Home ವಿಶೇಷ ಉತ್ತರ ಪ್ರದೇಶದ ಯೋಗಿ ಸರ್ಕಾರವೇಕೆ ಮತ್ತೆ ಜುಬೈರ್‌ ಹಿಂದೆ ಓಡುತ್ತಿದೆ?

ಉತ್ತರ ಪ್ರದೇಶದ ಯೋಗಿ ಸರ್ಕಾರವೇಕೆ ಮತ್ತೆ ಜುಬೈರ್‌ ಹಿಂದೆ ಓಡುತ್ತಿದೆ?

0

ಎರಡು ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್ ಮೊಹಮ್ಮದ್ ಜುಬೈರ್ ಗೆ ಜಾಮೀನು ನೀಡಿ, “ಅವರನ್ನು ತಕ್ಷಣ ಬಿಡುಗಡೆ ಮಾಡಿ” ಎಂದು ಹೇಳಿತ್ತು.

ಆದರೆ ಅವರೀಗ ಮತ್ತೆ ನ್ಯಾಯಾಲಯಕ್ಕೆ ಬಂದಿದ್ದಾರೆ. ತನ್ನನ್ನು ತನ್ನನ್ನು ಬಂಧಿಸದಂತೆ ಅವರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ

 ಜುಬೈರ್ ಭಾರತದ ಸಾರ್ವಭೌಮತ್ವ ಮತ್ತು ಏಕತೆಗೆ ಬೆದರಿಕೆ ಒಡ್ಡಿದ್ದಾರೆ ಎನ್ನುವ ದೂರಿನ ಆಧಾರದ ಮೇಲೆ ಉತ್ತರ ಪ್ರದೇಶ ಪೊಲೀಸರು ಅವರನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಾರೆ. ಅವರು ಮಂಗಳವಾರ ಅಲಹಾಬಾದ್ ಹೈಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಲಯವು ಅವರ ಮನವಿಯನ್ನು ಆಲಿಸುತ್ತಿತ್ತು.

ಆದರೆ ಅವರ ವಿರುದ್ಧ ಹೊರಿಸಲಾಗಿರುವ ಆರೋಪಗಳು ಜಾಮೀನಿಗೆ ಅನರ್ಹವಾಗಿವೆ ಮತ್ತು ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದರೆ, ಏಳು ವರ್ಷಗಳವರೆಗೆ ಜೈಲು ಶಿಕ್ಷೆ, ದಂಡ ಅಥವಾ ಜೀವಾವಧಿ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.

ಜುಬೈರ್ ಆಲ್ಟ್‌ ನ್ಯೂಸ್‌ ಎನ್ನುವ ಫ್ಯಾಕ್ಟ್‌ ಚೆಕ್‌ ವೆಬ್‌ಸೈಟಿನ ಸಹ ಸಂಸ್ಥಾಪಕರು. ಅವರು ತಮ್ಮ ವಿರುದ್ಧ ಹೊರಿಸಲಾಗಿರುವ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ.

“ನಾನು ಮಾಡುತ್ತಿರುವ ಕೆಲಸದಿಂದಾಗಿ ಪೊಲೀಸರು ನನ್ನ ಹಿಂದೆ ಬಿದ್ದಿದ್ದಾರೆನ್ನುವುದು ನನ್ನ ಭಾವನೆ” ಎಂದು ಅವರು ಬಿಬಿಸಿಗೆ ನೀಢಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಮಂಗಳವಾರ ನ್ಯಾಯಾಲಯದಲ್ಲಿ 20 ನಿಮಿಷಗಳ ವಿಚಾರಣೆಯ ನಂತರ, ನ್ಯಾಯಾಧೀಶರು ಪ್ರಕರಣವನ್ನು ಆಲಿಸಲು ನಿರಾಕರಿಸಿದರು ಮತ್ತು ಈಗ ಮುಂದಿನ ದಿನಗಳಲ್ಲಿ ಪ್ರಕರಣವನ್ನು ಮತ್ತೊಂದು ಪೀಠಕ್ಕೆ ವರ್ಗಾಯಿಸಲಾಗುವುದು.

