Home ರಾಜ್ಯ ಬಳ್ಳಾರಿ ಪೆಂಟಾವೆಲೆಂಟ್ ಲಸಿಕೆ ಮೂಲಕ ಶಿಶುವನ್ನು ಮಾರಕ ರೋಗಗಳಿಂದ ರಕ್ಷಿಸಿ: ಡಾ.ಯಲ್ಲಾ ರಮೇಶ್ ಬಾಬು

ಪೆಂಟಾವೆಲೆಂಟ್ ಲಸಿಕೆ ಮೂಲಕ ಶಿಶುವನ್ನು ಮಾರಕ ರೋಗಗಳಿಂದ ರಕ್ಷಿಸಿ: ಡಾ.ಯಲ್ಲಾ ರಮೇಶ್ ಬಾಬು

0

ಬಳ್ಳಾರಿ: ಜನನವಾದ 45 ದಿನಗಳ ಅವಧಿಯಲ್ಲಿ ಶಿಶುವಿಗೆ ಪೆಂಟಾವೆಲೆಂಟ್ ಲಸಿಕೆಯನ್ನು ಹಾಕಿಸುವ ಮೂಲಕ ಮಾರಕ ರೋಗಗಳು ತಡೆಗಟ್ಟಲು ಪಾಲಕರು ಕೈ ಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ದೇವಿನಗರ ಇವರ ಸಂಯುಕ್ತಾಶ್ರಯದಲ್ಲಿ ದೇವಿನಗರ ಅಂಗನವಾಡಿ ಕೇಂದ್ರದಲ್ಲಿ ಡಿಸೆಂಬರ್ 31 ರವರೆಗೆ ಜರುಗುವ ಪೆಂಟಾವೆಲೆಂಟ್ ಲಸಿಕೆ ವಿಶೇಷ ಅಭಿಯಾನದ ಚಾಲನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.‌


ಬಾಲ್ಯದಲ್ಲಿ ಕಂಡು ಬರುವ ಮಾರಕ ಕಾಯಿಲೆಗಳಿಂದ ಮಕ್ಕಳ ಆರೋಗ್ಯದ ದೃಷ್ಟಿಯಿಂದ 12 ಮಾರಕ ರೋಗಗಳಿಗೆ ಸಂಬಂಧಿಸಿದ ಲಸಿಕೆಗಳನ್ನು ಮಕ್ಕಳಿಗೆ ನೆಗಡಿ, ಕೆಮ್ಮು ಸಾಧಾರಣ ಜ್ವರ ಇದ್ದರೂ ಸಹ ಯಾವುದೇ ಹಿಂಜರಿಕೆಯಿಲ್ಲದೆ ಲಸಿಕೆ ಹಾಕಿಸುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ತಪ್ಪದೇ ಪಾಲಕರು ಲಸಿಕೆಗಳನ್ನು ಹಾಕಿಸಬೇಕು ಎಂದು ಕೋರಿದರು.


ಒಂದು ಚುಚ್ಚುಮದ್ದು ನೀಡುವ ಮೂಲಕ 5 ರೋಗಗಳನ್ನು ತಡೆಗಟ್ಟಲು ಸಹಾಯಕವಾಗುವ ಪೆಂಟಾವೆಲೆಂಟ್ ಲಸಿಕೆಯನ್ನು ಮಗುವಿನ ಒಂದುವರೆ ತಿಂಗಳು, ಎರಡುವರೆ ತಿಂಗಳು ಹಾಗೂ ಮೂರುವರೆ ತಿಂಗಳು ವಯಸ್ಸಿನ ಅವಧಿಯಲ್ಲಿ ಹಾಕಿಸಬೇಕು. ಈ ಮೂಲಕ ಗಂಟಲು ಮಾರಿ, ನಾಯಿಕೆಮ್ಮು, ಧನುರ್ವಾಯು, ಯಕೃತ್ತಿನ ಉರಿ ಮತ್ತು ಊತ, ಕಾಮಾಲೆ, ಹೆಚ್‌ಇನ್‌ಪ್ಲ್ಯುಯೆಂಜಾ ಬಿ, ಮೆದುಳು ರೋಗ ಮೆನಂಜೆಟೀಸ್ ರೋಗಗಳನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ ಎಂದು ಅವರು ತಿಳಿಸಿದರು.
ಮಕ್ಕಳ ಸದೃಢ ಆರೋಗ್ಯಕ್ಕಾಗಿ ತಪ್ಪದೇ ಲಸಿಕೆಗಳನ್ನು ಹಾಕಿಸಬೇಕು. ಒಂದು ವರ್ಷದ ಒಳಗಡೆ ಮಗುವಿಗೆ ಪೆಂಟಾವೆಲೆಂಟ್ ಲಸಿಕೆ ಹಾಕಿಸದೇ ಇದ್ದರೂ ಸಹ ತಪ್ಪದೇ ಲಸಿಕೆ ಹಾಕಿಸಲು ವಿನಂತಿಸಿದರು.
ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಹನುಮಂತಪ್ಪ ಅವರು ಮಾತನಾಡಿ, ಮಗುವಿಗೆ ಹುಟ್ಟಿದ ತಕ್ಷಣ ಪೋಲಿಯೋ, ಹೆಪಟೈಟಿಸ್ ಬಿ, ಬಾಲಕ್ಷಯ ರೋಗ ತಡೆಗಟ್ಟಲು ಲಸಿಕೆಗಳನ್ನು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಕಲಾಗುತ್ತಿದೆ ಎಂದು ಹೇಳಿದರು.


