Home ದೆಹಲಿ ದೆಹಲಿ ಗಲಭೆ ಪ್ರಕರಣ: ಜಾಮೀನು ನಿರಾಕರಣೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಉಮರ್ ಖಾಲಿದ್

ದೆಹಲಿ ಗಲಭೆ ಪ್ರಕರಣ: ಜಾಮೀನು ನಿರಾಕರಣೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಉಮರ್ ಖಾಲಿದ್

0

ದೆಹಲಿ: 2020ರ ದೆಹಲಿ ಗಲಭೆಯ ಸಂಚಿನ ಪ್ರಕರಣದಲ್ಲಿ ತಮಗೆ ಜಾಮೀನು ನಿರಾಕರಿಸಿದ್ದ ಸುಪ್ರೀಂ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಜೆಎನ್‌ಯೂ ಮಾಜಿ ವಿದ್ಯಾರ್ಥಿ ಮತ್ತು ಹೋರಾಟಗಾರ ಉಮರ್ ಖಾಲಿದ್ ಪುನರ್ಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ. ಗಲಭೆಗೆ ಸಂಬಂಧಿಸಿದ ಆರೋಪಗಳನ್ನು ನಂಬಲು ಸಮಂಜಸವಾದ ಆಧಾರಗಳಿವೆ ಎಂದು ಈ ಹಿಂದೆ ನ್ಯಾಯಾಲಯವು ಅಭಿಪ್ರಾಯಪಟ್ಟಿತ್ತು. ಈ ತೀರ್ಪಿನಲ್ಲಿನ ಅಂಶಗಳನ್ನು ಮರುಪರಿಶೀಲಿಸುವಂತೆ ಕೋರಿ ಖಾಲಿದ್ ಈಗ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಖಾಲಿದ್ ಪರವಾಗಿ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಅವರು ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್.ವಿ. ಅಂಜಾರಿಯಾ ಅವರ ಪೀಠದ ಮುಂದೆ ವಾದ ಮಂಡಿಸಿದರು. ಸಾಮಾನ್ಯವಾಗಿ ಪುನರ್ಪರಿಶೀಲನಾ ಅರ್ಜಿಗಳನ್ನು ನ್ಯಾಯಮೂರ್ತಿಗಳ ಚೇಂಬರ್‌ನಲ್ಲಿ ವಿಚಾರಣೆ ನಡೆಸಲಾಗುತ್ತದೆ. ಆದರೆ, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಈ ಅರ್ಜಿಯನ್ನು ಮುಕ್ತ ನ್ಯಾಯಾಲಯದಲ್ಲಿ ಸಾರ್ವಜನಿಕ ವಿಚಾರಣೆಗೆ ಒಳಪಡಿಸಬೇಕು ಎಂದು ಸಿಬಲ್ ಮನವಿ ಮಾಡಿದ್ದಾರೆ. ಏಪ್ರಿಲ್ 16 ರಂದು ಚೇಂಬರ್ ವಿಚಾರಣೆ ನಿಗದಿಯಾಗಿದ್ದು, ಈ ವೇಳೆ ಮುಕ್ತ ವಿಚಾರಣೆಯ ಬಗ್ಗೆಯೂ ಪೀಠವು ನಿರ್ಧರಿಸುವ ಸಾಧ್ಯತೆಯಿದೆ.

ಕಳೆದ ಜನವರಿ 5 ರಂದು ಸುಪ್ರೀಂ ಕೋರ್ಟ್ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಇತರ ಆರೋಪಿಗಳಿಗಿಂತ ಇವರಿಬ್ಬರ ಪಾತ್ರವು ಭಿನ್ನವಾಗಿದೆ ಮತ್ತು ಗಂಭೀರವಾಗಿದೆ ಎಂದು ನ್ಯಾಯಾಲಯ ಹೇಳಿತ್ತು. ಇದೇ ವೇಳೆ ಪ್ರಕರಣದ ಇತರ ಐವರು ಸಹ-ಆರೋಪಿಗಳಿಗೆ ನ್ಯಾಯಾಲಯವು ರಿಲೀಫ್ ನೀಡಿತ್ತು. 2020ರ ಫೆಬ್ರವರಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (CAA) ವಿರೋಧಿ ಪ್ರತಿಭಟನೆ ವೇಳೆ ಸಂಭವಿಸಿದ ಹಿಂಸಾಚಾರದಲ್ಲಿ 53 ಮಂದಿ ಸಾವನ್ನಪ್ಪಿದ್ದರು. ಈ ಘಟನೆಯ ಹಿಂದೆ ದೊಡ್ಡ ಮಟ್ಟದ ಪಿತೂರಿ ನಡೆದಿದೆ ಎಂದು ದೆಹಲಿ ಪೊಲೀಸರು ಆರೋಪಿಸಿದ್ದಾರೆ.


You cannot copy content of this page

Exit mobile version