ಹಾಸನ : ಕಳೆದ ಏಳು ತಿಂಗಳುಗಳಿದ ಕಾರ್ಮಿಕರಿಗೆ ವೇತನ ನೀಡಿರುವುದಿಲ್ಲ. ತಕ್ಷಣ ಸಂಪೂರ್ಣ ಸಂಬಳ ನೀಡುವಂತೆ ಆಗ್ರಹಿಸಿ ನಗರದ ಸಮೀಪ ಹನುಮಂತಪುರ ಬಳಿ ಕೈಗಾರಿಕ ಪ್ರದೇಶದಲ್ಲಿರುವ ನ್ಯೂ ಮಿನರ್ವ್ ಮಿಲ್ ಬಟ್ಟೆ ಪ್ಯಾಕ್ಟರಿ ಮುಂದೆ ಕೆಲಸ ಮಾಡುವ ಕಾರ್ಮಿಕರು ಎ.ಐ.ಟಿ.ಯು.ಸಿ. ನೇತೃತ್ವದಲ್ಲಿ ಅನಿರ್ಧಿಷ್ಠವಧಿ ಪ್ರತಿಭಟನೆ ಆರಂಭಿಸಿದರು. ಇದೆ ವೇಳೆ ಎ.ಐ.ಟಿ.ಯು.ಸಿ. ಜಿಲ್ಲಾಧ್ಯಕ್ಷ ಎಂ.ಸಿ. ಡೋಂಗ್ರೆ ಮಾಧ್ಯಮದೊಂದಿಗೆ ಮಾತನಾಡಿ, ತಾಲೂಕಿನ ಹನುಮಂತಪುರದಲ್ಲಿರುವ ನ್ಯೂ ಮಿನರ್ವ ಮಿಲ್ ಸಂಸ್ಥೆಯು ನ್ಯಾಷನಲ್ ಟೆಕ್ಸ್ ಟೈಲ್ಸ್ ಕಾರ್ಪೋರೇಷನ್ (ಎನ್.ಟಿ.ಸಿ) ಭಾಗವಾಗಿದ್ದು, ದೇಶದಾದ್ಯಂತ ಈ ರೀತಿಯ 23 ಘಟಕಗಳು ಇದೆ. ಈ ಎಲ್ಲಾ ಘಟಕಗಳು ಮಾರ್ಚ್ 2020 ರಿಂದ ಸ್ಥಗಿತಗೊಂಡಿರುತ್ತವೆ.
2020 ಏಪ್ರಿಲ್ 1 ರಿಂದ ಕಾರ್ಮಿಕರಿಗೆ ಪೂರ್ತಿ ಸಂಬಳ ನೀಡದೆ ಶೇಕಡ 50 ರಷ್ಟು ಸಂಬಳವನ್ನು ನೀಡುತ್ತಾ ಬಂದಿರುತ್ತಾರೆ. ಹಾಗೂ ಉಳಿದ ವ್ಯತ್ಯಾಸದ ವೇತನವನ್ನು ಯಾವಾಗಲಾದರೊಮ್ಮೆ ನೀಡುವ ಪರಿಪಾಠ ಬೆಳೆಸಿಕೊಂಡಿರುತ್ತಾರೆ ಎಂದು ದೂರಿದರು. ಕಳೆದ ನವೆಂಬರ್ 2024 ರಿಂದ ವೇತನವನ್ನೇ ನೀಡಿರುವುದಿಲ್ಲ. ಇದರಿಂದಾಗಿ ಕಾರ್ಮಿಕರ ಜೀವನ ಅತಂತ್ರಗೊಂಡು ದುಸ್ತರವಾಗಿದೆ. ಇದರ ಪರಿಣಾಮವಾಗಿ ಕಾರ್ಮಿಕರ ಈ.ಎಸ್.