ಹಾಸನ: ಡಾ. ಬಾಬು ಜಗಜೀವನ್ ರಾಮ್ ಅವರಿಗೆ ಅವಮಾನ, ಪೂಜ್ಯ ಶ್ರೀ ಬಸವ ಹರಳಯ್ಯ ಸ್ವಾಮೀಜಿ ಮೇಲಿನ ಹಲ್ಲೆ ಹಾಗೂ ದಲಿತರ ಮೇಲಿನ ದೌರ್ಜನ್ಯಗಳನ್ನು ಖಂಡಿಸಿ ಆಗಸ್ಟ್ 14 ಮತ್ತು 15ರಂದು ಹಾಸನದಲ್ಲಿ ಬೃಹತ್ ಆಕ್ರೋಶ ಪ್ರತಿಭಟನಾ ಮೆರವಣಿಗೆ, ಅಹೋರಾತ್ರಿ ಧರಣಿ ಹಾಗೂ ಜಿಲ್ಲಾಡಳಿತ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾದಿಗ ದಂಡೋರ (ಎಂ.ಆರ್.ಹೆಚ್.ಎಸ್), ಕರ್ನಾಟಕ ಮಾದಿಗ ಮಹಾಸಭಾ ಹಾಗೂ ಸ್ವಾಭಿಮಾನಿ ದಲಿತ ಮತ್ತು ಜನಪರ ಸಂಘಟನೆಗಳ ಒಕ್ಕೂಟ ತಿಳಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಗಳ ಮುಖಂಡರು, ಆಗಸ್ಟ್ 14ರಂದು ಬೆಳಗ್ಗೆ 11ರಿಂದ ಆಗಸ್ಟ್ 15ರ ಸಂಜೆ 5ರವರೆಗೆ ಪ್ರತಿಭಟನೆ ನಡೆಯಲಿದೆ. ಹೇಮಾವತಿ ಪ್ರತಿಮೆ ಮುಂಭಾಗದಿಂದ ಮೆರವಣಿಗೆ ಆರಂಭವಾಗಿ ಅಂಬೇಡ್ಕರ್ ಭವನದವರೆಗೆ ಸಾಗಲಿದೆ. ಬಳಿಕ ಎಸ್ಪಿ ಕಚೇರಿ ಎದುರು ಧರಣಿ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಭೆ ನಡೆಸಲಾಗುವುದು ಎಂದು ಹೇಳಿದರು.
ಡಾ. ಬಾಬು ಜಗಜೀವನ್ ರಾಮ್ ಅವರ 40ನೇ ವರ್ಷದ ಪುಣ್ಯಸ್ಮರಣೆ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರಿಗೆ ಅಪಚಾರವಾಗಿದೆ ಎಂದು ಆರೋಪಿಸಿದ ಮುಖಂಡರು, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಪೂರ್ವಭಾವಿ ಸಭೆ ನಡೆಸದೆ ಹಾಗೂ ದಲಿತ ಮುಖಂಡರಿಗೆ ಆಹ್ವಾನ ನೀಡದೆ ಕಾರ್ಯಕ್ರಮ ನಡೆಸಿದ್ದಾರೆ. ಕರ್ತವ್ಯಲೋಪ ಎಸಗಿರುವ ಅಧಿಕಾರಿಯನ್ನು ಅಮಾನತುಗೊಳಿಸಿ ಇಲಾಖಾ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
