ಬೆಂಗಳೂರು:
“ವಿಜಯ ಕರ್ನಾಟಕ” ದಿನಪತ್ರಿಕೆಯ ಮಾಹಿತಿ ತಂತ್ರಜ್ಞಾನ (ಐಟಿ) ವಿಭಾಗದ ವ್ಯವಸ್ಥಾಪಕ ಚಂದ್ರಶೇಖರ್ ಹಿರೇಮಠ (46) ಅವರು ಅನಾರೋಗ್ಯದ ಕಾರಣ ಭಾನುವಾರ (9/7/2023) ಬೆಳಗ್ಗೆ 10.45ರ ವೇಳೆಯಲ್ಲಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ದೊಡ್ಡ ಅಬ್ಬಿಗೆರೆ ಗ್ರಾಮದವರಾದ ಚಂದ್ರಶೇಖರ್, ಪತ್ನಿ, ಮೂರು ವರ್ಷದ ಪುತ್ರ, ಪುತ್ರಿ, (ಅವಳಿ ಮಕ್ಕಳು) ತಂಗಿ ಮತ್ತು ತಂದೆ-ತಾಯಿಯನ್ನು ಅಗಲಿದ್ದಾರೆ.
ಅವರು, “ವಿಜಯ ಕರ್ನಾಟಕ”ದ ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಕಳೆದ 21 ವರ್ಷಗಳಿಂದ ಮಾಹಿತಿ ತಂತ್ರಜ್ಞಾನ ವಿಭಾಗದ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು.
“ಪಾರ್ಥಿವ ಶರೀರವನ್ನು ಸೋಮವಾರ (ಜು.10) ಬೆಳಗ್ಗೆ ಸ್ವಗ್ರಾಮದ ಮನೆಯಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗುವುದು. ಮಧ್ಯಾಹ್ನ 12 ಗಂಟೆಗೆ ದೊಡ್ಡ ಅಬ್ಬಿಗೆರೆಯಲ್ಲಿನ ಅವರ ತೋಟದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗುವುದು” ಎಂದು ಕುಟುಂಬದ ಮೂಲಗಳು ತಿಳಿಸಿವೆ.