ಹುಬ್ಬಳ್ಳಿ: ಇಂದಿನ ಕವಿಗಳನ್ನು ನೋಡುತ್ತಿದ್ದರೆ ಪ್ರಮಾಣದ ದೃಷ್ಟಿಯಿಂದ ಹೆಚ್ಚು, ಗುಣಾತ್ಮಕ ದೃಷ್ಟಿಯಿಂದ ಕಡಿಮೆ ಸಾಹಿತ್ಯ ಹುಟ್ಟುತ್ತಿದೆ. ಕಾವ್ಯ ಇವತ್ತು ಪ್ರಕಾರ ಮಾತ್ರ ಹಿಂದೆ ಪರಿಕಲ್ಪನೆ ಆಗಿತ್ತು.
ಸಂಯುಕ್ತ ಕರ್ನಾಟಕದಲ್ಲಿ ಹತ್ತು ದಿನ ಕೆಲಸ ಮಾಡಿ ಅಲ್ಲಿನ ಬ್ರಾಹ್ಮಣ್ಯಕ್ಕೆ ರೋಸಿ ಹೊರಗೆ ಬಂದು, ಬೇರೆ ಕಡೆ ಒಂದು ವರ್ಷ ಪತ್ರಿಕೆಯಲ್ಲಿ ಕೆಲಸ ಮಾಡಿ ಇಂದು ಉಪನ್ಯಾಸಕನಾಗಿ ಕಾವ್ಯ ಮತ್ತು ಸಾಮಾಜಿಕ ಬದ್ಧತೆಯ ಕುರಿತು ಮಾತನಾಡಲು ಇಲ್ಲಿದ್ದೇನೆ ಎಂದು ಡಾ. ರಂಗನಾಥ ಕಂಟನಕುಂಟೆ ಹೇಳಿದರು.
ತಾಲೂಕು ಕಸಾಪ ಹುಬ್ಬಳ್ಳಿ ನಗರ ಹಾಗೂ ನಾಗಸುಧೆ ಜಗುಲಿಯ ಸಹಯೋಗದಲ್ಲಿ ನಡೆಸಿದ “ಕಾವ್ಯ ಮತ್ತು ಸಾಮಾಜಿಕ ಬದ್ಧತೆ” ನಾಗಸುಧೆ ದತ್ತಿ ಉಪನ್ಯಾಸ ಮಾಡುತ್ತಾ, ಇವತ್ತು ಸಮಾಜ ಎನ್ನುವುದೊಂದು ಇದೆಯೇ? ಕುಟುಂಬವೊಂದು ಅನ್ನೋದು ಇದೆಯೇ? ಎಂಬ ಮೂಲಭೂತ ಪ್ರಶ್ನೆಯನ್ನು ಹಾಕಿಕೊಳ್ಳಬೇಕಿದೆ. ಇದೆಲ್ಲವೂ ಫೂಲೀಸ್ ಪ್ರಶ್ನೆಗಳು ಎನಿಸಿದರೆ ನಾನೇನೂ ಮಾಡಕ್ಕಾಗುತ್ತದೆ. ನಮ್ಮ ಸಂಬಂಧಗಳನ್ನು ನಿರ್ಧರಿಸುತ್ತಿರುವುದು ಏನು? ಹಳ್ಳಿಗಳು ಒಂದಾಗಿವೆ ಎಂದು ನಾನು ಒಪ್ಪಲ್ಲ. ಅಲ್ಲಿ ದ್ವೇಷ, ಅಸೂಹೆ ತುಂಬಿ ತುಳುಕುತ್ತಿದೆ. 