ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ರಾಜ್ಯಪಾಲರನ್ನಾಗಿ ನೇಮಿಸಲಾಗುತ್ತದೆ ಎನ್ನುವ ವ್ಯಾಪಕ ಪ್ರಚಾರ ಕಾಲಿವುಡ್ ಗಲ್ಲಿಗಳಲ್ಲಿ ನಡೆಯುತ್ತಿದೆ. ಇದಕ್ಕಾಗಿ ರಜನಿಕಾಂತ್ ಪತ್ನಿ ಲತಾ ರಜನಿಕಾಂತ್ ರಣತಂತ್ರ ಹೆಣೆಯುತ್ತಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ರಜನಿಕಾಂತ್ ಸಹೋದರ ಸತ್ಯನಾರಾಯಣ ಪ್ರತಿಕ್ರಿಯಿಸಿ “ರಜನಿಗೆ ರಾಜ್ಯಪಾಲರ ಹುದ್ದೆ ಕೊಡುವುದು ಬಿಡುವುದು ಎಲ್ಲವೂ ದೇವರ ಕೈಯಲ್ಲಿದೆ” ಎಂದು ಹೇಳಿದರು. ಅದೇ ವೇಳೆ ರಜನಿಕಾಂತ್ ಅವರು ಯಾವುದೇ ಸಂದರ್ಭದಲ್ಲೂ ರಾಜಕೀಯಕ್ಕೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಭಾನುವಾರ ಮಧುರೈ ಮೀನಾಕ್ಷಿ ದೇವಾಲಯಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸತ್ಯನಾರಾಯಣ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಓ. ಪನ್ನೀರಸೆಲ್ವಂ ರಜಿನಿ ಅವರನ್ನು ಭೇಟಿ ಮಾಡುವುದರ ಹಿಂದೆ ಯಾವುದೇ ರಾಜಕೀಯವಿಲ್ಲ. ರಾಜ್ಯಪಾಲರ ಹುದ್ದೆ ದೇವರ ಕೈಯಲ್ಲಿದೆ ಎಂದು ನಗುತ್ತಲೇ ಹೇಳಿದರು.
ಇತ್ತೀಚೆಗಷ್ಟೇ ಉತ್ತರ ಭಾರತ ಪ್ರವಾಸಕ್ಕೆ ತೆರಳಿದ್ದ ರಜನಿಕಾಂತ್ ಅವರು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಜಾರ್ಖಂಡ್ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಮತ್ತಿತರರನ್ನು ಭೇಟಿ ಮಾಡಿದ್ದು ಗೊತ್ತೇ ಇದೆ. ಇದರೊಂದಿಗೆ ಅವರಿಗೆ ರಾಜ್ಯಪಾಲರ ಹುದ್ದೆ ಸಿಗಲಿದೆ ಎಂಬ ಪ್ರಚಾರ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಅವರ ಸಹೋದರ ಸತ್ಯನಾರಾಯಣ್ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.