Home ಅಂಕಣ ಚುನಾವಣೆ ಪರ್ವಕಾಲದಲ್ಲಿ ಸುದ್ದಿಯಲ್ಲಿ ಇರಬೇಕಾದ್ದು EC, ಆದರೆ ಇಲ್ಲಿ ಸದ್ದಾಗುತ್ತಿರುವುದು ED – ಸುಹೇಲ್ ಅಹಮದ್,...

ಚುನಾವಣೆ ಪರ್ವಕಾಲದಲ್ಲಿ ಸುದ್ದಿಯಲ್ಲಿ ಇರಬೇಕಾದ್ದು EC, ಆದರೆ ಇಲ್ಲಿ ಸದ್ದಾಗುತ್ತಿರುವುದು ED – ಸುಹೇಲ್ ಅಹಮದ್, ಮಾಜಿ ಪೊಲೀಸ್ ಅಧಿಕಾರಿ

0

ಚುನಾವಣಾ ಆಯೋಗದ (EC) ಪರಮ ಧ್ಯೆಯ ಉದ್ದೇಶ ಭಯ ಮುಕ್ತ, ನ್ಯಾಯ ಸಮ್ಮತ, ಪಾರದರ್ಶಕ ಚುನಾವಣೆಗಳನ್ನು ನಡೆಸಿ ಸರ್ಕಾರಗಳನ್ನು ಸ್ಥಾಪಿಸಿಕೊಡುವುದು. ಅಂದರೆ ಎಲೆಕ್ಷನ್ ಕಮಿಷನ್ ಚುನಾವಣೆಯ ಪರ್ವಕಾಲದಲ್ಲಿ ಎಲ್ಲೆಡೆ ನೀತಿ ಸಂಹಿತೆ ಜಾರಿಯ ಅನುಷ್ಠಾನ ಸೇರಿದಂತೆ ಮುಕ್ತ ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆಗಳನ್ನು ನಡೆಸುವ ಜವಾಬ್ದಾರಿ ಮತ್ತು ಹೊಣೆಗಾರಿಕೆ.

ಚುನಾವಣೆ ಸಮಯದಲ್ಲಿ ಚುನಾವಣಾ ಆಯೋಗ ಸುದ್ದಿಯ ಬಹುತೇಕ ನಿರ್ವಾತವನ್ನು ಅಕ್ರಮಿಸಿ ವ್ಯಾಪಿಸಿಕೊಂಡು ಬಿಗಿ ಕ್ರಮಗಳು ಮತ್ತು ಕಟ್ಟು ನಿಟ್ಟಿನ ಆದೇಶಗಳಿಂದ ರಾಜಕೀಯ ಪಕ್ಷಗಳ ಆಟಾಟೋಪಗಳಿಗೆ ನಿಯಂತ್ರಣ ಹೇರಿ ಅಕ್ರಮಗಳಿಗೆ ಕಡಿವಾಣ ಹಾಕಿ ದ್ವೇಷ ಭಾಷಣ ಜಾತಿ ಧರ್ಮ ಹಣ ಹೆಂಡಕ್ಕೆ ಅಂಕುಶಗಳನ್ನು ಬಿಗಿದು ಹದ್ದು ಬಸ್ತಿನಲ್ಲಿಟ್ಟು ಚುನಾವಣೆಗಳನ್ನು ನಡೆಸಿ ಸರ್ಕಾರಗಳನ್ನು ಸ್ಥಾಪಿಸಿಕೊಡುವ ಜವಾಬ್ದಾರಿ ಮತ್ತು ಹೊಣೆಗಾರಿಕೆ ಚುನಾವಣಾ ಆಯೋಗದ್ದು.

ಆದರೆ ವಿರೋಧ ಪಕ್ಷಗಳ ಸದ್ದಡಗಿಸಿ ಸದ್ದು ಮಾಡುತ್ತಿರುವುದು ಮಾತ್ರ ED (ಜಾರಿ ನಿರ್ದೇಶನಾಲಯ). ನಾವುಗಳು ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆ ನಡೆಸುವಾಗ EDಯ ಬಗ್ಗೆ ತಿಳಿದುಕೊಂಡಿದ್ದು ತುಂಬಾ ಸಂಕ್ಷಿಪ್ತ ಮಾಹಿತಿ ಅದರ ನೈಜ ಕಾರ್ಯ ಸ್ವರೂಪ ವ್ಯಾಪ್ತಿ ಅಧಿಕಾರ ಮತ್ತು ಕಾರ್ಯಗಳು ತುಂಬಾ ಸೀಮಿತವಾಗಿತ್ತು.