ಐ, ಪ್ರಾವಿಡೆಂಟ್ ಫಂಡ್ಗಳಿಗೆಲ್ಲ ಕಂತುಗಳು ಸಂದಾಯವಾಗದೆ ಈ ಸೌಲಭ್ಯಗಳು ಕಾರ್ಮಿಕರಿಗೆ ಇದ್ದು ಇಲ್ಲದಂತಾಗಿದೆ. ಈ ವಿಚಾರಗಳ ಕುರಿತು ಮ್ಯಾನೇಜೆಮೆಂಟ್ ಗಮನವನ್ನು ಅನೇಕ ಬಾರಿ ಸೆಳೆದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ. ಸಮಸ್ಯೆ ಕುರಿತು ಈ ವಿಚಾರಗಳನ್ನು ಮುಂದಿಟ್ಟುಕೊಡು ನ್ಯೂ ಮಿನರ್ವ ಮಿಲ್ ಫ್ಯಾಕ್ಟರಿ ಮುಂದೆ ಕಾರ್ಮಿಕರು ಸೇರಿ ಪ್ರತಿಭಟನೆ ಮಾಡಲು ಮುಂದಾಗಿದ್ದೇವೆ ಎಂದು ಹೇಳಿದರು. ಸರಕಾರದ ಗಮನ ಸೆಳೆದರೂ ಕೂಡ ಇದುವರೆಗೂ ಯಾವ ಗಮನವಹಿಸಿ ಸಮಸ್ಯೆ ಬಗೆಹರಿಸಿರುವುದಿಲ್ಲ. ನಿಷ್ಕಿçಯವಾಗಿದೆ. ಮಿನರ್ವ್ ಮಿಲ್ ಬಟ್ಟೆ ಪ್ಯಾಕ್ಟರಿ ಮ್ಯಾನೆಜ್ ಮೆಂಟ್ ಅತ್ಯಂತ ಬೇಜವಬ್ಧಾರಿಯುತವಾಗಿದ್ದು, ಕೂಡಲೇ ಏಳು ತಿಂಗಳ ಸಂಬಳ ಕಾರ್ಮಿಕರಿಗೆ ಕೊಡಲು ಆಗ್ರಹಿಸಿ ಜೂನ್ 14ರ ಶನಿವಾರದಂದು ತೀವ್ರತರವಾದ ಹೋರಾಟ ಮಾಡಲಾಗುವುದು. ನಮ್ಮ ಬೇಡಿಕೆ ಈಡೇರದಿದ್ದರೇ ಇಲ್ಲಿಂದ ಜಿಲ್ಲಾಧಿಕಾರಿ ಕಛೇರಿವರೆಗೂ ಹೋಗಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಜಿಲ್ಲಾಧಿಕಾರಿಗಳು ಕೂಡ ಕಾರ್ಮಿಕರಿಗೆ ಆಗುತ್ತಿರುವ ಈ ಅನ್ಯಾಯವನ್ನು ಗಂಬೀರವಾಗಿ ಗಮನಕ್ಕೆ ತೆಗೆದುಕೊಂಡು ಮಧ್ಯಪ್ರವೇಶಿಸಬೇಕಾಗಿ ವಿನಂತಿಸುತ್ತೇವೆ. ಮಾರ್ಚ್ 2020 ರಿಂದ ಸ್ಥಗಿತಗೊಂಡಿರುವ ಘಟಕವನ್ನು ಪುನರಾರಂಬಿಸುವಲ್ಲಿ ಹಾಗೂ ಕಾರ್ಮಿಕರಿಗೆ ಬಾಕಿ ವೇತನವು ಕೂಡಲೇ ದೊರಕುವಂತೆ ಮಾಡಿಕೊಡಬೇಕಾಗಿ ವಿನಂತಿಸುತ್ತೇವೆ ಎಂದು ಕೋರಿದರು.
ಪ್ರತಿಭಟನೆಯಲ್ಲಿ ಎ.ಐ.ಟಿ.ಯು.ಸಿ. ಪ್ರಧಾನ ಕಾರ್ಯದರ್ಶಿ ಬಿ.ಎಂ. ಮಧು, ಉಪಾಧ್ಯಕ್ಷ ಜೆ.ಆರ್. ಸಂತೋಷ್, ಕಾರ್ಯದರ್ಶಿ ಹೆಚ್.ಎಸ್. ಮಂಜೇಗೌಡ, ಖಜಾಂಚಿ ಜೆ.ಸಿ. ಲೋಕೇಶ್ ಇತರರು ಉಪಸ್ಥಿತರಿದ್ದರು.