ರಾಷ್ಟ್ರಗೀತೆ ‘ವಂದೇ ಮಾತರಂ’ ಗಾಯನಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ ಪ್ರಮುಖ ಆದೇಶ ಹೊರಡಿಸಿದೆ. ಇನ್ನು ಮುಂದೆ ಪ್ರತಿ ಶಾಲೆಯಲ್ಲೂ ಕಡ್ಡಾಯವಾಗಿ ವಂದೇ ಮಾತರಂ ಹಾಡಬೇಕು ಎಂದು ಸೂಚಿಸಿದೆ.
ರಾಷ್ಟ್ರಗೀತೆ ‘ಜನಗಣಮನ’ ಹಾಡುವ ಮೊದಲು ವಂದೇ ಮಾತರಂ ಹಾಡಬೇಕು ಎಂದು ಬುಧವಾರ ಬೆಳಿಗ್ಗೆ ಹೊರಡಿಸಲಾದ ಹೊಸ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಈ ಆದೇಶದ ಪ್ರಕಾರ, ವಂದೇ ಮಾತರಂ ಹಾಡುವಾಗ ಪ್ರತಿಯೊಬ್ಬರೂ ಕಡ್ಡಾಯವಾಗಿ ಎದ್ದು ನಿಲ್ಲಬೇಕು. ಗೀತೆಯ ಆರೂ ಚರಣಗಳನ್ನು ಹಾಡುವುದು ಕಡ್ಡಾಯವಾಗಿದ್ದು, 1937ರಲ್ಲಿ ಕಾಂಗ್ರೆಸ್ ಸರ್ಕಾರ ತೆಗೆದುಹಾಕಿದ್ದ ನಾಲ್ಕು ಚರಣಗಳನ್ನು ಕೇಂದ್ರದ ಎನ್ಡಿಎ ಸರ್ಕಾರ ಈಗ ಮತ್ತೆ ಸೇರಿಸಿದೆ. ಈ ಹಿಂದೆ ಸೆಕ್ಯುಲರ್ ಕಾರಣಗಳನ್ನು ನೀಡಿ ಮುಸ್ಲಿಂ ಲೀಗ್ನ ಆಕ್ಷೇಪದ ಮೇರೆಗೆ ನೆಹರೂ ನೇತೃತ್ವದಲ್ಲಿ ಇವುಗಳನ್ನು ಕೈಬಿಡಲಾಗಿತ್ತು.
ಸಿನಿಮಾ ಮಂದಿರಗಳಲ್ಲಿ ವಂದೇ ಮಾತರಂ ನುಡಿಸುವ ಮಾಡುವ ಅಗತ್ಯವಿಲ್ಲ ಎಂದು ಕೇಂದ್ರ ತಿಳಿಸಿದೆ. ಒಂದು ವೇಳೆ ಥಿಯೇಟರ್ಗಳಲ್ಲಿ ಅಥವಾ ನ್ಯೂಸ್ ರೀಲ್ಗಳಲ್ಲಿ ಈ ಗೀತೆ ಪ್ರಸಾರವಾಗುತ್ತಿದ್ದರೆ ಎದ್ದು ನಿಲ್ಲುವ ಅಗತ್ಯವಿಲ್ಲ. ಅಂತಹ ಸ್ಥಳಗಳಲ್ಲಿ ಜನದಟ್ಟಣೆ ಮತ್ತು ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಈ ವಿನಾಯಿತಿ ನೀಡಲಾಗಿದೆ.
ವಂದೇ ಮಾತರಂ ಹಾಡಲು 3 ನಿಮಿಷ 10 ಸೆಕೆಂಡ್ಗಳ ಸಮಯ ಬೇಕಾಗುತ್ತದೆ ಎಂದು ಕೇಂದ್ರ ತಿಳಿಸಿದೆ. ಸರ್ಕಾರಿ ಕಾರ್ಯಕ್ರಮಗಳು, ರಾಷ್ಟ್ರಪತಿ ಅಥವಾ ರಾಜ್ಯಪಾಲರ ಭೇಟಿ ಮತ್ತು ಧ್ವಜಾರೋಹಣದ ಸಂದರ್ಭಗಳಲ್ಲಿ ಇನ್ನು ಈ ಗೀತೆ ಮೊಳಗಲಿದೆ. ರಾಷ್ಟ್ರಗೀತೆಗೆ ಅವಮಾನ ಮಾಡಿದರೆ ಗರಿಷ್ಠ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ. ಬಂಕಿಮಚಂದ್ರ ಚಟರ್ಜಿ ಅವರು 1875ರಲ್ಲಿ ರಚಿಸಿದ ಈ ಗೀತೆಗೆ 150 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ವಿಶೇಷ ಕ್ರಮ ಕೈಗೊಂಡಿದೆ.