30-40 ವರ್ಷಗಳಿಂದ ಇಂತಹ ಪಲ್ಲಟ ಬಂದೊದಗಿದೆ. ನಮ್ಮೊಳಗಿನ ಕವಿ, ಕಲಾವಿದ, ಏನು ಆಲೋಚಿಸುತ್ತಾನೆ. ಸಾಮಾಜಿಕ ಬದ್ಧತೆಯನ್ನು ಮಾತನಾಡುವ ಜನರೇ ಹಿಂದೆ ಸರಿಯುತ್ತಿದ್ದಾರೆ. ಕವಿ, ಕಲಾವಿದ, ಲೇಖಕ ಆಗಬೇಕಾಗುವುದರ ಉದ್ದೇಶ ಮನುಷ್ಯನಾಗುವುದು ಎಂದರ್ಥ. ಇಂದಿನ ಎಲ್ಲರಿಗೂ ಬೇರೆ ಬೇರೆ ಆರ್ಥಿಕವಾಗಿಯೂ ಬೇರೆನೋ ಸಮಸ್ಯೆ ಇದೆ. ಹಾಗಾದರೆ ಡಿಕ್ಟೆಟರ್ ಯಾರು? ಹೊಸಕಾಲಕ್ಕೆ ಹೊಸಸಾಹಿತ್ಯ ಸೃಷ್ಟಿ ಎಂದು ಇಪ್ಪತ್ತನೇ ಶತಮಾನದಲ್ಲಿ ಕುವೆಂಪುರವರು ಹೇಳಿದ್ದಾರೆ. ನಾವು ಇಪ್ಪತ್ತೊಂದನೇ ಶತಮಾನದಲ್ಲಿ ಇದ್ದೇವೆ ಎಂಥಾ ಸಾಹಿತ್ಯ ಈಗ ಹುಟ್ಟುತ್ತಿದೆ ಎಂದು ಕಳವಳವ್ಯಕ್ತಪಡಿಸಿದರು.
ಈಗ ಹೋರಾಟದ ಸಾಹಿತ್ಯದ ಮನೋಭಾವನೆ ಕಡಿಮೆ ಆಗಿದೆ. ಗ್ರಂಥಾಲಯಕ್ಕಾಗಿ ಬರೆಯುವ ಕವಿಗಳು, ಸಾಹಿತಿಗಳು ನಮ್ಮಲ್ಲಿ ಇದ್ದಾರೆಂದು ಬೇಸರಪಡುತ್ತಾ, ಸಾಹಿತ್ಯ ಪರಿಷತ್ತಿನ ದತ್ತಿ ಉಪನ್ಯಾಸದ ಮಾದರಿ ಇದು. ಮುಂದೆ ಬರುವ ದತ್ತಿ ಉಪನ್ಯಾಸಗಳನ್ನು ಮಾರ್ಪಾಡು ಮಾಡಿ ಈ ತರಹ ಏರ್ಪಡಿಸಲು ಪ್ರಯತ್ನಿಸುತ್ತೇವೆ ಎಂದು ಧಾರವಾಡ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪ್ರೊ. ಕೆ. ಎಸ್ ಕೌಜಲಗಿ ಹೇಳಿದರು.
