ಪಾರ್ಲಿಮೆಂಟ್ ಉದ್ಘಾಟನೆಗೆ ವೈದಿಕರನ್ನು ಕರೆಸುವ ಪ್ರಧಾನಿ ನಮಗೆ ಬೇಕಿಲ್ಲ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಹೇಳಿದ್ದಾರೆ.
ಮಾಧ್ಯಮ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಅವರು, “ಪಾರ್ಲಿಮೆಂಟ್ ಉದ್ಘಾಟನೆಗೆ ಪುರೋಹಿತರು, ಮಾಂತ್ರಿಕರು ಹಾಗೂ ವೈದಿಕ ಬ್ರಾಹ್ಮಣರನ್ನು ಕರೆಸುವ ಮೂಲಕ ಪ್ರಧಾನಿ ಮೋದಿ ಸಂವಿಧಾನಕ್ಕೆ ಅಪಚಾರ ಎಸಗಿದ್ದಾರೆ ಇಂತವರು ದೇಶದ ಪ್ರಧಾನಿಯಾಗುವ ಅವಶ್ಯಕತೆ ಏನಿದೆ. ಇಂತಹ ಪ್ರಧಾನಿ ನಮಗೆ ಬೇಕೆ?” ಎಂದು ಪ್ರಶ್ನಿಸಿದ್ದಾರೆ.
ದೇಶದ ಸಂವಿಧಾನದ ನಿಜವಾದ ವಾರಸುದಾರರಾದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಉದ್ಘಾಟನೆಯಿಂದ ದೂರವಿಟ್ಟ ಇಂತಹ ಪ್ರಧಾನಿಯನ್ನು ಭಾರತದ ಜನರು ದೂರವಿಡಬೇಕು ಎಂದು ಅವರು ಮನವಿ ಮಾಡಿದ್ದಾರೆ. ಓರ್ವ ಆದಿವಾಸಿ ಮಹಿಳೆ ರಾಷ್ಟ್ರಪತಿಯಾಗಿದ್ದು ಅವರನ್ನು ಉದ್ಘಾಟನೆಯಿಂದ ದೂರವಿಡುವಂತಹ ಪ್ರಧಾನಿ ನಮಗೆ ಬೇಕಿಲ್ಲ ಎಂದು ಅವರು ಕಿಡಿ ಕಾರಿದ್ದಾರೆ.
ಇಂತಹ ಮಾಂತ್ರಿಕ, ಮಂತ್ರವಾದಿ ಪ್ರಧಾನಿ ನಮಗೆ ಬೇಕೆ ಎನ್ನುವುದನ್ನು ನಮಗೆ ನಾವೇ ಕೇಳಿಕೊಳ್ಳಬೇಕಿದೆ ಎಂದೂ ಅವರು ಹೇಳಿದ್ದಾರೆ.
ನಮಗೆ ಬೇಕಾಗಿರುವುದು ಪ್ರಜಾಸತ್ತಾತ್ಮಕ ಆಡಳಿತ ನೀಡಬಲ್ಲ ನಾಯಕ. ಆದರೆ ಸಿಕ್ಕಿರುವುದು ಪೂಜಾರಿಗಳಿಗೆ, ಪುರೋಹಿತರುಗಳಿಗೆ ಮಂತ್ರವಾದಿಗಳಿಗೆ ಕಾಲಿಗೆ ಬೀಳುವ ಪ್ರಧಾನಿ ಎನ್ನುವುದು ವಿಪರ್ಯಾಸ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
2024ರ ಚುನಾವಣೆ ಭಾರತದ ಅಸ್ತಿತ್ವದ ಪ್ರಶ್ನೆಯಾಗಿದ್ದು ಜನರು ಬಿಜೆಪಿ ಮತ್ತು RSS ಸಂಘಟನೆಯನ್ನು ಅಧಿಕಾರದಿಂದ ದೂರವಿಡುವ ನಿಟ್ಟಿನಲ್ಲಿ ಮತ ಚಲಾಯಿಸಬೇಕಿದೆ ಎಂದು ಅವರು ಕರೆ ನೀಡಿದ್ದಾರೆ. ಭಾರತದ ಸಂವಿಧಾನಕ್ಕೆ ಅಪಚಾರ ಎಸಗುವಂತಹ ಪ್ರಧಾನಿಯನ್ನು ದೇಶದ ಜನರು ಅಧಿಕಾರದಿಂದ ಕೆಳಗಿಳಿಸಬೇಕಿದೆ ಎಂದು ಅವರು ಹೇಳಿದ್ದಾರೆ.