ಟೋಬಿ ಕೇವಲ ಟೋಬಿಯ ಕತೆಯಂತೆ ಮಾತ್ರ ಕಾಣದೆ ಇಡೀ ಭಾರತದ ತಳ ಸಮುದಾಯದ ಬದುಕು ಎದುರಿಸುತ್ತಿರುವ ಕ್ರೌರ್ಯದ ಸಾಮಾಜಿಕ ಸಂಕಥನದ ಕತೆಯಂತೆ ಕಾಣುತ್ತದೆ. ಕಣ್ಣಿಗೆ ರಾಚುವ ರಕ್ತದ ಕಲೆಗಳು ಮಾಸಬಹುದು. ಆದರೆ ಹೃದಯಕ್ಕೆ ಚುಚ್ಚುವ, ಬದುಕನ್ನೆ ಘಾಸಿಗೊಳಿಸುವ ಕ್ರೌರ್ಯದ ಗುರುತು ಎಂದೂ ಅಳಿಸಲಾಗದು. ಟೋಬಿ ಇದನ್ನೆ ಪ್ರಧಾನವಾಗಿ ಧ್ವನಿಸಬೇಕಿತ್ತು – ಎಂ.ರಾಘವೇಂದ್ರ, ಸಾಗರ
ರಾಜ್ ಬಿ.ಶೆಟ್ಟಿ ಅಭಿನಯದ ‘ಟೋಬಿ’ ಸಿನೆಮಾದ ಬಗ್ಗೆ ಹಲವು ಆಯಾಮಗಳಲ್ಲಿ ಚರ್ಚೆ ಸಾಗಿದೆ. ಸಿನೆಮಾದಲ್ಲಿ ಝಳಪಿಸುವ ಕತ್ತಿ, ಚಿಮ್ಮುವ ರಕ್ತ ಹೊಮ್ಮಿಸುವ ಕ್ರೌರ್ಯದ ಸುತ್ತಲೆ ಚರ್ಚೆ ನಡೆದಿದೆ. ಆದರೆ ಸಿನೆಮಾದಿಂದ ಹೊರಬಂದ ನಂತರ ಕಣ್ಣಿಗೆ ಕಾಣುವ ಕ್ರೌರ್ಯಕ್ಕಿಂತ ಹೆಚ್ಚು ಕಾಡುವುದು ಕಣ್ಣಿಗೆ ಕಾಣದ ಕ್ರೌರ್ಯವೆ ಆಗಿದೆ.
ಆತ ಒಂದು ರಿಮ್ಯಾಂಡ್ ಹೋಂನಿಂದ ಮತ್ತೊಂದು ಹೋಂಗೆ, ಕೊನೆಗೆ ಪೊಲೀಸ್ ಠಾಣೆಯ ಮೆಟ್ಟಿಲು ನೋಡಿದ ವಿಕ್ಷಿಪ್ತ ಮನಸ್ಥಿತಿಯ ಬಾಲಕ. ಕೊನೆಗೂ ಆತನನ್ನು ಅಪ್ಪಿಕೊಂಡು ‘ಟೋಬಿ’ ಎಂಬ ಹೆಸರಿಡುವ ಮೂಲಕ ಬಾಲಕನಿಗೊಂದು ಅಸ್ಮಿತೆ ಕೊಟ್ಟಿದ್ದು ಕ್ರಿಶ್ಚಿಯನ್ ಪಾದ್ರಿ. ಈ ಕೆಲಸಕ್ಕೆ ಪಾದ್ರಿಯೆ ಬೇಕಾಯಿತು ಎನ್ನುವುದರ ಹಿಂದೆ ಇಲ್ಲಿನ ಜಾತಿ ವ್ಯವಸ್ಥೆಯ ವಾಸ್ತವದ ಕ್ರೌರ್ಯವಿದೆ.
ನಡುರಾತ್ರಿಯಲ್ಲಿ ಊರ ಹೊರಗಿನ ಪೊದೆಯಲ್ಲಿ ಕಂಡ ರೋಧಿಸುವ ಶಿಶುವನ್ನು ಸೋಕಾಲ್ಡ್ ಸುಶಿಕ್ಷಿತರು, ಸುರಕ್ಷಿತ ವಲಯದಲ್ಲಿರುವವರು ರಕ್ಷಿಸಲು ಹಿಂಜರಿಕೆ ತೋರುವಲ್ಲೂ ಸಮಾಜದಲ್ಲಿ ಅಂತರ್ಗತವಾಗಿರುವ ಸಂವೇದನಾರಾಹಿತ್ಯದ ಕಡು ವಾಸ್ತವದ ಕ್ರೌರ್ಯವಿದೆ.
