ಬೆಂಗಳೂರು : ಬಿಬಿಎಂಪಿ ಕಲ್ಯಾಣ ಕಾರ್ಯಕ್ರಮ ಯೋಜನೆ ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಎಸ್ ಸಿ,ಎಸ್ ಟಿ, ಅಲ್ಪ ಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಿರುವ ಲ್ಯಾಪ್ ಟ್ಯಾಪ್ ವೆಬ್ ಸೈಟ್ಗಳಲ್ಲಿ ತಾಂತ್ರಿಕ ದೋಷ ಕಂಡು ಬಂದಿರುವ ಹಿನ್ನಲೆ ಕೆಪಿಸಿಸಿ ಯ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗದ ಪ್ರಧಾನ ಕಾರ್ಯದರ್ಶಿಯಾದ ಸೂರ್ಯ ಮುಕುಂದರಾಜ್ ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ “ ಬಿಬಿಎಂಪಿ ಕಲ್ಯಾಣ ಯೋಜನೆಯಲ್ಲಿ ಅನೇಕ ತಾಂತ್ರಿಕ ತೊಡಕುಗಳಿವೆ. ವಿದ್ಯಾರ್ಥಿಗಳಿಗೆ ಲ್ಯಾಪ್ಟ್ಯಾಪ್ ಕೊಡಿಸುವ ದೃಷ್ಟಿಯಲ್ಲಿ ವೆಬ್ ಸೈಟ್ನಲ್ಲಿ ಮಾಹಿತಿ ತುಂಬಲು ಪ್ರಯತ್ನಿಸಿದಾಗ ತಾಂತ್ರಿಕ ದೋಷಗಳಿಂದ ಅದು ಅಸಾಧ್ಯವಾಗಿದೆ. ಕೇವಲ ಬಿಬಿಎಂಪಿ ಸದಸ್ಯರುಗಳಿಗೆ ಯಾವ ಜನಪ್ರತಿನಿಧಿಗಳು ಹತ್ತಿರವಿರುತ್ತಾರೋ ಅಂತಹವರು ಮಾತ್ರ ಈ ಯೋಜನೆಯನ್ನು ಉಪಯೋಗಿಸಿಕೊಳ್ಳುವಂತಾಗಿದೆ. ಯಾವುದೇ ಶಿಫಾರಸ್ಸು, ಜನಪ್ರತಿನಿಧಿಗಳ ಸಂಪರ್ಕವೇ ಇಲ್ಲದವರಿಗೆ ಈ ಯೋಜನೆಯಿಂದ ಅನುಕೂಲ ಪಡೆಯಲಾಗುತ್ತಿಲ್ಲ” ಎಂದು ಹೇಳಿದ್ದಾರೆ.
ಜೊತೆಗೆ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳು ಈ ಯೋಜನೆಯ ಅನುಕೂಲಗಳನ್ನು ಪಡೆಯುವಂತೆ ಈ ಸಮಸ್ಯೆಯನ್ನು ಸರಿಪಡಿಸುವಂತೆ ಬಿಬಿಎಂಪಿ ಆಯುಕ್ತರಿಗೆ ಪತ್ರದ ಮುಖಾಂತರ ಸೂರ್ಯ ಮುಕುಂದರಾಜ್ ಮನವಿ ಮಾಡಿಕೊಂಡಿದ್ದಾರೆ.