಡಿಕಲ್ ಶಾಪ್ ಮಾಲೀಕ ಸತೀಶ್ (57) ಮತ್ತು ತಾಲ್ಲೂಕಿನ ದುಮಗೆರೆ ಗ್ರಾಮದ ದೇವರಾಜು (43) ಮೃತ ದುರ್ದೈವಿಗಳು.
ತೆಲುಗರ ಬೀದಿಯಲ್ಲಿ ವಾಸವಾಗಿದ್ದ ಸತೀಶ್ಗೆ ದಿಢೀರ್ ಎದೆನೋವು ಕಾಣಿಸಿಕೊಂಡಿದ್ದು, ಮನೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ಮತ್ತೊಂದು ಘಟನೆಯಲ್ಲಿ, ರಾಜಘಟ್ಟ ಬಳಿ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದ ದೇವರಾಜು, ಹೃದಯಾಘಾತದಿಂದ ಕಾರಿನಲ್ಲಿಯೇ ಸಾವನ್ನಪ್ಪಿದ್ದಾರೆ. ಕಾರು ದೀರ್ಘಕಾಲ ನಿಂತಿರುವುದನ್ನು ಗಮನಿಸಿದ ಸ್ಥಳೀಯರು ಪರಿಶೀಲಿಸಿದಾಗ ದೇವರಾಜು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಹಾಸನ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವಿನ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ. ಗುರುವಾರ ಕೂಡ ಇಬ್ಬರು ಮೃತರಾಗಿದ್ದನ್ನು ಸ್ಮರಿಸಬಹುದು.