ಈ ಶಿಶುವನ್ನು ಟೋಬಿ ಸ್ವೀಕರಿಸಿ ಪೊರೆಯಲು ಮುಂದಾದಾಗ ಹಸುಳೆಗೆ ‘ಜೆನ್ನಿ’ ಎಂದು ನಾಮಕರಣ ಮಾಡಲು ಮತ್ತೆ ಪಾದ್ರಿಯೆ ಬರಬೇಕಾದದ್ದು ಕೂಡ ವ್ಯವಸ್ಥೆಯ ಕ್ರೌರ್ಯದ ಸಂಕೇತವಾಗಿಯೆ ಕಾಣುತ್ತದೆ.

ಬಾಲಕಿ ಜೆನ್ನಿ, ಸಾವಿತ್ರಿ ಮತ್ತು ಟೋಬಿ ನಡುವೆ ನಡೆಯುವ ಮಾತುಕತೆಯಲ್ಲಿ ‘ನೀನು ಏನು ಬೇಕಾದರೂ ಮಾರಿಕೋ’ ಎಂಬ ಜೆನ್ನಿಯ ಮಾತಿನ ಹಿಂದೆ ಆಕೆಯ ಮುಗ್ಧತೆಯ ಜೊತೆಗೆ ಒಂದು ವರ್ಗದ ಹೆಣ್ಣಿನ ಕುರಿತಾದ ತಿರಸ್ಕಾರ ನೋಟದ ಕ್ರೌರ್ಯವೂ ಇದೆ. ಅದು ತಣ್ಣಗೆ ಹರಿಯುವ ಆದರೆ ಹರಿತವಾದ ಕ್ರೌರ್ಯ.
ಖಳನಾಯಕ ಆನಂದಣ್ಣ ಟೋಬಿಯನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡರೂ ಅದರ ಅರಿವೇ ಇಲ್ಲದೆ ಟೋಬಿ ‘ಮತ್ತೊಬ್ಬರ’ ಆಯುಧವಾಗುವಲ್ಲಿ, ಶಿಕ್ಷಕನಿಂದ ಉಂಟಾದ ಲೈಂಗಿಕ ಕಿರುಕುಳ ತಾಳಲಾರದೆ ಶಾಲೆಯನ್ನೆ ಬಿಟ್ಟ ಜೆನ್ನಿಯ ಅಸಹಾಯಕತೆಯ ಹಿಂದೆ ಕೂಡ ನಮ್ಮ ಸಾಮಾಜಿಕ ವ್ಯವಸ್ಥೆ ಸಾಗಿಬಂದ ಹಾದಿಯ ಕ್ರೌರ್ಯವಿದೆ.
ಆನಂದ ತನ್ನ ಎದುರು ಕುರ್ಚಿಯಲ್ಲಿ ಕುಳಿತುಕೊಳ್ಳಲು ಟೋಬಿಗೆ ಅವಕಾಶವನ್ನೇನೊ ನೀಡುತ್ತಾನೆ. ( ಈ ದೃಶ್ಯ ಬಂದಾಗ ತಮಿಳಿನ ‘ಮಾಮಣ್ಣನ್’ ಸಿನೆಮಾದ ದೃಶ್ಯ ನೆನಪಿಗೆ ಬರುತ್ತದೆ) ಆದರೆ ಚಹಾ ನೀಡಿದಾಗ ಟ್ರೇನಲ್ಲಿ ಒಂದು ಕಪ್ ಸಾಸರ್ ನ ಜೊತೆ ಗಾಜಿನ ಲೋಟ, ಮತ್ತೊಂದು ಚಿಕ್ಕ ಗಾತ್ರದ ಸ್ಟೀಲ್ ಲೋಟ. ಟೋಬಿ ತನಗರಿವಿಲ್ಲದಂತೆ ಕಪ್, ಸಾಸರ್ ನಲ್ಲಿದ್ದ ಟೀ ಹೀರಿದಾಗ ಖಳನಾಯಕನ ಮುಖ ಕಪ್ಪಿಡುತ್ತದೆ. ಇಲ್ಲಿರುವುದು ಕೂಡ ಜಾತಿ ಅಸಮಾನತೆಯ ತಣ್ಣನೆಯ ಕ್ರೌರ್ಯ.
ಜೆನ್ನಿಯ ಬಸಿರಿನ ಹಿಂದಿನ ವೃತ್ತಾಂತದಲ್ಲಿ ಊಳಿಗಮಾನ್ಯ ವ್ಯವಸ್ಥೆಯ ಕ್ರೌರ್ಯ ರಾಚುತ್ತದೆ. ತಮ್ಮ ಅಧೀನದಲ್ಲಿ ಕೆಲಸ ಮಾಡುವ ಆಳು ಮಕ್ಕಳಲ್ಲದೆ ಅವರ ಹೆಂಡತಿ ಮಕ್ಕಳು ಕೂಡ ತಮ್ಮ ದಾಸಿಗಳು ಎಂಬ ಪಾಳೆಗಾರಿಕೆಯ ಕ್ರೌರ್ಯ ಜೆನ್ನಿಯ ದಾರುಣ ಅಂತ್ಯಕ್ಕೆ ಕಾರಣವಾಗುತ್ತದೆ.