ಅಕ್ರಮ ಹಣ ವರ್ಗಾವಣೆ, ಹವಾಲಾ ದಂದೆ ಬಗ್ಗೆ ನಿಗಾವಣೆ ವಹಿಸಿ PMLA, FEMA FEOA ಕಾಯ್ದೆಗಳನ್ನು ಅನುಷ್ಠಾನಗೊಳಿಸುವ ಕಾನೂನು ಜಾರಿ ಮತ್ತು ಆರ್ಥಿಕ ವ್ಯವಹಾರಗಳ ಮಾಹಿತಿ ಸಂಗ್ರಹಿಸುವ ಗುಪ್ತದಳವಾಗಿ ED ಕೆಲಸ ಮಾಡುವುದಿದೆ.

ಆದರೆ ED ಸಂಸ್ಥೆ ಇತ್ತೀಚಿಗೆ ವಿಶೇಷವಾಗಿ ರಾಜಕೀಯ ಕಾರ್ಯಗಳತ್ತ ತನ್ನ ಕಾರ್ಯ ವೈಖರಿಯ ಸ್ವಭಾವ ಪ್ರಭಾವವನ್ನು ಮಾರ್ಪಾಡು ಮಾಡಿಕೊಂಡಂತಿದೆ.

ಸದ್ಯಕ್ಕೆ ED ಸಂಸ್ಥೆಯು ಚುನಾಯಿತ ಜನಾದೇಶ ಸರ್ಕಾರಗಳನ್ನು ಅಸ್ಥಿರಗೊಳಿಸಿ, ಕೆಡವಿ ಲೂಟಿಕೋರ ಜನಪ್ರತಿನಿಧಿಗಳನ್ನು ಹೆದರಿಸಿ, ಬೆದರಿಸಿ ಒಂದೆಡೆ ಗುಡ್ಡೆ ಹಾಕಿ ಅದರಲ್ಲೂ ವಿಶೇಷವಾಗಿ ವಿರೋಧಪಕ್ಷಗಳ ನಾಯಕರನ್ನು ಗುರಿ ಮಾಡಿ ದಾಳಿ ಮಾಡಿ ದೇಶದಾದ್ಯಂತ ‘ಒಂದು’ ರಾಜಕೀಯ ಪಕ್ಷದ ಅಧಿಕಾರ ಸಾಮ್ರಾಜ್ಯವನ್ನು ವಿಸ್ತರಣೆ ಮಾಡುತ್ತಿರುವ ಪ್ರಬಲ ಶಸ್ತ್ರ ರಹಿತ ಸೇನಾಪಡೆಯಾಗಿದೆ.

ಸಧ್ಯಕ್ಕೆ ED ಸಂಸ್ಥೆ ನವಭಾರತದ “The most powerful armless army”.

ಅಕ್ರಮ ಸಂಪಾದನೆ ತೆರಿಗೆಗಳ್ಳರನ್ನು ಲೂಟಿಕೊರರನ್ನು ಬಂಧಿಸುವುದು ಶಿಕ್ಷಿಸುವುದು ತಪ್ಪಲ್ಲ, ಒಂದು ದಿಟ್ಟ ಕ್ರಮವೇ ಸರಿ. ಆದರೆ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಪಕ್ಷಾಂತರ ಮಾಡಿದ ಮೇಲೆ ಅವರ ಆರೋಪಗಳ ವಿರುದ್ದ ಯಾವುದೇ ತಾರ್ಕಿಕ ಅಂತ್ಯ ಕಾಣಿಸದೇ ನಿಷ್ಕ್ರಿಯವಾಗಿ ಬಿಟ್ಟರೆ ಹೇಗೆ?

ಅಷ್ಟಕ್ಕೂ ಜನಸಾಮಾನ್ಯರೊಂದಿಗೆ ಹೆಚ್ಚು ನಿಕಟವಾಗಿರುವ ಚುನಾವಣಾ ಆಯೋಗಕ್ಕೆ ಚುನಾವಣೆ ಪೂರ್ವ ಅಭ್ಯರ್ಥಿಗಳ ಪೂರ್ವ ಪರದ ಬಗ್ಗೆ ಲಭ್ಯವಾಗದ ಮಾಹಿತಿ ಅಭ್ಯರ್ಥಿಗಳು ಚುನಾವಣೆ ಗೆದ್ದ ನಂತರ ED ಗೆ ಸಿಗುವುದು ಹೇಗೆ?

