ಒಂದೇ ಒಲಿಂಪಿಕ್ಸ್ನಲ್ಲಿ ಎರಡು ಪದಕಗಳನ್ನು ಗೆದ್ದ ದೇಶದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಮನು ಬಾಕರ್ ಅವರು ತಮ್ಮನ್ನು ದೇಶದ ಅತ್ಯುನ್ನತ ಕ್ರೀಡಾ ಗೌರವಕ್ಕೆ ಪರಿಗಣಿಸದಿದ್ದಕ್ಕಾಗಿ ನಿರಾಶೆಗೊಂಡಿದ್ದಾರೆ. ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರೂ ದೂರವಿಟ್ಟ ಬಗ್ಗೆ ಆಶ್ಚರ್ಯ ಮತ್ತು ಪ್ರಶಸ್ತಿ ಆಯ್ಕೆ ಸಮಿತಿ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಎರಡು ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ ಭಾರತದ ಅಗ್ರ ಶೂಟರ್ ಮನು ಭಾಕರ್ ಈ ಎಲ್ಲಾ ಬೆಳವಣಿಗೆಯಿಂದ ಬೇಸರಗೊಂಡು ನಾನು ದೇಶಕ್ಕಾಗಿ ಪದಕ ಗೆದ್ದದ್ದೇ ತಪ್ಪಾಯ್ತಾ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದೇ ವಿಚಾರವಾಗಿ ಮನು ಭಾಕರ್ ತಂದೆ ಕ್ರೀಡಾ ಸಚಿವಾಲಯ ಮತ್ತು ಖೇಲ್ ರತ್ನ ನಾಮನಿರ್ದೇಶಿತರ ಪಟ್ಟಿಯನ್ನು ಅಂತಿಮಗೊಳಿಸುವ ಸಮಿತಿಯ ಮೇಲೆ ಆರೋಪಿಸಿದ್ದಾರೆ. ಹಾಗೆಯೇ ಮನು ಭಾಕರ್ ಅವರು ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿಲ್ಲ ಎಂಬ ಕ್ರೀಡಾ ಸಚಿವಾಲಯದ ಆರೋಪವನ್ನು ಅಲ್ಲಗಳೆದಿದ್ದಾರೆ.
ಮನುವನ್ನು ಶೂಟಿಂಗ್ನಂತಹ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಪಶ್ಚಾತ್ತಾಪ ಪಡುತ್ತೇನೆ ಎಂದು ಮನು ಬಾಕರ್ ಅವರ ತಂದೆ ರಾಮ್ ಕಿಶನ್ ಹೇಳಿದ್ದಾರೆ. ಬದಲಾಗಿ ಮನುವನ್ನು ಕ್ರಿಕೆಟಿಗನನ್ನಾಗಿ ಮಾಡಬೇಕಿತ್ತು. ಶೂಟಿಂಗ್ ಕ್ರೀಡೆಯನ್ನು ತೆಗೆದುಕೊಳ್ಳಲು ಅವರನ್ನು ಪ್ರೇರೇಪಿಸಿದಕ್ಕಾಗಿ ನಾನು ವಿಷಾದಿಸುತ್ತೇನೆ. ಬದಲಿಗೆ ಮನುವನ್ನು ಕ್ರಿಕೆಟಿಗೆ ಸೇರಿಸಬೇಕಿತ್ತು, ಆಗ ಪ್ರಶಸ್ತಿ, ಪುರಸ್ಕಾರಗಳೆಲ್ಲ ಅವರ ಪಾಲಾಗುತ್ತಿದ್ದವು ಎಂದು ಹೇಳಿದ್ದಾರೆ.
ನನ್ನ ಮಗು ದೇಶಕ್ಕಾಗಿ ಇನ್ನೇನು ಮಾಡಬೇಕೆಂದು ನೀವು ನಿರೀಕ್ಷಿಸುತ್ತೀರಿ? ಅವರ ಶ್ರಮವನ್ನು ಸರ್ಕಾರ ಗುರುತಿಸಿ ಗಮನಹರಿಸಬೇಕು ಎಂದಿದ್ದಾರೆ. ಅಲ್ಲದೆ ಮನು ಭಾಕರ್ ಬಳಿ ಈ ಬಗ್ಗೆ ಮಾತನಾಡಿದ್ದಾಗಿ ಹೇಳಿದ ಅವರು, ಅವಳು ಈ ಎಲ್ಲದರಿಂದ ನಿರಾಶೆಗೊಂಡಿದ್ದಾಳೆ. ನಾನು ಒಲಿಂಪಿಕ್ಸ್ಗೆ ಹೋಗಿ ದೇಶಕ್ಕಾಗಿ ಪದಕಗಳನ್ನು ಗೆಲ್ಲಬಾರದಿತ್ತು. ಅಥ್ಲೀಟ್ ಆಗಬಾರದಿತ್ತು ಅಂತ ಹೇಳಿದರು ಎಂಬುದಾಗಿ ತಿಳಿಸಿದರು.
ಈ ನಡುವೆ ಮನು ಬಾಕರ್ ಪುರಸ್ಕಾರ ವಂಚಿತರಾಗಲು ಇನ್ನೊಂದು ಕಾರಣ ಕೂಡ ಈಗ ಎಲ್ಲೆಡೆ ಅನುಮಾನ ವ್ಯಕ್ತವಾಗಿದೆ. ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಮನು ಬಾಕರ್ ಕಾಂಗ್ರೆಸ್ ನಾಯಕರು ಅವರನ್ನು ಅಭಿನಂದಿಸಿದ ಫೋಟೋ ಹಂಚಿಕೊಂಡಿದ್ದರು. ಪ್ರಶಸ್ತಿ ಕೈ ತಪ್ಪಲು ಇದೂ ಸಹ ಕಾರಣ ಎನ್ನಲಾಗಿದೆ.