“ದ್ವೇಷ ಭಾಷಣಗಳ ವಿರುದ್ಧ ಏಕಾಂಗಿಯಾಗಿ ಹೋರಾಡುತ್ತಿರುವ ಅವರು ಸರ್ಕಾರಗಳ ಕಣ್ಣಿಗೆ ಮುಳ್ಳಾಗಿದ್ದಾರೆ” ಎನ್ನುವುದು ಹಲವರ ಅಭಿಪ್ರಾಯ. ವಿವಾದಾತ್ಮಕ ಧಾರ್ಮಿಕ ಸಂತರೊಬ್ಬರ ಭಾಷಣವೊಂದನ್ನು ಟ್ವಿಟರ್‌ (ಎಕ್ಸ್)‌ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ ಎನ್ನುವ ಕಾರಣಕ್ಕಾಗಿ ಪೊಲೀಸರು ಜುಬೈರ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಲು ಪ್ರಯತ್ನಿಸುತ್ತಿದ್ದಾರೆ.

ಅಕ್ಟೋಬರ್ 3, 2024 ರಂದು, ಯತಿ ನರಸಿಂಹಾನಂದ ಅವರು ಎಕ್ಸ್‌ ವೇದಿಕೆಯಲ್ಲಿ ಪೋಸ್ಟ್‌ ಮಾಡಿದ್ದ ವಿಡಿಯೋ ಒಂದರಲ್ಲಿ ಪ್ರವಾದಿ ಮುಹಮ್ಮದ್‌ ವಿರುದ್ಧ ಕೆಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಈ ಹೇಳಿಕೆಗಳು ತಮ್ಮ ಭಾವನೆಗಳಿಗೆ ನೋವುಂಟು ಮಾಡಿವೆ ಎಂದು ಕೆಲವು ಮುಸ್ಲಿಮರು ಆರೋಪಿಸಿದ್ದರು.

ಯತಿ ನರಸಿಂಹಾನಂದ್ ಉತ್ತರ ಪ್ರದೇಶದ ಗಾಜಿಯಾಬಾದ್ ಪಟ್ಟಣದ ದಸ್ನಾದೇವಿ ದೇವಾಲಯದ ಮುಖ್ಯಸ್ಥ. ಮುಸ್ಲಿಮರ ಮೇಲಿನ ದಾಳಿಗಳನ್ನು ಬಹಿರಂಗವಾಗಿ ಉತ್ತೇಜಿಸುವ ಮೂಲಕ ಅವರು ಆಗಾಗ ಸುದ್ದಿಯಲ್ಲಿರುತ್ತಾರೆ.

 ಹಿಂದೆ 2022ರಲ್ಲಿ, ಮುಸ್ಲಿಮರು ಮತ್ತು ಮಹಿಳೆಯರ ನೀಡಿದ್ದ ವಿರುದ್ಧ ಅವಹೇಳನಕಾರಿ ಹೇಳಿಕೆಗಳಿಗಾಗಿ ಅವರನ್ನು ಪೊಲೀಸರು ಬಂಧಿಸಿದ್ದರು ಮತ್ತು ಆಗ ಅವರು ಒಂದು ತಿಂಗಳ ಕಾಲ ಜೈಲಿನಲ್ಲಿದ್ದರು.

ಜುಬೈರ್ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಅವರ ವಿವಾದಾತ್ಮಕ ಹೇಳಿಕೆಗಳನ್ನು ನೋಡಿದ ನಂತರ ಮುಸ್ಲಿಮರು ದೇವಾಲಯದ ಮುಂದೆ ಪ್ರತಿಭಟನೆ ನಡೆಸಿದರು, ಈ ಪ್ರತಿಭಟನೆಯ ಸಮಯದಲ್ಲಿ ಕಲ್ಲು ತೂರಾಟ ನಡೆಸಿದ 10 ಜನರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ನರಸಿಂಹಾನಂದ ವಿರುದ್ಧ ಹಲವಾರು ಮುಸ್ಲಿಂ ಸಂಘಟನೆಗಳು ಪೊಲೀಸರಿಗೆ ದೂರು ನೀಡಿವೆ. ಪೊಲೀಸರು ಅವರನ್ನು ಬಂಧಿಸಲಿದ್ದಾರೆ ಎನ್ನುವ ವರದಿಗಳು ಬರುತ್ತಿದ್ದ ಹಾಗೆ ಅವರು ತಲೆಮರೆಸಿಕೊಂಡರು.

