ಶಿವಮೊಗ್ಗ : ರಾಜ್ಯ ಕಾಂಗ್ರೆಸ್ ರೀತಿಯಲ್ಲಿ ರಾಜ್ಯ ಬಿಜೆಪಿಯಲ್ಲೂ ತಿಕ್ಕಾಟ ಶುರುವಾಗಿದೆ. ಡಿ.ಕೆ ಶಿವಕುಮಾರ್ಅವರನ್ನು ಸಿಎಂ ಆಗಿ ಹಾಗೂ ವಿಜಯೇಂದ್ರ (BY Vijayendra) ಅವರನ್ನು ಡಿಸಿಎಂ ಮಾಡಲು ದೆಹಲಿಗೆ ಅಮಿತ್ ಶಾ ಭೇಟಿಗೆ ಬಿಜೆಪಿ ನಿಯೋಗ ಹೋಗಲಿದೆ ಎಂಬ ಶಾಸಕ ಯತ್ನಾಳ್ (Basana gouda patil yatnal) ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಯತ್ನಾಳ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ’ ಎಂದು ಗುಡುಗಿದ್ದಾರೆ.
ಶಿವಮೊಗ್ಗದಲ್ಲಿ ಮಾತಾಡಿದ ಬಿ.ವೈ.ವಿಜಯೇಂದ್ರ, ‘ಡಿಕೆ ಶಿವಕುಮಾರ್ರನ್ನು ಬಿಜೆಪಿಗೆ ಸೇರಿಸಲು ಅಮಿತ್ ಶಾ ಭೇಟಿ ಮಾಡಿಸಿದ್ದ ಎಂಬ ಯತ್ನಾಳ್ ಸರಿಯಲ್ಲ. ಹೊಂದಾಣಿಕೆ ರಾಜಕಾರಣ ಎಂದು ಆರೋಪ ಮಾಡುತ್ತಿರುವ ಯತ್ನಾಳ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವೆ’ ಎಂದು ಗುಡುಗಿದ್ದಾರೆ.
‘ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಹಾಗೂ ವಿಜಯೇಂದ್ರ ಉಪಮುಖ್ಯಮಂತ್ರಿ ಆಗಲು ಯೋಜನೆ ನಡೆದಿದ್ದು, ಡಿ.ಕೆ.ಶಿವಕುಮಾರ್ ಅವರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಳಿಗೆ ವಿಜಯೇಂದ್ರ ಕರೆದೊಯ್ದು ಚರ್ಚೆ ನಡೆಸಿದ್ದಾರೆ’ ಎಂಬ ಬಸನಗೌಡ ಪಾಟೀಲ ಯತ್ನಾಳ ಆರೋಪ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ‘ಯತ್ನಾಳ್ಗೆ ನನ್ನ ಬಗ್ಗೆ ಮಾತನಾಡದಿದ್ದರೆ ಊಟ ಸೇರುವುದಿಲ್ಲ. ನನ್ನ ತಾಳ್ಮೆಗೂ ಮಿತಿ ಇದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಯತ್ನಾಳ್ ವಿರುದ್ಧ 1 ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಬೇಕೋ ಅಥವಾ 1 ಕೋಟಿ ಮಾನನಷ್ಟ ಮೊಕದ್ದಮೆ ಹೂಡಬೇಕೋ ಎಂಬ ಬಗ್ಗೆ ಚಿಂತನೆ ನಡೆಸುತ್ತಿದ್ದೇನೆ’ ಎಂದು ತಿಳಿಸಿದ್ದಾರೆ. ‘ನಾನು ಮುಖ್ಯಮಂತ್ರಿಯಾಗಬೇಕು ಎಂದುಕೊಂಡಿದ್ದೇನೆ. ಆದರೆ ಯತ್ನಾಳ್ ನನಗೆ ಡಿಸಿಎಂ ಮಾಡಲು ಹೊರಟಿದ್ದಾರೆ’ ಎಂದು ಕಿಡಿಕಾರಿದರು.
‘ಅಧಿಕಾರಕ್ಕಾಗಿ ಸಿಎಂ ಹಾಗೂ ಡಿಸಿಎಂ ನಡುವೆ ಕಿತ್ತಾಟ ನಡೆಯುತ್ತಿದೆ. ಅಧಿವೇಶನದಲ್ಲಿ ರೈತರ ಸಮಸ್ಯೆ ಬಗ್ಗೆ ಚರ್ಚೆಗೆ ಅವಕಾಶ ಕೊಡುತ್ತಿಲ್ಲ. ರಾಜ್ಯದ ಜನರಿಗೆ ಕೃಷಿ ಸಚಿವರು ಯಾರೆಂಬುದೇ ಗೊತ್ತಿಲ್ಲದ ಸ್ಥಿತಿಯಿದೆ. ಕಾಟಾಚಾರಕ್ಕಾಗಿ ಅಧಿವೇಶನ ನಡೆಯುತ್ತಿದೆ. ಬೆಳಗಾವಿ ಅಧಿವೇಶನ ಯಾವ ಪುರುಷಾರ್ಥಕ್ಕೆ ಎಂದು ನಾನು ಈ ಹಿಂದೆ ಕೇಳಿದ್ದೆ. ಕುರ್ಚಿ ಕಿತ್ತಾಟ ಕುಗಿದ ಬಳಿಕ ಅಧಿವೇಶನ ನಡೆಸುವಂತೆಯೂ ಸಲಹೆ ನೀಡಿದ್ದೆ’ ಎಂದಿದ್ದಾರೆ.
ಯತ್ನಾಳ್ ಹೇಳಿದ್ದೇನು?
‘ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಳಿ ಕರೆದುಕೊಂಡು ಹೋಗಿದ್ದರು’ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಫೋಟಕ ಹೇಳಿಕೆ ನೀಡಿದ್ರು.
ಬೆಳಗಾವಿಯಲ್ಲಿ ಈ ಕುರಿತಾಗಿ ಮಾತನಾಡಿದ್ದ ಅವರು, ‘ಬಿವೈ ವಿಜಯೇಂದ್ರ ಉಪಮುಖ್ಯಮಂತ್ರಿ ಆಗಬೇಕು ಎಂಬ ನಿರೀಕ್ಷೆಯಲ್ಲಿದ್ದರು. ಅದಕ್ಕೆ ಅಮಿತ್ ಶಾ ಬಳಿ ಡಿಕೆ ಶಿವಕುಮಾರ್ ಅವರನ್ನು ಕರೆದುಕೊಂಡು ಹೋಗಿದ್ದರು’ ಎಂದು ಹೇಳಿಕೆ ನೀಡಿದ್ರು.
