ರೈತರ ಪರವಾದ ʼಕ್ಷೇತ್ರಪತಿʼ ಸಿನೆಮಾ ಬಿಡುಗಡೆಯಾಗಿದೆ. ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿ ರೆಡಿಯಾದ ಈ ಚಿತ್ರದಲ್ಲಿ ರೈತರ ಬದುಕು ಬವಣೆಯ ಸೂಕ್ಷ್ಮ ವಿಚಾರಗಳನ್ನು ನಿರ್ದೇಶಕ ಶ್ರೀಕಾಂತ್ ಕಟಗಿ ಅಚ್ಚುಕಟ್ಟಾಗಿ ಸೆರೆಹಿಡಿದಿದ್ದಾರೆ – ನಾಗಾರ್ಜುನ್ ಎಂ.ವಿ , ಯುವ ಪತ್ರಕರ್ತ
ಕೆಲವೊಂದು ಬಾರಿ ಸಿನಿಮಾದಲ್ಲಿ ಹೀರೋ ಹೇಳೋ ಡೈಲಾಗ್, ನಮ್ಮ ಜೀವನಕ್ಕ ಹತ್ರ ಅನಿಸ್ತಾವಾ. ಅದರಲ್ಲಿ ಈ ಸಿನಿಮಾದ ಕೆಲವು ಡೈಲಾಗ್ ಕೂಡ. ನಮ್ಗ-ನಿಮ್ಗ ಗೊತ್ತರುವಂಗ, ರೈತರನ್ನ ನಮ್ಮ ದೇಶದ ಬೆನ್ನೆಲುಬು, ಜಟರ, ಕಳ್ಳು, ಕಿಡ್ನಿ, ಹಿಂಗ ಹಾಳು ಮೂಳು ಹೇಳಿ, ಅವನ್ನ ಮಾತಿನಿಂದ ಉಬ್ಬಿಸಿ ಮೇಲಿಟ್ಟೀವಿ ಅಂತ ಸಿನಿಮಾ ನಾಯಕ ಹೇಳಿದಾಗ, ಖರೆನೇ ಅನಿಸ್ತು. ನಮ್ಮ ದೇಶದ ಬೆನ್ನೆಲುಬು ಅಂದ್ರ ಯಾರು ಅಂತ ಕೇಳೋ ಪ್ರಶ್ನೆಗೆ ಉತ್ತರ ಕೊಡಾಕ ಮಾತ್ರ ರೈತನಿಗೆ ಈ ಬಿರುದು ಕೊಟ್ಟೀವಿ, ಅನಿಸ್ತದ ನಮ್ಗ.
ಆದ್ರೆ ವೋಟ್ ಬ್ಯಾಂಕಿಂಗ್ ಗೋಸ್ಕರ, ಈ ಸರಕಾರದವರು ಹೇಳೋ ಸಾಲ ಮನ್ನಾ, ತಮ್ಮ ಸರ್ಕಾರ ಆಡಳಿತದಾಗ ಇದ್ದಾಗ ರೈತರಿಗೆ ಏನ್ ಮಾಡೀವಿ, ಅವಾಗ ಎಷ್ಟು ರೈತರು ಸತ್ತರು ಅಂತ ಪರಿಜ್ಞಾನ ಇಲ್ದಾ, ಆಡಳಿತ ಪಕ್ಷದವರು ಈ ಕೂಡಲೇ ರಾಜೀನಾಮೆ ನೀಡಬೇಕು ಎನ್ನುವ ವಿರೋಧ ಪಕ್ಷದವರು. ಅದೇ ರೈತರು ಮೈತುಂಬಾ ಸಾಲ ಮಾಡಿಕೊಂಡು ನೇಣು