ಡಾ. ರಂಗನಾಥ ಕಂಟನಕುಂಟೆ ಅವರ ಈ ಚಿಂತನಾಶೀಲ ಉಪನ್ಯಾಸವು ಸಂವಾದ ರೂಪದಲ್ಲಿ ಮುಗಿಯಿತು. ಮೊದಲಿಗೆ ಜಿಲ್ಲಾ ಕಸಾಪ ಅಧ್ಯಕ್ಷರನ್ನು, ನಿಮ್ಮ ಆಂತರಿಕ ಸಭೆಗಳಲ್ಲಿ ಸಾಹಿತಿಗಳಲ್ಲದವರನ್ನು ಅ.ಭಾ.ಕ.ಸಾ.ಸ ಅಧ್ಯಕ್ಷರ ಆಯ್ಕೆಯ ಕುರಿತು ಸಾಹಿತ್ಯೇತರ ಹೆಸರು ಮುನ್ನೆಲೆಗೆ ಬಂದಾಗ ಯಾವ ತರಹ ನಿಮ್ಮ ರಾಜ್ಯಾಧ್ಯಕ್ಷರ ಮುಂದೆ ಭಿನ್ನಮತ ದಾಖಲಿಸಿದ್ದೀರಿ ಎಂದಾಗ ಡಾ. ಲಿಂಗರಾಜ ಅಂಗಡಿ ಅವರು ನಾವು ಎಲ್ಲಾ ಜಿಲ್ಲಾಧ್ಯಕ್ಷರು ಇದನ್ನು ಪ್ರಶ್ನಿಸಿದ್ದೇವೆ. ಸಾರ್ವಜನಿಕರ ಅಭಿಪ್ರಾಯ ನನ್ನ ಗಮನಕ್ಕೆ ಬಂತು, ಹಾಗಾಗಿ ಚರ್ಚೆಗೆ ಈ ವಿಷಯ ಬಿಟ್ಟಿದ್ದೇನೆಂದು, ಇದು ನನ್ನ ಪ್ರಶ್ನೆಯಲ್ಲ ಎಂದು ನಮ್ಮ ಸಭೆಗಳಲ್ಲಿ ಡಾ. ಮಹೇಶ ಜೋಷಿ ಅವರು ತಿಳಿಸಿದ್ದಾರೆಂದು, ಟೀಕೆ-ಟಿಪ್ಪಣಿಗಳು ಇಲ್ಲಿ ಬೇಡ ಕಾರ್ಯಕ್ರಮ, ಉಪನ್ಯಾಸ ಈಗ ದಯವಿಟ್ಟು ಮುಂದುವರೆಯಲಿ ಎಂದು ವಿನಂತಿಸಿದರು. ಸಭಿಕರೊಬ್ಬರು ಇದಕ್ಕೆ ಧ್ವನಿಗೂಡಿಸಿ ಅದು ಇಲ್ಲಿ ಬೇಡ, ಕಾರ್ಯಕ್ರಮ ಮುಂದುವರೆಸಿ ಎಂದಾಗ ಉಪನ್ಯಾಸ ನೀಡಲು ಬಂದ ಡಾ. ರಂಗನಾಥ ಕಂಟನಕುಂಟೆ ಅವರು ಆಯ್ತು ಸಾಹಿತ್ಯ ಪರಿಷತ್ತಿನ ಪ್ರಶ್ನೆಯನ್ನು ನಾವೇ ಕೇಳಿಕೊಳ್ಳಬೇಕಾಗಿದೆ ಎಂದು ಅಲ್ಲಿಗೆ ಆ ಪ್ರಶ್ನೆಯ ಬಿಟ್ಟು ಮುಖ್ಯವಿಷಯದ ಉಪನ್ಯಾಸವನ್ನು ಅದ್ಭುತವಾಗಿ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಧೀಮಂತ ವ್ಯಕ್ತಿ ಗೌರವಕ್ಕೆ ಪಾತ್ರರಾಗಿದ್ದ ಪ್ರಕಾಶ ಕಡಮೆ ಅವರನ್ನು ದಂಪತಿಗಳೊಂದಿಗೆ ಜಿಲ್ಲಾ ಕಸಾಪವು ಸನ್ಮಾನಿಸಿ ಗೌರವಿಸಿತು. ಕವಿಗೋಷ್ಠಿಯಲ್ಲಿ ಡಾ. ಭಾಗ್ಯಜ್ಯೋತಿ ಗುಡಗೇರಿ, ಮಹಾಂತಪ್ಪ ನಂದೂರ, ಡಾ. ಚಿದಾನಂದ ಕಮ್ಮಾರ, ನಿರ್ಮಲಾ ಶೆಟ್ಟರ್, ತೇಜಾವತಿ ಎಚ್. ಡಿ, ರಂಜಾನ ಕಿಲ್ಲೇದಾರ ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆ ವಿರುಪಾಕ್ಷ ಕಟ್ಟಿಮನಿ ನೆರವೇರಿಸಿದರು.