ಹಾಸನ : ನಮ್ಮ ದೇಶದ ಸೈನಿಕರಿಗೆ ನೈತಿಕ ಬೆಂಬಲವಾಗಿ ಹಾಗು ಈ ವಿಚಾರವಾಗಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮೇ.10ರ ಶನಿವಾರದಂದು ಬೆಳಿಗ್ಗೆ 10 ಗಂಟೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್ಯಾಲಿ ನಡೆಸಲಾಗುತ್ತಿದೆ. ಇನ್ನು ತುರ್ತು ಪರಿಸ್ಥಿತಿ ಬಂದು ಮತ್ತೆ ಯುದ್ಧಕ್ಕೆ ಕಾರ್ಯಪ್ರವೃತ್ತರಾಗಲು ಕರೆ ಕೊಟ್ಟರೇ ದೇಶದ ರಕ್ಷಣೆಗಾಗಿ ನಾವೆಲ್ಲಾ ಸಿದ್ಧರಿದ್ದೇವೆ ಎಂದು ರಾಷ್ಟ್ರೀಯ ಮಾಜಿ ಸೈನಿಕರ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ಎ.ಎಸ್. ಪ್ರದೀಪ್ ಸಾಗರ್ ತಿಳಿಸಿದರು.ನಗರದ ಮಾಜಿ ಸೈನಿಕರ ಸಂಘದಲ್ಲಿ ಸಭೆ ನಡೆಸಿದ ನಂತರ ಶುಕ್ರವಾರದಂದು ಮಾಧ್ಯಮಕ್ಕೆ ಹೇಳಿಕೆ ನೀಡಿರುವ ಅವರು, ಕಾಶ್ಮೀರದ ಪಹಲ್ಲಾಮ್ ನಲ್ಲಿ ಭಯೋತ್ಪಾದಕರು ನಡೆಸಿದ ಅಮಾಯಕ ಭಾರತೀಯರ ಹತ್ಯೆಗೆ ಪ್ರತ್ಯುತ್ತರವಾಗಿ ಭಾರತೀಯ ಸೇನೆಯು ‘ಅಪರೇಷನ್ ಸಿಂಧೂರ’ ಎಂಬ ಹೆಸರಿನಲ್ಲಿ ಭಯೋತ್ಪಾದನೆಯ ಹುಟ್ಟಡಗಿಸುವ ಕಾರ್ಯಾಚರಣೆ ಕೈಗೊಂಡಿದೆ. ಉಗ್ರರ ಸುಮಾರು ಒಂಬತ್ತು ಅಡಗುತಾಣಗಳನ್ನು ಧ್ವಂಸಗೊಳಿಸಿದೆ ಎಂದರು.
ನಮ್ಮ ಸೇನೆಯ ಈ ಕೆಚ್ಚೆದೆಯ ಸೈನಿಕರ ಯಶೋಗಾತೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಲು ಹಾಗು ಯುದ್ಧದ ಕಾರ್ಮೋಡ ಆವರಿಸಿರುವ ಈ ಸಂದರ್ಭದಲ್ಲಿ ನಮ್ಮ ದೇಶದ ಸೈನಿಕರಿಗೆ ನೈತಿಕ ಬೆಂಬಲವಾಗಿ ಹಾಗು ಈ ವಿಚಾರವಾಗಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ಬೈಕ್ ಜಾಥಾ ಹಮ್ಮಿಕೊಳ್ಳಲಾಗಿದೆ. ಈ ಬೈಕ್ ಜಾಥಾದಲ್ಲಿ ಹಾಸನ ಜಿಲ್ಲಾ ಮಾಜಿ ಸೈನಿಕರ ಸಂಘದ ಸದಸ್ಯರು ಹಾಗು ವಿವಿಧ ಸಂಘ ಸಂಸ್ಥೆಗಳು ಭಾಗವಹಿಸುತ್ತಿದ್ದು, ಸುಮಾರು 200 ರಿಂದ 300 ಜನರು ಈ ಜಾಥಾದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇಂದು ಶನಿವಾರ ಬೆಳಗ್ಗೆ 10 ಗಂಟೆಗೆ ಸರಿಯಾಗಿ ಬಿ.