Home ರಾಜ್ಯ ವಚನಾನಂದ ವಿರುದ್ಧ ಗಂಭೀರ ಲೈಂಗಿಕ ದೌರ್ಜನ್ಯದ ಆರೋಪ: ಹಾಸ್ಟೆಲ್ ಹುಡುಗರಿಂದ ಬಾಡಿ ಮಸಾಜ್ ಮಾಡಿಸಿಕೊಳ್ಳುತ್ತಿದ್ದರು ಎಂದ...

ವಚನಾನಂದ ವಿರುದ್ಧ ಗಂಭೀರ ಲೈಂಗಿಕ ದೌರ್ಜನ್ಯದ ಆರೋಪ: ಹಾಸ್ಟೆಲ್ ಹುಡುಗರಿಂದ ಬಾಡಿ ಮಸಾಜ್ ಮಾಡಿಸಿಕೊಳ್ಳುತ್ತಿದ್ದರು ಎಂದ ಟ್ರಸ್ಟಿ

0

ಹರಿಹರ: ಹರಿಹರ ಸಮೀಪದ ಪಂಚಮಸಾಲಿ ಗುರುಪೀಠದಿಂದ ಉಚ್ಚಾಟಿತರಾಗಿರುವ ವಚನಾನಂದ ವಿರುದ್ಧ ಗುರುಪೀಠದ ಟ್ರಸ್ಟಿ ಚಂದ್ರಶೇಖರ್ ಪೂಜಾರ್ ಅವರು ಗಂಭೀರ ಆರೋಪ ಮಾಡಿದ್ದಾರೆ. ಸ್ವಾಮಿ ಮಠದ ಹಾಸ್ಟೆಲ್ ಹುಡುಗರನ್ನು ಬಾಡಿ ಮಸಾಜ್ ಮತ್ತು ಇತರ ವೈಯಕ್ತಿಕ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದರು ಎಂದು ಅವರು ದೂರಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪೂಜಾರ್, “ನೊಂದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಪೊಲೀಸ್ ದೂರು ನೀಡಲು ಮುಂದೆ ಬಂದಿದ್ದರು. ಒಂದು ವೇಳೆ ಅವರು ದೂರು ನೀಡಿದ್ದರೆ, ಶ್ರೀಗಳ ವಿರುದ್ಧ ಪೋಕ್ಸೋ (POCSO) ಪ್ರಕರಣ ದಾಖಲಾಗಿ ಅವರು ಜೈಲು ಪಾಲಾಗುತ್ತಿದ್ದರು. ಆದರೆ, ಮಠ ಮತ್ತು ಸಮುದಾಯದ ಗೌರವವನ್ನು ಕಾಪಾಡುವ ದೃಷ್ಟಿಯಿಂದ ನಾವು ಪೋಷಕರಿಗೆ ದೂರು ನೀಡದಂತೆ ವಿನಂತಿಸಿದ್ದೆವು,” ಎಂದು ತಿಳಿಸಿದರು.

ಪೂಜಾರ್ ಅವರ ಪ್ರಕಾರ, ಗುರುಪೀಠವು ಎರಡು ವರ್ಷಗಳ ಹಿಂದೆ ಹಾಸ್ಟೆಲ್ ಸ್ಥಾಪಿಸಿದಾಗ 60 ವಿದ್ಯಾರ್ಥಿಗಳಿದ್ದರು. ಶ್ರೀಗಳು ದಿನನಿತ್ಯ 4 ರಿಂದ 5 ವಿದ್ಯಾರ್ಥಿಗಳಿಂದ ‘ವಿಕೃತವಾಗಿ’ ಬಾಡಿ ಮಸಾಜ್ ಮಾಡಿಸಿಕೊಳ್ಳುತ್ತಿದ್ದರು. ಈ ಕಿರುಕುಳ ತಾಳಲಾರದೆ ಹೆಚ್ಚಿನ ವಿದ್ಯಾರ್ಥಿಗಳು ಹಾಸ್ಟೆಲ್ ತೊರೆದಿದ್ದು, ಈಗ ಕೇವಲ ಐವರು ಮಾತ್ರ ಉಳಿದುಕೊಂಡಿದ್ದಾರೆ.

“ಟ್ರಸ್ಟಿಗಳಿಗೆ ಈ ವಿಷಯ ತಿಳಿದಾಗ ನಾವು ಅವರಿಗೆ ಬುದ್ಧಿವಾದ ಹೇಳಲು ಪ್ರಯತ್ನಿಸಿದೆವು. ಆದರೆ ಶ್ರೀಗಳು ತಮ್ಮ ತಪ್ಪುಗಳನ್ನು ಮುಚ್ಚಿಹಾಕಲು ನಮ್ಮ ವಿರುದ್ಧವೇ ತಿರುಗಿಬಿದ್ದರು. ಸರ್ಕಾರ ಬಿಡುಗಡೆ ಮಾಡಿದ ಅನುದಾನದ ಬಳಕೆ ಕುರಿತು ಪ್ರಶ್ನೆ ಮಾಡುವ ಮೂಲಕ ನಮ್ಮನ್ನು ಬೆದರಿಸಲು ಮುಂದಾದರು,” ಎಂದು ಪೂಜಾರ್ ಆರೋಪಿಸಿದರು.

ವೀಡಿಯೋ ಸಾಕ್ಷ್ಯ ಬಿಡುಗಡೆ: ಸುದ್ದಿಗೋಷ್ಠಿಯಲ್ಲಿ ವಚನಾನಂದ ಶ್ರೀ ಮಠದ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವ ವೀಡಿಯೋ ತುಣುಕನ್ನು ಪೂಜಾರ್ ಬಿಡುಗಡೆ ಮಾಡಿದರು. ಈ ವೀಡಿಯೋದಲ್ಲಿ ವಿದ್ಯಾರ್ಥಿಗಳು ತಮ್ಮನ್ನು ಬಾಡಿ ಮಸಾಜ್ ಮತ್ತು ಬಟ್ಟೆ ತೊಳೆಯುವಂತಹ ವೈಯಕ್ತಿಕ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದರು ಎಂದು ಆರೋಪಿಸಿರುವುದು ಕೇಳಿಬಂದಿದೆ. “ಶ್ರೀಗಳಿಗೆ ಸ್ವಲ್ಪವಾದರೂ ನೈತಿಕತೆ ಇದ್ದರೆ ಕೂಡಲೇ ಮಠವನ್ನು ಬಿಟ್ಟು ತೊಲಗಬೇಕು. ಇಲ್ಲವಾದರೆ ಅವರನ್ನು ಹೇಗೆ ಹೊರಹಾಕಬೇಕು ಎಂಬುದು ಟ್ರಸ್ಟಿಗಳಿಗೆ ತಿಳಿದಿದೆ,” ಎಂದು ಪೂಜಾರ್ ಎಚ್ಚರಿಕೆ ನೀಡಿದ್ದಾರೆ.

You cannot copy content of this page

Exit mobile version