ದೆಹಲಿ: ಗೋದಿ ಬೆಳೆಯುವ ರಾಷ್ಟ್ರಗಳಲ್ಲಿನ ಯುದ್ಧದ ಸನ್ನಿವೇಶ ಮತ್ತು ಹವಮಾನ ವೈಪರೀತ್ಯದಿಂದಾಗಿ ಜಗತ್ತು ಬಳಲುತ್ತಿರುವ ಸಮಯದಲ್ಲಿ ಆಹಾರಕ್ಕೆ ಸಂಬಂಧಿಸಿದಂತೆ ದೇಶದ ರಾಜಧಾನಿಯಿಂದ ಆತಂಕಕಾರಿ ಸುದ್ದಿಯೊಂದು ಬಂದಿದೆ. ದೇಶದ ಗೋಧಿ ದಾಸ್ತಾನು ಏಳು ವರ್ಷಗಳಲ್ಲೇ ಅತಿ ಕನಿಷ್ಠ ಮಟ್ಟಕ್ಕೆ ಇಳಿದೆ. ಅಕ್ಕಿಯ ಬೆಲೆ ಗಗನಕ್ಕೇರಿರುವ ಸಮಯದಲ್ಲಿ ಈ ಸುದ್ದಿ ದೇಶದ ಜನಸಾಮಾನ್ಯರಲ್ಲಿ ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.
ಭಾರತೀಯ ಆಹಾರ ನಿಗಮ (ಎಫ್ಸಿಐ) ಮತ್ತು ರಾಜ್ಯ ಆಹಾರ ಏಜೆನ್ಸಿಗಳ ಅಂಕಿಅಂಶಗಳ ಪ್ರಕಾರ, ಜನವರಿ 1ರ ಹೊತ್ತಿಗೆ ದೇಶಾದ್ಯಂತ ಕೇಂದ್ರ ಸರ್ಕಾರದ ಗೋದಾಮುಗಳಲ್ಲಿ 163.53 ಲಕ್ಷ ಟನ್ ಗೋಧಿ ದಾಸ್ತಾನು ಇದೆ. 2017ರ ನಂತರ ಈ ಮಟ್ಟಕ್ಕೆ ಮೀಸಲು ಕುಸಿದಿರುವುದು ಇದೇ ಮೊದಲು. ಗೋಧಿ ದಾಸ್ತಾನುಗಳ ಕನಿಷ್ಠ ಬಫರ್ ಮಟ್ಟವನ್ನು 138 ಲಕ್ಷ ಟನ್ಗಳಿಗೆ ನಿಗದಿಪಡಿಸಲಾಗಿದೆ.

ಗೋಧಿ ದಾಸ್ತಾನು ಪ್ರಸ್ತುತ ಬಫರ್ ಮಟ್ಟಕ್ಕಿಂತ ಹೆಚ್ಚಿದೆ. ಆದರೆ, ಉಕ್ರೇನ್-ರಷ್ಯಾ, ಇಸ್ರೇಲ್-ಹಮಾಸ್, ಇರಾನ್-ಪಾಕ್ ದೇಶಗಳ ನಡುವೆ ನಡೆಯುತ್ತಿರುವ ಬಿಕ್ಕಟ್ಟು ಹಲವು ದೇಶಗಳ ರಫ್ತು ಮತ್ತು ಆಮದಿನ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಇದಲ್ಲದೇ ಹಣದುಬ್ಬರದ ಭೀತಿಯೂ ದೇಶವನ್ನು ಕಾಡುತ್ತಿದೆ. ದೇಶದಲ್ಲಿ ಗೋಧಿ ಕೊರತೆಯಾದರೆ ಅದು ಆಹಾರದ ಬಿಕ್ಕಟ್ಟಿಗೆ ಕಾರಣವಾಗಬಹುದು ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ. ಕೂಡಲೇ ಗೋಧಿ ದಾಸ್ತಾನು ಹೆಚ್ಚಿಸಬೇಕು ಎಂದು ಕೇಂದ್ರವನ್ನು ಒತ್ತಾಯಿಸುತ್ತಿದ್ದಾರೆ.