ಹಾಸನ: ರಾಜ್ಯ ಸರ್ಕಾರದ ಆಡಳಿತ ವೈಖರಿ, ಕಾವೇರಿ ನೀರು ನಿರ್ವಹಣೆ, ಭ್ರಷ್ಟಾಚಾರ, ಬಿಡದಿ ಟೌನ್ಶಿಪ್ ಹಾಗೂ ಹನೂರು ಎನ್ಕೌಂಟರ್ ಪ್ರಕರಣ ಸೇರಿದಂತೆ ಹಲವು ವಿಚಾರಗಳ ಕುರಿತು ಕನ್ನಡ ಚಳವಳಿ ವಾಟಾಳ್ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಹಾಸನದಲ್ಲಿ ಇಂದು ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮಿಳುನಾಡಿಗೆ ಹಿಂದೆಂದೂ ಹೋಗದಷ್ಟು ನೀರು ಈಗ ಹರಿದು ಹೋಗುತ್ತಿದೆ. ಎಷ್ಟು ನೀರು ತಮಿಳುನಾಡಿಗೆ ಹೋಗಿದೆ, ಯಾವ ರೀತಿಯಲ್ಲಿ ನೀರು ಬಿಡಲಾಗಿದೆ, ಎಷ್ಟು ಒಳಹರಿವು ಬಂದಿದೆ ಎಂಬುದರ ಬಗ್ಗೆ ಸರ್ಕಾರದ ಬಳಿ ಸರಿಯಾದ ಲೆಕ್ಕ ಇಲ್ಲ ಎಂದು ಆರೋಪಿಸಿದರು. ಕಬಿನಿ, ಹೇಮಾವತಿ ಹಾಗೂ ಕಾವೇರಿ ನದಿಗಳಿಂದ ಎಷ್ಟು ಪ್ರಮಾಣದ ನೀರು ಹರಿದು ಹೋಗಿದೆ ಎಂಬುದಕ್ಕೂ ಲೆಕ್ಕವಿಲ್ಲ. ಸರ್ಕಾರ ಹೇಳಿದ್ದೇ ಲೆಕ್ಕ, ಮಾಡಿದ್ದೇ ಲೆಕ್ಕ ಎಂಬಂತಾಗಿದೆ. ಇಂತಹ ಸರ್ಕಾರವನ್ನು ತಾನು ಹಿಂದೆಂದೂ ನೋಡಿಲ್ಲ. ಕೆ.ಸಿ. ರೆಡ್ಡಿ, ನಿಜಲಿಂಗಪ್ಪ ಸೇರಿದಂತೆ ಹಲವು ನಾಯಕರ ಆಡಳಿತವನ್ನು ನೋಡಿದ್ದೇನೆ. ಆದರೆ ಈ ರೀತಿಯ ಪರಿಸ್ಥಿತಿ ಹಿಂದೆಂದೂ ಬಂದಿರಲಿಲ್ಲ ಎಂದರು.
ಸಿಕ್ಕಾಪಟ್ಟೆ ನೀರು ಬಿಡಲಾಗುತ್ತಿದೆ. ಯಾವುದೇ ಲೆಕ್ಕವಿಲ್ಲದೆ ನೀರು ಹರಿಸಲಾಗುತ್ತಿದೆ. ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರೊಂದಿಗೆ ರಾಜ್ಯ ಸರ್ಕಾರದ ನಾಯಕರಿಗೆ ಉತ್ತಮ ಬಾಂಧವ್ಯವಿದೆ. ಅವರ ಪಕ್ಷದ ಹೈಕಮಾಂಡ್ಗೂ ಅವರೊಂದಿಗೆ ಉತ್ತಮ ಬಾಂಧವ್ಯವಿದೆ. ಈ ಕಾರಣದಿಂದ ಕರ್ನಾಟಕವನ್ನು ಬಲಿ ಕೊಡಲಾಗುತ್ತಿದೆ ಎಂದು ವಾಟಾಳ್ ನಾಗರಾಜ್ ಆರೋಪಿಸಿದರು.