ಹಾಕಿಕೊಂಡಾಗ, ಎರಡು ಪಕ್ಷಗಳ ಗುಲಾಮರಾಗಿರುವ ಹಾಗೂ ‘ಟಿಆರ್ಪಿ’ಗೋಸ್ಕರ ಟಿವಿ ಮುಂದೆ ಬಾಯಿ ಬಡ್ಕೊಳ್ಳೋ ವ್ಯಾಪಾರಿ ಮಾಧ್ಯಮಗಳು. ಇವರ ನಡುವೆ, ಫಸಲು ಬಂದಾಗ ಎಪಿಎಂಸಿಯಲ್ಲಿ ನಡಿಯೋ ದಲ್ಲಾಳಿಗಳ ಕಾಟ. ಈಎಲ್ಲಾರ ಸೂಕ್ಷ್ಮತೆಗಳನ್ನ ತಿಳ್ಕೊಂಡು ಅದನ್ನ ಬಂಡವಾಳವಾಗಿ ಮಾಡಿಕೊಂಡು, ತಮ್ಮ ಲಾಭಕ್ಕೋಸ್ಕರ, ತಮ್ಮ ಕಂಪನಿಗಳಲ್ಲಿ ತಯಾರಿಸಿದ ಔಷಧಿ, ಬೀಜ, ಗೊಬ್ಬರ ತಗೊಳ್ಳಿ ಅಂತ ಸಬ್ಸಿಡಿ ಬಿಟ್ಟು, ರೈತರ ಭೂಮಿ ಫಲವತ್ತತೆ ನಾಶ ಮಾಡೋದು ಅಲ್ದೆ, ರೈತರ ಜೀವನ ಹಾಳು ಮಾಡೋಕೆ ಹೊರಟಿರೋ ಈ ಬಂಡವಾಳಶಾಹಿಗಳು, ಮತ್ತು ರೈತರ ಸಾವಿಗೆ ಕಾರಣವಾಗಿರೋ ನಾವು- ನೀವುಗಳ ನಡುವೆ, ರೈತ ಹೇಗೆಲ್ಲಾ ದಾರಿ ತಪ್ಪಿದ, ಅವರ ಸಾವಿಗೆ ಕಾರಣವಾದರು ಏನು, ಅದಕ್ಕೆ ರೈತರು ಮುಂದೇನು ಮಾಡಬೇಕು ಅಂತ ತೋರಿಸಿರೋ ಸಿನಿಮಾ, ಕ್ಷೇತ್ರಪತಿ.
ಪ್ರಮುಖವಾಗಿ ಈ ಸಿನಿಮಾದಲ್ಲಿ ಹೇಳೋಕೆ ಹೋಗ್ತಾ ಇರೋ ವಿಷ್ಯಾ ತುಂಬಾ ಇಂಪಾರ್ಟೆಂಟ್ ಐತಿ. ರೈತ ಸತ್ತಾಗ, ಈ ಸರಕಾರದವ್ರು ಮಾಡೋಕೆ ಹೊರಟಿರೋದು ಅವರಿಗೆ ಕೊಡೋ 2 ಲಕ್ಷದ ಪರಿಹಾರ ಮಾತ್ರ. ಆದ್ರ ರೈತರಿಗೆ ನಿಜವಾಗಿ ಸಿಗಬೇಕಿರೋದು ಸರ್ಕಾರದಿಂದ ಬರೋ ಪರಿಹಾರ ಅಲ್ಲಾ, ನಿಜವಾದ ಬೆಂಬಲ ಬೆಲೆ. ಇದೆ ಕಾನ್ಸೆಪ್ಟ್ ಇಟ್ಕೊಂಡು ಈ ಸಿನಿಮಾದ ನಿರ್ದೇಶಕರಾಗಿರುವ ಶ್ರೀಕಾಂತ್ ಕಟಗಿ, ಸಿನಿಮಾ ಮೂಲಕ ಈ ನಾಡಿಗೆ ಒಂದೊಳ್ಳೆ ಸಂದೇಶ ಕೊಟ್ಟಾರ.
