ಚೆನ್ನೈ: ಸದಾ ತಲೆ-ಬುಡವಿಲ್ಲದ ಹೇಳಿಕೆ ನೀಡುವುದರಲ್ಲಿ ಖ್ಯಾತರಾಗಿರುವ ಬಿಜೆಪಿಯ ನಾಯಕರು ಸದಾ ಒಂದಲ್ಲ ಒಂದು ತಲೆಬುಡವಿಲ್ಲದ ಹೇಳಿಕೆಯನ್ನು ನೀಡುತ್ತಿರುತ್ತಾರೆ. ಈಗ ತಮಿಳುನಾಡಿನ ಬಿಜೆಪಿ ನಾಯಕ ಅಣ್ಣಾಮಲೈ ಒಂದು ಜಾತಿ ಪದ್ಧತಿಯನ್ನು ಸಮರ್ಥಿಸುವ ಹೇಳಿಕೆಯನ್ನು ನೀಡುವ ಮೂಲಕ ಸಮಸ್ಯೆಗೆ ಸಿಲುಕಿದ್ದಾರೆ.
ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿರುವ ವಿಡಿಯೋ ಒಂದರಲ್ಲಿ ಅವರು, “ಮನುಸ್ಮೃತಿಯ ಪ್ರಕಾರ ಧರ್ಮವೆಂದರೆ ನಿನಗೆ ನೀಡಲ್ಪಟ್ಟ, ನಿನ್ನ ಸಮುದಾಯಕ್ಕೆ ನೀಡಲ್ಪಟ್ಟ ಕೆಲಸವನ್ನು, ನಿನ್ನ ಜಾತಿಗೆ ನೀಡಲ್ಪಟ್ಟ ಕೆಲಸವನ್ನು ಮಾಡುವುದೇ ಧರ್ಮ” ಎಂದು ಹೇಳಲಾಗಿದೆಯೆಂದು ತಮಿಳಿನಲ್ಲಿ ಹೇಳಿದ್ದಾರೆ.
ಅವರು ಮಾತನಾಡಿದ ಸಂದರ್ಭದ ಕುರಿತು ಸ್ಪಷ್ಟವಾಗಿ ತಿಳಿದುಬಂದಿಲ್ಲವಾದರೂ, ಉದಯನಿಧಿ ಹೇಳಿದ “ಸನಾತನ ಧರ್ಮವೆನ್ನು ಸಾಂಕ್ರಾಮಿಕ ರೋಗವಿದ್ದಂತೆ ಅದನ್ನು ತೊಲಗಿಸಬೇಕು” ಎನ್ನುವ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಮಾತನಾಡುವಾಗ ಮೇಲಿನಂತೆ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಜಾತಿ ಪದ್ಧತಿಯನ್ನು ತೊಲಗಿಸಲು ಹಾಗೂ ಎಲ್ಲ ಜಾತಿಯ ಜನರು ಎಲ್ಲ ರಂಗಗಳಲ್ಲೂ ತೊಡಗಿಸಿಕೊಳ್ಳಲು ಅನುಕೂಲವಾಗುವಂತೆ ಸಂವಿಧಾನಬದ್ದವಾದ ಸಂಸ್ಥೆಗಳು ದುಡಿಯುತ್ತಿರುವಾಗ ಅಣ್ಣಾಮಲೈಯಂತಹ ರಾಷ್ಟ್ರೀಯ ಪಕ್ಷಕ್ಕೆ ಸೇರಿದ ನಾಯಕರು ಜಾತಿ ಪದ್ಧತಿಯನ್ನು ಪೋಷಿಸುವಂತಹ ಸಮರ್ಥನೆಗಳನ್ನು ನೀಡುತ್ತಿರುವುದು ದುರಂತ ಎಂದು ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾಗುತ್ತಿದೆ.