Home ರಾಜಕೀಯ ಮಹಾ ಮೈತ್ರಿಕೂಟಕ್ಕೆ ಮಹತ್ವ ಪಡೆದುಕೊಳ್ಳಲಿದೆಯೇ ಲಾಲೂ, ನಿತೀಶ್, ಸೋನಿಯಾಗಾಂಧಿ ಭೇಟಿ!?

ಮಹಾ ಮೈತ್ರಿಕೂಟಕ್ಕೆ ಮಹತ್ವ ಪಡೆದುಕೊಳ್ಳಲಿದೆಯೇ ಲಾಲೂ, ನಿತೀಶ್, ಸೋನಿಯಾಗಾಂಧಿ ಭೇಟಿ!?

0

ರಾಷ್ಟ್ರ ಮಟ್ಟದ ಮಹತ್ವದ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಭಾನುವಾರ ನಿತೀಶ್ ಕುಮಾರ್ ಮತ್ತು ಲಾಲೂ ಪ್ರಸಾದ್ ಯಾದವ್ ಅವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ಭೇಟಿ ಮಾಡಿ ಮುಂದಿನ ರಾಜಕೀಯ ನಿರ್ಧಾರದ ಬಗ್ಗೆ ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭಾನುವಾರ ದೆಹಲಿಯಲ್ಲಿ ನಡೆಯಬಹುದಾದ ಈ ಚರ್ಚೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಬಂದರೆ ಸೂಕ್ತ ಎಂದು ನಿತೀಶ್ ಕುಮಾರ್ ಮತ್ತು ಲಾಲೂ ಪ್ರಸಾದ್ ಯಾದವ್ ಅಭಿಪ್ರಾಯ ಪಟ್ಟಿದ್ದರೆ ಇತ್ತ, ರಾಹುಲ್ ಗಾಂಧಿ “ಭಾರತ್ ಜೋಡೋ ಯಾತ್ರೆ” ಮುಗಿಯುವ ವರೆಗೂ ಯಾವುದೇ ರಾಜಕೀಯ ಚರ್ಚೆಗೂ ತೊಡಗಿಸಿಕೊಳ್ಳುವುದಿಲ್ಲ ಎಂದು ಅಂದಾಜಿಸಲಾಗಿದೆ.

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ನಿತೀಶ್ ಕುಮಾರ್ ಅವರದ್ದು 6 ವರ್ಷಗಳ ನಂತರದ ಭೇಟಿ ಇದಾಗಿದೆ. ಇತ್ತೀಚೆಗೆ ದೆಹಲಿಯಲ್ಲಿ ರಾಹುಲ್ ಗಾಂಧಿ ಭೇಟಿಯ ಸಂದರ್ಭದಲ್ಲಿ ನಿತೀಶ್ ಕುಮಾರ್ ಗೆ ಸೋನಿಯಾ ಗಾಂಧಿಯವರ ಭೇಟಿ ಸಾಧ್ಯವಾಗಿರಲಿಲ್ಲ. ಸೋನಿಯಾ ಗಾಂಧಿಯವರು ಹೆಚ್ಚಿನ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದ್ದ ಹಿನ್ನೆಲೆಯಲ್ಲಿ ಭಾನುವಾರ ನಡೆಯಬಹುದಾದ ಚರ್ಚೆ ಮಹತ್ವ ಪಡೆದಿದೆ.