ಎಮ್ ರಸ್ತೆಯಲ್ಲಿರುವ ರೈಲ್ವೇ ನಿಲ್ದಾಣದ ಎದುರು ಕೆ.ಎಸ್.ಆರ್.ಟಿ.ಸಿ. ಶ್ರೀ ಆಂಜನೇಯ ಸ್ವಾಮಿ ದೇವಾಸ್ಥಾನದಿಂದ ಆರಂಭಗೊಂಡು ಶಂಕರಿಮಠ ರಸ್ತೆಯಿಂದ ಮಹಾತ್ಮ ಗಾಂಧಿ ರಸ್ತೆಯ ಮೂಲಕ ತನ್ವಿತ್ರಿಷಾ ಕಲ್ಯಾಣ ಮಂಟಪ ಸರ್ಕಲ್ನಿಂದ ಸುಬೇದಾರ್ ನಾಗೇಶ್ ವೃತ್ತ, ಮಹಾವೀರ ವೃತ್ತ ಮಾರ್ಗವಾಗಿ ಹೇಮಾವತಿ ಪ್ರತಿಮೆ ಎನ್ .ಆರ್ ಸರ್ಕಲ್, ಮೂಲಕ ಬಿ.ಎಮ್ ರಸ್ತೆಯಿಂದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ವಾರ್ ಮೆಮೋರಿಯಲ್ ಹಾಲ್, ಕುವೆಂಪುನಗರದಲ್ಲಿ ಅಂತ್ಯಗೊಳ್ಳುವುದು ಎಂದು ಹೇಳಿದರು.
ನಾವು ಸೈನಿಕ ವೃತ್ತಿಯಿಂದ ನಿವೃತ್ತರಾಗಿರಬಹುದು ಆದರೇ ತುರ್ತು ಪರಿಸ್ಥಿತಿ ಬಂದು ಮತ್ತೆ ಯುದ್ಧಕ್ಕೆ ಕಾರ್ಯಪ್ರವೃತ್ತರಾಗಲು ಕರೆ ಕೊಟ್ಟರೇ ದೇಶಕ್ಕಾಗಿ ನಾವೆಲ್ಲಾ ಸಿದ್ಧರಿದ್ದೇವೆ. ಇನ್ನು ತುರ್ತು ಪರಿಸ್ಥಿತಿ ವೇಳೆ ದೇಶದ ಒಳಗಿರುವ ಜನರ ಸುರಕ್ಷತೆಗಾಗಿ ಕಾಲೇಜು ವಿದ್ಯಾರ್ಥಿಗಳೂ ಸಿದ್ಧರಾಗಲು ಹಾಗೂ ರಕ್ಷಣೆಗೆ ಏನು ಮಾಡಬಹುದು ಬಗ್ಗೆ ತರಬೇತಿ ನೀಡಲು ಜಿಲ್ಲಾಧಿಕಾರಿಗಳ ಬಳಿ ಹೋಗಿ ತಿಳಿಸಲಾಗವುದು ಅವರು ಒಪ್ಪಿಗೆ ಕೊಟ್ಟರೇ ಕಾರ್ಯಕ್ರಮ ರೂಪಿಸಲು ಸಿದ್ಧರಿದ್ದೇವೆ ಎಂದು ಮಾಹಿತಿ ನೀಡಿದರು. ಇದೆ ವೇಳೆ ರಾಷ್ಟ್ರೀಯ ಮಾಜಿ ಸೈನಿಕರ ಸಮನ್ವಯ ಸಮಿತಿಯ ತಾಲೂಕು ಅಧ್ಯಕ್ಷ ಕರೀಗೌಡ, ಉಪಾಧ್ಯಕ್ಷ ರಮೇಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಯೋಗರಾಜು, ಕಾಳೇಗೌಡ, ಮಾಜಿ ಜಿಲ್ಲಾಧ್ಯಕ್ಷ ನಾಗರಾಜು, ಗಂಗಾಧರ್, ಖಜಾಂಚಿ ತಿಮ್ಮೇಗೌಡ ಇತರರು ಉಪಸ್ಥಿತರಿದ್ದರು.