ಮಗುವಿನ ಒಂದುವರೆ ತಿಂಗಳು, ಎರಡುವರೆ ತಿಂಗಳು ಹಾಗೂ ಮೂರುವರೆ ತಿಂಗಳು ವಯಸ್ಸಿನ ಅವಧಿಯಲ್ಲಿ ಅತಿಸಾರಬೇಧಿಗೆ ರೋಟಾವೈರಸ್, ನಿಮೋಕಾಕಲ್ ಲಸಿಕೆ, ಪೆಂಟಾವಲೆAಟ್ ಹಾಗೂ ಪೋಲಿಯೋ ಲಸಿಕೆಯನ್ನು ಬಾಯಿ ಮೂಲಕ ಹಾಗೂ ಚುಚ್ಚುಮದ್ದು ಮೂಲಕ ನೀಡಲಾಗುತ್ತದೆ ಎಂದರು.


ಮಗುವಿಗೆ 9 ತಿಂಗಳು ತುಂಬಿದ ನಂತರ ಮೆದುಳು ಜ್ವರ ರೋಗಕ್ಕೆ ಜಾಪನೀಸ್ ಎನ್ಸ್ಪಲಿಟಿಸ್ ಲಸಿಕೆ, ದಡಾರ ರೂಬೇಲ್ಲಾ ರೋಗಕ್ಕೆ ಮಿಸಲ್ಸ್ ರೂಬೆಲ್ಲಾ ಲಸಿಕೆ ಮತ್ತು ಸಂಜೆಯ ಹೊತ್ತು ಕಂಡುಬರುವ ಇರುಳುಗಣ್ಣು ರೋಗಕ್ಕೆ ವಿಟಾಮಿನ್-ಎ ಅನ್ನಾಂಗ ದ್ರಾವಣ ನೀಡಲಾಗುತ್ತದೆ. ಇವೆಲ್ಲವುಗಳನ್ನು ಮಗುವಿನ ಒಂದು ವರ್ಷದೊಳಗೆ ಹಾಕಲಾಗುತ್ತಿದ್ದು, ಇವುಗಳನ್ನು ತಪ್ಪದೆ ಆರೋಗ್ಯ ಕೇಂದ್ರಗಳಲ್ಲಿ ಪಡೆದುಕೊಳ್ಳಬೇಕು. ಗ್ರಾಮ ವಾರ್ಡ್ಗಳಲ್ಲಿ ಪ್ರತಿ ಗುರುವಾರ ಹಾಕುವ ಬಗ್ಗೆ ಹೆಚ್ಚು ಜಾಗೃತಿ ನೀಡಬೇಕು ಎಂದು ಸೂಚಿಸಿದರು.


ಈ ಸಂದರ್ಭದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ.ಸುರೇಖ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್.ದಾಸಪ್ಪನವರ, ಡಿಎನ್‌ಒ ಗಿರೀಶ್, ಪಿಹೆಚ್‌ಸಿಒ ಕಾವ್ಯ, ಹೆಚ್‌ಐಒ ರಾಮಕೃಷ್ಣ, ಆಶಾಕಾರ್ಯಕರ್ತೆ ಹೈಯತುನ್ನೀಸ, ಅಂಗನವಾಡಿ ಕಾರ್ಯಕರ್ತೆ ಮರಿಯಮ್ಮ ಸೇರಿದಂತೆ ತಾಯಂದಿರು ಹಾಗೂ ಇನ್ನೀತರರು ಉಪಸ್ಥಿತರಿದ್ದರು.

You cannot copy content of this page

Exit mobile version