ಆದರೆ ಪೊಲೀಸರು ಈ ಬೇಡಿಕೆಗಳನ್ನು ತಿರಸ್ಕರಿಸಿದರು.

ಮೊದಲ ದೂರಿನಲ್ಲಿ, ಜುಬೈರ್ ವಿರುದ್ಧ ಧರ್ಮಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು, ಮಾನಹಾನಿ ಮತ್ತು ಸುಳ್ಳು ಪುರಾವೆಗಳನ್ನು ತೋರಿಸಿದ ಆರೋಪಗಳನ್ನು ಹೊರಿಸಲಾಗಿತ್ತು.

ಮತ್ತೆ ಕಳೆದ ವಾರ, ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 152 ರ ಅಡಿಯಲ್ಲಿ ಆರೋಪಗಳನ್ನು ದಾಖಲಿಸಿದ್ದಾರೆ. ಅವರು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಬೆದರಿಕೆ ಒಡ್ಡಿದ್ದಾರೆ ಎಂದು ಈ ದೂರಿನಲ್ಲಿ ಆರೋಪಿಸಲಾಗಿದೆ.

ಈ ಸೆಕ್ಷನ್ ಅಡಿಯಲ್ಲಿ ಪೊಲೀಸರು ಜುಬೈರ್ ಅವರನ್ನು ಬಂಧಿಸಬಹುದು ಎಂದು ಕಾನೂನು ತಜ್ಞರು ಹೇಳುತ್ತಾರೆ. ಜುಬೈರ್ ಪರ ವಕೀಲರು ಮಧ್ಯಂತರ ಜಾಮೀನು ಕೋರಿ ಮತ್ತು ಪ್ರಕರಣವನ್ನು ವಜಾಗೊಳಿಸುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.

ನರಸಿಂಹಾನಂದ ನೀಡಿದ ಹೇಳಿಕೆಯನ್ನಷ್ಟೇ ತಾನು ಪೋಸ್ಟ್ ಮಾಡಿದ್ದು, ನಾನು ಪೋಸ್ಟ್‌ ಮಾಡುವ ಮೊದಲೇ ಅದೇ ವಿಡಿಯೋವನ್ನು ಇತರ ಅನೇಕ ಪತ್ರಕರ್ತರು, ರಾಜಕಾರಣಿಗಳು ಮತ್ತು ಮಾಧ್ಯಮ ವಾಹಿನಿಗಳು ಎಕ್ಸ್‌ ವೇದಿಕೆಯಲ್ಲಿ ಪೋಸ್ಟ್ ಮಾಡಿದ್ದವು ಎಂದು ಜುಬೈರ್ ನ್ಯಾಯಾಲಯದಲ್ಲಿ ವಾದಿಸಿದರು.

“ನಿರಂತರವಾಗಿ ದ್ವೇಷ ಭಾಷಣ ಮಾಡುವ ವ್ಯಕ್ತಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ದ್ವೇಷ ಭಾಷಣಗಳ ಬಗ್ಗೆ ವರದಿ ಮಾಡುವ ವ್ಯಕ್ತಿಯನ್ನು ಬಂಧಿಸಲು ಅವರು ಪ್ರಯತ್ನಿಸುತ್ತಿದ್ದಾರೆ. ಅಂತಹ ಭಾಷಣಗಳನ್ನು ಮಾಡುವವರು ಮುಕ್ತವಾಗಿ ತಿರುಗಾಡುತ್ತಿದ್ದಾರೆ” ಎಂದು ಜುಬೈರ್ ಹೇಳಿದ್ದಾರೆ.

“ಇದು ಸರ್ಕಾರಕ್ಕೆ ಅದರ ಜವಾಬ್ದಾರಿಗಳನ್ನು ನೆನಪಿಸಲು ಯತ್ನಿಸುವವರನ್ನು ಸುಮ್ಮನಾಗಿಸಲು ನಡೆಸುತ್ತಿರುವ ಪ್ರಯತ್ನ” ಎಂದು ಅವರು ಆರೋಪಿಸಿದ್ದಾರೆ.