ನಾವೆಲ್ಲಾ ಸಣ್ಣೋರಿದ್ದಾಗ, ಅಣ್ಣವ್ರ ಸಿನಿಮಾ, ‘ಬಂಗಾರದ ಮನುಷ್ಯ’ ನೋಡೀವಿ. ಅದೇ ರೀತಿ ಶಿವಣ್ಣ ಮಾಡಿರೋ ‘ಬಂಗಾರ ಸನ್ ಆಫ್ ಬಂಗಾರ’ ಸಿನಿಮಾ ನೋಡೀವಿ. ಅಷ್ಟೇ ಅಲ್ಲಾ, ಬೇರೆ- ಬೇರೆ ಭಾಷೆಗಳಲ್ಲಿ ರೈತರ ಬಗ್ಗೆ ಬರೋ ಸಿನಿಮಾಗಳನ್ನ ನೋಡೇ ಇರ್ತೀವಿ. ಈ ಎಲ್ಲಾ ಸಿನಿಮಾಗಳಲ್ಲಿ ಹೀರೋ ಆದೋರು ಬೇರೆ ದೇಶದಲ್ಲಿ ಯಾವ್ದೋ ದೊಡ್ಡ ಕಂಪನಿಗಳಲ್ಲಿ ಒಬ್ಬ ದೊಡ್ಡ ಬ್ಯುಸಿನೆಸ್ ಮ್ಯಾನ್ ಆಗಿರ್ತಾನ. ಅವ್ರಿಗೆ ಒಂದಿನ ಕುಟುಂಬದ ಹಿನ್ನಲೆ ,ತನ್ನ ಮನೆ , ತನ್ನ ದೇಶ, ಅಲ್ಲಿರೋ ಜನ ನೆನಪಾಗಿ ಅಲ್ಲಿಂದ ಬಂದು ತನ್ನ ಊರಾಗ ರೈತರಿಗೆ ಏನೆಲ್ಲಾ ಸಮಸ್ಯೆ ನಡಿತಾ ಐತಿ ಅಂತ ಗೊತ್ತಾಗಿ ಅವರು ರೈತರಾಗಿ ಆ ಸಮಸ್ಯೆಗೆ ಪರಿಹಾರ ಕಂಡು ಹಿಡಿತಾರಾ. ಈ ರೀತಿನಾ ಸಿನಿಮಾ ನೋಡಿವಿ, ನಾವೆಲ್ಲ. ಈ ಸಿನಿಮಾದಲ್ಲಿ ಕೂಡ ಹೀರೋನಾ ಯಾವ್ದೋ ದೇಶದಲ್ಲಿ ಇರೋ ಹಾಗೆ ತೋರಿಸಿದ ಕೂಡಲೇ, ಥೋ ಹೋಗಪ್ಪಾ, ಇಲ್ಲಿರೋ ಸಮಸ್ಯೆ ಹೇಳೋಕಾ, ಬ್ಯಾರೆ ದೇಶದಲ್ಲಿ ಕೆಲಸ ಮಾಡೋನಾ ಆಗಬೇಕಾ, ಇಲ್ಲಿರೋ, ಈ ನಾಡಿನ ರೈತರ ನಡುವೆ, ದಿನಾ ಕಳೆಯೋರು ಆಗಬಾರ್ದಾ ಅಂದುಕೊಳ್ತೀವಿ. ಆದ್ರಾ ಕೆಲವೇ ಸೆಕೆಂಡುಗುಳಾಗ, ನಮ್ಮ ಆ ಕಲ್ಪನೆನಾ ಹೊಡೆದು ಹಾಕುತ್ತಾ ಈ ಸಿನಿಮಾ.

ಇದೊಂದೆ ಅಲ್ಲಾ. ರೈತರಿಗೆ ಯಾರ್ ಕೊಡಬೇಕು ಹೆಣ್ಣು? ಅಂಗೆ ನೀ ರೈತ ಅದಿ, ನಿನ್ ಯಾಕ್ ಲಗ್ನಾ ಆಗಬೇಕು? ಗೌರ್ಮೆಂಟ್ ಕೆಲಸ ಇರೋ, ಯಾರನ್ನಾದರೂ ಲಗ್ನಾ ಆಗ್ತಿನಿ ಅನ್ನೋ ವಿಷ್ಯದಿಂದ ಹಿಡ್ದು, ರೈತನ ಸೂಕ್ಷ್ಮ ಸಮಸ್ಯೆಗಳನ್ನು ತೋರಿಸಿದಾರ ಪರದಿ ಮ್ಯಾಗ. ಸಿನಿಮಾದಾಗ ಬರೋ ದೃಶ್ಯಗಳು ನೋಡ್ತಾ ಇದ್ದಾಗ, ಆತ್ಮ ಹತ್ಯೆ ಮಾಡಿಕೊಂಡಿರೋ ರೈತರ ಅಂಕಿ-ಸಂಕಿಗಳು, ಸುದ್ದಿಗಳು ರಪ್ ಅಂತ ಬಂದು ಹೋಗ್ತಾವಾ. ರೈತರು ತಾವು ಬೆಳೆದ ಬೆಳೆಗೆ ರೇಟ್ ಸಿಗ್ದೆ ಹೋದಾಗ, ರೋಡ್ ಅಲ್ಲಿ ಸುರಿದು ಹೋಗಿರೋ ಎಷ್ಟೋ ಉದಾಹರಣೆಗಳು ಕೂಡಾ ನಮಗೆ ನೆನಪಾಗ್ತಾವಾ.