ಜೆನ್ನಿಯ ಮಣ್ಣಿನ ಕುಡಿಕೆಯಲ್ಲಿನ ಉಳಿತಾಯದ ನಾಣ್ಯ ಅವಳ ಮೇಲೆ ನಡೆಯುವ ದೌರ್ಜನ್ಯದ ಲೆಕ್ಕಕ್ಕೆ ಸಾಕ್ಷಿಯಾಗುವ ಪ್ರತಿಮೆಯ ಹಿಂದೆ ಇರುವುದು ಕೂಡ ತಣ್ಣನೆಯ ಕ್ರೌರ್ಯವೆ.
ಆದರೆ ಕೇವಲ ಕಣ್ಣಿಗೆ ಕಾಣುವ ಕ್ರೌರ್ಯದ ಹೊರತಾಗಿ ನಮ್ಮ ಸಾಮಾಜಿಕ ವ್ಯವಸ್ಥೆಯೊಳಗೆ ಅಂತರ್ಗತವಾಗಿರುವ ಕ್ರೌರ್ಯದ ಕಥನ ಕನ್ನಡ ಸಿನೆಮಾಗಳ ಕತೆಯ ಕೇಂದ್ರವಾಗುವುದಿಲ್ಲ. ತಮಿಳು ಮತ್ತು ಮಲಯಾಳಂನವರಿಗೆ ಮಾತ್ರ ಈ ಜಾನರ್ ಸಾಧ್ಯವಾಗಿದೆ.
ಟೋಬಿ ತನ್ನ ಮಗಳ ಶವವಿರುವ ಗೋಣಿಚೀಲವನ್ನು ನದಿಯ ತಟದ ಮೇಲಿನ ಕಸದ ರಾಶಿಯಲ್ಲಿ ಹುಡುಕುತ್ತಿರುವ ವೇಳೆಯಲ್ಲೆ ನದಿಯ ಮತ್ತೊಂದು ದಡದಲ್ಲಿ ಊರಿನ ಜಾತ್ರೆಯ ಸಿಡಿಮದ್ದುಗಳು ಸಿಡಿದು ಆಗಸದಲ್ಲಿ ಚಿತ್ತಾರ ಮೂಡಿಸಿ ಟೋಬಿಯನ್ನು ಅಣಕಿಸುತ್ತದೆ.
(ಸಿನೆಮಾದ ಮೂಲ ಕತೆಗಾರ ಟಿ.ಕೆ.ದಯಾನಂದರ ದರ್ಶನವಾಗುವುದು ಇಂತಹ ದೃಶ್ಯದಲ್ಲೆ) ಒಟ್ಟಾರೆಯಾಗಿ ಟೋಬಿ ಕೇವಲ ಟೋಬಿಯ ಕತೆಯಂತೆ ಮಾತ್ರ ಕಾಣದೆ ಇಡೀ ಭಾರತದ ತಳ ಸಮುದಾಯದ ಬದುಕು ಎದುರಿಸುತ್ತಿರುವ ಕ್ರೌರ್ಯದ ಸಾಮಾಜಿಕ ಸಂಕಥನದ ಕತೆಯಂತೆ ಕಾಣುತ್ತದೆ. ವ್ಯತ್ಯಾಸವೆಂದರೆ ಸಿನೆಮಾದ ಅಂತ್ಯದಂತೆ ನಮ್ಮ ನೆಲದ ಸಾಮಾಜಿಕ ಸಂಕಥನದ ಹೆಣಿಗೆ ಇಲ್ಲ. ತೀರಾ ಅಸಹಜವಾದ ಅಂತ್ಯದೊಂದಿಗೆ ಗಾಢವಾಗಿ ಪರಿಣಾಮ ಬೀರಬಹುದಾದ ವಸ್ತುವೊಂದು ತೆಳುವಾಗಿ ಕೊನೆಗೆ ದುರ್ಬಲಗೊಳ್ಳುತ್ತದೆ.
ಕಣ್ಣಿಗೆ ರಾಚುವ ರಕ್ತದ ಕಲೆಗಳು ಮಾಸಬಹುದು. ಆದರೆ ಹೃದಯಕ್ಕೆ ಚುಚ್ಚುವ, ಬದುಕನ್ನೆ ಘಾಸಿಗೊಳಿಸುವ ಕ್ರೌರ್ಯದ ಗುರುತು ಎಂದೂ ಅಳಿಸಲಾಗದು. ಟೋಬಿ ಇದನ್ನೆ ಪ್ರಧಾನವಾಗಿ ಧ್ವನಿಸಬೇಕಿತ್ತು.
ಎಂ.ರಾಘವೇಂದ್ರ, ಸಾಗರ
ಪತ್ರಕರ್ತರು
ಇದನ್ನೂ ಓದಿ– ಕ್ಷೇತ್ರಪತಿ | ಹೊಡಿರಿ ಪೊಟ್ಯಾಶ್, ಜೀವನ ಮಾಡ್ಕೋರಿ ಮಟಾಷ್