ತಾವು ಮಾಡುತ್ತಿರುವ ಕೆಲಸಗಳು ಮತ್ತು ಅವು ಸಮಾಜದ ಮೇಲೆ ಬೀರುತ್ತಿರುವ ಪರಿಣಾಮದಿಂದಾಗಿ ಪೊಲೀಸರು ತಮ್ಮ ಹಿಂದೆ ಬಿದ್ದಿದ್ದಾರೆ ಎಂದು ಜುಬೇರ್‌ ಅವರ ನಿಕಟವರ್ತಿ ಹಾಗೂ ಆಲ್ಟ್‌ ನ್ಯೂಸ್‌ ಸಹ ಸಂಸ್ಥಾಪಕ ಪ್ರತೀಕ್‌ ಸಿನ್ಹಾ ಹೇಳುತ್ತಾರೆ

“ಇದು ಸೇಡಿನ ಕೃತ್ಯ.ಪ್ರಶ್ನಿಸುವವರ ಮೇಲೆ ಮಾಡುವ ದಾಳಿಗೆ ಇದು ನಿಜವಾದ ಉದಾಹರಣೆ” ಎಂದು ಅವರು ಹೇಳುತ್ತಾರೆ.

“ಎರಡು ತಿಂಗಳ ನಂತರ ಪೊಲೀಸರು ಅವರ ವಿರುದ್ಧ ಗಂಭೀರ ಆರೋಪಗಳನ್ನು ಏಕೆ ದಾಖಲಿಸಿದರು? ಇದಕ್ಕೆ ನರಸಿಂಹಾನಂದ್ ಮತ್ತು ಅವರ ಬೆಂಬಲಿಗರು ಜುಬೈರ್ ಅವರ ಹಿಂದೆ ಬಿದ್ದಿರುವುದು ಮಾತ್ರವಲ್ಲ, ಸರ್ಕಾರವೇ ಅವರನ್ನು ಬೆನ್ನಟ್ಟುತ್ತಿದೆ” ಎಂದು ಸಿನ್ಹಾ ಹೇಳಿದರು.

ಜುಬೈರ್ ವಿರುದ್ಧದ ಹೆಚ್ಚುವರಿ ದೇಶದ್ರೋಹದ ಆರೋಪಗಳನ್ನು ಮಾನವ ಹಕ್ಕುಗಳ ಗುಂಪುಗಳು ಟೀಕಿಸಿವೆ, ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳು ನ್ಯಾಯ ಸಂಹಿತೆಯ ಸೆಕ್ಷನ್ 152 ವಸಾಹತುಶಾಹಿ ಯುಗದ ದೇಶದ್ರೋಹ ಕಾನೂನಿನ ‘ಹೊಸ ರೂಪ’  ಎಂದು ಹೇಳಿವೆ.

“ಮಾನವ ಹಕ್ಕುಗಳಿಗಾಗಿ ಹೋರಾಡುವವರಿಗೆ ಕಿರುಕುಳ ನೀಡಲು, ಬೆದರಿಸಲು, ಬಂಧಿಸಲು, ಕಾರ್ಯಕರ್ತರು, ಪತ್ರಕರ್ತರು, ವಿದ್ಯಾರ್ಥಿಗಳು, ಚಲನಚಿತ್ರ ನಿರ್ಮಾಪಕರು, ಗಾಯಕರು, ನಟರು, ಬರಹಗಾರರು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಹೋರಾಡುವವರಿಗೆ ಕಿರುಕುಳ ನೀಡಲು ಕಾನೂನನ್ನು ಹೇಗೆ ಬಳಸಲಾಗುತ್ತಿದೆ ಎಂಬುದನ್ನು ತೋರಿಸಲು ಇದು ಒಂದು ಉದಾಹರಣೆ” ಎಂದು ಅಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾ ಹೇಳಿದೆ.

ಪೊಲೀಸರ ಕ್ರಮವನ್ನು ಖಂಡಿಸಿದ ಪ್ರೆಸ್ ಕ್ಲಬ್ ಆಫ್ ಇಂಡಿಯಾ, ಜುಬೈರ್ ವಿರುದ್ಧದ ಪ್ರಕರಣವನ್ನು ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿದೆ .

“ಮಾಧ್ಯಮಗಳು ಮತ್ತು ಸ್ವಾತಂತ್ರ್ಯವಾದಿಗಳ ಧ್ವನಿಯನ್ನು ಅಡಗಿಸಲು ಈ ಕಾನೂನನ್ನು ಬಲವಂತವಾಗಿ ಬಳಸುವುದನ್ನು ಎಲ್ಲಾ ಬುದ್ಧಿಜೀವಿಗಳು ವಿರೋಧಿಸುತ್ತಿದ್ದಾರೆ. ಸರ್ಕಾರವನ್ನು ಟೀಕಿಸುವವರ ವಿರುದ್ಧವೂ ಇದನ್ನು ಬಳಸಲಾಗುತ್ತಿದೆ” ಎಂದು ಪ್ರೆಸ್ ಕ್ಲಬ್ ಆಫ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.

“ಜುಬೈರ್ ವಿರುದ್ಧದ ಕಿರುಕುಳದ ತೀವ್ರತೆ ಹೆಚ್ಚುತ್ತಿದೆ. ಅವರ ವಿರುದ್ಧದ ಆರೋಪಗಳನ್ನು ದೃಢೀಕರಿಸಲು ಯಾವುದೇ ಪುರಾವೆಗಳಿಲ್ಲ” ಎಂದು ಡಿಜಿಟಲ್ ಮಾಧ್ಯಮ ಸಂಸ್ಥೆಗಳ ಸಂಘ ಡಿಜಿಪಿ ಹೇಳಿದೆ. ಈ ವಿಷಯವನ್ನು ಅದು ಬಲವಾಗಿ ಖಂಡಿಸಿದೆ.

 2022ರಲ್ಲಿ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕಚೇರಿ ಮೊಹಮ್ಮದ್ ಜುಬೈರ್ ಬಂಧನವನ್ನು ಟೀಕಿಸಿತ್ತು.

2022ರಲ್ಲಿ ಜುಬೈರ್ ಅವರನ್ನು ಬಂಧಿಸಿದಾಗಲೂ ಸರ್ಕಾರದ ಬಗ್ಗೆ ಇದೇ ರೀತಿಯ ಟೀಕೆ ಕೇಳಿಬಂದಿತ್ತು. ಆ ಸಮಯದಲ್ಲಿ, ಅವರು ಮೂರು ವಾರಗಳ ಕಾಲ ಜೈಲಿನಲ್ಲಿದ್ದರು. ಸುಪ್ರೀಂ ಕೋರ್ಟ್ ಜಾಮೀನು ನೀಡಿದ ನಂತರ ಅವರು ಹೊರಬಂದರು.

1980ರ ದಶಕದ ಜನಪ್ರಿಯ ಬಾಲಿವುಡ್ ಚಲನಚಿತ್ರದ ದೃಶ್ಯವೊಂದರ ಸ್ಕ್ರೀನ್‌ ಶಾಟ್ ಒಂದನ್ನು ಟ್ವೀಟ್ ಮಾಡಿದ ಕಾರಣಕ್ಕಾಗಿ ಜುಬೈರ್ ಅವರನ್ನು “ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡಿದ” ಆರೋಪದ ಮೇಲೆ ದೆಹಲಿ ಪೊಲೀಸರು 2018ರಲ್ಲಿ ಬಂಧಿಸಿದ್ದರು.

ದೆಹಲಿ ಪೊಲೀಸರು ಜುಬೈರ್‌ ಅವರನ್ನು ಬಂಧಿಸಿದ ನಂತರ, ಉತ್ತರ ಪ್ರದೇಶ ಪೊಲೀಸರು ಕ್ರಿಮಿನಲ್ ಪಿತೂರಿಗಳನ್ನು ರೂಪಿಸಿದ ಮತ್ತು ವಿದೇಶಿ ಹಣವನ್ನು ಸ್ವೀಕರಿಸಿದ ಆರೋಪದ ಮೇಲೆ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಜುಬೈರ್ “ಆಯ್ದ, ರಾಜಕೀಯ ಪ್ರೇರಿತ” ಸಂಗತಿಗಳನ್ನಷ್ಟೇ ಫ್ಯಾಕ್ಟ್‌ ಚೆಕ್‌ ಮಾಡುತ್ತಾರೆ ಎಂದು ಟೀಕಿಸಿದ್ದರು ಮತ್ತು ಅವರ ಟ್ವೀಟ್‌ಗಳು “ಅನೇಕ ಹಿಂದೂಗಳ ಭಾವನೆಗಳನ್ನು ನೋಯಿಸುತ್ತವೆ” ಎಂದೂ ಹೇಳಿದ್ದರು.