ಮಾಲ್ಗಳಲ್ಲಿ, ದೊಡ್ಡ ದೊಡ್ಡ ಹೋಟೆಲ್ ಗಳಲ್ಲಿ, ಮಾರ್ಕೆಟ್ಗಳಲ್ಲಿ, ಏನಾದರೂ ಖರೀದಿ ಮಾಡೋ ನಾವುಗಳು ಅಲ್ಲಿ ಹಾಳಿ ಮೇಲೆ ಎಷ್ಟು ಬರೆದಿರುತ್ತೋ ಅಷ್ಟನ್ನು, ಒಂದು ಮಾತು ಹೇಳ್ದೆ, ಕೇಳ್ದೆ, ಜೋಬಲ್ಲಿರೋ ರೊಕ್ಕಾನಾ ಕೊಟ್ಟು ಬರ್ತೀವಿ. ಆದ್ರೆ ರೈತರು ಅಷ್ಟು ಕಷ್ಟ ಪಟ್ಟು ಬೆಳೆದ ಬೆಳೆನಾ ಮಾರ್ಕೆಟ್ಗಳಲ್ಲಿ, ಸಂತೆಗಳಲ್ಲಿ ಮಾರುವಾಗ ರೈತರ ಹತ್ರ, ಚೌಕಾಸಿ ಮಾಡಿ- ಮಾಡಿ ತರ್ತೀವಿ. ಇದರಿಂದ ರೈತರಿಗೆ ಆಗೋ ನಷ್ಟನಾ ಯಾರೂ ನೋಡಲ್ಲಾ ಅನ್ನೊದ್ನಾ ತೋರಿಸಿದೆ ಸಿನಿಮಾ.
ನಾವು ದಿನ- ಬೆಳಗ್ಗೆ ಉಡುವ ಬಟ್ಟೆಗಳ ಬೆಲೆನ ನಿರ್ಧಾರ ಮಾಡೋರು ಅವನ್ನ ತಯಾರಿಸೋ ಬ್ರಾಂಡೆಡ್ ಕಂಪನಿಗಳು, ಅದರ ಮಾಲೀಕರು. ಆದ್ರಾ ರೈತ ಬೆಳೆದ ಬೆಳೆಯ ಬೆಲೆನಾ, ಆತನ್ನ ಬಿಟ್ಟು ಬೇರೆಯವರೆಲ್ಲಾರು ನಿರ್ಧಾರ ಮಾಡ್ತಾ ಇದಾರಾ. 1ಕೆಜಿ ಈರುಳ್ಳಿ ಬೆಲೆ 5 ರೂಪಾಯಿ ಆದಾಗ ಹಿಂದು ಮುಂದು ನೊಡ್ದಾ, ಚೀಲಗಟ್ಟಲೆ ತಗಳೋ ನಾವು, ಅದ 5 ರೂಪಾಯ್ಗೆ, ಒಂದು ಕೆಜಿ ಈರುಳ್ಳಿ ಬೆಳೆಯೋಕಾಗ್ತದಾ ಅಂತ ಯೋಚನೆ ಕೂಡ ಮಾಡಲ್ಲಾ. ಇಂತಹ ಸೂಕ್ಷ್ಮ ವಿಷ್ಯಗಳನ್ನು, ತುಂಬಾ ಅಚ್ಚುಕಟ್ಟಾಗಿ ತೋರಿಸ್ಯಾರ ನಿರ್ದೇಶಕರಾಗಿರುವ ಶ್ರೀಕಾಂತ್ ಕಟಗಿ ಅವರು.
ಇನ್ನು ಸಿನಿಮಾ ನಟರ ಬಗ್ಗೆ ಹೇಳೊದಾದರ, ಹೀರೋ ನವೀನ್ ಶಂಕರ್, ನಾಯಕಿ ಅರ್ಚನಾ ಜೋಯಿಸ್ ಮತ್ತು ಸಿನಿಮಾದಲ್ಲಿನ ಎಲ್ಲಾ ನಟರ ಪಾತ್ರ ನೈಜವಾಗಿ ಮೂಡಿಬಂದಿದ್ದು, ಎಲ್ಲಾರಿಗೂ ಈ ಸಿನಿಮಾ ಕಥೆ ಹತ್ತಿರವೆನಿಸ್ತದ ಅನ್ನೋದ್ರಲ್ಲಿ, ಎರೆಡು ಮಾತಿಲ್ಲ.
ನಾಗಾರ್ಜುನ್ ಎಂ.ವಿ
ಯುವ ಪತ್ರಕರ್ತ
ಇದನ್ನೂ ಓದಿ-