ಚೆನ್ನೈ: ಕೇಂದ್ರ ಸರ್ಕಾರದ ಪ್ರಸ್ತಾವಿತ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯಿಂದ ರಾಜ್ಯವು ಎದುರಿಸಲಿರುವ ಪರಿಣಾಮಗಳ ಕುರಿತು ಚರ್ಚಿಸಲು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಬುಧವಾರ ಡಿಎಂಕೆ ಸಂಸದರ ತುರ್ತು ಸಭೆಯನ್ನು ಕರೆದಿದ್ದಾರೆ.
ಚುನಾವಣಾ ಪ್ರಚಾರದ ಕಾರ್ಯದ ನಡುವೆಯೇ ಧರ್ಮಪುರಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಸ್ಟಾಲಿನ್ ಈ ತುರ್ತು ಸಭೆಯನ್ನು ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಬೆಳಿಗ್ಗೆ 11 ಗಂಟೆಗೆ ಸಭೆ ಆರಂಭವಾಗಲಿದ್ದು, ಕ್ಷೇತ್ರ ಮರುವಿಂಗಡಣೆ ಕುರಿತು ಸಂಸತ್ತಿನಲ್ಲಿ ಪಕ್ಷವು ಅನುಸರಿಸಬೇಕಾದ ನಿಲುವಿನ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.
ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯಲ್ಲಿ ರಾಜ್ಯಕ್ಕೆ ಹಾನಿಯುಂಟುಮಾಡುವ ಅಥವಾ ಉತ್ತರ ಭಾರತದ ರಾಜ್ಯಗಳ ರಾಜಕೀಯ ಶಕ್ತಿಯನ್ನು ಅಸಮಾನವಾಗಿ ಹೆಚ್ಚಿಸುವಂತಹ ಯಾವುದೇ ಕ್ರಮ ಕೈಗೊಂಡರೆ ತಮಿಳುನಾಡು ಸ್ತಂಭನಗೊಳ್ಳುವಂತಹ ಬೃಹತ್ ಆಂದೋಲನಗಳು ಮತ್ತು ಪೂರ್ಣ ಪ್ರಮಾಣದ ಪ್ರತಿಭಟನೆಗಳನ್ನು ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸ್ಟಾಲಿನ್ ಮಂಗಳವಾರ ಎಚ್ಚರಿಸಿದ್ದರು. ರಾಜ್ಯದ ಹಕ್ಕುಗಳಿಗಾಗಿ ಮತ್ತು ಹಿಂದಿ ಹೇರಿಕೆ ವಿರುದ್ಧ ಹೋರಾಟ ನಡೆಸಿದ್ದ 1950 ಮತ್ತು 1960ರ ದಶಕದ ಡಿಎಂಕೆಯನ್ನು ದೇಶವು ಮತ್ತೆ ನೋಡಬೇಕಾದೀತು ಎಂದು ಅವರು ಹೇಳಿದ್ದರು. ದ್ರಾವಿಡ ಐಕಾನ್ ಸಿ.ಎನ್. ಅಣ್ಣಾದೊರೈ ಅವರು 1949 ರಲ್ಲಿ ಡಿಎಂಕೆಯನ್ನು ಸ್ಥಾಪಿಸಿದ್ದರು.
ಉತ್ತರ ತಮಿಳುನಾಡಿನಲ್ಲಿ ಚುನಾವಣಾ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ್ದ ಸ್ಟಾಲಿನ್, ಮಹಿಳಾ ಮೀಸಲಾತಿ ಮಸೂದೆಯ ಕರಡು ಪತ್ರವು ಇದೊಂದು ‘ಪಿತೂರಿ’ ಎಂಬುದನ್ನು ತೋರಿಸುತ್ತಿದೆ ಮತ್ತು ಕ್ಷೇತ್ರ ಮರುವಿಂಗಡಣೆ ಜಾರಿಯಾದಾಗ ಇದು ತಮಿಳುನಾಡು ಹಾಗೂ ಉತ್ತರದ ರಾಜ್ಯಗಳ ನಡುವಿನ ಕಂದಕವನ್ನು ಹೆಚ್ಚಿಸಲಿದೆ ಎಂದು ಏಪ್ರಿಲ್ 14 ರಂದು ಆರೋಪಿಸಿದ್ದರು.
ಮಂಗಳವಾರ, ಕ್ಷೇತ್ರ ಮರುವಿಂಗಡಣೆ ಕುರಿತು ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಬರೆದ ಪತ್ರಕ್ಕೆ ಪ್ರತಿಕ್ರಿಯಿಸಿದ್ದ ಸ್ಟಾಲಿನ್, “ನಮ್ಮ ಒಗ್ಗಟ್ಟು ರಾಜ್ಯದ ಹಕ್ಕುಗಳನ್ನು ರಕ್ಷಿಸಲು ಮತ್ತು ಮುಂಬರುವ ಪೀಳಿಗೆಗೆ ನ್ಯಾಯಯುತ ಹಾಗೂ ಸಮಾನ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು ಅವಶ್ಯಕವಾಗಿದೆ. ದಕ್ಷಿಣ ಭಾರತವು ಒಟ್ಟಾಗಿ ನಿಲ್ಲಲಿದೆ, ಒಂದೇ ಧ್ವನಿಯಲ್ಲಿ ಮಾತನಾಡಲಿದೆ ಮತ್ತು ಫೆಡರಲಿಸಂನ ನಿಜವಾದ ಸ್ಫೂರ್ತಿಯನ್ನು ಎತ್ತಿಹಿಡಿಯಲಿದೆ,” ಎಂದು ತಿಳಿಸಿದ್ದರು.
ರೇವಂತ್ ರೆಡ್ಡಿ ಅವರು ದಕ್ಷಿಣದ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶಕ್ಕೆ ಪತ್ರ ಬರೆದು ‘ಹೈಬ್ರಿಡ್ ಮಾಡೆಲ್’ ಅನ್ನು ಪ್ರಸ್ತಾಪಿಸಿದ್ದಾರೆ. ಇದರ ಅಡಿಯಲ್ಲಿ ಪ್ರಸ್ತಾವಿತ ಹೆಚ್ಚುವರಿ ಸೀಟುಗಳ ಪೈಕಿ ಶೇ. 50 ರಷ್ಟನ್ನು ಜನಸಂಖ್ಯೆಯ ಅನುಪಾತದ ಆಧಾರದ ಮೇಲೆ ಮತ್ತು ಉಳಿದ ಶೇ. 50 ರಷ್ಟನ್ನು ಜಿಎಸ್ಡಿಪಿ (GSDP) ಹಾಗೂ ಇತರ ಮಾನದಂಡಗಳ ಆಧಾರದ ಮೇಲೆ ಹಂಚಿಕೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.ಕ್ಷೇತ್ರ ಮರುವಿಂಗಡಣೆ: ಡಿಎಂಕೆ ಸಂಸದರ ತುರ್ತು ಸಭೆ ಕರೆದ ಸ್ಟಾಲಿನ್; ದಕ್ಷಿಣ ಭಾರತದ ಒಗ್ಗಟ್ಟಿಗೆ ರೇವಂತ್ ರೆಡ್ಡಿ ಸಾಥ್