ಮೇಲ್ನೋಟಕ್ಕೆ ಇದು ಸೌಹಾರ್ದ ಭೇಟಿ ಎಂದು RJD ಮತ್ತು JDU ಮೂಲಗಳು ತಿಳಿಸಿದರೂ ಸ್ಥಳೀಯ ಮಟ್ಟದಲ್ಲಿ ಆಗಿರುವ ಮಹಾ ಮೈತ್ರಿಕೂಟವನ್ನು ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ಯಬಹುದಾದ ಮಹತ್ವದ ಚರ್ಚೆ ನಡೆಯುವ ಸಾಧ್ಯತೆ ಇದೆ. ಇದರ ಜೊತೆಗೆ ಮಹಾಮೈತ್ರಿಕೂಟಕ್ಕೆ ಸೇರಬಹುದಾದ ಇನ್ನಿತರ ಪಕ್ಷಗಳ ಜೊತೆಗೆ ಮಾತುಕತೆ ನಡೆಸುವ ಬಗ್ಗೆಯೂ ಚರ್ಚೆ ನಡೆಯಲಿದೆ. ಅನಾರೋಗ್ಯದ ಕಾರಣಕ್ಕೆ ಸಧ್ಯದಲ್ಲೇ ವಿದೇಶಕ್ಕೆ ತೆರಳಲಿರುವ ಲಾಲೂ ಪ್ರಸಾದ್ ಯಾದವ್ ವಿದೇಶ ಪ್ರಯಾಣದ ಒಳಗೇ ಈ ಮಾತುಕತೆ ಮುಗಿಸುವ ತರಾತುರಿಯಲ್ಲಿದ್ದಾರೆ.

ವಿಶೇಷವಾಗಿ 2024 ರ ರಾಷ್ಟ್ರೀಯ ಮಹಾಚುನಾವಣೆ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದಿದೆ. ಸಧ್ಯ ಈ ಭೇಟಿಯಲ್ಲಿ ಜೊತೆಯಾಗುವ ಎಲ್ಲಾ ರಾಜಕೀಯ ಪಕ್ಷಗಳಿಗೂ ಬಿಜೆಪಿ ಪಕ್ಷ ಸಮಾನಾಂತರದ ವಿರೋಧಿ ಆಗಿದ್ದು, ಬಿಜೆಪಿ ಮಣಿಸಲು ಈ ಮಾತುಕತೆ, ಭೇಟಿ ಹಲವು ರೀತಿಯಲ್ಲಿ ಸಹಕಾರಿ ಆಗಲಿದೆ ಎಂದು ಅಂದಾಜಿಸಲಾಗಿದೆ.

ಜೊತೆಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷೀಯ ಚುನಾವಣೆ ಪ್ರಕ್ರಿಯೆಯಲ್ಲಿ ಇದ್ದು, ಮುಂದಿನ ಗುರುವಾರದಿಂದ ಪಕ್ಷದ ಅಧ್ಯಕ್ಷ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆಗಲಿದೆ. ಮುಂದಿನ ಮಹಾಮೈತ್ರಿಯ ನಾಯಕತ್ವ, ಮತ್ತು ಕಾಂಗ್ರೆಸ್ ನಾಯಕತ್ವ ಇವೆರಡೂ ಮುಂಬರುವ ಚುನಾವಣೆಗೆ ವಿಶೇಷ ಪಾತ್ರ ವಹಿಸಬಹುದು ಎಂದು ಹೇಳಲಾಗುತ್ತಿದೆ. ಪ್ರಾಥಮಿಕ ಹಂತದ ಮಾಹಿತಿಯ ಪ್ರಕಾರ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ಶಶಿ ತರೂರ್, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನಡುವೆ ಸ್ಪರ್ಧೆ ನಿರೀಕ್ಷೆ ಇದ್ದರೂ, ಅಧ್ಯಕ್ಷೀಯ ರೇಸ್ ನಲ್ಲಿ ಮನೀಶ್ ತಿವಾರಿ, ದಿಗ್ವಿಜಯ್ ಸಿಂಗ್ ಅವರು ಕೂಡ ಸ್ಪರ್ಧೆಯ ಕಣಕ್ಕೆ ಬರುವ ಸಾಧ್ಯತೆ ಇದೆ.

ಸಧ್ಯ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ಕೂಡಾ ಮೈತ್ರಿಕೂಟದ ಭೇಟಿ ಹಿನ್ನೆಲೆಯಲ್ಲಿ ಮಹತ್ವ ಪಡೆದಿದೆ. ಯಾವ ನಾಯಕ ಮೈತ್ರಿಕೂಟವನ್ನು ಜವಾಬ್ದಾರಿಯುತವಾಗಿ ತಗೆದುಕೊಳ್ಳಬಹುದು ಎಂದು ಅಂದಾಜಿಸಲಾಗುತ್ತಿದೆ.

You cannot copy content of this page

Exit mobile version