ಒಂದು ವೇಳೆ ಈ ಕಳ್ಳಕಾಕರ ಲೂಟಿಕೋರರ ಮಾಹಿತಿ ಮೊದಲೇ ಇದ್ದರೆ ಅವರಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುವುದಾದರೂ ಏಕೆ?

ಹಾಗಾದರೆ ED ಉದ್ದೇಶವೇನು? ಭ್ರಷ್ಟರು ಲೂಟಿಕೋರರು ಬೇರೆ ಬೇರೆ ಪಕ್ಷಗಳಲ್ಲಿ ಇರುವುದಕ್ಕಿಂತ ಎಲ್ಲರೂ ಒಂದೇ ಪಕ್ಷದಲ್ಲಿ ಇದ್ದರೆ ಒಳಿತೆಂದು ಅರ್ಥವೇ?

ನಡತೆಗೆಟ್ಟ ರಾಜಕಾರಣಿಗಳಿಂದ ಪರಮ ಪವಿತ್ರ ಜವಾಬ್ದಾರಿಯ ಕಾರ್ಯವಾದ “ರಾಜನೀತಿ” ಇಂದು ನೀತಿಗೆಟ್ಟಿದೆ. ಓಟಿಗಾಗಿ ನೋಟು ಹಂಚಿ ಗೆದ್ದ ನಂತರ ಲೂಟಿಗೆ ಇಳಿಯುತ್ತಿದ್ದಾರೆ. ಇದರಿಂದ ಶ್ರೇಷ್ಠ ಆಡಳಿತ ವ್ಯವಸ್ಥೆ ಪ್ರಜಾಪ್ರಭುತ್ವದ ಚಾರಿತ್ಯಕ್ಕೆ ಧಕ್ಕೆ ಬಂದು ರಾಜಕಾರಣ ದಿಕ್ಕು ತಪ್ಪಿ ಜನಸಾಮಾನ್ಯರು ರಾಜಕಾರಣದ ಬಗ್ಗೆ ಅಸಹ್ಯ ಪಟ್ಟು ರಾಜಕೀಯ ಕ್ಷೇತ್ರವನ್ನು ಸಾಮಾನ್ಯ ಹಿನ್ನೆಲೆಯವರಿಗೆ ಕೈಗೆಟುಕದ ಕ್ಷೇತ್ರವನ್ನಾಗಿಸುತ್ತಿದ್ದಾರೆ.

ಹೀಗೆಯೇ ವಿರೋಧ ಪಕ್ಷಗಳನ್ನು ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ತನಿಖಾ ಸಂಸ್ಥೆಗಳ ದುರುಪಯೋಗ ಸ್ಪಷ್ಟವಾಗಿ ಕಣ್ಣಿಗೆ ಗೋಚರಿಸುತ್ತಿದ್ದರೂ ಪ್ರಜೆಗಳು ಮೂಕ ಪ್ರೇಕ್ಷಕರಾದರೆ ಭವಿಷ್ಯದ ಪೀಳಿಗೆಗೆ ಈ ವ್ಯವಸ್ಥೆ ಉಳಿಯುವುದೇ ಅನುಮಾನ.

ನೆನಪಿರಲಿ, ಪ್ರಜಾಪ್ರಭುತ್ವದಲ್ಲಿ ವಿರೋಧಪಕ್ಷಗಳು ಮಾಧ್ಯಮಗಳು ಮತ್ತು ಸಾಂವಿಧಾನಿಕ ಸಂಸ್ಥೆಗಳು ವಿಫಲವಾದಾಗ ಪ್ರಜಾಪ್ರಭುತ್ವ ಸಂವಿಧಾನವನ್ನು ಉಳಿಸಿಕೊಳ್ಳುವಲ್ಲಿ ನಾಗರಿಕ ಸಮಾಜದ ಪಾಲ್ಗೊಳ್ಳುವಿಕೆ ವ್ಯಕ್ತಿಗತ ಕೂಗು ಅತ್ಯವಶ್ಯಕ.

You cannot copy content of this page

Exit mobile version