ಮಾಜಿ ಸಂಸದ, ಸಾಹಿತಿ ಡಿ.ಎಸ್.ವೀರಯ್ಯ ಅವರು ಬರೆದ ಅಂಬೇಡ್ಕರ್ ಸಂದೇಶಗಳು ಪುಸ್ತಕದ ಹಿಂದಿ ಮತ್ತು ಇಂಗ್ಲೀಷ್ ಅವತರಣಿಕೆಗಳನ್ನು ಉಪರಾಷ್ಟ್ರಪತಿ ಜಗದೀಪ್ ಧನಕರ್ ಬಿಡುಗಡೆಗೊಳಿಸಿದರು.
ಉಪರಾಷ್ಟ್ರಪತಿಗಳ ನಿವಾಸದ ಸಭಾ ಭವನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು, ಅಂಬೇಡ್ಕರ್ ಅವರ ಆಶಯಗಳನ್ನು ಡಿ.ಎಸ್. ವೀರಯ್ಯ ಅವರು ಬಹಳ ಅರ್ಥಗರ್ಭಿತವಾಗಿ ಕಟ್ಟಿಕೊಟ್ಟಿದ್ದಾರೆ. ಅಮೃತ ಕಾಲದ ಈ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಆಶಯಗಳ ಅವಶ್ಯಕತೆ ಇದೆ. ಹೀಗಾಗಿ, ಅವರ ಪುಸ್ತಕಗಳು ಪ್ರತಿ ಮನೆ ಮನೆಗೂ ತಲುಪುವಂತಾಗಲಿ ಎಂದು ಆಶಿಸಿದರು.
ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಸಂವಿಧಾನ ಪೀಠಿಕೆ ವಿಷಯದ ಬಗ್ಗೆ ಪ್ರಸ್ತಾಪಿಸಿದ ವಿಚಾರವನ್ನು ಪುನರುಚ್ಚರಿಸಿದ ಜಗದೀಪ ದನಕರ್, ‘ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸುವ, ಸಂವಿಧಾನದ ಪೀಠಿಕೆ ಬದಲಾಯಿಸುವ ಮೂಲಕ ಅಂಬೇಡ್ಕರ್ ಆಶಯಗಳನ್ನು ತುಳಿಯುವ ಪ್ರಯತ್ನ ನಡೆದಿದೆ. ಆದರೆ, ಅಂಬೇಡ್ಕರ್ ಅವರ ಆಶಯಗಳು ಎಂದೆಂದಿಗೂ ಪ್ರಸ್ತುತ ಎಂಬುದನ್ನು ನಾವೆಲ್ಲರೂ ಮನಗಾಣಬೇಕು’ ಎಂದು ಹೇಳಿದರು
‘ಇಂತಹ ಸಂದರ್ಭದಲ್ಲಿ ವೀರಯ್ಯ ಅವರ ಅಂಬೇಡ್ಕರ್ ಕಿ ಸಂದೇಶ್ ಪುಸ್ತಕ ಪ್ರಸ್ತುತ ಇದನ್ನು ಬಿಡುಗಡೆಗೊಳಿಸಲು ನನಗೆ ಹೆಮ್ಮೆಯಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಉದ್ಯಮಿ ವಿಜಯ್ ಸಂಕೇಶ್ವರ್, ವಿಮರ್ಶಕ ಬೈರಮಂಗಲ ರಾಮೇಗೌಡ, ನಿವೃತ್ತ ಎಡಿಜಿಪಿ ಭಾಸ್ಕರ್ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.