ಆದರೆ ಆ ಸಮಯದಲ್ಲಿ ಅನೇಕರು ಜುಬೇರ್‌ ಬಂಧನಕ್ಕೂ ನೂಪುರ್‌ ಶರ್ಮಾ ನೀಡಿದ್ದ ಇಸ್ಲಾಂ ವಿರೋಧಿ ಹೇಳಿಕೆಗೂ ಸಂಬಂಧ ಕಲ್ಪಿಸಿದ್ದರು.

“ಪತ್ರಕರ್ತರು ಬರೆಯುವ ಸುದ್ದಿ, ಅವರು ಮಾಡುವ ಟ್ವೀಟ್‌ಗಳು, ನೀಡುವ ಹೇಳಿಕೆಗಳಿಗಾಗಿ ಅವರನ್ನು ಜೈಲಿಗೆ ಹಾಕಬಾರದು” ಎಂದು ಯುಎನ್ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅಂದು ಹೇಳಿದ್ದರು. ಅಂತರರಾಷ್ಟ್ರೀಯ ಹಕ್ಕುಗಳ ಗುಂಪುಗಳು ಮತ್ತು ವಿಶ್ವಸಂಸ್ಥೆ ಕೂಡ ಜುಬೈರ್ ಬಂಧನದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದವು.

ಆದರೆ ಮಾನವಹಕ್ಕು ಸಂಘಟನೆಗಳು ಮಾತನಾಡುವ ಕಾನೂನು ಮತ್ತು ನಿಬಂಧನೆಗಳನ್ನು ಬಳಸಿಕೊಂಡೇ ಅಧಿಕಾರಿಗಳು ಜುಬೈರ್‌ ಮತ್ತು ಇತರ ಪತ್ರಕರ್ತರನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾರೆ ಎನ್ನುವುದು ವಿಮರ್ಶಕರ ಅನಿಸಿಕೆ.

ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಶ್ರೇಯಾಂಕದಲ್ಲಿ ಭಾರತದ ಸ್ಥಾನ ಕುಸಿಯುತ್ತಿದೆ. 180 ದೇಶಗಳ ಪೈಕಿ ಭಾರತ 159ನೇ ಸ್ಥಾನದಲ್ಲಿದೆ ಎಂದು ಮೀಡಿಯಾ ವಾಚ್ ಡಾಗ್ ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್ ತಿಳಿಸಿದೆ.

“ಸರ್ಕಾರಗಳನ್ನು ಟೀಕಿಸುವ ಪತ್ರಕರ್ತರು ನಿರಂತರವಾಗಿ ಆನ್ಲೈನ್ ಕಿರುಕುಳ, ಬೆದರಿಕೆ ಮತ್ತು ದೈಹಿಕ ದಾಳಿಗೆ ಒಳಗಾಗುತ್ತಿದ್ದಾರೆ. ಅವರು ವಿಚಾರಣೆಯನ್ನೂ ಎದುರಿಸುತ್ತಿದ್ದಾರೆ. ಅವರನ್ನು ಅಕ್ರಮವಾಗಿ ಬಂಧಿಸಲಾಗುತ್ತಿದೆ” ಎಂದು ರಿಪೋರ್ಟರ್ಸ್ ವಿತೌಟ್ ಬಾರ್ಡರ್ಸ್ ವಾರ್ಷಿಕ ವರದಿ ತಿಳಿಸಿದೆ.

ಈ ಹಿಂದೆ, ವರದಿಯನ್ನು ಭಾರತ ಸರ್ಕಾರವು ತಿರಸ್ಕರಿಸಿತು, ಇದು ಅನುಮಾನಾಸ್ಪದ ಮತ್ತು ಪಾರದರ್ಶಕತೆಯ ಕೊರತೆಯಿದೆ” ಎಂದು ಹೇಳಿತ್ತು.

ಆಧಾರ: ಬಿಬಿಸಿ ಹಾಗೂ ರಿಪೋರ್ಟರ್ಸ್‌ ಕಲೆಕ್ಟಿವ್

You cannot copy content of this page

Exit mobile version